Karnataka Poll: ಈ ಬಾರಿಯೂ ಹೆಚ್ಚು ರಾಜ್ಯ ಸುತ್ತುವುದು… ಬಿಎಸ್ವೈ
Team Udayavani, Apr 23, 2023, 7:15 AM IST
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣ ಅಖಾಡಕ್ಕೆ ಇನ್ನಷ್ಟು ಪರಿಣಾಮಕಾರಿಯಾಗಿ ಧುಮುಕಲು ಬಿಜೆಪಿ ಸಿದ್ಧತೆ ನಡೆಸಿದ್ದು, ರವಿವಾರದಿಂದ ಘಟಾನುಘಟಿ ನಾಯಕರ ಪ್ರವಾಸ ಆರಂಭವಾಗಲಿದೆ. ಈ ಬಾರಿಯ ಚುನಾವಣೆಯಲ್ಲೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪಕ್ಷದ ಪರ ಭರ್ಜರಿ ಬ್ಯಾಟಿಂಗ್ ನಡೆಸಲಿದ್ದು, ಎ.23ರಿಂದ ಮೇ 6ರ ವರೆಗೆ ಒಟ್ಟು 80 ಸಭೆಗಳಲ್ಲಿ ಭಾಗವಹಿಸಲಿದ್ದಾರೆ.
ಪ್ರವಾಸ, ಸಭೆ-ಸಮಾವೇಶ, ರೋಡ್ ಶೋ ಹಾಗೂ ಚುನಾವಣಾ ತಂತ್ರಗಾರಿಕೆಗೆ ಸಂಬಂಧಪಟ್ಟಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಶುಕ್ರವಾರ ತಡರಾತ್ರಿಯವರೆಗೂ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಪಕ್ಷದ ಮುಖಂಡರ ಜತೆಗೆ ಸಭೆ ನಡೆದಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಕನಕಪುರ ವಿಧಾನಸಭಾ ಕ್ಷೇತ್ರಕ್ಕೆ ಕರೆಸಿ ಬೃಹತ್ ಸಮಾವೇಶ ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ. ಹಳೆ ಮೈಸೂರು ಹಾಗೂ ಕರಾವಳಿ ಭಾಗದಲ್ಲಿ ಯೋಗಿ ಆದಿತ್ಯನಾಥ ಕೇಸರಿ ರಣಕಹಳೆ ಮೊಳಗಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಪ್ರವಾಸ ಎ.28ರಿಂದ ಆರಂಭವಾಗುತ್ತದೆ.
ಸಿಎಂ ಬೊಮ್ಮಾಯಿ 75 ಸಭೆಗಳಲ್ಲಿ, ಬಿ.ಎಲ್.ಸಂತೋಷ್ ಹಾಗೂ ನಳಿನ್ ಕುಮಾರ್ ಕಟೀಲು 50ಕ್ಕೂ ಮೇಲ್ಪಟ್ಟ ಸಭೆಗಳಲ್ಲಿ ಭಾಗಿಯಾಗುತ್ತಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.