ಬಲವಂತದ ಮತಾಂತರ: ಕ್ರಮ ಕೈಗೊಳ್ಳಲು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಶಿಫಾರಸು
Team Udayavani, Sep 14, 2022, 6:12 PM IST
ಬೆಂಗಳೂರು: ಬಲವಂತದ ಮತಾಂತರದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಬುಧವಾರ ಶಿಫಾರಸು ಮಾಡಿದೆ.
ವಿಧಾನಸಭೆಯಲ್ಲಿ, ಬಲವಂತದ ಮತಾಂತರದ ಬಗ್ಗೆ ದೂರು ಬಂದಲ್ಲಿ ಅಗತ್ಯ ಕ್ರಮಕ್ಕೆ ಶಿಫಾರಸು ಮಾಡಲಾಗಿದ್ದು,ಕಾನೂನಾತ್ಮಕವಾಗಿ ನಡೆಸುವ ಚರ್ಚ್ ಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಅನಧಿಕೃತ ಕ್ರಿಶ್ಚಿಯನ್ ಮೆಷಿನರಿಗಳ ಬಗ್ಗೆ ಮಾಹಿತಿ ನೀಡದೇ ಅಧಿಕಾರಿಗಳ ಮೇಲೆ ಗಲಾಟೆ ಮಾಡಿದ ವಿವರಗಳು ವರದಿಯಲ್ಲಿ ಪ್ರಸ್ತಾಪ ಮಾಡಲಾಗಿದೆ.
ಅಲ್ಪಸಂಖ್ಯಾತರು ಹೆಚ್ಚು ವಾಸಿಸುವ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚು ಅನುದಾನ ಕೊಡಬೇಕು.ವಕ್ಫ್ ಆಸ್ತಿ ಸಂರಕ್ಷಣೆಗಾಗಿ ವಕ್ಫ್ ಬೋರ್ಡ್ ಕಾರ್ಯಪಡೆ ರಚಿಸಬೇಕು. ಸಾವಿರಾರು ಕೋಟಿ ರೂ. ಗಳ ವಕ್ಫ್ ಆಸ್ತಿ ಬೇರೆಯವರ ಪಾಲಾಗದಂತೆ ಹಂತ ಹಂತದ ಕ್ರಮ ಆಗಲೇಬೇಕು ಎಂದು ಒತ್ತಾಯ ಮಾಡಲಾಗಿದೆ.
ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ ಒತ್ತುವರಿಯಾಗಿರುವ ವಕ್ಫ್ ಆಸ್ತಿಗಳನ್ನು ಹಿಂಪಡೆಯಬೇಕು. ವಕ್ಫ್ ಆಸ್ತಿಯ ಖಾತೆ ಬದಲಾವಣೆ ಪ್ರಕ್ರಿಯೆ ಆದ್ಯತೆ ಮೇಲೆ ಮಾಡಬೇಕು ಮತ್ತು ಅಲ್ಪಸಂಖ್ಯಾತರ ನಿರ್ದೇಶನಾಲಯದ ಮೂಲಕ ನೀಡುವ ಅನುದಾನವನ್ನು ಕಡಿತಗೊಳಿಸಬಾರದು ಎಂದು ಮನವಿ ಮಾಡಲಾಗಿದೆ.