ಕೂಡಲಸಂಗಮ ಪ್ರವೇಶ ನಿಷೇಧ
Team Udayavani, Mar 18, 2020, 3:05 AM IST
ಕೂಡಲಸಂಗಮ: ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಭಕ್ತರು ಹಾಗೂ ಪ್ರವಾಸಿಗರ ಸುರಕ್ಷತಾ ದೃಷ್ಟಿಯಿಂದ ಕೂಡಲಸಂಗಮ ಅಭಿವೃದ್ಧಿ ಮಂಡಳಿ ವ್ಯಾಪ್ತಿಯ ದೇಗುಲಗಳ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಕೂಡಲಸಂಗಮದ ಸಂಗಮೇಶ್ವರ ದೇವಾಲಯ, ದಾಸೋಹ ಭವನ, ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿಯ ಬಸವೇಶ್ವರ ದೇವಸ್ಥಾನ, ದಾಸೋಹ ಭವನ, ಬಸವ ಸ್ಮಾರಕ, ಯಾತ್ರಿ ನಿವಾಸ, ಸಾರ್ವಜನಿಕ ಗ್ರಂಥಾಲಯ ಹಾಗೂ ಇಂಗಳೇಶ್ವರದ ಸ್ಮಾರಕ,
ಬೀಳಗಿ ತಾಲೂಕಿನ ಚಿಕ್ಕ ಸಂಗಮದ ಸಂಗಮೇಶ್ವರ ದೇವಸ್ಥಾನ, ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯ ಗಂಗಾಂಬಿಕಾ ಐಕ್ಯ ಮಂಟಪ, ಮುದ್ದೇಬಿಹಾಳ ತಾಲೂಕಿನ ತಂಗಡಗಿಯ ನೀಲಾಂಬಿಕಾ ಐಕ್ಯ ಮಂಟಪದ ಪ್ರವೇಶವನ್ನು ಮಂಗಳವಾರ ಮಧ್ಯಾಹ್ನ 1 ಗಂಟೆಯಿಂದ ನಿರ್ಬಂಧಿಸಲಾಗಿದೆ ಎಂದು ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಆಯುಕ್ತೆ ರಾಜಶ್ರೀ ಅಗಸರ ತಿಳಿಸಿದ್ದಾರೆ.
ಕುಕ್ಕೆ: ದರ್ಶನಕ್ಕೆ ಮಾತ್ರ ಅವಕಾಶ
ಸುಬ್ರಹ್ಮಣ್ಯ: ಕೊರೊನಾ ಮುಂಜಾಗ್ರತೆಯಾಗಿ ದ.ಕ.ಜಿಲ್ಲಾಧಿಕಾರಿಗಳ ಆದೇಶದಂತೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಉತ್ಸವಗಳಿಗೆ ಭಕ್ತರಿಗೆ ನಿರ್ಬಂಧ ಹೇರಲಾಗಿದೆ. ದೇವರ ದರ್ಶನವನ್ನು ಹೊರತು ಪಡಿಸಿ ಭಕ್ತರು ನೆರವೇರಿಸುವ ಎಲ್ಲಾ ಸೇವೆಗಳನ್ನು ಮುಂದಿನ ಆದೇಶದವರೆಗೆ ರದ್ದುಪಡಿಸಲಾಗಿದೆ. ದೇವಸ್ಥಾನಕ್ಕೆ ಬರುವ ಸಾರ್ವಜನಿಕರಿಗೆ ತಂಗಲು ಅವಕಾಶ ಇರುವುದಿಲ್ಲ. ದೇವಾಲಯದಲ್ಲಿ ನಡೆಯುವ ಉತ್ಸವಗಳಲ್ಲಿ ಸಿಬ್ಬಂದಿ ಮಾತ್ರ ಭಾಗವಹಿಸಲು ಅವಕಾಶವಿರುವುದಾಗಿ ದೇವಸ್ಥಾನದ ಪ್ರಕಟಣೆ ತಿಳಿಸಿದೆ.