ಕತ್ತಿ ಕೂಡ ಡಿಸಿಎಂ ಆಗಬಹುದು: ಸವದಿ
Team Udayavani, Oct 14, 2019, 3:00 AM IST
ಬೆಳಗಾವಿ: ರಾಜಕೀಯ ಕ್ಷೇತ್ರದಲ್ಲಿ ಯಾವಾಗ ಏನು ಬೇಕಾದರೂ ಅಗಬಹುದು. ಹಣೆಯಲ್ಲಿ ಬರೆದಿದ್ದರೆ ಮುಂದೆ ಉಮೇಶ ಕತ್ತಿಯೂ ಡಿಸಿಎಂ ಆಗಬಹುದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು. ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪನವರು ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡ ವೇಳೆ ಉಮೇಶ ಕತ್ತಿ ಬೇರೆ ಕಾರ್ಯದಲ್ಲಿ ನಿರತರಾಗಿದ್ದರು. ಹಾಗಾಗಿ, ಸಿಎಂ ಭೇಟಿಗೆ ಬಂದಿರಲಿಲ್ಲ. ಅವರೇನೂ ನಮ್ಮ ವೈರಿಯಲ್ಲ.
ಕತ್ತಿ ಅವರೊಂದಿಗೆ ನಾನು ಮಾತನಾಡಿದ್ದೇನೆ. ಹಣೆಬರಹವಿದ್ದರೆ ಮುಂದೊಂದು ದಿನ ಅವರೂ ಉಪ ಮುಖ್ಯಮಂತ್ರಿ ಆಗುತ್ತಾರೆ. ಅವಕಾಶ ಯಾರಿಗೆ ಯಾವಾಗ ಬರುತ್ತದೆ ಎಂದು ಹೇಳಲಾಗದು ಎಂದರು. ಮಾಜಿ ಶಾಸಕ ರಾಜು ಕಾಗೆ ಅವರು ಕಾಡಾ ಅಧ್ಯಕ್ಷ ಸ್ಥಾನ ತಿರಸ್ಕರಿಸಿಲ್ಲ. ರಾಜ್ಯಮಟ್ಟದಲ್ಲಿ ಕೆಲಸ ಮಾಡಲು ಬೇರೆ ಸ್ಥಾನ ನೀಡುವಂತೆ ಹೇಳಿದ್ದಾರೆ. ಇದನ್ನು ಸರಿಪಡಿಸಲಾಗುವುದು. ಬೆಳಗಾವಿ ಜಿಲ್ಲೆಯ ಬಿಜೆಪಿ ವಲಯದಲ್ಲಿ ಯಾವುದೇ ಭಿನ್ನಮತ ಇಲ್ಲ. ಗೊಂದಲವೂ ಇಲ್ಲ ಎಂದರು.