ಯಾರೋ ಬರೆದು ಕೊಡುತ್ತಾರೆ,ರಾಹುಲ್ ಗಾಂಧಿ ಓದುತ್ತಾರೆ: ಪ್ರಹ್ಲಾದ ಜೋಷಿ ವ್ಯಂಗ್ಯ
ಸ್ವಂತಿಕೆ ಇಲ್ಲದ ರಾಹುಲ್ರಿಂದ ಏನು ನಿರೀಕ್ಷೆ ಸಾಧ್ಯ
Team Udayavani, Oct 23, 2022, 10:31 PM IST
ಹುಬ್ಬಳ್ಳಿ: ಭಾರತ ಜೋಡೋ ಕಾಂಗ್ರೆಸ್ ತೋಡೋ ಯಾತ್ರೆ ಆಗುತ್ತಿದ್ದು, ಹಲವರು ಕಾಂಗ್ರೆಸ್ ಚೋಡೋ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ವ್ಯಂಗ್ಯವಾಡಿದರು.
ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಚನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಪಾಕ್ ಹಾಗೂ ಚೀನ ಆಕ್ರಮಿತ ಜಾಗವನ್ನು ಭಾರತಕ್ಕೆ ಜೋಡಿಸುವ ಯಾತ್ರೆಯನ್ನು ರಾಹುಲ್ ಮಾಡಲಿ, ಕಾಂಗ್ರೆಸ್ ತೋಡೋ ಮಾಡಿದವರನ್ನು ಜೋಡೋ ಮಾಡಲಿ. ರಾಹುಲ್ ಗಾಂಧಿಗೆ ಯಾರೋ ಬರೆದು ಕೊಡುತ್ತಾರೆ. ಸಭೆ-ಸಮಾರಂಭಗಳಲ್ಲಿ ಅದನ್ನು ಓದುತ್ತಾರೆ. ಬರೆದು ಕೊಟ್ಟಿದ್ದನ್ನು ಬಿಟ್ಟು ಬೇರೆ ಪ್ರಶ್ನೆ ಮಾಡಿದರೆ ಉತ್ತರ ಕೊಡುವುದಕ್ಕೂ ಬರುವುದಿಲ್ಲ. ಅವರ ಮಾತಿಗೆ ಪ್ರತಿಕ್ರಿಯೆ ನೀಡುವುದರಲ್ಲಿ ಅರ್ಥವಿಲ್ಲ ಎಂದರು.
ಸಂಪುಟ ಬಗ್ಗೆ ದಿಲ್ಲಿಯಲ್ಲಿ ಚರ್ಚೆ
ದೀಪಾವಳಿ ಬಳಿಕ ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಮುಖ್ಯಮಂತ್ರಿಗಳು ದಿಲ್ಲಿಗೆ ಬರುತ್ತೇನೆ ಎಂದು ಹೇಳಿದ್ದಾರೆ. ಅವರು ಬಂದ ಬಳಿಕ ಚರ್ಚಿಸಿ ಮಾತನಾಡುತ್ತೇವೆ ಎಂದರು.