ಗಡ್ಕರಿಗೆ ಬೆದರಿಕೆ ಹಾಕಿದ್ದವನಿಂದಲೇ ನನ್ನ ಹತ್ಯೆಗೂ ಸ್ಕೆಚ್:K.S. Eshwarappa
ಬೆದರಿಕೆಗೆ ಬಗ್ಗುವುದಿಲ್ಲ ಎಂದ ಮಾಜಿ ಸಚಿವ
Team Udayavani, Apr 15, 2023, 7:10 AM IST
ಬಳ್ಳಾರಿ: ನನ್ನ ಕೊಲೆಗೆ ಯೋಜನೆ ರೂಪಿಸಲಾಗಿದ್ದು, ಜೈಲಿನಲ್ಲಿರುವ ಕೈದಿಯೊಬ್ಬ ನೀಡಿದ ಮಾಹಿತಿಯಿಂದ ಈ ವಿಷಯ ತಿಳಿದು ಬಂದಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ನಾನು ನಮ್ಮ ಮನೆ ದೇವರ ದರ್ಶನಕ್ಕೆಂದು ಬಳ್ಳಾರಿಗೆ ಬಂದಿದ್ದೆ. ಆದರೆ ಕೆಟ್ಟ ಸುದ್ದಿ ಕೇಳಬೇಕಾಯಿತು. ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ಜಯೇಶ್ ಪೂಜಾರಿ ಅಲಿಯಾಸ್ ಶಾಹಿದ್ ಶೇಖ್ ಎಂಬಾತ ನನ್ನ ಕೊಲೆಗೆ ಸ್ಕೆಚ್ ಹಾಕಿರುವ ವಿಚಾರವನ್ನು ಬಹಿರಂಗಪಡಿಸಿದ್ದಾನೆ ಎಂಬುದು ತಿಳಿದುಬಂದಿದೆ. ಈ ಕುರಿತು ಸಂಬಂಧಪಟ್ಟ ಉನ್ನತ ಪೊಲೀಸ್ ಅ ಧಿಕಾರಿಗಳು, ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.
ಈ ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆದರಿಕೆ ಹಾಕಿದ್ದವನೇ ಈಗ ನನ್ನ ಕೊಲೆಗೂ ಸ್ಕೆಚ್ ಹಾಕಿದ್ದಾನೆ. ಆರೋಪಿಗೆ ಪಿಎಫ್ಐನವರ ಬೆಂಬಲ ಇದೆ. ಗೃಹ ಸಚಿವ ಆರಗ ಜ್ಞಾನೇಂದ್ರ, ಹಿರಿಯ ಪೊಲೀಸ್ ಅ ಧಿಕಾರಿ ಜತೆಗೆ ಮಾತನಾಡಿದ್ದೇನೆ. ಆದರೆ ಹೆಚ್ಚಿನ ಭದ್ರತೆಗೆ ಅರ್ಜಿ ಹಾಕುವುದಿಲ್ಲ. ಸರಕಾರ ಕೊಡಬಹುದು. ಈ ಹಿಂದೆಯೂ ಕೊಲೆ ಬೆದರಿಕೆ ಬಂದಿತ್ತು. ಈ ವಿಚಾರ ಅ ಧಿವೇಶನದಲ್ಲಿ ಹೇಳಿದ್ದೆ. ಆಗ ಕಾಂಗ್ರೆಸ್ ಸರಕಾರವಿತ್ತು. ಭದ್ರತೆ ನೀಡಿದ್ದರು. ಈ ವಿಷಯದಲ್ಲಿ ನನಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ. ಆದರೆ ಯಾವುದೇ ಬೆದರಿಕೆಗೂ ಬಗ್ಗುವುದಿಲ್ಲ. ಹಿಂದುತ್ವವಾದಿಗಳಿಗೆ ಬೆದರಿಕೆ ಸಾಮಾನ್ಯ. ನನ್ನ ನಿಲುವು ಬದಲಾಯಿಸುವುದಿಲ್ಲ. ಪೊಲೀಸರು ನನಗೆ ನೀಡಿದ ಮಾಹಿತಿ ಮಾಧ್ಯಮಗಳ ಜತೆಗೆ ಹಂಚಿಕೊಂಡಿದ್ದೇನೆ ಎಂದರು.
“ಮಗನಿಗೆ ಟಿಕೆಟ್ ಕೊಟ್ಟರೆ ಸಂತೋಷ’
ಹಿಂದಿನಿಂದಲೂ ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷದ ಸೂಚನೆಯನ್ನು ಯಾವಾಗಲೂ ಪಾಲಿಸಿದ್ದೇನೆ. ಈಗಲೂ ಪಕ್ಷ ಹೇಳಿದಂತೆಯೇ ಚುನಾವಣ ರಾಜಕೀಯದಿಂದ ನಿವೃತ್ತಿ ಪಡೆದಿದ್ದೇನೆ ಎಂದು ಕೆ.ಎಸ್. ಈಶ್ವರಪ್ಪ ಹೇಳಿದರು.
ಪಕ್ಷದ ವರಿಷ್ಠರು, ಬಿಜೆಪಿ ರಾಜ್ಯ ಚುನಾವಣ ಉಸ್ತುವಾರಿ ಧರ್ಮೇಂದ್ರ ಪ್ರಧಾನ ಕರೆ ಮಾಡಿ ಚುನಾವಣ ರಾಜಕೀಯ ಬೇಡ ಎಂದು ಹೇಳಿದರು. ಪಕ್ಷದ ಶಿಸ್ತಿನ ಸಿಪಾಯಿಯಾಗಿ ಅವರು ಹೇಳಿದಂತೆ ಚುನಾವಣ ನಿವೃತ್ತಿ ಪತ್ರ ಬರೆದು ಕಳುಹಿಸಿದ್ದೇನೆ. ಜಗದೀಶ್ ಶೆಟ್ಟರ್ ಟಿಕೆಟ್ ವಿಚಾರವಾಗಿ ಪಟ್ಟು ಹಿಡಿದಿರುವ ವಿಷಯಕ್ಕೂ ನನಗೂ ಸಂಬಂಧ ಇಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.
ಬೂತ್ ಮಟ್ಟದ ಕಾರ್ಯಕರ್ತನಾಗಿದ್ದ ನನ್ನನ್ನು ಉಪಮುಖ್ಯಮಂತ್ರಿ ಮಾಡಿದರು. ಈಗ ಪಕ್ಷದ ಕೆಲಸ ಮಾಡು ಎಂದಿದ್ದಾರೆ, ಮಾಡುತ್ತೇನೆ. ಮಗನಿಗೆ ಟಿಕೆಟ್ ಕೊಟ್ಟರೆ ಸಂತೋಷ. ಬಿಜೆಪಿ ಅಧಿ ಕಾರಕ್ಕೆ ಬರಲು ಯಾವ ಕೆಲಸ ಮಾಡುವುದಕ್ಕೂ ಸಿದ್ಧ. ಹಿಂದೆ ಪಕ್ಷಕ್ಕೆ ಅಭ್ಯರ್ಥಿಗಳೇ ಸಿಗುತ್ತಿರಲಿಲ್ಲ. ಆಕಾಂಕ್ಷಿಗಳು ಹೆಚ್ಚಾಗಿರುವುದು ಗಮನಿಸಿದರೆ ಪಕ್ಷ ಬೆಳೆದಿರುವುದು ಗೊತ್ತಾಗುತ್ತದೆ. ಟಿಕೆಟ್ಗಾಗಿ ಕೆಲವರು ಈಗ ಹಠಕ್ಕೆ ಬಿದ್ದಿದ್ದಾರೆ. ಬಿಜೆಪಿ ಬಿಟ್ಟು ಹೋಗುತ್ತಾರೆ ಅಂದರೆ ಅವರು ಬಿಜೆಪಿಗೆ ಯೋಗ್ಯರಲ್ಲ ಎಂದೇ ಅರ್ಥ ಎನ್ನುವ ಮೂಲಕ ಪರೋಕ್ಷವಾಗಿ ಲಕ್ಷ್ಮಣ ಸವದಿಗೆ ಟಾಂಗ್ ಕೊಟ್ಟರು.