ಗುಂಡಿಮಜಲಿನ ಬಾಲ-ಗೋಪಾಲನಿಂದ ಯಕ್ಷಮಜಲಿನ ಅಶ್ವತ್ಥಾಮನವರೆಗೆ!


Team Udayavani, Aug 4, 2017, 1:25 PM IST

04-KALA-3.jpg

ತೆಂಕುತಿಟ್ಟು ಯಕ್ಷಗಾನದಲ್ಲಿ “ಗುಂಡಿಮಜಲು’ ಎಂದಾಕ್ಷಣ ಮನಸ್ಸಿಗೆ ಬರುವುದು ಗುಬ್ಬಚ್ಚಿಯಂಥ ಆಕಾರದ, ಗರುಡನಂಥ ಉತ್ಸಾಹದ ಕಲಾವಿದ. ಪೂರ್ಣ ಹೆಸರು ಗುಂಡಿಮಜಲು ಗೋಪಾಲಕೃಷ್ಣ ಭಟ್‌. 80ರ ದಶಕದ ಕೊನೆ ಮತ್ತು 90ರ ದಶಕದ ಆರಂಭದಲ್ಲಿ ಕಟೀಲು ಮೇಳದ ಆಟ ನೋಡಿದವರೆಲ್ಲ- ಗರುಡಗರ್ವಭಂಗದ ಹನುಮಂತ, ರಕ್ತರಾತ್ರಿಯ ಅಶ್ವತ್ಥಾಮ, ದೇವಿಮಹಾತ್ಮೆಯ ಚಂಡ, ಲಲಿತೋಪಾಖ್ಯಾನದ ಬಂಡಾಸುರ, ಚಕ್ರವ್ಯೂಹದ ಅಭಿಮನ್ಯು, ಅಶ್ವಮೇಧದ ಬಬ್ರುವಾಹನ ಹೀಗೆ ಗೋಪಾಲ ಭಟ್ರ ಪುಂಡುವೇಷದ ವೈಭವವನ್ನು ನೆನಪಿಸಿಕೊಂಡು ಪುಳಕಗೊಳ್ಳುತ್ತಾರೆ.
ಪ್ರಾಥಮಿಕ ಶಾಲೆಯಲ್ಲಿದ್ದಾಗ ಸಣ್ಣಪುಟ್ಟ ವೇಷ ಮಾಡುತ್ತಿದ್ದ ಬಾಲ-ಗೋಪಾಲನಿಗೆ ವಿಟ್ಲ ರಾಮಯ ಶೆಟ್ಟರು ಆರಂಭದ ಹೆಜ್ಜೆ ಗಾರಿಕೆಗಳನ್ನು ಹೇಳಿಕೊಟ್ಟವರು. ತಮ್ಮ ತಂದೆ ಸುಬ್ರಾಯ ಭಟ್ಟರ ಭಾಗವತಿಕೆಗೆ, ಅಜ್ಜ ನಾರಾಯಣ ಭಟ್ಟರ ಮದ್ದಲೆವಾದನಕ್ಕೆ ವೇಷ ಮಾಡಿದ ಅನುಭವವೂ ಬಾಲ-ಗೋಪಾಲನಿಗಿತ್ತು. ಹವ್ಯಾಸಿಯಾಗಿ ಅನುಭವ ಸಾಲದು, ಇನ್ನಷ್ಟು ಪರಿಣತನಾಗಬೇಕೆಂದು ತವಕಿಸುತ್ತಿರು ವಾಗಲೇ ಏಳನೆಯ ತರಗತಿಯಲ್ಲಿ ಅನುತ್ತೀರ್ಣನಾದದ್ದು ಅನುಕೂಲವೇ ಆಯಿತು. ದಿನಪತ್ರಿಕೆಯಲ್ಲಿ  “ಧರ್ಮಸ್ಥಳ ಯಕ್ಷಗಾನ ಕೇಂದ್ರ’ದ ಜಾಹೀರಾತು ಇರುವುದನ್ನು ಹಿರಿಯ ಸೋದರ ಗಮನಿಸಿ, ತಮ್ಮನನ್ನು ಅಲ್ಲಿಗೆ ಸೇರಿಸುವಂತೆ ತಂದೆಗೆ ಸಲಹೆ ಮಾಡಿದರು. 

ಧರ್ಮಸ್ಥಳದ ಯಕ್ಷಗಾನ ಕೇಂದ್ರದಲ್ಲಿ ಪಡ್ರೆ ಚಂದುರವರು ನಾಟ್ಯಗುರುಗಳು. ಮೊದಲ ಬ್ಯಾಚಿಗೆ ಮಾತ್ರ ತರಬೇತಿಯ ಅವಧಿ ಎರಡು ವರ್ಷಗಳಾಗಿದ್ದವು. ಗೋಪಾಲ ಭಟ್ಟರು ಮೂರನೆಯ ಬ್ಯಾಚಿನ ವಿದ್ಯಾರ್ಥಿಯಾಗಿ ಸೇರಿಕೊಂಡರು. ಆಗ ಅವರ ಸಹಾಧ್ಯಾಯಿಗಳಾಗಿದ್ದವರು- ಸರಪಾಡಿ ಶಂಕರನಾರಾಯಣ ಕಾರಂತ, ಗೇರುಕಟ್ಟೆ ಗಂಗಯ ಶೆಟ್ಟಿ, ಡಿ. ಮನೋಹರ ಕುಮಾರ್‌, ಬೆಳಾಲು ಲಕ್ಷ್ಮಣ ಗೌಡ, ನಿಡ್ಲೆ ಉಮೇಶ ಹೆಬ್ಟಾರ ಮೊದಲಾದವರು. ಒಂದು ವರ್ಷದ ಯಕ್ಷಶಿಕ್ಷಣದ ಬಳಿಕ ಕೇಂದ್ರದಿಂದ ಮರಳಿದ ಗೋಪಾಲ ಭಟ್ಟರು ಸ್ವರ್ನಾಡು ಮೇಳ ಸೇರುವುದರೊಂದಿಗೆ 1975ರಲ್ಲಿ ಅವರ ವೃತ್ತಿಬದುಕು ಆರಂಭವಾಯಿತು. ಸ್ವರ್ನಾಡು ಮೇಳದಲ್ಲಿ ಮೊದಲ ದಿನವದು. ಮುಖವರ್ಣಿಕೆ ಬರೆಯಲು ಹುಡುಗನಿಗೆ ತಿಳಿಯದು. “ಮಾಣಿ, ನಾನು ಮೇಕಪ್‌ ಮಾಡುತ್ತೇನೆ’ ಎಂದು ಅಲ್ಲಿದ್ದ ಕಲಾವಿದರೊಬ್ಬರು ಕರೆದರು. ದೇವೇಂದ್ರನ ಪಾತ್ರಕ್ಕೆ ಬಣ್ಣ ಮಾಡಿಕೊಳ್ಳುತ್ತಿದ್ದ ಅವರು ತಮ್ಮ ಕೈಯಲ್ಲಿದ್ದ ಬಣ್ಣವನ್ನು ಹುಡುಗನ ಮುಖಕ್ಕೆ ಒರೆಸಿ, “ದೇವತೆಬಲ’ಕ್ಕೆ ಸಿದ್ಧಗೊಳಿಸಿದರು. ಆ ಕಲಾವಿದ ಯಾರೆಂದು ಕೇಳುತ್ತೀರಾ – ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟರು!

ಮರುವರ್ಷ ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟರು ಕಟೀಲು ಮೇಳಕ್ಕೆ ಹೋದರು. ಕಟೀಲು ಎರಡು ಮೇಳವಾಗಿ ವಿಸ್ತರಿಸಿದ್ದರಿಂದ ಗೋಪಾಲ ಭಟ್ಟರಿಗೂ ಬಲಿಪ ನಾರಾಯಣ ಭಾಗವತರಿದ್ದ “ಕಟೀಲು-ಎರಡನೆಯ ಮೇಳ’ದಲ್ಲಿ ಸೇರುವುದಕ್ಕೆ ಅವಕಾಶವಾಯಿತು. ನಾಲ್ಕು ಮಂದಿ “ಕೋಡಂಗಿ ಹುಡುಗ’ರಲ್ಲಿ ಇವರೂ ಒಬ್ಬರಾದರು. ಹಾಗೆ ಎರಡು ವರ್ಷ ಕಳೆಯಿತು. ಮತ್ತೆರಡು ವರ್ಷ “ಬಾಲಗೋಪಾಲ’ ಕುಣಿದರು. ಮುಖ್ಯ ಸ್ತ್ರೀವೇಷವನ್ನೂ ಮಾಡಿದರು. ಪೂರ್ವರಂಗದ ಕೊನೆಯ ಹಂತದ ಕಸೆ (ಪೀಠಿಕೆ) ಸ್ತ್ರೀ ವೇಷಧಾರಿಯಾಗಿರುವಾಗಲೇ ಎರಡನೆಯ ಸ್ಥಾನದ ಪುಂಡು ವೇಷ ಗಳಿಗೆ ಸಿದ್ಧರಾದರು. ಹಾಗೆ, ಬಲಿಪರ ಮೇಳದಲ್ಲಿ 6 ವರ್ಷಗಳ ಮೊದಲ ಹಂತದ ತಿರುಗಾಟ ನಡೆಸಿದ ಬಳಿಕ ಮುಂದೆ, ಇರಾ ಗೋಪಾಲಕೃಷ್ಣ ಕುಂಡೆಚ್ಚರು ಭಾಗವತರಾಗಿದ್ದ “ಕಟೀಲು- ಒಂದನೆಯ ಮೇಳ’ಕ್ಕೆ  ಗೋಪಾಲ ಭಟ್ಟರ “ಮೇಳದ ಪೆಟ್ಟಿಗೆ’ ವರ್ಗಾವಣೆಯಾಯಿತು. ಅಲ್ಲಿ ಐದು ವರ್ಷ ಇದ್ದರು. ಪುಂಡುವೇಷಗಳಲ್ಲದೆ, ಸ್ತ್ರೀವೇಷ, ಹಾಸ್ಯವೇಷಗಳನ್ನೂ ಮಾಡಿ ಅನುಭವವನ್ನು ಹಿಗ್ಗಿಸಿಕೊಂಡರು. ನಿಡ್ಲೆ ನರಸಿಂಹ ಭಟ್ಟ, ಅಡೂರು ಸುಂದರ ರಾವ್‌, ಕಾಸರಗೋಡು ವೆಂಕಟರಮಣ ಮುಂತಾದವರ ಚೆಂಡೆ-ಮದ್ದಲೆ ನುಡಿತಕ್ಕೆ ಹೆಜ್ಜೆ ಹಾಕುತ್ತ, ಉರ್ವ ಅಂಬು, ಬಣ್ಣದ ಕುಟ್ಯಪ್ಪು, ಕೇದಗಡಿ ಗುಡ್ಡಪ್ಪ ಗೌಡ, ಬಣ್ಣದ ಕುಂಞಿಕಣ್ಣ – ಕುಂಞಿರಾಮ, ಪುತ್ತೂರು ಕೃಷ್ಣ ಭಟ್ಟ ಮುಂತಾದ ಹಿರಿಯ ಕಲಾವಿದರನ್ನು ನಿಕಟವಾಗಿ ಗಮನಿಸುತ್ತ ಗೋಪಾಲ ಭಟ್ಟರು ಭಾಗವತರ ಮೆಚ್ಚುಗೆ ಗಳಿಸಿದರು. 

ಬಲಿಪ ಭಾಗವತರ “ಕಟೀಲು-ಎರಡನೆಯ ಮೇಳ’ದಲ್ಲಿ ಪ್ರಧಾನ ಪುಂಡುವೇಷಧಾರಿಯ ಸ್ಥಾನ ತೆರವಾದಾಗ ಯಜಮಾನ ಕಲ್ಲಾಡಿ ಶೆಟ್ಟರು ಗೋಪಾಲ ಭಟ್ಟರನ್ನು ಆ “ಜಾಗ’ಕ್ಕೆ ಆರಿಸಿದರು. ಎರಡನೆಯ ಬಾರಿಗೆ ಗೋಪಾಲ ಭಟ್ಟರು ಬಲಿಪ ನಾರಾಯಣ ಭಾಗವತರ ಮೇಳಕ್ಕೆ ಸೇರ್ಪಡೆಯಾದರು. ಸುಮಾರು ಆರು ವರ್ಷಗಳ ಕಾಲ ಬಲಿಪರ ನಿರ್ದೇಶನದಲ್ಲಿ ತೆಂಕುತಿಟ್ಟಿನ ಪ್ರಸಿದ್ಧ ಪುಂಡು ವೇಷಧಾರಿಯಾಗಿ ರೂಪುಗೊಂಡರು. ಗೋಪಾಲ ಭಟ್ಟರ ಅಶ್ವತ್ಥಾಮ- ಅಭಿಮನ್ಯುಗಳಂಥ ಪಾತ್ರಗಳಲ್ಲಿ ವೀರ-ರೌದ್ರಗಳು ವಿಜೃಂಭಿಸುವುದನ್ನು ಮತ್ತು ಆ ಪಾತ್ರಗಳಿಗುಚಿತವಾದ ತ್ವರಿತಗತಿಯ ಅರ್ಥಗಾರಿಕೆಯನ್ನು ಕಂಡವರಿಗೆ ಅವರು ಶಾಂತ-ಶೃಂಗಾರ ಭಾವಗಳನ್ನು ಹೇಗೆ ನಿರ್ವಹಿಸುತ್ತಾರೆ ಎಂದು ಅಚ್ಚರಿಯಾಗಬಹುದು. ಬಲಿಪರೇ ಬರೆದ ನವಗ್ರಹ ಮಹಾತ್ಮೆ ಎಂಬ ಪ್ರಸಂಗದಲ್ಲಿ ಗೋಪಾಲ ಭಟ್ಟರ “ಸೂರ್ಯ’ನನ್ನು ನೋಡಿದವರಿಗೆ ಅವರ ನಿಜ ಪ್ರತಿಭೆ ನೆನಪಾಗಬಹುದು. ಆಗ ಸಂಜ್ಞಾದೇವಿಯ ಪಾತ್ರ ಮಾಡುತ್ತಿದ್ದವರು, ಈಗ ನೆನಪಾಗಿ ಉಳಿದಿರುವ ಅಜೆಕಾರು ರಾಜೀವ ಶೆಟ್ಟರು. ಗೋಪಾಲ ಭಟ್ಟ ಮತ್ತು ರಾಜೀವ ಶೆಟ್ಟಿ ಜೋಡಿಯ ಶೃಂಗಾರ- ಲಾಸ್ಯ ಅಭಿವ್ಯಕ್ತಿಗಳಲ್ಲಿ ಪೌರಾಣಿಕ ಆವರಣದ ಘನತೆ ಇತ್ತು. ಗೋಪಾಲ ಭಟ್ಟರೇ ಹೇಳುವಂತೆ, ಮುಖದಲ್ಲಿ ಹಾಸ ಸೂಸುವ ವಿಷ್ಣುವಿನಂಥ ಪಾತ್ರಗಳ ಶಾಂತ ಭಾವಾಭಿವ್ಯಕ್ತಿಗೆ ಪ್ರೇರಣೆಯಾದವರು ಗುರು ಪಡ್ರೆ ಚಂದುರವರು. ವಾಚಿಕಾಭಿನಯದಲ್ಲಿ ಪಾತ್ರ ಗಾಂಭೀರ್ಯವನ್ನು ಕಾಯ್ದಿಡುವಲ್ಲಿ ಆದರ್ಶಪಥವಾದವರು ಅರುವ ನಾರಾಯಣ ಶೆಟ್ಟರು. 

ಮುಂದೆ, ಕುರಿಯ ಗಣಪತಿ ಶಾಸ್ತ್ರಿಗಳು ಭಾಗವತರಾಗಿದ್ದ “ಕಟೀಲು-ಮೂರನೆಯ ಮೇಳ’ಕ್ಕೆ ಸೇರ್ಪಡೆಯಾದರು. ಸುಮಾರು ಆರು ವರ್ಷದ ಬಳಿಕ ಮೇಳ ತೊರೆದು ಕೃಷಿಕರಾದರು. ಒಂದು ವರ್ಷ ಯಕ್ಷಗಾನದ ಸಂಪರ್ಕವೇ ಇಲ್ಲದಂತಿದ್ದವರಿಗೆ ಹವ್ಯಾಸಿ ತಂಡಗಳಿಂದ ಆಹ್ವಾನ ಬಂದು ಮತ್ತೆ ಮುಖಕ್ಕೆ ಬಣ್ಣ ಹಚ್ಚಲಾರಂಭಿಸಿದರು. ಹಲವು ಹವ್ಯಾಸಿ, ಅರೆಹವ್ಯಾಸಿ ತಂಡಗಳಲ್ಲಿ ಗೋಪಾಲ ಭಟ್ಟರು ಅಶ್ವತ್ಥಾಮನಾಗಿ, ಅಭಿಮನ್ಯುವಾಗಿ ಮತ್ತೆ ಮೆರೆಯತೊಡಗಿದರು. ಎಡನೀರು ಮೇಳದಲ್ಲಿ ಅತಿಥಿ ಕಲಾವಿದರಾಗಿಯೂ ಪಾಲ್ಗೊಂಡರು.

ದಿಲೀಪ ಸುವರ್ಣ ಎಂಬವರು ಸುರತ್ಕಲ್‌ ಆಸುಪಾಸಿನ ದೇವಸ್ಥಾನಗಳ ಆಶ್ರಯದಲ್ಲಿ ಹವ್ಯಾಸಿ ಕಲಾವಿದರ ತಂಡ ಕಟ್ಟಿಕೊಂಡು ಅಲ್ಲಲ್ಲಿ ಆಟ ಮಾಡು ತ್ತಿದ್ದರು. ಈಗ ಪ್ರಸಿದ್ಧರಾಗಿರುವ ಶಶಿಕಾಂತ ಶೆಟ್ಟಿ ಕಾರ್ಕಳ, ದೀಪಕ್‌ ರಾವ್‌ ಪೇಜಾವರ, ಲಕ್ಷ್ಮಣ ಕುಮಾರ್‌ ಮರಕಡ ಮೊದಲಾದವರ ಆರಂಭಿಕ ಅಭ್ಯಾಸಕ್ಕೆ ಗರಡೀಮನೆಯಂತಿದ್ದ ಮೇಳವದು. ಸುವ್ಯವಸ್ಥಿತವೆಂದು ಹೇಳಿಕೊಳ್ಳದೆ, ಸಹೃದಯತೆಯ ಬಲದಿಂದಲೇ ತಂಡವನ್ನು ನಿರ್ವಹಿಸುತ್ತಿದ್ದ ದಿಲೀಪ ಸುವರ್ಣರು, “ನಾಡಿದ್ದು ಆಟಕ್ಕೆ ಬನ್ನಿ’ ಎಂದು ಕರೆದರೆ ಗೋಪಾಲ ಭಟ್ಟರು ಬೇರೆಲ್ಲ ಆಟಗಳನ್ನು ಬಿಟ್ಟು ಬಂದಾರು! “”ಈ ಮನುಷ್ಯನಿಗೆ ಯಕ್ಷಗಾನದ ಮೇಲೆ ಇರುವ ಉತ್ಕಟ ಅಭಿಮಾನ ನೋಡಿದರೆ, ಆಗುವುದಿಲ್ಲ ಎನ್ನುವುದಕ್ಕೆ ಮನಸು ಬರುವುದಿಲ್ಲ” ಎನ್ನುತ್ತ ಗೋಪಾಲ ಭಟ್ಟರು ಸಮಯಕ್ಕೆ ಸರಿಯಾಗಿ ದಿಲೀಪರ ಚೌಕಿಯಲ್ಲಿ ಹಾಜರ್‌! ಒಮ್ಮೆ ಭಸ್ಮಾಸುರ ಮೋಹಿನಿಯಲ್ಲಿ ಪಾರ್ವತಿಯ ಪಾತ್ರ ಮಾಡಲು ಯಾರೂ ಇಲ್ಲವಾಗಿ, “ಈಶ್ವರನೊಬ್ಬನೇ ರಂಗಸ್ಥಳಕ್ಕೆ ಹೋಗಲಿ. ಸ್ವಲ್ಪ ಎಡೆjಸ್ಟ್‌ ಮಾಡಿಕೊಳ್ಳಲಿ’ ಎಂದು ಮಾತುಕತೆಯಾಯಿತು. ವಾವರ ಮೋಕ್ಷದಲ್ಲಿ ಬೆಳಗಿನ ಜಾವದ ಅಯ್ಯಪ್ಪನ ಪಾತ್ರಕ್ಕೆಂದು ಬಂದು, ಚೌಕಿಯ ಅಂಡಿನ ರಾಶಿಯ ನಡುವೆ ಮಲಗಿದ್ದ ಗೋಪಾಲ ಭಟ್ಟರಿಗೆ ಇದು ಕೇಳಿಸಿ, ಇದ್ದಕ್ಕಿದ್ದಂತೆ ಎದ್ದು, “ತಲೆಬಿಸಿ ಬೇಡ, ಅದನ್ನು ನಾನು ಮಾಡುತ್ತೇನೆ’ ಎಂದು ಮುಖಕ್ಕೆ ಬಣ್ಣ ಹಚ್ಚಿ ಪಾರ್ವತಿಯಾಗಿ ರಂಗದ ಹಿಂದೆ ಸಿದ್ಧರಾಗಿ ಬಿಟ್ಟಿದ್ದರು!

ವೃತ್ತಿಪರ ರಂಗದಲ್ಲಿ ಸುಮಾರು ಎರಡೂವರೆ ದಶಕಗಳ ಅನುಭವವಿದ್ದರೂ ಹವ್ಯಾಸಿಗಳೊಂದಿಗೆ ವಿನಯದಿಂದ ವ್ಯವಹರಿಸುವ ಗೋಪಾಲ ಭಟ್ಟರು ಯಾವ ಸಂಘಟಕನಿಗೂ “ಭಾರ’ವೆನಿಸಿದವರಲ್ಲ. ಹಿಮ್ಮೇಳದವರೊಂದಿಗೆ, ಚೌಕಿಯ ಕೆಲಸದವ ರೊಂದಿಗೆ ಸದಾ ಸ್ನೇಹಶೀಲರಾಗಿರುವ ಗೋಪಾಲಣ್ಣ ಸಂಭಾವನೆಯ ಬಗ್ಗೆಯೂ ವಿಶೇಷ ಲೆಕ್ಕ ಇಟ್ಟವರಲ್ಲ. ಸಹಕಲಾವಿದರನ್ನು ಬೇಸರಪಡಿಸಿದ ದಾಖಲೆ ಇಲ್ಲ. ಇನ್ನೊಬ್ಬ ಕಲಾವಿದನ ಬಗ್ಗೆ ಕಮೆಂಟ್‌ ಮಾಡುವುದು ಅವರ ಜಾಯಮಾನಕ್ಕೆ ಸಲ್ಲದ್ದು. ಅನಿವಾರ್ಯವಾದರೆ, “ಅವನ ರಂಗನಡೆ ರಜ ಸರಿಯಿಲ್ಲೆ’ ಎಂದು ಮೆತ್ತಗೆ ಹೇಳಿಯಾರು. ಚೌಕಿಯಲ್ಲಿ ಅಷ್ಟೊಂದು ಸಜ್ಜನರಾಗಿರುವ ಈ ಕಲಾವಿದ ರಂಗಸ್ಥಳವೇರುತ್ತ ಹೇಗೆ ದೈತ್ಯನಾಗಿಬಿಡುತ್ತಾರೆ ಎಂಬುದು ಚೋದ್ಯ. 

“”ಮೊದಮೊದಲು ಗೋಪಾಲ ಭಟ್ರ ಚಂಡನ ಪಾತ್ರಕ್ಕೆ ಮುಂಡನಾಗಿ ಕಾಣಿಸಿಕೊಳ್ಳುವಾಗ ಅಕ್ಷರಶಃ ಕಂಪಿಸುತ್ತಿದ್ದೆ. ಈಗಲೂ ಅಷ್ಟೆ , ಮೊದಲ ಆರ್ಭಟ ದಲ್ಲಿಯೇ ರಂಗಸ್ಥಳವನ್ನು ಆವರಿಸಿಬಿಡುತ್ತಾರೆ. ಅವರ ಜತೆಗೆ ವೇಷವನ್ನು “ಮೇಲೆ ಹಾಕುವುದು’ ಇವತ್ತಿಗೂ ನನಗೊಂದು ಸವಾಲು” ಎಂದು ಮುಕ್ತಮನಸ್ಸಿನಲ್ಲಿ ಹೇಳುತ್ತಾರೆ ಗೋಪಾಲ ಭಟ್ಟರಿಗಿಂತ ಕಿರಿಯ ಪುಂಡು ವೇಷಧಾರಿಯಾಗಿರುವ ಅಮ್ಮುಂಜೆ ಮೋಹನ.

ಗೋಪಾಲ ಭಟ್ಟರದ್ದು ಅಪ್ಪಟ ಯಕ್ಷಗಾನೀಯ ವಾದ ವೇಷ. ಮಿತಿಯಿಲ್ಲದ ಕುಣಿತವಿಲ್ಲ; ಅಭಿನಯ ದಲ್ಲಿ ಅತಿ ಇಲ್ಲ. ಹೇಳಿಕೇಳಿ, ಬಲಿಪ ಭಾಗವತರ ಭಾಗವತಿಕೆಗೆ ವೇಷ ಮಾಡಿದ ಕಲಾವಿದನಲ್ಲವೆ? ಬಾಕಿಮಾರು ಗದ್ದೆಯಲ್ಲಿ ಅಕ್ಕಿಹೊಟ್ಟು ಹರಡಿದ ಕಟೀಲಿನ ಮೂರು ಮೇಳಗಳ ರಂಗಸ್ಥಳಗಳಲ್ಲಿ ಮುಂಡ್ಕೂರು ಕುಟ್ಟಿ ಶೆಟ್ಟಿ, ಗುಂಡಿಮಜಲು ಗೋಪಾಲ ಭಟ್ಟ , ರುಸ್ತುಂ ನಾರಾಯಣ ಮಣಿಯಾಣಿಯಂಥವರು “ಹಾರಿಸಿದ ಹುಡಿ’ ಯಕ್ಷಗಾನಾಕಾಶವನ್ನು ಚುಕ್ಕೆಗಳಾಗಿ ಅಲಂಕರಿಸಿದೆ! 58ರ ಹರೆಯದ ಗೋಪಾಲ ಭಟ್ಟರು ಇವತ್ತು ರಂಗ ಪ್ರವೇಶ ಮಾಡಿದಾಗಲೂ “ಬಾಕಿಮಾರು ಗದ್ದೆಯ ರಂಗಸ್ಥಳದ ಹೊಂತಕಾರಿ’ಗಳು ಮೆರೆದಾಡಿದ ಆ ದಿನ ಗಳು ಕಣ್ಣೆದುರು ಮಿಂಚಿ ರೋಮಾಂಚವಾಗುತ್ತದೆ. 

ನಾಳೆ (ಆ. 5) ಗುಂಡಿಮಜಲು ಗೋಪಾಲಕೃಷ್ಣ ಭಟ್ಟರಿಗೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪೇಜಾವರ ಯತಿದ್ವಯರ ದಿವ್ಯೋಪಸ್ಥಿತಿ ಯಲ್ಲಿ, “ಸರ್ಪಂಗಳ ಸುಬ್ರಹ್ಮಣ್ಯ ಭಟ್‌ ಸ್ಮಾರಕ ಯಕ್ಷಗಾನ ಸಾಧಕ ಪ್ರಶಸ್ತಿ’ ಪ್ರದಾನ ಮಾಡಲಾಗುತ್ತಿದೆ. 

ದಿವೋದಾಸ

ಟಾಪ್ ನ್ಯೂಸ್

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.