ನಿವೃತ್ತ ನ್ಯಾಯಮೂರ್ತಿ ಪಾಲೆಕಂಡ ಪಿ.ಬೋಪಣ್ಣ ನಿಧನ
Team Udayavani, Jul 21, 2023, 5:47 AM IST
ಬೆಂಗಳೂರು: ಕರ್ನಾಟಕ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಪಾಲೆಕಂಡ ಪಿ. ಬೋಪಣ್ಣ (96) ಗುರುವಾರ ಬೆಂಗಳೂರಿನಲ್ಲಿ ನಿಧನ ಹೊಂದಿದರು. ಅವರಿಗೆ ಒಬ್ಬ ಪುತ್ರಿ ಮತ್ತು ಮೂವರು ಪುತ್ರರಿದ್ದಾರೆ.
1927ರ ಎ. 23ರಂದು ಜನಿಸಿದ್ದ ಬೋಪಣ್ಣ ಮದ್ರಾಸ್ ಕ್ರಿಶ್ಚಿಯನ್ ಕಾಲೇಜು ಮತ್ತು ಮದ್ರಾಸ್ ಕಾನೂನು ಕಾಲೇಜಿನಲ್ಲಿ ಪದವಿ ಪಡೆದು ಮದ್ರಾಸ್ ಹೈಕೋರ್ಟ್ ನಲ್ಲಿ ವಕೀಲಿ ವೃತ್ತಿ ಆರಂಭಿಸಿದರು. ಬಳಿಕ ಬೆಂಗಳೂರಿಗೆ ಮರಳಿದ ಅವರು, 1977ರ ನ. 28ರಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡು 1989ರಲ್ಲಿ ನಿವೃತ್ತಿ ಹೊಂದಿದ್ದರು.
“ಪಾಲೆಕಂಡ ಬೋಪಣ್ಣ ಕರ್ನಾಟಕ ಹೈಕೋರ್ಟ್ ಕಂಡ ಒಬ್ಬ ಅತ್ಯಂತ ಮೇಧಾವಿ. ನ್ಯಾಯಮೂರ್ತಿಯಾಗಿ ಅವರು ಭೂ ಸುಧಾರಣೆ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸಾವಿರಾರು ಮಹತ್ವದ ತೀರ್ಪುಗಳನ್ನು ನೀಡಿದ್ದರು. ಶ್ರದ್ಧೆ ಮತ್ತು ಪರಿಶ್ರಮದ ಪ್ರತೀಕವಾಗಿದ್ದ ಅವರೊಬ್ಬ ಸಾರ್ವಕಾಲಿಕ ಶಿಸ್ತಿನ ಸಿಪಾಯಿಯಾಗಿದ್ದರು. ನ್ಯಾಯಾಂಗದ ಪ್ರಾಜ್ಞತೆಗೆ ಮಾದರಿಯಾಗಿದ್ದರು” ಎಂದು ಹಿರಿಯ ವಕೀಲರಾದ ಉದಯ ಹೊಳ್ಳ, ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಸ್ಮರಿಸಿದ್ದಾರೆ.