ಬಿಜೆಪಿಯದ್ದು 30 ಪರ್ಸೆಂಟ್ ಸರ್ಕಾರ, ಏನಾದರೂ ಅನುಮಾನ ಇದೆಯಾ? ಸಿದ್ದರಾಮಯ್ಯ
Team Udayavani, Jan 11, 2021, 11:51 AM IST
ಹುಬ್ಬಳ್ಳಿ: ರಾಜ್ಯದ ಬಿಜೆಪಿ ಸರಕಾರ 30 ಪರ್ಸೆಂಟ್ ಕಮಿಷನ್ ಸರಕಾರ ಆಗಿದೆ. ಈ ಬಗ್ಗೆ ನಿಮಗೇನಾದರೂ ಅನುಮಾನ ಇದೆಯೇ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ನೇತೃತ್ವದ ಕಾಂಗ್ರೆಸ್ ಇದ್ದಾಗ ಬೆಂಗಳೂರಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿಯವರು ಇದೊಂದು ಶೇ.10ರಷ್ಟು ಸರಕಾರ ಎಂದಿದ್ದರು, ನನ್ನ ಸರಕಾರ ಯಾವುದೇ ಹಗರಣ ನಡೆಸಲಿಲ್ಲ. ಆದರೆ ಸಿಎಂ ಯಡಿಯೂರಪ್ಪ ಅವರ ಪುತ್ರ ಆರ್ ಟಿಜಿಎಸ್ ಮೂಲಕ 7.10 ಕೋಟಿ ರೂ. ಹಣ ಪಡೆದಿದ್ದು, ಹಣ ಇಲ್ಲದೆ ವರ್ಗಾವಣೆ ಆಗದು, ಎಲ್ ಓಸಿ ಬಿಡುಗಡೆಯಾಗದು. ಇದು ಪ್ರಧಾನಿ ಮೋದಿಯವರಿಗೆ ಕಾಣಿಸುತ್ತಿಲ್ಲವೋ ಅಥವಾ ಗೊತ್ತಿದ್ದು, ಸುಮ್ಮನಿದ್ದಾರೋ ಎಂದರು.
ಮೋದಿಯವರು ನೀಡಿದ ಭರವಸೆ ಒಂದಾದರೂ ಈಡೇರಿದೆಯೇ. ಸುಳ್ಳು ಹೇಳುವುದೆ ಅವರ ಸಾಧನೆ ಎಂದರು.
20 ರಂದು ರಾಜಭವನ ಮುತ್ತಿಗೆ
ಕೃಷಿ,ಕೃಷಿ ಮಾರುಕಟ್ಟೆ ಗೆ ಮಾರಕವಾದ ಮೂರು ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ, ಕಾಂಗ್ರೆಸ್ ಪಕ್ಷ ಜ.20ರಂದು ರಾಜಭವನ ಮುತ್ತಿಗೆ ಹೋರಾಟ ಕೈಗೊಳ್ಳಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮಂದುವರೆಯಲಾರರು. ಬಿಜೆಪಿ ಹಾಗೂ ಆರ್ ಎಸ್ಎಸ್ ಕೆಲ ಸ್ನೇಹಿತರು ನೀಡಿದ ಮಾಹಿತಿಯಂತೆ ಸಿಎಂ ಬದಲಾಗುತ್ತಾರೆ ಎಂದು ಹೇಳುತ್ತಿರುವೆ. ಬದಲಾಗುತ್ತಾರೋ ಬಿಡುತ್ತಾರೊ ಅವರೇ ಹೇಳಬೇಕು ಎಂದರು.
ಸಿಎಂ ಬದಲಾದರೆ ಬಿಜೆಪಿಯ ಬೇರೊಬ್ಬರು ಸಿಎಂ ಸಿಎಂ ಆಗುತ್ತಾರೆ. ಹಣ ವೆಚ್ಚ ಮಾಡಿ ಜನಾದೇಶ ಇಲ್ಲದೆಯೇ ಅಧಿಕಾರಕ್ಕೆ ಬಂದ ಸರಕಾರವನ್ನು ಅವರು ಕಳೆದು ಕೊಳ್ಳುವುದಿಲ್ಲ ಎಂದರು. ಬಿಜೆಪಿ ಸರಕಾರದ ವೈಫಲ್ಯ ವಿರುದ್ದ ಕಾಂಗ್ರೆಸ್ ಹೋರಾಟಕ್ಕಿಳಿಯಲಿದೆ ಎಂದರು.