Hosapete; ಪುನೀತ್ ರಾಜ್ ಕುಮಾರ್ ಪುಣ್ಯ ಸ್ಮರಣೆ: ಅನ್ನಸಂತರ್ಪಣೆ
Team Udayavani, Oct 29, 2023, 6:07 PM IST
ಹೊಸಪೇಟೆ: ನಟ ಪುನೀತ್ ರಾಜಕುಮಾರ್ ಅವರ 2 ನೇ ವರ್ಷದ ಪುಣ್ಯ ಸ್ಮರಣೆಯನ್ನು ಭಾನುವಾರ ಆಚರಿಸಲಾಯಿತು. ನಗರದ ಅಪ್ಪು ಸರ್ಕಲ್ನಲ್ಲಿರುವ 6.6 ಅಡಿ ಎತ್ತರದ ಪುನೀತ್ ರಾಜಕುಮಾರ್ ಅವರ ಕಂಚಿನ ಪುತ್ಥಳಿಗೆ ಮಾಲಾರ್ಪಣೆ, ಪೂಜೆ ಸಲ್ಲಿಸಿದ ಅಪ್ಪು ಅಭಿಮಾನಿಗಳು ಸ್ಥಳದಲ್ಲಿ ಅನ್ನಸಂತರ್ಪಣೆ ಹಮ್ಮಿಕೊಂಡಿದ್ದರು.
ಸಸ್ಯಹಾರಿ ಊಟದ ಜತೆಗೆ ಎಗ್ ಬಿರಿಯಾನಿಯನ್ನು ಸಾರ್ವಜನಿಕರಿಗೆ ಉಣಬಡಿಸಿ, ಅಪ್ಪು ಮೇಲಿನ ಅಭಿಮಾನವನ್ನು ಇನ್ನಷ್ಟು ಹೆಚ್ಚಿಸಿಕೊಂಡರು. ಯುವ ಮುಖಂಡ ಸಿದ್ಧಾರ್ಥ ಸಿಂಗ್ ಅವರ ನೇತೃತ್ವದಲ್ಲಿ ಆಯೋಜನೆಗೊಂಡಿದ್ದ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.
ಅಪ್ಪು ಪ್ರತಿಮೆ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಎಲ್ಲರೂ ಮೊಬೈಲ್ ಕ್ಯಾಮೆರಾದಲ್ಲಿ ಅಪ್ಪುವಿನ ಸುಂದರ ಪ್ರತಿಮೆ ಫೋಟೋವನ್ನು ಸೆರೆ ಹಿಡಿಯುವ ದೃಶ್ಯ ಸಾಮಾನ್ಯವಾಗಿತ್ತು. ಅಪ್ಪು ಅಭಿಮಾನಿಗಳಾದ ಕಣ್ಣಿ ಶ್ರೀಕಂಠ, ಹೊನ್ನೂರು ವಲಿ, ಕಿಚಿಡಿ ವಿಶ್ವ, ಜೋಗಿ ತಾಯಪ್ಪ ಸೇರಿದಂತೆ ಕನ್ನಡಪರ ಸಂಘಟನೆಗಳು ಸಾವಿರಾರು ಭಾಗವಹಿಸಿದ್ದರು.
ವಿಶೇಷ ಪ್ರೀತಿ-ಅಭಿಮಾನ
ಆರಂಭದಿಂದಲೂ ರಾಜ್ ಕುಟುಂಬದ ಮೇಲೆ ಹೊಸಪೇಟೆ ಜನರು ವಿಶೇಷ ಪ್ರೀತಿ-ಅಭಿಮಾನ ಹೊಂದಿದ್ದಾರೆ. ಅದರಂತೆ ಪುನೀತ್ ರಾಜಕುಮಾರ್ ಅವರ ಮೇಲೆಯೂ ಅವರು ಪ್ರೀತಿ ಹೊಂದಿದ್ದರು. ಪುನೀತ್ ಅವರು ಆಗಾಗ ಹೊಸಪೇಟೆಗೆ ಆಗಮಿಸಿ, ಅಭಿಮಾನಿಗಳನ್ನು ಕಾಣುತ್ತಿದ್ದರು. ಸಾಧ್ಯವಾದರೆ, ಅವರ ಮನೆಗೂ ಭೇಟಿ ನೀಡುತ್ತಿದ್ದರು. ಯಾರು ಕೈಬಿಟ್ಟರೂ ಹೊಸಪೇಟೆ ಜನರು ನನ್ನನ್ನು ಕೈ ಬಿಡುವುದಿಲ್ಲ ಎಂಬ ಪುನೀತ್ ಅವರ ಮಾತು ಅಗಲಿದ ಬಳಿಕವೂ ಅವರ ಅಭಿಮಾನಿಗಳು ನಿಜವಾಗಿಸಿದ್ದಾರೆ.
ಆನಂದ ಸಿಂಗ್ರಿಂದ ಪ್ರತಿಮೆ ನಿರ್ಮಾಣ
ಮಾಜಿ ಸಚಿವ ಆನಂದ ಸಿಂಗ್ ಅವರು 6.6 ಅಡಿ ಎತ್ತರ ಕಂಚಿನ ಅಪ್ಪು ಪ್ರತಿಮೆಯನ್ನು ನಿರ್ಮಾಣ ಮಾಡುವ ಮೂಲಕ ಅಭಿಮಾನ ತೋರಿದ್ದರು. ಅಂದು ಪುತ್ಥಳಿಯನ್ನು ರಾಘವೇಂದ್ರ ರಾಜಕುಮಾರ್ ಅನಾವರಣಗೊಳಿಸಿದ್ದರು. ಇಡೀ ರಾಜ್ಯದಲ್ಲಿ ಎಲ್ಲರಿಗೂ ಮೊದಲು ಪುನೀತ್ ರಾಜಕುಮಾರ್ ಪುತ್ಥಳಿ ನಿರ್ಮಾಣ ಮಾಡಿದ ಕೀರ್ತಿ ಹೊಸಪೇಟೆ ಅಭಿಮಾನಿಗಳಿಗೆ ಸಲ್ಲುತ್ತದೆ.