ಸಿದ್ದರಾಮಯ್ಯರನ್ನು ನೋಡಿದರೆ ನನಗೆ ತುಂಬಾ ಕನಿಕರ ಬರುತ್ತದೆ: ಸಿಎಂ ಬೊಮ್ಮಾಯಿ
ಪ್ರವಾಹ ಪೀಡಿತ ಹಳ್ಳಿಗಳನ್ನು ಗುರುತಿಸಿ ನಿರ್ಮಿತಿ ಕೇಂದ್ರಗಳ ಸ್ಥಾಪನೆ
Team Udayavani, Jul 6, 2022, 7:47 PM IST
ಮೈಸೂರು : ಸಿದ್ದರಾಮಯ್ಯರನ್ನು ನೋಡಿದರೆ ನನಗೆ ತುಂಬಾ ಕನಿಕರ ಬರುತ್ತದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಬುಧವಾರ ಹೇಳಿಕೆ ನೀಡಿದ್ದಾರೆ.
ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಿಎಸ್ಐ ನೇಮಕಾತಿ ಹಗರಣದಲ್ಲಿ ಎಡಿಜಿಪಿ ಬಂಧನ ವಿಚಾರದಲ್ಲಿ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದ ಸಿಎಂ ಹೇಗೆ ಅಧಿಕಾರದಲ್ಲಿ ಮುಂದುವರೆಯುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.
ದಕ್ಷ ಆಡಳಿತಗಾರ ಎನ್ನುವ ಸಿದ್ದರಾಮಯ್ಯನವರು ಹಿಂದೆ ಡಿಜಿಪಿಯೊಬ್ಬರ ಕೇಸನ್ನು ಮುಚ್ಚಿ ಹಾಕಿಲ್ಲವೇ? 18 ಕೋಟಿ ಅವ್ಯವಹಾರ ನಡೆಸಿದ್ದಾರೆ ಎಂದು ಎಫ್ಐಆರ್ ದಾಖಲಾಗಿತ್ತು.ಆದರೂ ಆ ಅಧಿಕಾರಿಯನ್ನು ಬಂಧಿಸಿದರಾ? ಆದರೆ ನಮ್ಮ ಸರ್ಕಾರ ಭ್ರಷ್ಟಾಚಾರ ಕಂಡು ಬಂದ ಕೂಡಲೇ ಎಡಿಜಿಪಿಯನ್ನು ಬಂಧಿಸಿದ್ದೇವೆ. ಹಿಂದೆ ಭ್ರಷ್ಟಾಚಾರ ಮುಚ್ಚಿಹಾಕುವ ಸರ್ಕಾರ ಇತ್ತು. ಈಗ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಸರ್ಕಾರ ಇದೆ ಎಂದರು.
ಜಿಲ್ಲಾಧಿಕಾರಿಗಳೊಂದಿಗೆ ನಿರಂತರ ಸಂಪರ್ಕ
ಮಡಿಕೇರಿಯಲ್ಲಿ ನಿರಂತರ ಮಳೆ ಮತ್ತು ಭೂಕುಸಿತ ಸಂಭವಿಸುತ್ತಿದ್ದು, ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಕಳೆದ ಬಾರಿ ಎಲ್ಲೆಲ್ಲಿ ಲ್ಯಾಂಡ್ ಸ್ಲ್ಯಾಡ್ ಆಗಿದೆಯೋ ಆ ಸ್ಥಳಗಳನ್ನು ಸ್ಥಳಾಂತರ ಮಾಡಲು ತಿಳಿಸಿದ್ದೇನೆ. ರೋಡ್ ಗಳು ಬ್ಲಾಕ್ ಆಗದಂತೆ ನೋಡಿಕೊಳ್ಳಲು ಹೇಳಿದ್ದೇನೆ. ಇಂದು ರಾತ್ರಿ ಕಂದಾಯ ಸಚಿವರು ಮಡಿಕೇರಿಗೆ ಹೋಗುತ್ತಿದ್ದಾರೆ. ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಜಿಲ್ಲಾಧಿಕಾರಿಗಳಿಗೆ ಹಣಕಾಸಿನ ವ್ಯವಸ್ಥೆ ಮಾಡಲಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಳೆ ಜಾಸ್ತಿಯಾಗಿದೆ.ಕಡಲ ಕೊರೆತ ಜಾಸ್ತಿಯಾಗಿದೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ಎಲ್ಲಾ ರೀತಿಯ ಕ್ರಮ ಕೈಗೊಳ್ಳಿ. ಮನೆಗಳ ಹಾನಿಗೆ ಪರ್ಯಾಯ ವ್ಯವಸ್ಥೆ ಮಾಡಿ.ಕಡಲ ಕೊರೆತಕ್ಕೆ ಶಾಶ್ವತ ಪರಿಹಾರಕ್ಕೆ ಹೊಸ ಟೆಕ್ನಾಲಜಿ ಬಳಕೆ ಮಾಡಲು ಕೆಲವರು ಮುಂದೆ ಬಂದಿದ್ದಾರೆ. ಟ್ರಯಲ್ ಬೇಸಿಸ್ ಮೇಲೆ ಮಾಡಲಾಗುತ್ತದೆ. ಮೈಸೂರಿನ ಎನ್ ಡಿಆರ್ ಎಫ್ ಕೊಡಗಿಗೆ ಮೀಸಲಿಡಲಾಗಿದೆ ಎಂದರು.
ಮಂಗಳೂರಿನ ಎನ್ ಡಿಆರ್ ಎಫ್ ನ್ನು ಮಂಗಳೂರಿಗೆ, ಮಂಗಳೂರಿನ ಎಸ್ ಡಿಆರ್ ಎಫ್ ತಂಡವನ್ನು ಉಡುಪಿ ಮತ್ತು ಕಾರವಾರ ಜಿಲ್ಲೆಗೆ ನಿಯೋಜನೆ ಮಾಡಲಾಗಿದೆ. ಎಲ್ಲಾ ಜಿಲ್ಲಾಧಿಕಾರಿಗಳ ಬಳಿ 10 ಕೋಟಿಗೂ ಹೆಚ್ಚು ಹಣ ಇದೆ. ಅವಶ್ಯಕತೆ ಇದ್ದಲ್ಲಿ ಹೆಚ್ಚಿನ ಹಣ ಬಿಡುಗಡೆ ಮಾಡಲಾಗುವುದು ಎಂದರು.
ಬೆಂಗಳೂರಿನಲ್ಲಿ ರಸ್ತೆಗಳು ಕೆರೆಯಾಗುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಬೆಂಗಳೂರಿನಲ್ಲಿ ಕೆರೆಯ ಅಂಗಳದಲ್ಲಿ, ಸುತ್ತಮುತ್ತ ಹಾಗೂ ಕೆರೆಯ ಮೇಲೆ ಮನೆ ಕಟ್ಟಿದ್ದಾರೆ.ರಾಜಕಾಲುವೆ ದುರಸ್ಥಿ ಮಾಡಲು 16 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ರಾಜಕಾಲುವೆ ಸರಿ ಮಾಡಿದರೆ ಬಹುತೇಕ ಸಮಸ್ಯೆಗಳು ಬಗೆಹರಿಯುತ್ತವೆ.ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದರು.
ಶಾಲಾ ಮಕ್ಕಳಿಗೆ ಶೂ ಮತ್ತು ಬೈಸಿಕಲ್ ಗಳನ್ನು ಈ ವರ್ಷವೇ ಕೊಡಲಾಗುವುದು. ಸ್ವಲ್ಪ ವಿಳಂಬವಾಗಿದೆ, ಸಚಿವ ನಾಗೇಶ್ ಇದನ್ನು ನೋಡಿಕೊಳ್ಳುತ್ತಿದ್ದಾರೆ. ಈ ವರ್ಷವೇ ಶೂ ಮತ್ತು ಬೈಸಿಕಲ್ ಗಳನ್ನು ವಿತರಣೆ ಮಾಡಲಾಗುವುದು ಎಂದರು.
ಪ್ರವಾಹದಿಂದ ಗ್ರಾಮಗಳ ಮುಳುಗಡೆಗೆ ಶಾಶ್ವತ ಪರಿಹಾರ ವಿಚಾರಕ್ಕೆ ಪ್ರತಿಕ್ರಿಯಿಸಿ, ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದಾಗ ಬಿ.ಎಸ್ ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ 60 ಹಳ್ಳಿಗಳನ್ನು ಶಿಫ್ಟ್ ಮಾಡಲಾಗಿತ್ತು. ಆದರೆ ಪ್ರವಾಹ ಕಡಿಮೆಯಾದ ಮೇಲೆ ಮತ್ತೆ ಜನರು ಅದೇ ಹಳ್ಳಿಗಳಿಗೆ ಹೋದರು. ಹೀಗಾಗಿ ಪ್ರವಾಹ ಪೀಡಿತ ಹಳ್ಳಿಗಳನ್ನು ಗುರುತು ಮಾಡಿ ಸುತ್ತಮುತ್ತಲಿನ ಎತ್ತರದ ಜಾಗದಲ್ಲಿ ನಿರ್ಮಿತಿ ಕೇಂದ್ರಗಳನ್ನು ಸ್ಥಾಪನೆ ಮಾಡಲು ಚಿಂತನೆ ಮಾಡಲಾಗಿದೆ.