ಸರಕಾರದ ಮೇಲೆ ನ್ಯಾಯಾಂಗ ನಿಂದನೆ ತೂಗುಗತ್ತಿ?
ಅಂಗನವಾಡಿಗಳಿಗೆ ಮೂಲಸೌಕರ್ಯ ಒದಗಿಸುವಲ್ಲಿ "ಆಮೆ ಗತಿ'
Team Udayavani, Jan 27, 2022, 6:55 AM IST
ಬೆಂಗಳೂರು: ರಾಜ್ಯದ ಅಂಗನವಾಡಿ ಕೇಂದ್ರಗಳಿಗೆ ಮೂಲಸೌಕರ್ಯಗಳನ್ನು ಒದಗಿಸುವ ಮತ್ತು ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ವಿಚಾರದಲ್ಲಿ ಸರಕಾರದ “ಆಮೆ ನಡಿಗೆ’ ಯನ್ನು ಗಮನಿಸಿದರೆ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗುವ ಪರಿಸ್ಥಿತಿ ನಿರ್ಮಾಣವಾಗುವ ಆತಂಕವಿದೆ.
ಸ್ವಂತ ಕಟ್ಟಡ, ಶೌಚಾಲಯ, ವಿದ್ಯುತ್ ಸಂಪರ್ಕ, ಫ್ಯಾನ್ ಸಹಿತ ಅಂಗನ ವಾಡಿ ಕೇಂದ್ರಗಳಿಗೆ ಮೂಲ
ಸೌಕರ್ಯಗಳನ್ನು ಒದ ಗಿಸುವ ವಿಚಾರವು ಹೈಕೋರ್ಟ್ ವಿಚಾ ರಣೆಯಲ್ಲಿದೆ. 14,948 ಅಂಗನವಾಡಿ ಕೇಂದ್ರಗಳಿಗೆ ವಿದ್ಯುತ್ ಸಂಪರ್ಕ, 18,947ಕ್ಕೆ ಫ್ಯಾನ್ ಹಾಗೂ ಸರಕಾರಿ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 3,524 ಕೇಂದ್ರಗಳಲ್ಲಿ ಶೌಚಾಲಯ ವ್ಯವಸ್ಥೆ ಮಾಡಲು 2021ರ ಡಿಸೆಂಬರ್ 31ರ ಗಡುವನ್ನು ಹೈಕೋರ್ಟ್ ನೀಡಿತ್ತು. ಆದರೆ ನಿರೀಕ್ಷಿತ ಪ್ರಗತಿ ಆಗಿಲ್ಲ. ಈ ಪ್ರಕರಣ ಜ.27ರಂದು ವಿಚಾರಣೆಗೆ ಬರಲಿದೆ.
ಈ ರೀತಿ ನಿಧಾನಗತಿ ಅನುಸರಿಸಿದರೆ “ನ್ಯಾಯಾಂಗ ನಿಂದನೆ’ ಎದುರಿಸಬೇಕಾದ ಪರಿಸ್ಥಿತಿ ಬರಬಹುದು ಎಂದು ರಾಜ್ಯದಲ್ಲಿ ಅಪೌಷ್ಟಿಕತೆ ನಿವಾರಣೆಗೆ ಸಂಬಂಧಿಸಿ ಹೈಕೋರ್ಟ್ ನೇಮಕ ಮಾಡಿರುವ ನಿವೃತ್ತ ನ್ಯಾ| ಎ. ಎನ್. ವೇಣುಗೋಪಾಲ ಗೌಡ ನೇತೃತ್ವದ ಸಮಿತಿ ಎಚ್ಚರಿಕೆ ನೀಡಿದೆ.
ಇತ್ತೀಚೆಗೆ ನಡೆದ ಸಭೆ ಯಲ್ಲಿ ಪ್ರಗತಿ ಪರಿಶೀಲಿಸಿದ ಸಮಿತಿ, ಸರಕಾರ ವಿಳಂಬ ಮಾಡುತ್ತಿರುವುದನ್ನು ಗಮನಿಸಿದ ಸಮಿತಿ ಅಧ್ಯಕ್ಷರು, ನ್ಯಾಯಾಲಯದಲ್ಲಿ “ಕಠಿನ ಪರಿಣಾಮ’ ಎದುರಿಸ ಬೇಕಾಗಬಹುದು. ಆದ್ದರಿಂದ ತ್ವರಿತ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಯತ್ನಾಳ್ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ
ಸರಕಾರ ಏನು ಹೇಳಿತ್ತು
ರಾಜ್ಯದಲ್ಲಿ 65,911 ಅಂಗನವಾಡಿ ಕೇಂದ್ರಗಳಿದ್ದು, ಆ ಪೈಕಿ 14,948ರಲ್ಲಿ ವಿದ್ಯುತ್ ಸಂಪರ್ಕಕ್ಕಾಗಿ, ಅಂದಾಜು 45.33 ಕೋಟಿ ರೂ. ಬೇಕು. 3,524 ಅಂಗನವಾಡಿಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ. ಇಲ್ಲಿ ಶೌಚಾಲಯ ಕಟ್ಟಲು 21.19 ಕೋಟಿ ರೂ. ಬೇಕು. 18,947 ಅಂಗನವಾಡಿಗಳಿಗೆ ಫ್ಯಾನ್ ಒದಗಿಸಲು 11.27 ಕೋಟಿ ರೂ. ಬೇಕು. ಅಂಗನವಾಡಿ ಕೇಂದ್ರಗಳ ನಿರ್ವಹಣೆಗೆ 2021-22ನೇ ಸಾಲಿನ ಬಜೆಟ್ನಲ್ಲಿ 125 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಮುಂದಿನ ಒಂದು ವರ್ಷದ ಅವಧಿಯಲ್ಲಿ ಇದರಲ್ಲಿ 6,700 ಕೇಂದ್ರಗಳಿಗೆ ವಿದ್ಯುತ್ ಸಂಪರ್ಕ ಹಾಗೂ 8,300 ಕಟ್ಟಡಗಳಿಗೆ ಫ್ಯಾನ್ ಸೌಲಭ್ಯ ಮತ್ತು 1,700 ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ ಕಟ್ಟಲು ಹಾಗೂ 771 ಹೊಸ ಅಂಗನವಾಡಿ ಕೇಂದ್ರಗಳನ್ನು ಕಟ್ಟಲು ಪ್ರಸ್ತಾವಿಸಲಾಗಿದೆ. ವಿತ್ತ ಇಲಾಖೆ ಒಪ್ಪಿಗೆ ಸಿಕ್ಕ ಮೇಲೆ ಕಾಮಗಾರಿ ಕೈಗೆತ್ತಿಕೊಳ್ಳ ಲಾಗುವುದು. 1,488 ಅಂಗನವಾಡಿ ಕಾರ್ಯಕರ್ತೆಯರು ಮತ್ತು 2,811 ಸಹಾಯಕಿಯರ ಹುದ್ದೆ ಖಾಲಿ ಇವೆ ಎಂದು ಸರಕಾರ ಹೈಕೋರ್ಟ್ಗೆ ಮಾಹಿತಿ ನೀಡಿತ್ತು.