ರಾಜಕಾರಣ ಹೊರತಾದ ಪ್ರಜಾಕೀಯ ಜಾರಿ ಗುರಿ
Team Udayavani, Apr 2, 2019, 5:00 AM IST
ಮಂಡ್ಯ: “ರಾಜಕಾರಣ ಹಾಗೂ ರಾಜಕೀಯವನ್ನು ಹೊರತುಪಡಿಸಿ ಪ್ರಜಾಕೀಯ ಜಾರಿಗೆ ಬರಬೇಕೆಂಬುದು ನಮ್ಮ ಪಕ್ಷದ ಉದ್ದೇಶ’ ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ, ನಟ ಉಪೇಂದ್ರ ತಿಳಿಸಿದರು.
ಉತ್ತಮ ಪ್ರಜಾಕೀಯ ಪಕ್ಷದಿಂದ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಮತದಾರರು ತಮ್ಮ ಅಭ್ಯರ್ಥಿಗಳನ್ನು ಬೆಂಬಲಿಸಬೇಕು. ಜನರ ಕೆಲಸವನ್ನು ಮಾಡುವವನೇ ನಿಜವಾದ ಜನನಾಯಕ.
ಚುನಾವಣೆಯಲ್ಲಿ ಗೆದ್ದ ಮೇಲೆ ದಿನದ 24 ಗಂಟೆಯೂ ಜನರ ಸೇವೆ ಮಾಡುವಂಥ ಉದ್ಯೋಗ ಇದಾಗಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಜನರ ಕೆಲಸ ಮಾಡಲು ಆಗದಿದ್ದವರು ರಾಜಕೀಯಕ್ಕೆ ಬರಬಾರದು.
ಜನರ ಸೇವೆಯನ್ನೂ ಉದ್ಯೋಗದಂತೆ ಭಾವಿಸುವವರು ಅಗತ್ಯವಾಗಿದೆ. ಚುನಾವಣೆಯಲ್ಲಿ ಹಣ, ಜಾತಿ ಬಲವನ್ನು ಬಿಟ್ಟು, ಕೆಲಸ ಮಾಡುವವರು ಬೇಕಾಗಿದೆ. ಈ ವಿಚಾರಗಳನ್ನು ಜನರಿಗೆ ತಿಳಿಸುವ ಮೂಲಕ ಯಾವುದೇ ಹಣ ಖರ್ಚು ಮಾಡದೆ ಚುನಾವಣೆ ಎದುರಿಸಲು ಮುಂದಾಗಿದ್ದೇವೆ ಎಂದರು.