
ರಂಜಿಸಿದ ಮಾಗಧ – ಸುಧನ್ವ
Team Udayavani, Aug 4, 2017, 1:30 PM IST

ಉಡುಪಿಯ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಅಭಿಮಾನಿ ಶಿಷ್ಯ ವೃಂದದ ಗೋವಿಂದ ರಾಜ್ ಬಳಗದವರು ಇತ್ತೀಚೆಗೆ ಉಡುಪಿಯ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಏರ್ಪಡಿಸಿದ ಬಡಗುತಿಟ್ಟಿನ ಯಕ್ಷಗಾನ ಮಾಗಧ ಮತ್ತು ಸುಧನ್ವ ಪ್ರೇಕ್ಷಕರ ಮನರಂಜಿಸಿತು. ಮೊದಲ ಪ್ರಸಂಗ ಮಾಗಧ ವಧೆಯಲ್ಲಿ ಬಂದನೋ ದೇವರದೇವ ಪದ್ಯಕ್ಕೆ ತೀರ್ಥಹಳ್ಳಿ ಗೋಪಾಲಾಚಾರ್ಯರ ಕೃಷ್ಣನ ಪಾತ್ರದಲ್ಲಿ ಅವರ ಹಿರಿತನದ ಅನುಭವ, ರಂಗಶಿಸ್ತು, ಹಿತಮಿತವಾದ ಮಾತುಗಾರಿಕೆ, ಅಚ್ಚುಕಟ್ಟಾದ ಪಾತ್ರ ನಿರ್ವಹಣೆಯು ಸೊಗಸಾಗಿ ಮೂಡಿಬಂತು.
ಸತ್ರಾಜಿತನ ಕುವರಿ ಸತ್ಯಭಾಮೆಯ (ಶಶಿಕಾಂತ ಶೆಟ್ಟಿ) ನರ್ತನ, ಭಾವಾಭಿನಯವು ಆಕರ್ಷಕವಾಗಿತ್ತು. ಮಾಗಧನ ವಧೆಗಾಗಿ ಹೊರಟ ಪತಿ ಶ್ರೀಕೃಷ್ಣನನ್ನು ಪತ್ನಿ ಸತ್ಯಭಾಮೆ ಹಂಗಿಸುವ ಸನ್ನಿವೇಶದಲ್ಲಿ ಎಲೆ ಮುರಾಂತಕ ನಿನ್ನ ಮಹಿಮೆಯ ಹಾಡಿಗೆ ಕೃಷ್ಣ ಹಾಗೂ ಭಾಮೆಯರ ಜೋಡಿ ನರ್ತನ ಮನಕ್ಕೆ ಮುದ ನೀಡಿತು.
ಕೊಂಡದಕುಳಿ ರಾಮಚಂದ್ರ ಹೆಗಡೆಯವರು ಮಾಗಧನಾಗಿ ತಮ್ಮ ಎಂದಿನ ಗತ್ತು, ಗಾಂಭೀರ್ಯದ ಪ್ರವೇಶದಲ್ಲಿ ಖುಷಿ ನೀಡಿದರು. ಮಾಗಧನ ವಧೆಗಾಗಿ ಭೀಮ, ಕೃಷ್ಣಾರ್ಜುನರು ಮಾರು ವೇಷದಲ್ಲಿ ಬಂದ ಸಂದರ್ಭದಲ್ಲಿ ಕೊಂಡದಕುಳಿ ಅವರು ಹಾಸ್ಯ, ವೀರ, ಭಯಾನಕ, ಅದ್ಭುತ ರಸಗಳನ್ನು ಅದ್ಭುತವಾಗಿಯೇ ಪ್ರದರ್ಶಿಸಿದ್ದು, ನವರಸ ನಾಯಕನೆಂಬುದನ್ನು ಸಾಬೀತುಪಡಿಸಿದರು. ಭೀಮಾರ್ಜುನರಾಗಿ ಪ್ರಸನ್ನ ಶೆಟ್ಟಿಗಾರ್, ನರಸಿಂಹ ಗಾಂವ್ಕರ್ ಸಹಕರಿಸಿದ್ದರು.
ಎರಡನೇ ಪ್ರಸಂಗ ಭಕ್ತ ಸುಧನ್ವದಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕೃತ ಸೂರಿಕುಮೇರಿ ಕೆ. ಗೋವಿಂದ ಭಟ್ಟರು ಅರ್ಜುನನಾಗಿ, ಬಡಗಿನ ಹಿರಿಯ ಕಲಾವಿದ ಬಳ್ಕೂರು ಕೃಷ್ಣಯಾಜಿ ಸುಧನ್ವನಾಗಿ ಕಾಣಿಸಿಕೊಂಡರು. ಎಷ್ಟು ವರ್ಷಗಳ ನಿರೀಕ್ಷೆ ಇದು, ಇಷ್ಟು ವರ್ಷವಾದರೂ ಆ ಮುಖದಲ್ಲಿರುವ ತೇಜಸ್ಸು ಮಾಸಿಲ್ಲ ಎಂಬ ಸುಧನ್ವನ ಸಮಯೋಚಿತ ಮಾತುಗಳಲ್ಲಿ ಈರ್ವರು ಮೇರು ಕಲಾವಿದರ ಸಂಗಮದ ಬಗ್ಗೆ ಪ್ರೇಕ್ಷಕರು ಕರತಾಡನದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.
ಸೃಷ್ಟಿಗರ್ಜುನ ಎಂಬವನೇ ನೀನು ಹಾಡಿಗೆ ಸುಧನ್ವನ ನಾಟ್ಯಾಭಿನಯವನ್ನು ಪ್ರಚಂಡ ಕರತಾಡನದಿಂದ ಸ್ವಾಗತಿಸಿದರು. ಹುಡುಗಾ ನಿನ್ನ ಬೆಡಗಿನ ನುಡಿಯ ಕಟ್ಟಿಡು ಹಾಡಿಗೆ ಗೋವಿಂದ ಭಟ್ಟರ ಎಂದಿನ ಗಾಂಭೀರ್ಯವು ನಿಜಕ್ಕೂ ಪ್ರಶಂಸನೀಯ.
ಸ್ತ್ರೀ ಪಾತ್ರಧಾರಿಯಾದ ಶಶಿಕಾಂತ್ ಶೆಟ್ಟರು ಕೃಷ್ಣನ ಪಾತ್ರವನ್ನು ಸೊಗಸಾಗಿಯೇ ನಿರ್ವಹಿಸಿದರು. “ಒಂದೇ ವಸ್ತುವಿಗಾಗಿ ಮಕ್ಕಳು ಜಗಳವಾಡಿದರೆ ತಾಯಿಯಾದವಳಿಗೆ ಹೇಗೆ ಸಂಕಷ್ಟವೋ ಅದೇ ರೀತಿ ಭಕ್ತರಾದ ನೀವಿಬ್ಬರು ಯುದ್ಧಕ್ಕೆ ನಿಂತಿರುವುದು ನನಗೆ ಕಷ್ಟ ತಂದಿದೆ’ ಎಂಬ ಕೃಷ್ಣನ ಮಾತಿಗೆ “ಜಯ ಅವನಿಗೆ ಕೊಡು, ಸಾಯುಜ್ಯವನ್ನು ನನಗೆ ಕರುಣಿಸು ದೇವಾ’ ಎಂದ ಸುಧನ್ವನ ಮಾತು ಅರ್ಥಪೂರ್ಣವಾಗಿತ್ತು.
ರಾಘವೇಂದ್ರ ಆಚಾರ್ಯ ಜನ್ಸಾಲೆ ಹಾಗೂ ಪುತ್ತಿಗೆ ರಘುರಾಮ ಹೊಳ್ಳರ ಭಾಗವತಿಕೆ ಕರ್ಣಾನಂದಕರವಾಗಿತ್ತು. ಚೆಂಡೆಯಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ರಾಮಕೃಷ್ಣ ಮಂದಾರ್ತಿ, ಹಾಗೂ ಮದ್ದಳೆಯಲ್ಲಿ ಸುನಿಲ್ ಭಂಡಾರಿ, ಕೃಷ್ಣಪ್ರಸಾದ್ ಉಳಿತ್ತಾಯ ಉತ್ತಮವಾಗಿ ಸಹಕರಿಸಿದ್ದರು. ಕಾಸರಕೋಡು ಶ್ರೀàಧರ ಭಟ್ಟರ ನವಿರಾದ ಹಾಸ್ಯಕ್ಕೆ ಪ್ರೇಕ್ಷಕರ ಸ್ಪಂದನೆ ಉತ್ತಮವಾಗಿತ್ತು.
ಪ್ರದರ್ಶನದ ಸಂದರ್ಭದಲ್ಲಿ ಪ್ರೊ| ರಾಧಾಕೃಷ್ಣ ಆಚಾರ್ಯ ಮತ್ತು ಸೇಸು ದೇವಾಡಿಗ ಇವರನ್ನು ಸಮ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದ ಅದಮಾರು ಶ್ರೀಗಳು “ಸಂಜೆಯ ಹೊತ್ತು ದೂರದರ್ಶನದ ಧಾರಾವಾಹಿ ನೋಡುವ ಈ ಕಾಲಘಟ್ಟದಲ್ಲಿ ಸಭಾಂಗಣವು ತುಂಬಿದ್ದು, ಯಕ್ಷಗಾನ ಕಲೆಯ ಖ್ಯಾತಿಯು ಉಳಿದುಕೊಂಡಿರುವುದನ್ನು ಸಾಬೀತುಗೊಳಿದೆ’ ಎಂದರು.
ಎನ್. ರಾಮ ಭಟ್
ಟಾಪ್ ನ್ಯೂಸ್
