Karnataka ಹೈಕೋರ್ಟ್ ಹಲವು ನ್ಯಾಯಾಧೀಶರಿಗೆ ಜೀವ ಬೆದರಿಕೆ; ಎಫ್ ಐಆರ್ ದಾಖಲು
Team Udayavani, Jul 24, 2023, 6:45 PM IST
ಬೆಂಗಳೂರು: ಹಲವು ನ್ಯಾಯಾಧೀಶರಿಗೆ ಜೀವ ಬೆದರಿಕೆ ಇರುವ ಕುರಿತು ಕರ್ನಾಟಕದ ಹೈಕೋರ್ಟಿನ ಪತ್ರಿಕಾ ಸಂಪರ್ಕ ಅಧಿಕಾರಿ ಸೆಂಟ್ರಲ್ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಶಂಕಿತರ ವಿರುದ್ಧ ದೂರು ನೀಡಿದ ನಂತರ ಎಫ್ ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಕೆ ಮುರಳೀಧರ್ ಜುಲೈ 14 ರಂದು ದೂರು ದಾಖಲಿಸಿದ್ದಾರೆ. ಜುಲೈ 12 ರಂದು ರಾತ್ರಿ 7 ಗಂಟೆ ಸುಮಾರಿಗೆ ಅವರಿಗೆ ಹೈಕೋರ್ಟ್ ಅಧಿಕೃತವಾಗಿ ಒದಗಿಸಿದ ಮೊಬೈಲ್ ಗೆ ಅಂತಾರಾಷ್ಟ್ರೀಯ ಸಂಖ್ಯೆಯಿಂದ ವಾಟ್ಸಾಪ್ ಮೆಸೆಂಜರ್ನಲ್ಲಿ ಸಂದೇಶಗಳು ಬಂದಿದ್ದವು.
ಹಿಂದಿ, ಉರ್ದು ಮತ್ತು ಇಂಗ್ಲಿಷ್ನಲ್ಲಿರುವ ಸಂದೇಶದಲ್ಲಿ ಮುರಳೀಧರ್ ಮತ್ತು ನ್ಯಾಯಮೂರ್ತಿ ಮೊಹಮ್ಮದ್ ನವಾಜ್, ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್, ನ್ಯಾಯಮೂರ್ತಿ ಅಶೋಕ್ ಜಿ.ನಿಜಗಣ್ಣವರ್ (ನಿವೃತ್ತ), ನ್ಯಾಯಮೂರ್ತಿ ಎಚ್.ಪಿ. ಸಂದೇಶ್, ನ್ಯಾಯಮೂರ್ತಿ ಕೆ. ನಟರಾಜನ್ ಮತ್ತು ನ್ಯಾಯಮೂರ್ತಿ ಬಿ.ವೀರಪ್ಪ (ನಿವೃತ್ತ) ಸೇರಿದಂತೆ ಹೈಕೋರ್ಟ್ನ ಆರು ನ್ಯಾಯಾಧೀಶರನ್ನು ‘ದುಬೈ ಗ್ಯಾಂಗ್’ ಮೂಲಕ ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂದೇಶದಲ್ಲಿ ಐದು ಅನುಮಾನಾಸ್ಪದ ಮೊಬೈಲ್ ಫೋನ್ ಸಂಖ್ಯೆಗಳು ಮತ್ತು ಬೆದರಿಕೆ ಇತ್ತು.ಬೆದರಿಕೆ ಸಂದೇಶದಲ್ಲಿ ಪಾಕಿಸ್ಥಾನದ ಬ್ಯಾಂಕ್ ಖಾತೆಗೆ 50 ಲಕ್ಷ ರೂ.ಪಾವತಿಸಲು ಬೇಡಿಕೆ ಇಡಲಾಗಿರುವುದನ್ನು ಜುಲೈ 14 ರಂದು ದಾಖಲಾದ ಎಫ್ಐಆರ್ನಲ್ಲಿ ದಾಖಲಿಸಲಾಗಿದೆ.