ಹಿಡಕಲ್ ಡ್ಯಾಮ್ನಿಂದ ಕೃಷ್ಣಾಗೆ ನೀರು: ಡಿಕೆಶಿ
Team Udayavani, May 19, 2019, 3:00 AM IST
ಬೆಳಗಾವಿ: ಕೃಷ್ಣಾ ನದಿಗೆ ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಪಡೆಯುವ ಪ್ರಯತ್ನವನ್ನು ಕರ್ನಾಟಕ ಸರಕಾರ ನಿರಂತರವಾಗಿ ನಡೆಸುತ್ತಿದ್ದರೂ ಮಹಾರಾಷ್ಟ್ರ ಸರಕಾರ ಅದಕ್ಕೆ ಸ್ಪಂದಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹಿಡಕಲ್ ಜಲಾಶಯದಿಂದ ಒಂದು ಟಿಎಂಸಿ ನೀರನ್ನು ಕೃಷ್ಣಾ ನದಿಗೆ ಹರಿಸುವಂತೆ ಆದೇಶಿಸಿರುವುದಾಗಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಹಾರಾಷ್ಟ್ರ ಸರಕಾರ ನೀರು ವಿನಿಮಯ ಒಪ್ಪಂದಕ್ಕೆ ಪಟ್ಟು ಹಿಡಿದಿರುವುದರಿಂದ ನೀರು ಬಿಡುಗಡೆಯಾಗಿಲ್ಲ. ನೀರು ಬಿಡುಗಡೆ ಮಾಡುವಂತೆ ನಾವು ಮಹಾರಾಷ್ಟ್ರ ಸರಕಾರಕ್ಕೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದೆವು. ಈ ಭಾಗದ ಜನಪ್ರತಿನಿಧಿಗಳು ನಿಯೋಗದಲ್ಲಿ ತೆರಳಿ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.
ನಾವು ಚುನಾವಣೆ ನೀತಿ ಸಂಹಿತೆ ಮುಗಿದ ಬಳಿಕ ನೀರು ವಿನಿಮಯ ಒಪ್ಪಂದ ಮಾಡಿಕೊಳ್ಳುವ ಪ್ರಸ್ತಾವನೆಗೆ ಸಹಿ ಹಾಕುವುದಾಗಿ ಸಹ ಹೇಳಿದ್ದೆವು. ಇಷ್ಟಾದ ಮೇಲೂ ಮಹಾರಾಷ್ಟ್ರ ನೀರು ಬಿಡುಗಡೆ ಮಾಡಿಲ್ಲ ಎಂದು ಶಿವಕುಮಾರ್ ವಿಷಾದ ವ್ಯಕ್ತಪಡಿಸಿದರು.
ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಬರದೆ ಇರುವ ಕಾರಣ ಈಗ ಹಿಡಕಲ್ ಜಲಾಶಯದಿಂದ ಸುಮಾರು 94 ಕಿಮೀ ದೂರ ಇರುವ ಕೃಷ್ಣಾ ನದಿಗೆ ಒಂದು ಟಿಎಂಸಿ ನೀರು ಹರಿಸಲು ನಿರ್ಧರಿಸಲಾಗಿದೆ. ಸೋಮವಾರದಿಂದ ಈ ನೀರು ಬಿಡುಗಡೆಯಾಗಲಿದೆ. ಇದರಿಂದ ಅಥಣಿ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.