
ಕರಿಬೇವುನಂತಾದ ಮಹದಾಯಿ, ಕಳಸಾ-ಬಂಡೂರಿ..
ಡಿಪಿಆರ್, ಪ್ರಾಧಿಕಾರದವರೆಗೆ ಬಂದು ನಿಂತಿದೆ ಮಹದಾಯಿ ವಿವಾದ: ದಶಕಗಳಿಂದ ಚುನಾವಣೆಯಲ್ಲಿ ಪ್ರಸ್ತಾಪ
Team Udayavani, Mar 4, 2023, 6:20 AM IST

ಹುಬ್ಬಳ್ಳಿ: ಅಡುಗೆ ಒಗ್ಗರಣೆಗೆ ಕರಿಬೇವು ಹಾಕಿ ನಂತರ ಅದನ್ನು ತೆಗೆದುಹಾಕಿ ಊಟ ಮಾಡು ವುದು’ ಎಂಬ ನಾಣ್ಣುಡಿ ಅಕ್ಷರಶಃ ಮಹದಾಯಿ, ಕಳಸಾ-ಬಂಡೂರಿಗೆ ಅನ್ವಯವಾಗುತ್ತದೆ ಎಂದೆನಿಸುತ್ತಿದೆ. ಕಳೆದ ಮೂರುವರೆ ನಾಲ್ಕು ದಶಕಗಳಿಂದ ನೀರಿನ ಕೂಗು ಮೊಳಗುತ್ತಿದೆ. ಕಳೆದೊಂದು ದಶಕದಿಂದ ಈ ವಿಚಾರದಲ್ಲಿ ದೊಡ್ಡ ಮಟ್ಟದ ಹೋರಾಟ, ಒತ್ತಾಯವಿದ್ದರೂ ಇಂದಿಗೂ ಹನಿ ನೀರು ರಾಜ್ಯದ ಪಾಲಿಗೆ ದೊರೆತಿಲ್ಲ. ಚುನಾವಣೆ ಬಂದಾಗಲೊಮ್ಮೆ ವಿಷಯ ಭರವಸೆಯ ಮಹಾಪೂರ ಹರಿಸಿ ನಂತರದಲ್ಲಿ ಬರ ಸೃಷ್ಟಿಸುತ್ತಲೇ ಬಂದಿದೆ.
ಕರ್ನಾಟಕ-ಗೋವಾ ಮಧ್ಯ ದೊಡ್ಡ ಸಮರಕ್ಕೆ ಕಾರಣವಾಗಿ ಮಹದಾಯಿ, ಕಳಸಾ-ಬಂಡೂರಿ ವಿವಾದ ಸೃಷ್ಟಿಯಾಗಿದೆ. ನೀರು ಹಂಚಿಕೆ ವಿಚಾರದಲ್ಲಿ ಹೋರಾಟ, ರಾಜಕೀಯ ಆರೋಪ-ಪ್ರತ್ಯಾರೋಪ, ಕಾನೂನು ಸಮರ, ನ್ಯಾಯಾಧಿಕರಣ ರಚನೆ, ನೀರು ಹಂಚಿಕೆ ತೀರ್ಪು, ಕೇಂದ್ರದಿಂದ ಅಧಿಸೂಚನೆ, ಡಿಪಿಆರ್ಎಗೆ ಒಪ್ಪಿಗೆ, ಕೇಂದ್ರದಿಂದ ಮಹದಾಯಿ ಪ್ರಾಧಿಕಾರ ರಚನೆ ಹಂತದವರೆಗೂ ನಡೆದುಬಂದಿದೆ. ರಾಜ್ಯದ ಮಟ್ಟಿಗೆ ನೋಡುವುದಾದರೆ ಎಸ್.ಆರ್. ಬೊಮ್ಮಾಯಿ ಅವರಿಂದ ಹಿಡಿದು ಇಂದಿನ ಬಸವ ರಾಜ ಬೊಮ್ಮಾಯಿ ಅವರವರೆಗೆ ಆಳ್ವಿಕೆ ನಡೆಸಿದ ಎಲ್ಲ ಮುಖ್ಯಮಂತ್ರಿಗಳು ಒಂದಿಲ್ಲ ಒಂದು ರೀತಿಯಲ್ಲಿ ಮಹದಾಯಿ, ಕಳಸಾ-ಬಂಡೂರಿ ವಿಚಾರದಲ್ಲಿ ಯತ್ನ, ಭರವಸೆ, ಕ್ರಮ ತೋರುತ್ತ ಬಂದಿದ್ದರೂ, ಇದುವರೆಗೂ ರೈತರ ದೃಷ್ಟಿಯಿಂದ ಸಣ್ಣ ಪ್ರತಿಫಲವೂ ದೊರೆಯದಾಗಿದೆ.
ಮಹದಾಯಿ ತಿರುವು ಯೋಜನೆ ಕುರಿತು ಗುಳೇದಗುಡ್ಡದ ಶಾಸಕರಾಗಿದ್ದ ಬಿ.ಎಂ.ಹೊರ ಕೇರಿ ಅವರು 1976ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಯಲ್ಲಿ ವಿಷಯ ಪ್ರಸ್ತಾಪಿಸಿದ್ದರು. 80ರ ದಶಕದಲ್ಲಿ ಎಸ್.ಆರ್.ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಅಂದಿನ ಗೋವಾ ಸಿಎಂ ಜತೆ ಚರ್ಚಿಸಿ ಮಾತುಕತೆ ಮೂಲಕ ವಿವಾದ ಇತ್ಯರ್ಥಕ್ಕೆ ಯತ್ನಿಸಿದ್ದರು. ಅದು ಸಹ ಅಂತಿಮವಾಗಿ ಯಶಸ್ಸು ದೊರೆಯಲಿಲ್ಲ. ಮುಂದೆ 2000ರಲ್ಲಿ ಎಚ್.ಕೆ.ಪಾಟೀಲರು ಜಲ ಸಂಪನ್ಮೂಲ ಸಚಿವರಾಗಿದ್ದಾಗ ನಮ್ಮದೇ ಹಳ್ಳಗಳಾದ ಕಳಸಾ-ಬಂಡೂರಿಯಿಂದ ನೀರು ಪಡೆಯಲು ಕಳಸಾ-ಬಂಡೂರಿ ನಾಲಾ ಯೋಜನೆ ಆರಂಭಿಸಿ ದ್ದರು.
ಮುಂದೆ ಜೆಡಿಎಸ್-ಬಿಜೆಪಿ ಸರಕಾರದಲ್ಲಿ ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಅಂದು ಅಂದಾಜು 100 ಕೋಟಿ ರೂ.ವೆಚ್ಚದಲ್ಲಿ ಕಳಸಾ-ಬಂಡೂರಿ ನಾಲಾ ಯೋಜನೆಗೆ ಚಾಲನೆ ನೀಡಲಾಗಿತ್ತಾದರೂ ಅದು ಮುಂದು ವರೆಯದೆ ಕಾನೂನು ಸಮರಕ್ಕೆ ಸಿಲುಕಿತ್ತು.
ಗೋವಾದ ಒತ್ತಾಸೆ ಮೇರೆಗೆ ಕೇಂದ್ರ ಸರಕಾರ ನ್ಯಾ.ಪಾಂಚಾಲ ನೇತೃತ್ವದಲ್ಲಿ ಮಹದಾಯಿ ನದಿ ನೀರು ಹಂಚಿಕೆ ನ್ಯಾಯಾಧಿಕರಣ ರಚನೆ ಮಾಡಿತ್ತು. ನ್ಯಾಯಾಧಿಕರಣ 2018ರ ಆಗಸ್ಟ್ನಲ್ಲಿ ಕರ್ನಾಟಕಕ್ಕೆ ವಿದ್ಯುತ್ ಉತ್ಪಾದನೆಗೆ 8 ಟಿಎಂಸಿ ಅಡಿ ನೀರು ಸೇರಿದಂತೆ 13.42 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿತ್ತು. ನಂತರದಲ್ಲಿ ಕೇಂದ್ರ ಸರಕಾರ ಅಧಿಸೂಚನೆಯನ್ನು ಹೊರಡಿಸಿತ್ತು. ರಾಜ್ಯ ಸರಕಾರ ಹಲವು ವರ್ಷಗಳ ಸರ್ಕಸ್ ನಂತರ ಕಳಸಾ-ಬಂಡೂರಿ ನಾಲಾ ಯೋಜನೆ ವಿಸ್ತೃತ ಯೋಜನಾ ವರದಿ(ಡಿಪಿಆರ್) ಸಿದ್ಧಪಡಿಸಿತ್ತಲ್ಲದೆ, ಕೆಲ ದಿನಗಳ ಹಿಂದೆಯಷ್ಟೇ ಡಿಪಿಆರ್ಗೆ ಕೇಂದ್ರ ಸರಕಾರ ಒಪ್ಪಿಗೆ ನೀಡಿತ್ತು.
ಕಳಸಾ-ಬಂಡೂರಿ ನಾಲಾಕ್ಕಾಗಿ ನೀಡಿದ ಮನವಿಗಳಿಗೆ ಲೆಕ್ಕವಿಲ್ಲ, ಮಾಡಿದ ಹೋರಾಟಕ್ಕೆ ಅಂತ್ಯವಿಲ್ಲ, ನೀರಿಗಾಗಿ ಪಾದಯಾತ್ರೆ ನಡೆದಿತ್ತು, ರಕ್ತದಲ್ಲಿ ಪತ್ರ ಬರೆದಿದ್ದಾಗಿದೆ, ಇದಕ್ಕಾಗಿ ಕೆಲವರು ಜೈಲು ಕಂಡಿದ್ದರು, ಪ್ರಾಣ ಬಿಟ್ಟಿದ್ದು ಇದೆ. ಸರಿಸುಮಾರು ಎರಡು ವರ್ಷಗಳ ಕಾಲ ನಿರಂತರ ಹೋರಾಟ ನಡೆದ ಇತಿಹಾಸ ಇದಕ್ಕಿದ್ದರೂ ಇಂದಿಗೂ ರಾಜ್ಯಕ್ಕೆ ಹನಿ ನೀರು ದಕ್ಕದಾಗಿದೆ.
ಕಳೆದೆರಡು ದಶಕಗಳಿಂದ ವಿಧಾನಸಭೆ ಇಲ್ಲವೇ ಲೋಕಸಭೆ ಚುನಾವಣೆ ಬಂದಾಗಲೊಮ್ಮೆ ಮಹ ದಾಯಿ, ಕಳಸಾ-ಬಂಡೂರಿ ನಾಲಾ ಯೋಜನೆ ಪ್ರತಿಧ್ವನಿಸುತ್ತದೆ. ನಮ್ಮ ಸರಕಾರ ಬಂದರೆ ಕಾಮ ಗಾರಿ ಪೂರ್ಣಗೊಳಿಸುವ, 24 ಗಂಟೆಯಲ್ಲಿ ನೀರು ತರುತ್ತೇವೆ ಎಂಬ ಸ್ವರ್ಗ ಸೃಷ್ಟಿಸುವ, ಅಲ್ಲಿ ನಿಮ್ಮವರಿಗೆ ಹೇಳಿ, ಇಲ್ಲಿ ನಿಮ್ಮವರನ್ನು ಸರಿಪಡಿಸಿ ಎಂಬೆಲ್ಲ ಆರೋಪ ಪ್ರತ್ಯಾರೋಪದಲ್ಲೇ ಕಾಲ ಕಳೆದಾಗಿದೆ. ಡಿಪಿಆರ್ಗೆ ಒಪ್ಪಿಗೆ ಸಿಕ್ಕಿದೆ ಇನ್ನೇನು ಕಾಮಗಾರಿಗೆ ಚಾಲನೆ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾಗಲೇ ಪ್ರಾಧಿಕಾರ ರಚನೆಯಾಗಿದೆ. ಇನ್ನಾದರೂ ಕಾಮ ಗಾರಿ ಚಾಲನೆ ಪಡೆದು ಹಂಚಿಕೆಯಾದ ನೀರಿನ ಪಾಲಾದರೂ ನಮಗೆ ದಕ್ಕೀತೆ ಅಥವಾ ನಮ್ಮ ಮುಂದಿನ ಪೀಳಿಗೆಯೂ ನಮ್ಮಂತೆಯೇ ನೀರಿಗಾಗಿ ಹೋರಾಟ ಮುಂದುವರಿಸಬೇಕೇ ಎಂಬ ಪ್ರಶ್ನೆ ಈ ಭಾಗದ ಜನತೆಯನ್ನು ಕಾಡತೊಡಗಿದೆ.
-ಅಮರೇಗೌಡ ಗೋನವಾರ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್

ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!

ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ

ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ಹೊಸ ಸೇರ್ಪಡೆ

Love Story: ಪತ್ನಿಯನ್ನೇ ಪ್ರಿಯಕರನ ಜೊತೆ ಮದುವೆ ಮಾಡಿಸಿಕೊಟ್ಟ ಪತಿ ಮಹಾಶಯ.!

Theerthahalli: ಮಾಜಿ ವಿಧಾನ ಪರಿಷತ್ ಸದಸ್ಯ ಬಿ.ಎಸ್. ವಿಶ್ವನಾಥ್ ನಿಧನ

Shimoga; ವಿದ್ಯುತ್ ಪ್ರವಹಿಸಿ ಕಂಬದಲ್ಲೇ ಕೊನೆಯುಸಿರೆಳೆದ ಲೈನ್ ಮ್ಯಾನ್

Kannada Cinema; ‘ಯಾವೋ ಇವೆಲ್ಲಾ’- ಇದು ಹೊಸಬರ ಕನಸು

Viral Video; ಗಣೇಶೋತ್ಸವದಲ್ಲಿ ಬುರ್ಖಾ ಧರಿಸಿ ಡ್ಯಾನ್ಸ್ ಮಾಡಿದ ಹಿಂದೂ ಯುವಕ