ನಾನು ರಾಜಕಾರಣ ಮಾಡೋಕೆ ಬಂದವನು, ಕಬ್ಬನ್ ಪಾರ್ಕ್ ನೋಡೋಕೆ ಬಂದಿಲ್ಲ: ಪ್ರೀತಂ ಗೌಡ
ಸೋಮಣ್ಣಗೆ ಟಾಂಗ್ ಕೊಟ್ಟ ಪ್ರೀತಂ ಗೌಡ
Team Udayavani, Aug 10, 2021, 5:39 PM IST
ಬೆಂಗಳೂರು: ಮೊದಲು ಗೆದ್ದವರಿಗೆ ಒಂದೇ ವೋಟು, ಆರು ಬಾರಿ ಗೆದ್ದವರಿಗೂ ಒಂದೇ ವೋಟು. ನಾನೂ ರಾಜಕಾರಣ ಮಾಡಲು ಬಂದವನು. ಕಬ್ಬನ್ ಪಾರ್ಕ್,ಲಾಲ್ ಬಾಗ್ ನೋಡೋಕೆ ಬಂದಿಲ್ಲ ಎಂದು ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಅವರು ಸಚಿವ ಸೋಮಣ್ಣಗೆ ಟಾಂಗ್ ನೀಡಿದರು.
ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದ ಬಳಿಕ ಪ್ರೀತಂ ಗೌಡ ಸುದ್ದಿಗಾರರೊಂದಿಗೆ ಮಾತನಾಡಿದರು.
ನನ್ನ ನಿಲುವು ಬದಲಾಗಿಲ್ಲ. ನಾನು ಪ್ರಶ್ಮೆ ಮಾಡಿದ್ದು ನೂರಕ್ಕೆ ನೂರು ಸತ್ಯ. ಒಂದು ಸರಿ ಗೆದ್ದರೆ ಐದು ಬಾರಿ ಗೆಲ್ಲುವುದು. ಮಾತನಾಡಬೇಕಾದರೆ ಗೌರವ ಕೊಟ್ಟು ಗೌರವ ಪಡೆಯಬೇಕು. ಹಿರಿಯರು ಮಾರ್ಗದರ್ಶನ ಮಾಡಲಿಅದು ಬಿಟ್ಟು ಬೇರೆಯವರ ಬಗ್ಗೆ ಮಾತನಾಡುವುದು ಬೇಡ ಎಂದು ಪ್ರೀತಂ ಗೌಡ ಕಿಡಿಕಾರಿದರು.
ಇದನ್ನೂ ಓದಿ:ಎಸ್.ಎಂ. ಕೃಷ್ಣ ಛಾಪು ಇರಲಿ: ಸಿಎಂ ಬಸವರಾಜ ಬೊಮ್ಮಾಯಿ
ಪಕ್ಷವನ್ನ ಇಲ್ಲಿವರೆಗೆ ಅಭಿವೃದ್ಧಿ ಮಾಡಿದ್ದೇನೆ. ಸಂಘಟನೆ ಮುಂದುವರಿಸಿಕೊಂಡು ಹೋಗುತ್ತೇನೆ. ನಾನು ಸಿಎಂ ಅವರನ್ನು ಭೇಟಿ ಮಾಡಿದ್ದೆ. ಕಾರ್ಯಕರ್ತರ ನೋವನ್ನು ತಿಳಿಸಿಕೊಟ್ಟಿದ್ದೇನೆ. ಸಿಎಂ, ಅಶೋಕ್ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದಾರೆ ಕೇವಲ ಆಶ್ವಸನೆಯಲ್ಲ,ಮಾತು ಕೊಟ್ಟಿದ್ದಾರೆ. ಕಾರ್ಯಕರ್ತರಿಗೆ ನೋವಾಗದಂತೆ ನೋಡಿಕೊಳ್ತೇನೆ ಎಂದಿದ್ದಾರೆ. ಹಿರಿಯರ ಮಾತಿಗೆ ನಾನು ಒಪ್ಪುತ್ತೇನೆ ಎಂದರು.
120 ಶಾಸಕರು ಸಿಎಂ ಬೆನ್ನಿಗಿದ್ದೇವೆ. ವೈಯುಕ್ತಿಕ ಅಧಿಕಾರದ ಬಗ್ಗೆ ಮಾತನಾಡುವುದಿಲ್ಲ. ನಾನು ಮಂತ್ರಿ ಸ್ಥಾನವನ್ನೇ ಕೇಳಿಲ್ಲ. ಕಾರ್ಯಕರ್ತರು ಹೇಳಿದ್ದಾರೆ, ಅದನ್ನೇ ಹೇಳಿದ್ದೇನೆ ಎಂದ ಅವರು, ಯಾರೇ ಆದರೂ ಊಟಕ್ಕೆ ಹೋಗಲಿ ಅದು ಬಿಟ್ಟು ಬೇರೆ ಕಾರಣಕ್ಕೆ ಹೋಗುವುದು ಸರಿಯೇ? ಸಿಎಂ ಆಗಿ 24 ಗಂಟೆಯೊಳಗೆ ಹೋಗಿದ್ದು ಸರಿಯೇ ಇದನ್ನು ನಮ್ಮ ಕಾರ್ಯಕರ್ತರು ಕೇಳುತ್ತಿದ್ದಾರೆ ಎಂದು ಮತ್ತೆ ಬೊಮ್ಮಾಯಿ- ದೇವೇ ಗೌಡರ ಭೇಟಿಯನ್ನು ವಿರೋಧಿಸಿದರು.