ವಿಧುಶೇಖರ ಭಾರತೀ ಶ್ರೀ ಸನ್ಯಾಸ ಸ್ವೀಕಾರ ದಿನ: ವಿಶೇಷ ಪೂಜೆ
Team Udayavani, Jan 28, 2020, 3:03 AM IST
ಶೃಂಗೇರಿ: ದಕ್ಷಿಣಾಮ್ನಾಯ ಶ್ರೀಶಾರದಾ ಪೀಠದ 37ನೇ ಪೀಠಾ ಧಿಪತಿಗಳಾದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳ ಐದನೇ ವರ್ಷದ ಸನ್ಯಾಸ ಸ್ವೀಕಾರ ದಿನವಾದ ಸೋಮವಾರ ಶ್ರೀಮಠದಲ್ಲಿ ವಿಶೇಷ ಪೂಜೆಗಳು ನಡೆದವು. ಸನ್ಯಾಸ ಸ್ವೀಕಾರ ದಿನದ ಅಂಗವಾಗಿ ನರಸಿಂಹವನದ ಗುರುಭವನದಲ್ಲಿ ಬೆಳಗ್ಗೆಯೇ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ಆಹಿ°ಕ ಕಾರ್ಯಕ್ರಮ ಮುಗಿಸಿ, ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿಗಳ ಆಶೀರ್ವಾದ ಪಡೆದರು. ನಂತರ ನರಸಿಂಹವನದಲ್ಲಿರುವ ಅಧಿಷ್ಠಾನ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ನಂತರ ಶ್ರೀಮಠಕ್ಕೆ ಆಗಮಿಸಿದ ಜಗದ್ಗುರುಗಳು ಶ್ರೀ ಸುಬ್ರಹ್ಮಣ್ಯಸ್ವಾಮಿ, ಶ್ರೀ ವಿದ್ಯಾಶಂಕರ ದೇವಸ್ಥಾನ, ಶ್ರೀ ಶಕ್ತಿಗಣಪತಿ, ಶ್ರೀ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು. ಶ್ರೀ ಶಂಕರಾಚಾರ್ಯ ದೇವಸ್ಥಾನ ಹಾಗೂ ತೋರಣ ಗಣಪತಿ ದೇಗುಲದಲ್ಲೂ ವಿಶೇಷ ಪೂಜೆ ಸಲ್ಲಿಸಿದರು. ಇದೇ ಸಂದರ್ಭ ಪ್ರತಿ ವರ್ಷದಂತೆ ಶ್ರೀಮಠದಲ್ಲಿ ಅಡಕೆ ಬೆಳೆಗಾರರ ಸಂಕಷ್ಟ ನಿವಾರಣೆಗಾಗಿ ಆಯೋಜಿಸಲಾಗುತ್ತಿರುವ ಲಲಿತಾ ಹೋಮದ ಪೂರ್ಣಾಹುತಿಯಲ್ಲಿ ಪಾಲ್ಗೊಂಡರು. ಶ್ರೀಮಠದ ಆಡಳಿತಾಧಿ ಕಾರಿ ಗೌರಿಶಂಕರ್, ಅ ಧಿಕಾರಿಗಳಾದ ದಕ್ಷಿಣಾಮೂರ್ತಿ, ಶಿವಶಂಕರ ಭಟ್, ರಾಮಕೃಷ್ಣಯ್ಯ ಮತ್ತಿತರರು ಉಪಸ್ಥಿತರಿದ್ದರು. ರಾಜ್ಯ ಹಾಗೂ ಹೊರ ರಾಜ್ಯದ ಭಕ್ತಾದಿಗಳು ಜಗದ್ಗುರುಗಳ ದರ್ಶನಕ್ಕೆ ಆಗಮಿಸಿದ್ದರು.
ಸನ್ಯಾಸ ಸ್ವೀಕರಿಸಿ ಐದು ಸಂವತ್ಸರ: ಶ್ರೀ ಶಾರದಾ ಪೀಠದ ಅವಿಚ್ಛಿನ ಗುರುಪರಂಪರೆಯ 36ನೇ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿಗಳು 2015ರ ಜಯ ನಾಮ ಸಂವತ್ಸರದ ಮಾಘ ಶುದ್ಧ ತದಿಗೆಯಂದು ಉತ್ತರಾ ಧಿಕಾರಿ ಶಿಷ್ಯರನ್ನಾಗಿ ಬ್ರಹ್ಮಚಾರಿ ಕುಪ್ಪ ವೆಂಕಟೇಶ ಪ್ರಸಾದ ಶರ್ಮ ಅವರಿಗೆ ಸನ್ಯಾಸ ನೀಡಿದ್ದರು. ಶ್ರೀ ವಿಧುಶೇಖರ ಭಾರತೀ ಎಂಬ ಯೋಗ ಪಟ್ಟವನ್ನು ಅನುಗ್ರಹಿಸಿದ್ದರು. ಸನ್ಯಾಸ ಸ್ವೀಕರಿಸಿ ಇದೀಗ ಐದು ಸಂವತ್ಸರವಾಗಿದೆ.