ಯಕ್ಷರಿಂದ ಹುಟ್ಟಿದ್ದೇ ಯಕ್ಷಗಾನ


Team Udayavani, Nov 30, 2019, 4:29 AM IST

zx-16

ಮಕ್ಕಳೇ, ಯಕ್ಷಗಾನ ಎಂದರೆ ನಿಮಗೆಲ್ಲ ಅಚ್ಚುಮೆಚ್ಚು ತಾನೇ? ನೃತ್ಯ, ಮಾತುಗಾರಿಕೆ, ಹಾಡುಗಾರಿಕೆ, ವೇಷ -ಭೂಷಣ ಮುಂತಾದವುಗಳನ್ನು ಒಳಗೊಂಡ ಈ ಕಲೆ ನಮ್ಮ ಸಂಸ್ಕೃತಿಯ ಪ್ರತೀಕ. ಉಡುಪಿ, ಕಾಸರಗೋಡು ಒಳಗೊಂಡಂತೆ ಅವಿಭಜಿತ ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮಂತಾದೆಡೆಗಳಲ್ಲಿ ಬಯಲಾಟ ಎಂದು ಕರೆಯುವ ಯಕ್ಷಗಾನ ಹೆಚ್ಚು ಪ್ರಚಲಿತದಲ್ಲಿದೆ. ಹಿಂದೆಲ್ಲ ಪೌರಾಣಿಕ ಕಥೆಗಳನ್ನು ಪ್ರಸಂಗಗಳಾಗಿ ಪ್ರದರ್ಶಿಸಲಾಗುತ್ತಿತ್ತು. ಕ್ರಮೇಣ ಇದರಲ್ಲಿ ಐತಿಹಾಸಿಕ, ಸಾಮಾಜಿಕ ಕಥೆಗಳನ್ನು ಅಳವಡಿಸಲು ಆರಂಭಿಸಿದರು. ಇತ್ತೀಚೆಗೆ ಚಲನಚಿತ್ರದ ಕಥೆಯನ್ನೂ ಪ್ರಸಂಗವಾಗಿಸಿದ ಉದಾರಣೆಯೂ ಇದೆ.

ಪ್ರಕಾರ‌ಗಳು
ಯಕ್ಷಗಾನದಲ್ಲಿ ತೆಂಕುತಿಟ್ಟು ಮತ್ತು ಬಡಗುತಿಟ್ಟು ಎನ್ನುವ ಎರಡು ಪ್ರಕಾರ‌ಗಳಿವೆ. ಕಾಸರಗೋಡು, ಮಂಗಳೂರು ಮುಂತಾದೆಡೆ ತೆಂಕುತಿಟ್ಟು ಪ್ರಕಾರ ಹೆಚ್ಚು ಪ್ರಚಲಿತದಲ್ಲಿದ್ದರೆ, ಉಳಿದೆಡೆ ಬಡಗುತಿಟ್ಟು ಜನಪ್ರಿಯವಾಗಿದೆ. ಹಿಂದೆ ರಾತ್ರಿಯೆಲ್ಲ ಯಕ್ಷಗಾನ ಪ್ರದರ್ಶಿಸಲಾಗುತ್ತಿತ್ತು. ಕ್ರಮೇಣ ಸೀಮಿತ ಅವಧಿಗೆ (ಕಾಲಮಿತಿ) ಒಗ್ಗಿಸಲಾಯಿತು. ಈಗಲೂ ಇಡೀ ದಿನ ನಡೆಯುವ ಯಕ್ಷಗಾನಕ್ಕೆ ಬಹಳಷ್ಟು ಪ್ರೇಕ್ಷಕರಿದ್ದಾರೆ, ಮಾರಣಕಟ್ಟೆ, ಕಟೀಲು ಮುಂತಾದ ಮೇಳಗಳ ಆಟಗಳಿಗೆ ಹಲವು ವರ್ಷಗಳ ಕಾಲ ಬುಕ್ಕಿಂಗ್‌ ಇದೆ ಎನ್ನುವುದು ಈ ಕಲೆಯ ಜನಪ್ರಿಯತೆ ಕುಂದಿಲ್ಲ ಎನ್ನುವುದಕ್ಕೆ ಸಾಕ್ಷಿ.

ಮೇಳಗಳು
ಯಕ್ಷಗಾನ ಕಲೆಯನ್ನು ಊರಿಂದೂರಿಗೆ ತೆರಳಿ ಪ್ರದರ್ಶಿಸುವ ತಂಡಗಳಿಗೆ ಮೇಳ ಎಂದು ಹೆಸರು. ಭಾಗವತರು, ಚೆಂಡೆ, ಮದ್ದಳೆ, ಚಕ್ರತಾಳದವರು, ವೇಷಧಾರಿಗಳು, ವೇದಿಕೆ ಸಿದ್ಧಪಡಿಸುವ ಕುಶಲಕರ್ಮಿಗಳು, ಸಹಾಯಕರು ಮುಂತಾದ ಸುಮಾರು 40 ಸದಸ್ಯರನ್ನು ಒಳಗೊಂಡ ತಂಡ. ಧರ್ಮಸ್ಥಳ, ಕಟೀಲು, ಮಾರಣಕಟ್ಟೆ, ಮಂದಾರ್ತಿ, ಹನುಮಗಿರಿ, ಸಾಲಿಗ್ರಾಮ, ಪೆರ್ಡೂರು, ಸುಂಕದಕಟ್ಟೆ, ಕಮಲಶಿಲೆ, ಹಟ್ಟಿಯಂಗಡಿ, ಕೋಟ ಅಮೃತೇಶ್ವರಿ, ಬಪ್ಪನಾಡು, ಸಸಿಹಿತ್ಲು, ದೇಂತಡ್ಕ, ಬೆಂಕಿನಾಥೇಶ್ವರ, ಹಿರಿಯಡಕ, ಸೌಕೂರು, ಮಂಗಳಾದೇವಿ ಮುಂತಾದ ಮೇಳಗಳು ಪ್ರಸಿದ್ಧವಾಗಿವೆ. ಹರಕೆ ಬಯಲಾಟ, ಸೇವೆಯಾಟಗಳಲ್ಲದೆ ಟೆಂಟ್‌ ಆಟಗಳನ್ನು ಆಡುವ ಮೇಳಗಳೂ ಇವೆ.

ಚೌಕಿ
ಯಕ್ಷಗಾನ ವೇಷ ಹಾಕುವ ಸ್ಥಳವನ್ನು ಚೌಕಿ ಎನ್ನುತ್ತಾರೆ. ವೇಷ ಭೂಷಣ, ಆಲಂಕಾರಿಕ ವಸ್ತುಗಳನ್ನು ಇಲ್ಲಿ ಇರಿಸಲಾಗುತ್ತದೆ. ಕಲಾವಿದರೆಲ್ಲ ವೇಷ ಹಾಕಿದ ಮೇಲೆ ಚೌಕಿಯಲ್ಲಿ ದೇವರಿಗೆ ಪೂಜೆ ನಡೆಸಲಾಗುತ್ತದೆ. ಅನಂತರ ಪ್ರಸಂಗ ಆರಂಭಿಸುವುದು ರೂಢಿ.

ತಾಳಮದ್ದಳೆ
ತಾಳಮದ್ದಳೆ ಎನ್ನುವುದು ಯಕ್ಷಗಾನದ ಇನ್ನೊಂದು ಪ್ರಮುಖ ಪ್ರಕಾರ. ಇದು ಯಕ್ಷಗಾನದ ಪ್ರಸಂಗವನ್ನೇ ಆಯ್ದು ಪ್ರಸ್ತುತಪಡಿಸುವುದಾದರೂ ಪ್ರಸ್ತುತಿಯಲ್ಲಿ ವಾಚಿಕಾಭಿನಯಕ್ಕೆ ಹೆಚ್ಚು ಮಹತ್ವ. ಇಲ್ಲಿ ವೇಷಭೂಷಣ, ನೃತ್ಯಗಳಿರುವುದಿಲ್ಲ. ಭಾಗವತರು, ಹಿಮ್ಮೇಳ ಇರುತ್ತದೆ. ವೇಷಧಾರಿಗಳ ಬದಲು ಅರ್ಥಧಾರಿಗಳು ಇರುತ್ತಾರೆ. ಕುಳಿತಲ್ಲಿಯೇ ಸಂಭಾಷಣೆ ಹೇಳುತ್ತಾರೆ. ಮಳೆಗಾಲದಲ್ಲಿ ತಾಳಮದ್ದಳೆಗಳು ಆಗುವುದು ಹೆಚ್ಚು.

ಭಾಗವತರು
ಯಕ್ಷಗಾನದ ಜೀವಾಳ ಭಾಗವತರೇ. ಅವರು ರಂಗ ನಿರ್ದೇಶಕರು. ಇಲ್ಲಿ ಪಾತ್ರಧಾರಿಗಳು ಅಭಿ ನಯಿಸುವ ಕಥಾನಕವನ್ನು ಕಾವ್ಯ ರೂಪದಲ್ಲಿ ಹಾಡಲಾಗುತ್ತದೆ. ಭಾಗವತರ ಹಾಡುಗಾರಿಕೆಗೆ ತಕ್ಕಂತೆ ಪಾತ್ರಧಾರಿಗಳು ನೃತ್ಯದ ಮೂಲಕ ಅಭಿನಯಿಸು ತ್ತಾರೆ. ಕಥೆಗೆ ತಕ್ಕ ಭಾವಾಭಿನಯ ಮುಖ್ಯ ವಾದುದು.

ಯಕ್ಷಗಾನದ ಪಿತಾಮಹ-ಪಾರ್ತಿಸುಬ್ಬ
ಕಾಸರಗೋಡಿನ ಕುಂಬಳೆಯ ಪಾರ್ತಿಸುಬ್ಬ ಅವರನ್ನು ಯಕ್ಷಗಾನದ ಪಿತಾಮಹ ಎಂದೇ ಕರೆಯಲಾಗುತ್ತದೆ. ಯಕ್ಷಗಾನವನ್ನು ಆಮೂಲಾಗ್ರ ಸುಧಾರಣೆ ಮಾಡಿ, ಪ್ರಸಂಗದ ಸಾಹಿತ್ಯ ರಚಿಸಿದವರು ಪಾರ್ತಿಸುಬ್ಬ. ಇಂದು ಯಕ್ಷಗಾನ ವಿಶ್ವವ್ಯಾಪಿಯಾಗಲು ಮೂಲ ಕಾರಣವಾದವರು ಅವರು. ರಾಮಾಯಣದ ಪ್ರಸಂಗಗಳನ್ನು ಅವರು ರಚಿಸಿದ್ದು, ಈಗಲೂ ಅದನ್ನು ಪ್ರದರ್ಶಿಸಲಾಗುತ್ತದೆ. ಪಾರ್ತಿಸುಬ್ಬ ಕಾಲಮಾನದಲ್ಲಿ ಇಂದಿಗೂ ಗೊಂದಲವಿದೆ. 1600-1700 ಇರಬಹುದು ಎನ್ನುವುದು ಒಂದು ವಾದವಾದರೆ 1760ರಿಂದ 1830 ಎನ್ನುವವರೂ ಇದ್ದಾರೆ.

ಪ್ರಸಂಗ ಎಂದರೇನು?
ಯಾವುದಾದರೊಂದು ಕಥಾನಕವನ್ನು ಆಯ್ದುಕೊಂಡು ಪ್ರಸ್ತುತಪಡಿಸಲಾಗುತ್ತದೆ. ಇದನ್ನು ಪ್ರಸಂಗ ಎಂದು ಕರೆಯಲಾಗುತ್ತದೆ. ದೇವಿ ಮಹಾತೆ¾, ಧರ್ಮಸ್ಥಳ ಕ್ಷೇತ್ರ ಮಹಾತೆ¾, ನಳದಮಯಂತಿ, ಭೀಷ್ಮ ಪರ್ವ, ಸೀತಾ ಪರಿತ್ಯಾಗ, ಸತ್ಯ ಹರಿಶ್ಚಂದ್ರ, ಕೃಷ್ಣ ಸಂಧಾನ, ಕರ್ಣಾವಸಾನ, ಕೃಷ್ಣಾರ್ಜುನ, ಶರಸೇತುಬಂಧನ, ಕುಮಾರವಿಜಯ, ತ್ರಿಪುರ ಮಥನ, ದಕ್ಷಾಧ್ವರ, ಶ್ವೇತಕುಮಾರ ಚರಿತ್ರೆ, ಕವಿರತ್ನ ಕಾಳಿದಾಸ, ಚಂದ್ರಹಾಸ … ಮುಂತಾದವು ಕೆಲವು ಜನಪ್ರಿಯ ಪ್ರಸಂಗಗಳು ಪ್ರಚಲಿತದಲ್ಲಿವೆ.

ಉಗಮವಾಗಿದ್ದು ಯಾವಾಗ?
ಯಕ್ಷಗಾನದ ಮೊದಲ ಉಲ್ಲೇಖ ಸಾರ್ಣದೇವನ “ಸಂಗೀತ ರತ್ನಾಕರ’ (ಕ್ರಿ.ಶ. 1210) ಕೃತಿಯಲ್ಲಿ ಜಕ್ಕ ಎಂದಿದ್ದು ಕ್ರಮೇಣ ಯಕ್ಕಲಗಾನ ಎಂದು ಕರೆಸಿಕೊಂಡಿತು ಎನ್ನಲಾಗುತ್ತಿದೆ. ಗಂಧರ್ವಗಾನ ಎನ್ನುವ ಗಾನ ಪದ್ಧತಿಯಿಂದ ಗಾನ ಸ್ವತಂತ್ರ ಜಾನಪದ ಶೈಲಿಯಿಂದ ನೃತ್ಯ ರೂಪುಗೊಂಡಿತೆಂದು ಶಿವರಾಮ ಕಾರಂತರ ಸಂಶೋಧನ ಕೃತಿ “ಯಕ್ಷಗಾನ ಬಯಲಾಟ’ದಲ್ಲಿ ಉಲ್ಲೇಖೀಸಲಾಗಿದೆ. ಕ್ರಿ.ಶ. 1500ರ ಕಾಲಘಟದಲ್ಲಿ ಯಕ್ಷಗಾನ ಜನಪ್ರಿಯವಾಗಿತ್ತು ಎಂದು ಸಂಶೋಧಕರು ಅಭಿಪ್ರಾಯ ಪಡುತ್ತಾರೆ.

ವಿವಿಧ ವೇಷಗಳು
ಪುಂಡು ವೇಷ, ರಾಜ (ಕಿರೀಟ) ವೇಷ, ಸ್ತ್ರೀ ವೇಷ, ರಾಕ್ಷಸ ವೇಷ, ಬಣ್ಣದ ವೇಷ, ಕೋಡಂಗಿ ಮುಂತಾದವು ಯಕ್ಷಗಾನದ ಪ್ರಮುಖ ವೇಷಗಳು. ಪ್ರತಿ ವೇಷಕ್ಕೂ ಪ್ರತ್ಯೇಕ ವೇಷಭೂಷಣ, ಕಿರೀಟ ಇರುತ್ತದೆ. ಕಿರೀಟವಿಲ್ಲದ ವೇಷಗಳೂ ಹಲವು ಇವೆ. ಅದೇ ರೀತಿ ಬಡಗು ತಿಟ್ಟು ಮತ್ತು ತೆಂಕು ತಿಟ್ಟಿನ ವೇಷಗಳಲ್ಲಿ, ಹಾಡು – ಕುಣಿತಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ.

ಪ್ರತೀತಿ ಇದೆ
ಯಕ್ಷರಿಂದ ಹುಟ್ಟಿದ್ದು ಯಕ್ಷಗಾನ ಎಂದು ಹೇಳಲಾಗುತ್ತದೆ. ಹಿಂದೆ ಯಕ್ಷರು ಯಕ್ಷಗಾನ ಆಡುತ್ತಿದ್ದರು ಎನ್ನುವ ಪ್ರತೀತಿ ಇದೆ. ಮನೋರಂಜನೆಗಾಗಿಯೇ ಇದು ರೂಪುಗೊಂಡಿತ್ತು ಎನ್ನುವುದರಲ್ಲಿ ಸಂಶಯವಿಲ್ಲ.
– ಈಶ್ವರಪ್ರಸಾದ್‌ ಪಿ.ವಿ., ಹಿರಿಯ ಕಲಾವಿದರು, ಧರ್ಮಸ್ಥಳ ಮೇಳ

-  ರಮೇಶ್‌ ಬಳ್ಳಮೂಲೆ

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.