ಯಡಿಯೂರಪ್ಪ ವಿರುದ್ಧ ಸಿದ್ದರಾಮಯ್ಯ ಗರಂ
Team Udayavani, May 21, 2021, 6:56 AM IST
ಬೆಂಗಳೂರು: ಕೋವಿಡ್ ನಿಯಂತ್ರಣ ಸಂಬಂಧ ರಾಜ್ಯಾದ್ಯಂತ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ವೀಡಿಯೋ ಸಂವಾದ ವಿಚಾರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಡುವೆ “ಸಂಘರ್ಷ’ ಏರ್ಪಟ್ಟಿದೆ.
ವೀಡಿಯೋ ಸಂವಾದ ನಡೆಸುವ ಸಂಬಂಧ ಸಿದ್ದರಾಮಯ್ಯ ಅವರು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಅದಕ್ಕೆ, “ಮಾಹಿತಿ ಪಡೆಯಬಹುದು. ಆದರೆ ವೀಡಿಯೋ ಸಂವಾದ ನಡೆಸಲು ಅವಕಾಶ ಇಲ್ಲ ಎಂದು ಮುಖ್ಯ ಮಂತ್ರಿಯವರಿಂದ ನಿರ್ದೇಶಿತನಾಗಿ ದ್ದೇನೆ’ ಎಂಬ ಉತ್ತರ ಸಿಕ್ಕಿದೆ.
ಇದರಿಂದ ಕೆರಳಿರುವ ಸಿದ್ದರಾಮಯ್ಯ ಅವರು ಸಿಎಂಗೆ ಪತ್ರ ಬರೆದಿದ್ದು, ಸರಕಾರ ಎಷ್ಟು ಕೆಲಸ ಮಾಡುತ್ತಿದೆ ಎಂಬುದನ್ನು ತಿಳಿಯುವ ಹಕ್ಕು ವಿಪಕ್ಷ ನಾಯಕರಿಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಜೂಮ್ ಸಂವಾದಕ್ಕೆ ಅವಕಾಶ ನೀಡ ಬೇಕೆಂದು ಆಗ್ರ ಹಿಸಿದ್ದಾರೆ. ತಪ್ಪಿದರೆ ಜನರ ಹಿತಾಸಕ್ತಿ ರಕ್ಷಿಸಲು ಯಾವುದೇ ರೀತಿಯ ಸಂಸದೀಯ, ಸಾಂವಿಧಾನಾತ್ಮಕ ಸಂಘರ್ಷಕ್ಕಿಳಿಯಬೇಕಾದೀತು ಎಂದು ಎಚ್ಚರಿಸಿದ್ದಾರೆ.
ಆಕ್ರೋಶ :
ರಾಜ್ಯ ಸರಕಾರ ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಸರಕಾರ ಜೀವಂತವಿದ್ದಿದ್ದರೆ ಹಾಗೂ ಅದು ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಹೊಂದಿದ್ದರೆ ವಿಪಕ್ಷ ನಾಯಕರು ಪತ್ರ ಬರೆದ ಕೂಡಲೇ ಮಾಹಿತಿ ನೀಡಬೇಕಿತ್ತು. ಕೋವಿಡ್ ಎರಡನೇ ಅಲೆ ಪ್ರಾರಂಭವಾದ ಬಳಿಕ ಮುಖ್ಯಮಂತ್ರಿಗೆ 12 ಪತ್ರ ಬರೆದಿದ್ದೇನೆ. ಒಂದಕ್ಕಾದರೂ ಉತ್ತರ ನೀಡಿದ್ದೀರಾ? ಇದು ಬೇಜವಾಬ್ದಾರಿಯ ಪರಮಾವಧಿ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಮಾಹಿತಿ ಪಡೆಯಲು ಗೊತ್ತಿದೆ :
ಮಾಹಿತಿ ಪಡೆಯುವುದು ನನಗೆ ಗೊತ್ತಿದೆ. ಅಧಿಕಾರಿಗಳ ಕಾರ್ಯವೈಖರಿ ಕುರಿತು ಪರಿಶೀಲಿಸಿ ನಿರ್ದೇಶನ ನೀಡುವ ಉದ್ದೇಶ ನನ್ನದಲ್ಲ. ಮಾಹಿತಿ ನೀಡಬೇಕಾದ ಮಾದರಿ ಸಿದ್ಧಪಡಿಸಿ ಅಧಿಕಾರಿಗಳಿಗೆ ನೀಡಲಾಗಿದೆ. ಇದನ್ನು ಭರ್ತಿ ಮಾಡುವಷ್ಟು ತಿಳಿವಳಿಕೆ ಇರುವವರೂ ಕಡಿಮೆ. ಎರಡು ವರ್ಷಗಳಲ್ಲಿ ನಾನೊಂದು ಕೇಳಿದರೆ ಅಧಿಕಾರಿಗಳು ಇನ್ನೊಂದು ಹೇಳುತ್ತಾರೆ. ಈ ಗೊಂದಲಗಳಿಗೆ ಅವಕಾಶ ಬೇಡ ಎಂದು ನೇರವಾಗಿ ಜೂಮ್ ಮೂಲಕ ಮಾಹಿತಿ ಪಡೆಯಲು ಮುಂದಾಗಿ ಪ್ರತಿ ಜಿಲ್ಲೆಗೆ ಅರ್ಧ ಗಂಟೆಯಿಂದ ಒಂದು ಗಂಟೆ ನಿಗದಿಪಡಿಸಿದ್ದೇನೆ. ತತ್ಕ್ಷಣ ಅನುಮತಿ ಕೊಡಿ ಎಂದು ಆಗ್ರಹಿಸಿದ್ದಾರೆ.
ಮುಖ್ಯ ಕಾರ್ಯದರ್ಶಿ ಪತ್ರದಲ್ಲಿ ಏನಿದೆ? :
ವಿಪಕ್ಷ ನಾಯಕರು ಕೋರಿರುವಂತೆ ಕೊರೊನಾ ನಿರ್ವಹಣೆ ಬಗ್ಗೆ ಸರಕಾರ ಕೈಗೊಂಡಿರುವ ಕ್ರಮಗಳ ಕುರಿತು ಜಿಲ್ಲಾ ಮಟ್ಟದ ಅಧಿಕಾರಿ ಗಳೊಂದಿಗೆ ವೀಡಿಯೋ ಸಂವಾದದ ಮೂಲಕ ಮಾಹಿತಿ ಪಡೆಯಲು ಅವಕಾಶ ಇಲ್ಲ. ಆದರೆ, ಅಪೇಕ್ಷಿತ ಮಾಹಿತಿಯನ್ನು ಪತ್ರದ ಮೂಲಕ ಪಡೆಯಬಹುದು ಎಂದು ನಿರ್ದೇಶಿತನಾಗಿರುತ್ತೇನೆ. ಮಾನ್ಯ ಮುಖ್ಯಮಂತ್ರಿಯವರಿಂದ ಅನುಮೋದಿತ ಎಂದು ಸಿಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಶಿಷ್ಟಾಚಾರ ವಿಭಾಗದ ಅಧೀನ ಕಾರ್ಯದರ್ಶಿ ಸಹಿ ಮಾಡಿರುವ ಟಿಪ್ಪಣಿ ಕಳುಹಿಸಲಾಗಿದೆ.
ಕೋವಿಡ್ ನಿರ್ವಹಣೆ ವೈಫಲ್ಯ ಬಗ್ಗೆ ಸರಕಾರ ಎಷ್ಟೇ ಮುಚ್ಚಿಟ್ಟರೂ ನಮಗೆ ಗೊತ್ತಾಗುತ್ತದೆ ಕೊರೊನಾ ವಿಚಾರದಲ್ಲಿ ಎಲ್ಲೆಲ್ಲಿ ಯಾವ ಆಸ್ಪತ್ರೆಯಲ್ಲಿ ಏನೇನು ನಡೆಯುತ್ತಿದೆ ಎಂಬುದು ಗೊತ್ತಿದೆ . ಯಡಿಯೂರಪ್ಪ ವಿಪಕ್ಷ ನಾಯಕರಾಗಿದ್ದಾಗ ಜಿಲ್ಲಾವಾರು ಪ್ರವಾಸ ಮಾಡಿ ಅಧಿಕಾರಿಗಳ ಸಭೆ ನಡೆಸಲಿಲ್ಲವೇ? ಆದರೆ, ಸಿದ್ದರಾಮಯ್ಯ ಅವರ ಸಭೆಗೆ ಅನುಮತಿ ನಿರಾಕರಿಸಿರುವುದು ಪ್ರಜಾಪ್ರಭುತ್ವದ ವ್ಯವಸ್ಥೆ ನಾಶ ಮಾಡುತ್ತಿರುವುದಕ್ಕೆ ಸಾಕ್ಷಿ. –ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ವಿಪಕ್ಷ ನಾಯಕರನ್ನು ಶ್ಯಾಡೋ ಸಿಎಂ ಎಂದು ಕರೆಯಲಾಗುತ್ತಿದೆ. ಮುಖ್ಯಮಂತ್ರಿಗೆ ಇರುವಷ್ಟೇ ಅವಕಾಶ ವಿಪಕ್ಷ ನಾಯಕರಿಗೂ ಇದೆ. ಪಾರದರ್ಶಕತೆ ಇರಲಿ ಎಂಬ ಕಾರಣಕ್ಕೆ ಪ್ರಮುಖ ಸ್ಥಾಯಿ ಸಮಿತಿಗೆ ವಿಪಕ್ಷ ನಾಯಕರನ್ನೇ ನೇಮಿಸುತ್ತಾರೆ. ಆದರೆ, ಸರಕಾರ ವಿಪಕ್ಷ ನಾಯಕರು ಸಭೆ ನಡೆಸಬಾರದು, ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರು ಪರಿಶೀಲನೆ ನಡೆಸಬಾರದು ಎನ್ನುವ ಮೂಲಕ ಯಾವ ಸಂದೇಶ ರವಾನಿಸಿದೆ –ಬಿ.ಎಲ್. ಶಂಕರ್ , ವಿಧಾನ ಪರಿಷತ್ನ ಮಾಜಿ ಸಭಾಪತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ