ವಿಧಾನ ಪರಿಷತ್ : ಜಬ್ಬಾರ್,ಯಾದವ್ ಕಾಂಗ್ರೆಸ್ ಅಭ್ಯರ್ಥಿಗಳು
Team Udayavani, May 23, 2022, 7:41 PM IST
ಬೆಂಗಳೂರು : ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಳೆದು ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು, ಎಐಸಿಸಿ ಎಂ. ನಾಗರಾಜ್ ಯಾದವ್ , ಕೆ.ಅಬ್ದುಲ್ ಜಬ್ಬಾರ್ ಅವರನ್ನು ಅಭ್ಯರ್ಥಿಗಳನ್ನಾಗಿ ಸೋಮವಾರ ಘೋಷಿಸಿದೆ.
ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿರುವ ಜಬ್ಬಾರ್ ಅವರನ್ನು ಮುಸ್ಲಿಂ ಕೋಟಾದಲ್ಲಿ ಆಯ್ಕೆ ಮಾಡಲಾಗಿದ್ದು, ಹಿಂದುಳಿದ ಯಾದವ ಸಮುದಾಯದ ಕೋಟಾದಲ್ಲಿ ನಾಗರಾಜ್ ಯಾದವ್ ಅವರನ್ನು ಆಯ್ಕೆ ಮಾಡಲಾಗಿದೆ. ಇಬ್ಬರ ಆಯ್ಕೆಯೂ ಖಚಿತವಾಗಿದ್ದು, ಜಬ್ಬಾರ್ ಎರಡನೇ ಬಾರಿ ಮೇಲ್ಮನೆ ಪ್ರವೇಶಿಸಲಿದ್ದು, ಕಾಂಗ್ರೆಸ್ ವಕ್ತಾರರಾಗಿ ಪಕ್ಷಕ್ಕಾಗಿ ದುಡಿದಿದ್ದ ಯಾದವ್ ಅವರು ಮೊದಲ ಬಾರಿಗೆ ಮೇಲ್ಮನೆ ಪ್ರವೇಶಿಸುತ್ತಿದ್ದಾರೆ.
ಚುನಾವಣೆ ರಣತಂತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಿದ್ದರಾಮಯ್ಯ ಅವರು ಒಂದು ಸ್ಥಾನ ಹಿಂದುಳಿದ ವರ್ಗ ಮತ್ತೊಂದು ಸ್ಥಾನ ಮುಸ್ಲಿಂ ಅಥವಾ ಕ್ರೈಸ್ತ ಸಮುದಾಯಕ್ಕೆ ಕೊಡಲು ಹೈಕಮಾಂಡ್ ಗೆ ಮನವಿ ಮಾಡಿದ್ದರು. ಅದೇ ರೀತಿಯಲ್ಲಿ ಹೈಕಮಾಂಡ್ ನಡೆದುಕೊಂಡಿದೆ.
ಜೂನ್ 3 ರಂದು ಚುನಾವಣೆ ನಡೆಯಲಿದ್ದು, ಮೇ 24 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. 7 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಬಿಜೆಪಿ 4 , ಕಾಂಗ್ರೆಸ್ 2 ಮತ್ತು 1 ಸ್ಥಾನ ದಲ್ಲಿ ಜೆಡಿಎಸ್ ಗೆಲುವು ನಿಶ್ಚಿತವಾಗಿದೆ.