ದೇವೇಗೌಡರಂತೆ ಮಾತೃಭೂಮಿ ಪ್ರೀತಿಸಿ: ಸುತ್ತೂರಿನಲ್ಲಿ ಉಪರಾಷ್ಟ್ರಪತಿ
Team Udayavani, Aug 28, 2018, 12:49 PM IST
ಮೈಸೂರು: ಯಾವತ್ತೂ ಮಾತೃಭೂಮಿ, ಮಾತೃಭಾಷೆಯನ್ನು ಮರೆಯಬಾರದು. ದೇವೇಗೌಡರು ದೆಹಲಿಗೆ ಹೋದರೂ ತಾಯ್ನಾಡಾದ ಹಾಸನವನ್ನು ಮರೆತಿಲ್ಲ ಎಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಅವರು ಮಾಜಿ ಪ್ರಧಾನಿ ಎಚ್ಡಿಡಿ ಅವರನ್ನು ಹಾಡಿ ಹೋಗಳಿದರು.
ಅವರು ಮಂಗಳವಾರ ಸುತ್ತೂರಿನಲ್ಲಿ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 103ನೇ ಜಯಂತಿ ಮಹೋತ್ಸವ ಹಾಗೂ ಶ್ರೀ ಚನ್ನವೀರ ದೇಶಿಕೇಂದ್ರ ಗುರುಕುಲ ಉದ್ಘಾಟನಾ ಸಮಾರಂಭವನ್ನು ನೆರವೇರಿಸಿ ಮಾತನಾಡಿದರು.
ಯುವ ಜನತೆ ನಮ್ಮ ಮಾತೃ ಭೂಮಿಯನ್ನು ಪ್ರೀತಿಸಬೇಕು. ಸ್ಥಳೀಯ ಭಾಷೆಗಳು ಬೆಳೆಯಬೇಕು. ನಮ್ಮ ಮಾತೃ ಭಾಷೆ ಕಣ್ಣಿದ್ದಂತೆ. ಇತರ ಭಾಷೆ ಕನ್ನಡಕ ವಿದ್ದಂತೆ. ಕಣ್ಣು ಬಹಳ ಮುಖ್ಯವಾದುದ್ದು ಎಂದು ಉಪರಾಷ್ಟ್ರಪತಿಗಳು ಸಲಹೆ ನೀಡಿದರು.
ಸಮಾರಂಭದಲ್ಲಿ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ಗಳು, ಸುತ್ತೂರು ಮತ್ತು ಶ್ರೀಕ್ಷೇತ್ರ ಸಿದ್ಧಗಂಗಾದ ಸಿದ್ಧಲಿಂಗ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು, ಡಾ.ಯತೀಂದ್ರ ಸಿದ್ದರಾಮಯ್ಯ ಮೊದಲಾದವರು ಉಪಸ್ಥಿತರಿದ್ದರು.
ಅಕ್ಕ ಪಕ್ಕದ ಸೀಟ್ನಲ್ಲಿ ಹಾಲಿ- ಮಾಜಿ ಸಿಎಂ
ಸಮಾರಂಭದ ವೇದಿಕೆಯಲ್ಲಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಅವರು ಅಕ್ಕ ಪಕ್ಕದ ಸೀಟ್ನಲ್ಲಿ ಕುಳಿತಿದ್ದರು. ಪರಸ್ಪರ ಹಸ್ತಲಾಘವ ಮಾಡಿಕೊಂಡರು.
ಸಂತ್ರಸ್ತರ ನಿಧಿಗೆ 50 ಲಕ್ಷ ರೂ
ನೆರೆ ಸಂಕಷ್ಟಕ್ಕೆ ಒಳಗಾಗಿರುವ ಜನರ ಪುನಶ್ಚೇತನಕ್ಕಾಗಿ ಸುತ್ತೂರು ಶ್ರೀವೀರಸಿಂಹಾಸನ ಮಹಾಸಂಸ್ಥಾನ ಮಠದ ವತಿಯಿಂದ 50ಲಕ್ಷ ರೂ. ದೇಣಿಗೆಯನ್ನು ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ನೀಡಲಾಯಿತು.
ಶ್ರೀಕ್ಷೇತ್ರದ ಜಗದ್ಗುರು ಶ್ರೀ ದೇಶೀಕೇಂದ್ರ ಮಹಾಸ್ವಾಮಿಗಳು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಚೆಕ್ ಹಸ್ತಾಂತರಿಸಿದರು.