ತಳವಾರ, ಪರಿವಾರ ಎಸ್ಟಿಗೆ: ಗೆಜೆಟ್ ಅಧಿಸೂಚನೆಗೆ ಆದೇಶ
Team Udayavani, May 31, 2020, 7:56 AM IST
ಬೆಂಗಳೂರು: ರಾಜ್ಯದ ಕಾರವಾರ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯಲ್ಲಿರುವ ಸಿದ್ದಿ ಸಮುದಾಯ ಸಹಿತ ತಳವಾರ, ಪರಿವಾರ ಜಾತಿಯನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರದ ಗೆಜೆಟ್ ಅಧಿಸೂಚನೆಯ ಅನುಸಾರ ರಾಜ್ಯದಲ್ಲೂ ಗೆಜೆಟ್ ಅಧಿಸೂಚನೆ ಹೊರಡಿಸಲು ಆದೇಶಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ತಿಳಿಸಿದ್ದಾರೆ.
ಕುಲಶಾಸ್ತ್ರೀಯ ಅಧ್ಯಯನದಂತೆ ಪರಿವಾರ ಮತ್ತು ತಳವಾರ ಜಾತಿಗಳು ನಾಯಕ ಮತ್ತು ನಾಯಿಕಡದ ಪರ್ಯಾಯವಾಗಿವೆ. ಈ ಪ್ರಸ್ತಾವನೆಯು ಕಳೆದ ಹಲವಾರು ದಶಕಗಳಿಂದ ಬೇಡಿಕೆಯಲ್ಲಿತ್ತು. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಎಲ್ಲ ಪೂರಕ ಮಾಹಿತಿಯನ್ನು ಸಲ್ಲಿಸಲಾಯಿತು. ಕೇಂದ್ರ ರ್ಕಾರವು ಈ ಪ್ರಸ್ತಾವನೆಯನ್ನು ಸಂಸತ್ನಲ್ಲಿ ಅಂಗೀಕರಿಸಿ, ಗೆಜೆಟ್ ಅಧಿಸೂಚನೆ ಹೊರಡಿಸಿದ ಆಧಾರದಡಿ, ರಾಜ್ಯ ಸರ್ಕಾರವು ಗೆಜೆಟ್ ಪ್ರಕಟಣೆಯನ್ನು ಹೊರಡಿಸುವಂತೆ ಆದೇಶಿಲಾಗಿದೆ. ಈ ಅಧಿಸೂಚನೆಯಂತೆ ಈ ಸಮುದಾಯದವರಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡಲು ಅವಕಾಶವಿರುತ್ತದೆ ಎಂದು ಹೇಳಿದ್ದಾರೆ.