ಮೊಬೈಲ್ ಆಫ್ ಮಾಡಿ ದೇವರ ದರ್ಶನ ಮಾಡಿ
Team Udayavani, Jul 18, 2023, 7:15 AM IST
ಬೆಂಗಳೂರು:ಧಾರ್ಮಿಕ ದತ್ತಿ ಇಲಾಖೆ ತನ್ನ ವ್ಯಾಪ್ತಿಗೆ ಸೇರುವ ದೇವಾಲಯಗಳ ಆವರಣ ವ್ಯಾಪ್ತಿಯಲ್ಲಿ ಭಕ್ತರ ಮೊಬೈಲ್ ಬಳಕೆಗೆ ನಿಷೇಧ ಹೇರಿ ಸೋಮವಾರ ಆದೇಶ ಹೊರಡಿಸಿದೆ.
ದೇವಾಲಯಗಳ ಆವರಣಗಳಲ್ಲಿ ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಮೊಬೈಲ್ ಬಳಕೆ ಮಾಡುವುದರಿಂದ ಸಿಬ್ಬಂದಿ ಹಾಗೂ ದೇವರ ದರ್ಶನಕ್ಕೆ ಬರುವ ಭಕ್ತರಿಗೂ ಏಕ ಮನಸಿನಲ್ಲಿ ಧ್ಯಾನ ಪೂಜಾದಿಗಳನ್ನು ನಡೆಸಲು ತೊಂದರೆ ಆಗುತ್ತಿತ್ತು.
ಹೀಗಾಗಿ, ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಬರುವವರು ದೇವರ ದರ್ಶನದ ಸಮಯದಲ್ಲಿ ತಮ್ಮ ಮೊಬೈಲ್ಗಳನ್ನು ಸ್ವಿಚ್ ಆಫ್ ಮಾಡಿ ದೇವರ ದರ್ಶನ ಪಡೆಯುವಂತೆ ಸೂಚಿಸಲಾಗಿದೆ.
ಈ ಬಗ್ಗೆ ದೇವಾಲಯಗಳ ಸೂಚನಾ ಫಲಕಗಳಲ್ಲಿ ಸೂಚನೆಗಳನ್ನು ಪ್ರಕಟಿಸುವಂತೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ ಸೂಚಿಸಲಾಗಿದೆ.
ಕೇದಾರನಾಥದಲ್ಲಿ:
ಇನ್ನೊಂದೆಡೆ, ಕೇದಾರನಾಥ ದೇಗುಲ ಆವರಣದಲ್ಲಿ ಕೂಡ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಕೆಲವು ದಿನಗಳ ಹಿಂದೆ ಮಹಿಳಾ ಬ್ಲಾಗರ್ ಒಬ್ಬರು ಕೇದಾರನಾಥ ದೇಗುಲ ಆವರಣದಲ್ಲಿ ಬಾಯ್ ಫ್ರೆಂಡ್ಗೆ ಪ್ರೇಮ ನಿವೇದನೆ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಅದನ್ನು ಹಿನ್ನೆಲೆಯಾಗಿ ಇರಿಸಿಕೊಂಡು ಆಡಳಿತ ಮಂಡಳಿ ಈ ತೀರ್ಮಾನ ಕೈಗೊಂಡಿದೆ.