ಡಿ.ಜೆ.ಹಳ್ಳಿ ಗಲಭೆ ಪ್ರಕರಣ: ಸಂಪತ್ರಾಜ್ ಬಂಧನದಿಂದ ಮುಜುಗರ: ರಾಮಲಿಂಗಾ ರೆಡ್ಡಿ
Team Udayavani, Nov 17, 2020, 8:19 PM IST
ಬೆಂಗಳೂರು: ಡಿ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿ ಮಾಜಿ ಮೇಯರ್ ಸಂಪತ್ರಾಜ್ ಬಂಧನದಿಂದ ಪಕ್ಷಕ್ಕೆ ಸಹಜವಾಗಿಯೇ ಮುಜುಗರವಾಗಿದೆ ಎಂದು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಹಾಗೂ ಸಂಪತ್ರಾಜ್ ನಡುವೆ ಏನೋ ವ್ಯತ್ಯಾಸವಾಗಿದೆ, ತಪ್ಪು ಕಲ್ಪನೆ ಇದೆ ಎಂದರೆ ತಪ್ಪಾಗದು. ಸಂಪತ್ರಾಜ್ ತಪ್ಪಿಸಿಕೊಳ್ಳುವ ಅಗತ್ಯವಿರಲಿಲ್ಲ. ಪ್ರಾಥಮಿಕ ಆರೋಪಪಟ್ಟಿ ಸಲ್ಲಿಕೆ ಬಳಿಕ ಶರಣಾಗಬೇಕಿತ್ತು. ಯಾವ ಕಾರಣಕ್ಕೆ ಹೊರ ಹೋಗಿದ್ದರೋ ಗೊತ್ತಿಲ್ಲ ಎಂದರು.
ಗಲಭೆಯಲ್ಲಿ ಅವರ ಕೈವಾಡವಿದೆಯೇ ಎಂಬುದನ್ನು ನ್ಯಾಯಾಲಯ ವಿಚಾರಣೆ ನಡೆಸಿ ತೀರ್ಮಾನಿಸಬೇಕು. ಈಗಾಗಲೇ ಆರೋಪಪಟ್ಟಿ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಸಂಪತ್ರಾಜ್ ಅವರು ತಮ್ಮ ನಿರಪರಾಧಿತ್ವವನ್ನು ಸಾಬೀತುಪಡಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಕಾಂಗ್ರೆಸ್ ನಾಯಕರು ಸಂಪತ್ರಾಜ್ ಅವರನ್ನು ರಕ್ಷಿಸಿದ್ದರು ಎಂಬ ಆರೋಪ ಬಗ್ಗೆ ಪ್ರತಿಕ್ರಿಯಿಸಿದ ರೆಡ್ಡಿ, ಬಿಜೆಪಿ ಆ ರೀತಿ ಆರೋಪಿಸುವುದು ಸರಿಯಲ್ಲ. ಈ ಹಿಂದೆ ಇಂತಹ ಸಾಕಷ್ಟು ಘಟನೆಗಳಾಗಿವೆ. ಪೊಲೀಸರಿಗೆ ಸಿಗಬೇಡಿ ಎಂದು ಸಂಪತ್ರಾಜ್ಗೆ ಯಾರೂ ಹೇಳಿಲ್ಲ ಎಂದರು.