ತಪ್ಪಿದ ಸಚಿವ ಪದವಿ:ಎಂ.ಬಿ.ಪಾಟೀಲ್ ಹೇಳಿದ್ದೇನು? ಬೆಂಬಲಿಗರ ಆಕ್ರೋಶ
Team Udayavani, Jun 6, 2018, 1:19 PM IST
ಬೆಂಗಳೂರು: ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆಯುವ ಅಪಾರ ನಿರೀಕ್ಷೆ ಹೊಂದಿದ್ದ ಬಬಲೇಶ್ವರ ಶಾಸಕ, ಕಾಂಗ್ರೆಸ್ ಪ್ರಭಾವಿ ನಾಯಕ ಎಂ.ಬಿ.ಪಾಟೀಲ್ ಅವರಿಗೆ ಅವಕಾಶ ಕೈ ತಪ್ಪಿದೆ.
ಲಿಂಗಾಯತ ಕೋಟಾದಲ್ಲಿ ಸಚಿವ ಪದವಿ ಪಡೆಯುವ ಭಾರೀ ನಿರೀಕ್ಷೆ ಹೊಂದಿದ್ದ ಎಂ.ಬಿ. ಪಾಟೀಲ್ ಅವರು ತೀವ್ರ ಅಸಮಾಧಾನ ಹೊಂದಿರುವುದು ತಿಳಿದು ಬಂದಿದ್ದು, ಬೆಂಬಲಿಗರು ಆಕ್ರೋಶ ಹೊರ ಹಾಕಿದ್ದಾರೆ.
ಎಂ.ಬಿ. ಪಾಟೀಲ್ ಅವರ ನಿವಾಸಕ್ಕೆ ಕಾಂಗ್ರೆಸ್ ಶಾಸಕ ಮತ್ತು ಸಂಭಾವ್ಯ ಸಚಿವ ಕೃಷ್ಣ ಭೈರೇಗೌಡ ಅವರು ಭೇಟಿ ನೀಡಿ ಮಾತುಕತೆಯನ್ನು ನಡೆಸಿದ್ದಾರೆ.
ಮಾತುಕತೆ ನಡೆಸಿ ಹೊರ ಬರುವ ವೇಳೆ ಜಮಾಯಿಸಿದ್ದ ನೂರಾರು ಎಂ.ಬಿ.ಪಾಟೀಲ್ ಅವರ ಬೆಂಬಲಿಗರು ಕೃಷ್ಣ ಭೈರೇಗೌಡ ಅವರಿಗೆ ಮುತ್ತಿಗೆ ಹಾಕಿ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದ್ದಾರೆ.
ಎಂ.ಬಿ.ಪಾಟೀಲ್ ಪರ ಜೈಕಾರಗಳನ್ನು ಕೂಗುತ್ತಿದ್ದಾರೆ.
ಸಿದ್ದರಾಮಯ್ಯ ಜೊತೆ ಚರ್ಚಿಸುತ್ತೇನೆ !
ಸಚಿವ ಸ್ಥಾನ ಕೈತಪ್ಪಿದ ಬಗ್ಗೆ ಪ್ರಶ್ನಿಸಿದಾಗ ‘ನಾನು ಸದ್ಯ ಏನೂ ಪ್ರತಿಕ್ರಿಯೆ ನೀಡುವುದಿಲ್ಲ. ನಮ್ಮ ನಾಯಕರಾದ ಸಿದ್ದರಾಮಯ್ಯ ಅವರ ಜೊತೆ ಚರ್ಚೆ ನಡೆಸುತ್ತೇನೆ’ ಎಂದಿದ್ದಾರೆ.
ಒತ್ತಡ ಹಾಕಲು ಸ್ವಾಮೀಜಿಗಳ ನಿರ್ಧಾರ
ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ದಲ್ಲಿ ಮುಂಚೂಣಿಯಲ್ಲಿದ್ದು ಹಗಲಿರುಳು ದುಡಿದಿದ್ದ ಎಂ.ಬಿ.ಪಾಟೀಲ್ ಅವರ ಬೆಂಬಲಕ್ಕೆ ಬರಲು ಹತ್ತಾರು ಲಿಂಗಾಯತ ಸ್ವಾಮೀಜಿಗಳು ಮುಂದಾಗಿದ್ದು , ಕಾಂಗ್ರೆಸ್ ಹೈಕಮಾಂಡ್ಗೆ ಒತ್ತಡ ಹಾಕಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.