ಚಿಕ್ಕಬಳ್ಳಾಪುರ : BJP ಡಾ.ಕೆ.ಸುಧಾಕರ್ ವಿರುದ್ದ Congress ಅಚ್ಚರಿಯ ಅಭ್ಯರ್ಥಿ
ಆರ್.ಎಲ್.ಜಾಲಪ್ಪ ಮೊಮ್ಮಗನಿಗೆ ಕೈ ತಪ್ಪಿದ ಕಾಂಗ್ರೆಸ್ ಟಿಕೆಟ್!
Team Udayavani, Apr 15, 2023, 4:21 PM IST
ಪ್ರದೀಪ್ ಈಶ್ವರ್, ವಿನಯ್ ಶಾಮ್
ಚಿಕ್ಕಬಳ್ಳಾಪುರ : ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ಗಾಗಿ ದೊಡ್ಡ ಕದನವೇ ನಡೆಯುತ್ತಿದೆ. ದೆಹಲಿ ಮಟ್ಟದಲ್ಲಿ ಟಿಕೆಟ್ಗಾಗಿ ಲಾಭಿ ನಡೆಸಿ ಕೈ ಸುಟ್ಟುಕೊಂಡವರು ಎಷ್ಟೋ ಲೆಕ್ಕವಿಲ್ಲ. ಆದರೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಕಾಂಗ್ರೆಸ್ ಅಶ್ಚರ್ಯಕರ ಅಭ್ಯರ್ಥಿಯನ್ನು ಪ್ರಕಟಿಸಿದೆ.
ಹೌದು, 2018ರ ಚುನಾವಣೆ ಸಮಯದಲ್ಲಿ ಈಗಿನ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಿರುದ್ದ ಸಾಮಾಜಿಕ ಜಾಲತಾಣಗಳ ಮೂಲಕ ವಿಡಿಯೋ ಮಾಡಿ ಅವರ ಅಕ್ರಮಗಳ ಬಗ್ಗೆ ಧ್ವನಿ ಎತ್ತಿ ಹೋರಾಟ ನಡೆಸಿದ್ದ ಪ್ರದೀಪ್ ಈಶ್ವರ್ಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿದ್ದು ಹಿರಿಯ ಕಾಂಗ್ರೆಸ್ ಧುರೀಣರಾಗಿದ್ದ ಮಾಜಿ ಕೇಂದ್ರ ಸಚಿವ ದಿ.ಆರ್.ಎಲ್.ಜಾಲಪ್ಪ ಮೊಮ್ಮಗ ಕೆಪಿಸಿಸಿ ಸದಸ್ಯ ವಿನಯ್ ಶಾಮ್ಗೆ ಕಾಂಗ್ರೆಸ್ ಟಿಕೆಟ್ ತಪ್ಪಿದೆ.
ಜಿಲ್ಲೆಯ 5 ಕ್ಷೇತ್ರಗಳ ಪೈಕಿ ಗೌರಿಬಿದನೂರು, ಬಾಗೇಪಲ್ಲಿ, ಚಿಂತಾಮಣಿಗೆ ಒಕ್ಕಲಿಗ ಸಮಾಜಕ್ಕೆ ಮಣೆ ಹಾಕಿರುವ ಕಾಂಗ್ರೆಸ್, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮಾತ್ರ ಬಲಿಜ ಸಮುದಾಯದ ಯುವ ಮುಖಂಡ ಪ್ರದೀಪ್ ಈಶ್ವರ್ಗೆ ಟಿಕೆಟ್ ನೀಡುವ ಮೂಲಕ ಜಿಲ್ಲೆಯಲ್ಲಿ ಬಲಿಜ ಸಮುದಾಯದ ಕೆಂಗಣ್ಣಿಗೆ ಗುರಿಯಾಗುವುದರಿಂದ ಪಾರಾಗಿದೆ.
ಪ್ರದೀಪ್ ಈಶ್ವರ್ ಬೆಂಗಳೂರಿನಲ್ಲಿ ಪರಿಶ್ರಮ ನೀಟ್ ಅಕಾಡೆಮಿ ಸ್ಥಾಪಕರಾಗಿದ್ದರು. 2018ರ ಚುನಾವಣೆ ಬಳಿಕ ಆರೋಗ್ಯ ಸಚಿವ ಸುಧಾಕರ್ ಅವರೊಂದಿಗೆ ಸ್ನೇಹ ಹೊಂದಿದ್ದ ಸಾಕಷ್ಟು ವೇದಿಕೆಗಳಲ್ಲಿ ಇಬ್ಬರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಈಗ ಸುಧಾಕರ್ ವಿರುದ್ದ ಕಾಂಗ್ರೆಸ್ ಬಲಿಜ ಅಸ್ತ್ರ ಬಳಸಿ ಈಶ್ವರ್ಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿದ್ದು, ಆರ್.ಎಲ್.ಜಾಲಪ್ಪ ಮೊಮ್ಮಗನಿಗೆ ಟಿಕೆಟ್ ಕೈ ತಪ್ಪಿರುವುದರಿಂದ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಬಂಡಾಯ ಎದುರಿಸಬೇಕಾದ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಇದರ ನಡುವೆ ಟಿಕೆಟ್ ಶನಿವಾರ ಟಿಕೆಟ್ ಕೈ ತಪ್ಪುತ್ತಿದ್ದಂತೆ ನಾಮಪತ್ರ ಸಲ್ಲಿಸಿದರು.