ಸಿಎಂ ಯಡಿಯೂರಪ್ಪ ಭೇಟಿಯಾದ ಮಾಜಿ ಸಿಎಂ ಕುಮಾರಸ್ವಾಮಿ
Team Udayavani, Jul 5, 2021, 11:16 AM IST
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಗೃಹ ಕಚೇರಿ ಕೃಷ್ಣದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.
ಭೇಟಿಯ ಬಳಿಕ ಮಾತನಾಡಿದ ಕುಮಾರಸ್ವಾಮಿ, ಮಂಡ್ಯದ ಮೈಶುಗರ್ ಕಾರ್ಖಾನೆಯನ್ನು ಖಾಸಗಿ ಪಾಲಾಗಲು ಅವಕಾಶ ಕೊಡದಂತೆ ಮನವಿ ಮಾಡಿದ್ದೇವೆ. ಮೈಶುಗರ್ ಕಾರ್ಖಾನೆ ಖಾಸಗಿಯವರಿಗೆ ವಹಿಸುವ ಬದಲು ಸರ್ಕಾರದ ಸ್ವಾಮ್ಯದಲ್ಲೇ ಇರಬೇಕು ಎಂದು ಸಿಎಂಗೆ ಮನವಿ ಮಾಡಿದ್ದೇನೆ ಎಂದರು.
ಕಾರ್ಖಾನೆಯನ್ನು ಖಾಸಗಿಯವರಿಗೆ ನೀಡಲು ಒಪ್ಪಿಗೆ ಕೊಡುವುದಿಲ್ಲ ಎಂದು ಸಿಎಂ ಭರವಸೆ ಕೊಟ್ಟಿದ್ದಾರೆ ಎಂದು ಎಚ್ ಡಿಕೆ ಹೇಳಿದರು.
ತಾ.ಪಂ. ಜಿ.ಪಂ. ಮೀಸಲಾತಿ ಬಗ್ಗೆ ಯೋಗೇಶ್ವರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯೋಗೇಶ್ವರ್ ಬಾಲಿಶ ಹೇಳಿಕೆ ಕೊಡುವುದು ಎಷ್ಟು ಸರಿಯೆಂದುತಾ ಅವರೇ ಯೋಚನೆ ಮಾಡಲಿ. ಮೀಸಲಾತಿ ನಿಗದಿ ಮಾಡುವುದು ಚುನಾವಣಾ ಆಯೋಗ, ಸರ್ಕಾರ ಅಲ್ಲ ಎಂದರು.
ಇದನ್ನೂಓದಿ:ಡೀಲ್ ನಡೆಯುವುದು ಕಾವೇರಿ ನಿವಾಸದ ಹಿಂಭಾಗದಲ್ಲಿ: ವಿಜಯೇಂದ್ರ ವಿರುದ್ದ ಗುಡುಗಿದ ಯತ್ನಾಳ್
ಮೇಕೆದಾಟು ವಿಚಾರವಾಗಿ ಮಾತನಾಡಿದ ಅವರು, ಯೋಜನೆಯಲ್ಲಿ ತಮಿಳುನಾಡಿಗೆ ಅನ್ಯಾಯ ಮಾಡುವ ಯೋಚನೆ ನಮಗಿಲ್ಲ. ನಾವು ತಮಿಳು ನಾಡಿಗೆ ನೀಡುವ ನೀರು ನಿಲ್ಲಿಸುವುದಿಲ್ಲ. ಟ್ರಿಬ್ಯುನಲ್ ಆದೇಶವನ್ನು ನಾವು ಪಾಲನೆ ಮಾಡುತ್ತೇವೆ. ನ್ಯಾಯಾಧೀಕರಣದ ತೀರ್ಪು ನಾವು ಉಲ್ಲಂಘಿಸುವುದಿಲ್ಲ.ನಾವು ಸಹೋದರರಂತೆ ಇರಬೇಕಾಗಿದೆ. ಅದಕ್ಕೆ ನಿಮ್ಮ ಸಹಕಾರವೂ ಬೇಕಿದೆ ಎಂದು ಎಚ್ ಡಿಕೆ ಹೇಳಿದರು.
ತಮಿಳುನಾಡಿನ ಹೊಗೇನಕಲ್ ನಲ್ಲಿ ಯಾರ ಅಪ್ಪಣೆ ತಗೆದುಕೊಂಡು ಜಲಾಶಯ ಕಟ್ಟಿದರು? ಹಾಗೆಯೇ ನಮ್ಮ ನಾಡಿನಲ್ಲಿ ನಾವು ಜಲಾಶಯ ನಿರ್ಮಿಸಲು ಅವರು ಅಡ್ಡಿ ಪಡಿಸುವುದು ಸರಿಯಲ್ಲ ಎಂದು ಕುಮಾರಸ್ವಾಮಿಯವರು ತಮಿಳುನಾಡಿನ ನಡೆಗೆ ವಿರೋಧ ವ್ಯಕ್ತಪಡಿಸಿದರು.