ಲಂಚಕ್ಕೆ ಬೇಡಿಕೆಯಿಟ್ಟಿದ್ದ ಐಟಿ ಅಧಿಕಾರಿಗಳಿಗೆ 4 ವರ್ಷ ಜೈಲು
Team Udayavani, Apr 2, 2023, 6:33 AM IST
ಬೆಂಗಳೂರು: ಉದ್ಯಮಿಯಿಂದ ಲಂಚ ಪಡೆದಿದ್ದ ಆದಾಯ ತೆರಿಗೆ ಇಲಾಖೆಯ ಇಬ್ಬರು ಅಧಿಕಾರಿಗಳಿಗೆ ಧಾರವಾಡ ಸಿಬಿಐ ವಿಶೇಷ ನ್ಯಾಯಾಲಯವು 4 ವರ್ಷ ಜೈಲು ಹಾಗೂ 1.10 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.
ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಾದ ಅಭಿಷೇಕ್ ತ್ರಿಪಾಠಿ, ಅಲೋಕ್ ತಿವಾರಿ ಅಪರಾಧಿಗಳು. ಟಿಡಿಎಸ್ ಪಾವತಿ ವಿಳಂಬ ಮಾಡಿರುವ ಪ್ರಕರಣದಲ್ಲಿ ಉದ್ಯಮಿಯೊಬ್ಬರಿಗೆ ನೋಟಿಸ್ ಜಾರಿ ಮಾಡಿದ್ದರು. ಉದ್ಯಮಿ ಅಧಿಕಾರಿಗಳನ್ನು ಭೇಟಿಯಾಗಿ ವಿಚಾರಿಸಿದಾಗ 4 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಬಳಿಕ ಅಂತಿಮವಾಗಿ 2.5 ಲಕ್ಷಕ್ಕೆ ಡೀಲ್ ಕುದುರಿಸಿದ್ದರು. ಆದರೆ, ಲಂಚ ಕೊಡಲು ಇಚ್ಛಿಸದ ಉದ್ಯಮಿಯು ಈ ಕುರಿತು ಸಿಬಿಐಗೆ ದೂರು ನೀಡಿದ್ದರು.
2016ರಲ್ಲಿ ಐಟಿ ಅಧಿಕಾರಿಗಳಾದ ಅಭಿಷೇಕ್, ಅಲೋಕ್ ಪರ ಲಂಚ ಪಡೆಯುತ್ತಿದ್ದ ಅವರ ಚಾಲಕ ಸುನೀಲ್ ಜಾಧವ್ನನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಬಳಿಕ ವಿಚಾರಣೆ ವೇಳೆ ಆತ ಕೊಟ್ಟ ಮಾಹಿತಿ ಆಧರಿಸಿ ಇಬ್ಬರು ಐಟಿ ಅಧಿಕಾರಿಗಳನ್ನೂ ಸಿಬಿಐ ಬಂಧಿಸಿತ್ತು. ಪ್ರಕರಣದ ತನಿಖೆ ನಡೆಸಿದ ಸಿಬಿಐ ಐಟಿ ಅಧಿಕಾರಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು.
ಮಾ.30ಕ್ಕೆ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯವು, “ಇಬ್ಬರು ಐಟಿ ಅಧಿಕಾರಿಗಳ ವಿರುದ್ಧ ಸಿಬಿಐ ಅಧಿಕಾರಿಗಳು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿರುವ ಸಾಕ್ಷ್ಯ’ ಪರಿಗಣಿಸಿದಾಗ ಲಂಚಕ್ಕೆ ಬೇಡಿಕೆಯಿಟ್ಟಿರುವ ಆರೋಪ ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಇಬ್ಬರಿಗೂ ತಲಾ 4 ವರ್ಷ ಜೈಲು ಹಾಗೂ 1.10 ಲಕ್ಷ ರೂ. ದಂಡ ವಿಧಿಸಿದೆ.