ಶ್ರೀಲಂಕಾ ಲೇಖಕ ಶೇಹನ್ ಕರುಣತಿಲಕಗೆ ಬೂಕರ್ ಪ್ರಶಸ್ತಿ
Team Udayavani, Oct 19, 2022, 7:25 AM IST
ಲಂಡನ್:“ದಿ ಸೆವೆನ್ ಮೂನ್ಸ್ ಆಫ್ ಮಾಲಿ ಅಲ್ಮೇಡಾ’ ಕಾದಂಬರಿಗಾಗಿ ಶ್ರೀಲಂಕಾ ಲೇಖಕ ಶೇಹನ್ ಕರುಣತಿಲಕ ಅವರಿಗೆ ಪ್ರಸಕ್ತ ಸಾಲಿನ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಒಲಿದುಬಂದಿದೆ.
47 ಲಕ್ಷ ರೂ. ನಗದು ಬಹುಮಾನವನ್ನು ಒಳಗೊಂಡ ಬೂಕರ್ ಪ್ರಶಸ್ತಿಯನ್ನು ಪಡೆದ ಶ್ರೀಲಂಕಾ ಮೂಲದ ಎರಡನೇ ಲೇಖಕ ಎಂಬ ಖ್ಯಾತಿಗೆ ಕರುಣತಿಲಕ(47) ಅವರು ಪಾತ್ರರಾಗಿದ್ದಾರೆ. ಈ ಹಿಂದೆ 1992ರಲ್ಲಿ ಶ್ರೀಲಂಕಾದ ಮೈಕೆಲ್ ಒಂದಾಜೆ ಅವರು “ದಿ ಇಂಗ್ಲಿಷ್ ಪೇಷೆಂಟ್’ ಕಾದಂಬರಿಗಾಗಿ ಬೂಕರ್ ಪ್ರಶಸ್ತಿ ಪಡೆದಿದ್ದರು.
“ದಿ ಸೆವೆನ್ ಮೂನ್ಸ್ ಆಫ್ ಮಾಲಿ ಅಲ್ಮೇಡಾ’ ಎನ್ನುವುದು ದೇಶದ ಭೀಕರ ನಾಗರಿಕ ಯುದ್ಧದ ಹಿನ್ನೆಲೆಯನ್ನು ಇಟ್ಟುಕೊಂಡು ರಚಿಸಲಾದ, ಮರಣಾನಂತರದ ಬದುಕಿನ ಕಥಾಹಂದರವನ್ನು ಒಳಗೊಂಡ ಥ್ರಿಲ್ಲರ್ ಕಾದಂಬರಿಯಾಗಿದೆ.
ಯುದ್ಧ ಫೋಟೋಗ್ರಾಫರ್ ಮಾಲಿ ಅಲ್ಮೇಡಾ ಸಾವು, ಮರಣಾನಂತರ ಅವನಿಗೆ ಸಿಗುವ 7 ಚಂದಿರರು, ತಮ್ಮ ಪ್ರೀತಿಪಾತ್ರರನ್ನು ಮತ್ತೆ ಸಂಪರ್ಕಿಸಲು ಆ ಚಂದಿರರ ಮೂಲಕ ಅಲ್ಮೇಡಾ ನಡೆಸುವ ಯತ್ನ, ಈ ಪ್ರಯತ್ನದ ಕೊನೆಗೆ ಸಿಗುವ ನಿಗೂಢ ಹಾಗೂ ಆಘಾತಕಾರಿ ಫೋಟೋಗಳ ರಾಶಿ… ಹೀಗೆ ಹತ್ತು ಹಲವು ತಿರುವುಗಳೊಂದಿಗೆ ಈ ಥ್ರಿಲ್ಲರ್ ಕಾದಂಬರಿ ಸಾಗುತ್ತದೆ. ಸೋಮವಾರ ರಾತ್ರಿ ಲಂಡನ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರುಣತಿಲಕ ಅವರಿಗೆ ಬೂಕರ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.