ಅನಗತ್ಯವಾಗಿ ವಾಹನ ತಡೆದು ದಾಖಲೆ ಪರಿಶೀಲನೆ: ಪೊಲೀಸರಿಗೆ ಡಿಜಿಪಿ ಎಚ್ಚರಿಕೆ
Team Udayavani, Jul 19, 2022, 4:14 PM IST
ಬೆಂಗಳೂರು: ನಿಯಮ ಉಲ್ಲಂಘನೆ ಇಲ್ಲದೇ ಇದ್ದರೂ ಹೆದ್ದಾರಿ ಹಾಗೂ ನಗರ ಪ್ರದೇಶಗಳಲ್ಲಿ ಪೊಲೀಸರು ವಾಹನ ತಡೆದು ದಾಖಲೆ ಪರಿಶೀಲನೆ ನಡೆಸುವಂತಿಲ್ಲ ಎಂದು ಆದೇಶ ನೀಡಿದ ಬಳಿಕವೂ ಪೊಲೀಸರೇ ನಿಯಮ ಉಲ್ಲಂಘಿಸುತ್ತಿರುವುದರ ವಿರುದ್ಧ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಈಗಾಗಲೇ ಸರಕಾರ ಹಾಗೂ ಡಿಜಿಪಿ ಕಚೇರಿಯಿಂದ ಸ್ಪಷ್ಟ ನಿರ್ದೇಶನ ನೀಡಿದ್ದರೂ ದಾಖಲೆ ಪರಿಶೀಲನೆ ನೆಪದಲ್ಲಿ ವಾಹನ ತಡೆಯುತ್ತಿರುವುದರ ಬಗ್ಗೆ ದೂರು ಬರುತ್ತಿದೆ. ಇದು ಕಾನೂನು ಪಾಲನೆ ಮಾಡುವ ನಾಗರಿಕರಿಗೆ ನೀಡುವ ಅನಗತ್ಯ ಕಿರುಕುಳವಾಗಿದೆ. ನಗರ ಹಾಗೂ ಪಟ್ಟಣ ಪ್ರದೇಶ ಮಾತ್ರವಲ್ಲ, ಹೆದ್ದಾರಿಯಲ್ಲೂ ಈ ಚಟುವಟಿಕೆ ನಡೆಯುತ್ತಿದೆ. ಈ ರೀತಿ ವಾಹನ ತಡೆಯುವುದರ ಹಿಂದಿನ ಉದ್ದೇಶ ಶುದ್ಧತೆ ಬಗ್ಗೆ ಪ್ರಶ್ನೆ ಮೂಡುತ್ತದೆ. ಹೀಗಾಗಿ ಘಟಕಾಧಿಕಾರಿಗಳು ಸೂಕ್ತ ಎಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ಇದನ್ನೂ ಓದಿ:ಪ್ರಥಮ ಪ್ರಜೆ ರಾಷ್ಟ್ರಪತಿ ತಿಂಗಳ ಸಂಬಳ ಎಷ್ಟು, ನಿವೃತ್ತಿ ನಂತರ ದೊರೆಯುವ ಸೌಲಭ್ಯಗಳೇನು?
ದಾಖಲೆ ಪರಿಶೀಲನೆ ಹೆಸರಿನಲ್ಲಿ ಸೃಷ್ಟಿಸುವ ಕಿರಿಕಿರಿ ಬಗ್ಗೆ ಕಳೆದೊಂದು ದಶಕದಿಂದಲೂ ಪ್ರಜ್ಞೆ ಮೂಡಿಸುವ ಪ್ರಯತ್ನ ನಡೆಸಲಾಗುತ್ತಲೇ ಇದೆ. ಆದರೂ ನಿಯಂತ್ರಣ ಸಾಧ್ಯವಾಗುತ್ತಿಲ್ಲ ಎಂದು ಅವರು ಆದೇಶದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.