ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ: ಹಳ್ಳಿಗಳಲ್ಲಿ ಅಭಿಯಾನ
ಎ. 24: ವಿಶೇಷ ಗ್ರಾಮಸಭೆ
Team Udayavani, Apr 23, 2022, 6:50 AM IST
ಬೆಂಗಳೂರು: ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸಲು ರಾಜ್ಯಾದ್ಯಂತ ಗ್ರಾಮೀಣ ಭಾಗದಲ್ಲಿ ಒಂದು ವಾರ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಎ. 24ರಂದು ವಿಶೇಷ ಗ್ರಾಮಸಭೆ ನಡೆಯಲಿದೆ.
ಪ್ರತೀವರ್ಷ ಎ. 24ರಂದು ರಾಷ್ಟ್ರವ್ಯಾಪಿ ಪಂಚಾಯತ್ರಾಜ್ ದಿವಸ್ ಆಚರಿಸಲಾಗುತ್ತದೆ. ಈ ದಿನ ಗ್ರಾಮ ಪಂಚಾಯತ್ ಮಟ್ಟದಲ್ಲಿ ವಿಶೇಷ ಕಾರ್ಯಕ್ರಮ ಹಾಗೂ ಗ್ರಾಮಸಭೆ ನಡೆಸಲಾಗುತ್ತದೆ. ಅದರಂತೆ, ಈ ಬಾರಿಯ ಪಂಚಾಯತ್ರಾಜ್ ದಿವಸ್ ಅಂಗವಾಗಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸಲು ವಿಶೇಷ ಅಭಿಯಾನ ನಡೆಸಲಾಗುತ್ತಿದೆ.
ಪಂಚಾಯತ್ರಾಜ್ ದಿವಸ್ ಅಂಗವಾಗಿ ಎಲ್ಲ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸಲು ಎ. 24ರಿಂದ ಮೇ 1ರವರೆಗೆ ಅಭಿಯಾನ ಹಮ್ಮಿಕೊಂಡು, ಅಭಿಯಾನ ಮೊದಲ ದಿನವಾದ ಎ. 24ರಂದು ಗ್ರಾಮ ಪಂಚಾಯತ್ ಮಟ್ಟದಲ್ಲಿ ವಿಶೇಷ ಗ್ರಾಮ ಸಭೆ ನಡೆಸುವಂತೆ ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಸೂಚನೆ ನೀಡಿದೆ. ಅದರಂತೆ, ರಾಜ್ಯದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ರಾಜ್ ಇಲಾಖೆ ಎಲ್ಲ ಗ್ರಾಮ ಪಂಚಾಯತ್ಗಳಿಗೆ ಸುತ್ತೋಲೆ ಹೊರಡಿಸಿದೆ.
ಇಲಾಖೆಯಿಂದ ಸೂಚನೆ
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಕಾರ್ಡ್ ಪಡೆಯದೆ ಇರುವ ಅರ್ಹ ರೈತರಿಗೆ ಕಾರ್ಡ್ ಲಭ್ಯವಾಗುವಂತೆ ಜಿ.ಪಂ. ಸಿಇಒ, ಬ್ಯಾಂಕ್ ಅಧಿಕಾರಿಗಳು, ನಬಾರ್ಡ್ ಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಮತ್ತು ಅಭಿಯಾನ ಯಶಸ್ವಿಗೊಳಿಸಲು ನಿರ್ದಿಷ್ಟ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುವಂತೆ ಮತ್ತು ಗ್ರಾ.ಪಂ. ವ್ಯಾಪ್ತಿಯ ಬ್ಯಾಂಕುಗಳು, ರೈತರು ಮತ್ತು ಸಂಬಂಧಿಸಿದ ಅಧಿಕಾರಿಗಳನ್ನು ಸೇರಿಸಿಕೊಂಡು ಈ ಅಭಿಯಾನ ಹಮ್ಮಿಕೊಳ್ಳುವಂತೆ ಇಲಾಖೆ ಸೂಚನೆ ನೀಡಿದೆ. ಕೇಂದ್ರ ಕೃಷಿ ಸಚಿವಾಲಯದ ಸೂಚನೆಯಂತೆ ಆಂದೋಲನ ಹಮ್ಮಿಕೊಳ್ಳಲಾಗುತ್ತಿದೆ.
ಪಿಎಂ ಮೋದಿ ಭಾಷಣ
ಪಂಚಾಯತ್ರಾಜ್ ದಿವಸ್ ಅಂಗವಾಗಿ ಎ. 24ರಂದು ದೇಶದ ಎಲ್ಲ ಗ್ರಾಮ ಪಂಚಾಯತ್ಗಳಲ್ಲಿ ವಿಶೇಷ ಗ್ರಾಮಸಭೆ ನಡೆಯಲಿದ್ದು, ಈ ವಿಶೇಷ ಗ್ರಾಮಸಭೆಗಳನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿಯವರು ಭಾಷಣ ಮಾಡಲಿದ್ದಾರೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಸುತ್ತೋಲೆ ತಿಳಿಸಿದೆ.