
ಸಚಿವಾಕಾಂಕ್ಷಿಗಳ ಪಟ್ಟು ; ಸಂಪುಟ ಪುನಾರಚನೆಗೆ ಹೆಚ್ಚಿದ ಒತ್ತಡ
ಬಿಎಸ್ವೈ ಭೇಟಿ ಮಾಡಿದ ಸಿಎಂ ಬೊಮ್ಮಾಯಿ
Team Udayavani, Jan 20, 2022, 7:10 AM IST

ಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನಾರಚನೆಗೆ ಸಚಿವಾಕಾಂಕ್ಷಿಗಳಿಂದ ಮತ್ತೆ ಒತ್ತಡ ಹೆಚ್ಚಿದೆ. ಬಿಜೆಪಿಯ ದಿಲ್ಲಿ ನಾಯಕರು ಪಂಚರಾಜ್ಯ ಚುನಾವಣೆಯತ್ತ ಗಮನ ಹರಿಸಿ ರುವುದರಿಂದ ಸಂಪುಟ ಪುನಾರಚನೆ ಸದ್ಯಕ್ಕಾಗದು ಎಂಬ ಊಹೆ ಇದ್ದರೂ ಆಕಾಂಕ್ಷಿಗಳು ಪ್ರಯತ್ನ ಮುಂದುವರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ವರಿಷ್ಠರು ಸಮಯ ನೀಡಿದರೆ ದಿಲ್ಲಿಗೆ ತೆರಳಿ ಸಂಪುಟ ಪುನಾರಚನೆ ಬಗ್ಗೆ ಚರ್ಚಿಸಲು ಚಿಂತನೆ ನಡೆಸಿದ್ದಾರೆ.
ಆದರೆ ದಿಲ್ಲಿ ನಾಯಕರು ಪಂಚರಾಜ್ಯಗಳ ಚುನಾವಣೆಯಲ್ಲಿ ವ್ಯಸ್ತರಿರುವುದರಿಂದ ಸಮಯ ಸಿಗುವುದು ಅನುಮಾನ. ಹೀಗಾಗಿ ಸಂಪುಟ ಪುನಾರಚನೆ ಚುನಾವಣೆಯ ಅನಂತರವೇ ಎನ್ನಲಾಗಿದೆ.
ಖಾಲಿ ಇರುವ ನಾಲ್ಕು ಸ್ಥಾನಗಳ ಜತೆಗೆ ಹಾಲಿ 8ರಿಂದ 10 ಸಚಿವರನ್ನು ಕೈ ಬಿಟ್ಟು ಹೊಸ ಸಂಪುಟ ರಚಿಸಬೇಕೆಂಬ ಒತ್ತಡ ಹೆಚ್ಚಾಗುತ್ತಿದೆ. ಬಜೆಟ್ ಅಧಿವೇಶನಕ್ಕೆ ಮುನ್ನ ಪುನಾರಚನೆಗೆ ಆಗ್ರಹ ಬಜೆಟ್ ಅಧಿವೇಶನಕ್ಕೆ ಮುನ್ನವೇ ಸಂಪುಟ ಪುನಾರಚನೆ ಮಾಡಬೇಕು ಎಂದು ಸಚಿವಾ ಕಾಂಕ್ಷಿಗಳು ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದು ಬಂದಿದೆ.
ದಿಲ್ಲಿ ಭೇಟಿಗೆ ಸಮಯ?
ಸಿಎಂ ಬೊಮ್ಮಾಯಿ ಸಂಪುಟ ಪುನಾರಚನೆ ಕುರಿತು ಪಕ್ಷದ ವರಿಷ್ಠರ ಜತೆ ಚರ್ಚಿಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಸಮಯ ಕೇಳಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಬಿಜೆಪಿಯ ಒಂದು ಮೂಲದ ಪ್ರಕಾರ ಪಂಚ ರಾಜ್ಯಗಳ ಚುನಾ ವಣೆ ಹಿನ್ನೆಲೆಯಲ್ಲಿ ವರಿಷ್ಠರು ಈ ವಿಚಾರದಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳುವ ಸಾಧ್ಯತೆ ಕಡಿಮೆ.
ನಿಗಮ: ಅಧ್ಯಕ್ಷರು ಬದಲು?
ನಿಗಮ ಮಂಡಳಿ ಅಧ್ಯಕ್ಷರನ್ನು ಬದಲಾಯಿಸಿ, ಪಕ್ಷದ ಇತರ ಕಾರ್ಯ ಕರ್ತರಿಗೆ ಅವಕಾಶ ಮಾಡಿಕೊಡಲು ಬುಧವಾರ ತಡರಾತ್ರಿ ನಡೆದ ಸಿಎಂ ಮತ್ತು ನಳಿನ್ ನಡುವಿನ ಸಭೆಯಲ್ಲಿ ನಿರ್ಧರಿಸಲಾಗಿದೆ. 32 ಜನರನ್ನು ಬದಲಾಯಿಸುವ ಸಾಧ್ಯತೆಯಿದೆ. ಶಾಸಕರು ನಿಗಮ ಅಧ್ಯಕ್ಷರಾಗಿರುವಲ್ಲಿ ಬದಲಾವಣೆ ಇಲ್ಲ ಎಂದು ತಿಳಿದುಬಂದಿದೆ.
ಸಚಿವ ಸಂಪುಟ ಪುನಾರಚನೆ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ಮಾಡುವುದಿಲ್ಲ.
-ಬಸವರಾಜ ಬೊಮ್ಮಾಯಿ,
ಮುಖ್ಯಮಂತ್ರಿ
ಟಾಪ್ ನ್ಯೂಸ್
