ಸಮತೋಲನದ ತೊಂದರೆ, ತಲೆ ಸುತ್ತುವಿಕೆ ಅನುಭವಿಸುತ್ತಿದ್ದೀರಾ?
ನಾವು ನಿಮಗೆ ಸಹಾಯ ಮಾಡಬಲ್ಲೆವು
Team Udayavani, May 21, 2023, 2:56 PM IST
ಮಲಗಿರುವಾಗ ಮತ್ತು ಹಠಾತ್ತನೆ ಎದ್ದು ನಿಂತಾಗ ಅಥವಾ ಫಕ್ಕನೆ ತಲೆ ಮೇಲೆತ್ತಿ ನೋಡಿದಾಗ ಯಾ ಬಾಗಿದಾಗ ತಲೆ ತಿರುಗಿದ ಅನುಭವ ನಮ್ಮಲ್ಲಿ ಅನೇಕರಿಗೆ ಆಗಿರುತ್ತದೆ. ಪ್ರತೀ ಬಾರಿಯೂ ಹೀಗಾದರೆ ಪರಿಹಾರ ಏನು? ಸಮತೋಲನ ಕಳೆದುಕೊಂಡ ಹಾಗೆ, ತಲೆ ಹಗುರವಾದ ಹಾಗೆ ಅಥವಾ ಇಡೀ ಕೋಣೆ ನಿಮ್ಮ ಸುತ್ತ ಸುತ್ತುತ್ತಿರುವ ಹಾಗೆ ಅನುಭವವಾದರೆ ಏನು ಮಾಡಬೇಕು? ಈ ಲಕ್ಷಣಗಳೆಲ್ಲ ಹಠಾತ್ತನೆ ಅನುಭವಕ್ಕೆ ಬಂದಾಗ ನೂರು ಪ್ರಶ್ನೆಗಳು ಮನಸ್ಸಿನಲ್ಲಿ ಉದ್ಭವಿಸುತ್ತವೆ.
ಏಕೆ ಹೀಗಾಗುತ್ತದೆ?
ತಲೆ ತಿರುಗುವಿಕೆಯು ವರ್ಟಿಗೊ, ಮೂರ್ಛೆ ತಪ್ಪುವುದು, ದೈಹಿಕ ಸಮತೋಲನ ಕಡಿಮೆಯಾಗಿರುವುದು ಅಥವಾ ಮೂರ್ಛೆ ರೋಗ/ ಸೆಳವಿನಿಂದ ಆಗಿರಬಹುದು. ವರ್ಟಿಗೊ ಎಂದರೆ ತಲೆ ತಿರುಗುವಿಕೆಯ ಒಂದು ವಿಧವಾಗಿದ್ದು, ಇಡೀ ಜಗತ್ತು ವೇಗವಾಗಿ ಸುತ್ತುತ್ತಿರುವ ಅನುಭವ ಉಂಟಾಗುತ್ತದೆ. ಇದರ ಇನ್ನಿತರ ಲಕ್ಷಣಗಳಲ್ಲಿ ದೇಹಭಂಗಿಗಳಲ್ಲಿ ಅಸ್ಥಿರತೆ, ಚಳಿ ಹಿಡಿಯುವುದು, ಹೊಟ್ಟೆ ತೊಳೆಸುವಿಕೆ ಮತ್ತು ವಾಂತಿ ಸೇರಿರುತ್ತವೆ. ಈ ಲಕ್ಷಣಗಳು ಕೆಲವು ಸೆಕೆಂಡುಗಳಿಂದ ತೊಡಗಿ ಕೆಲವು ದಿನಗಳ ವರೆಗೆ ಇರಬಹುದು ಮತ್ತು ಚಲಿಸಿದಾಗ ಇನ್ನಷ್ಟು ಉಲ್ಬಣಗೊಳ್ಳಬಹುದು. ನಮ್ಮ ಕಿವಿಯ ಒಳಭಾಗದಲ್ಲಿರುವ ವೆಸ್ಟಿಬ್ಯುಲಾರ್ ವ್ಯವಸ್ಥೆಯ ಕಾಯಿಲೆಗಳಿಂದ ಸಾಮಾನ್ಯವಾಗಿ ವರ್ಟಿಗೊ ಉಂಟಾಗುತ್ತದೆ. ಕಿವಿಯ ಒಳಭಾಗದಲ್ಲಿರುವ ವೆಸ್ಟಿಬ್ಯುಲಾರ್ ವ್ಯವಸ್ಥೆಯು ನಮ್ಮ ದೇಹಕ್ಕೆ ಸಂವಾದಿಯಾಗಿ ತಲೆಯ ಸ್ಥಾನವನ್ನು ಗ್ರಹಿಸಲು ಮಿದುಳಿಗೆ ಸಹಾಯ ಮಾಡುತ್ತದೆ ಮತ್ತು ದೇಹದ ಭಂಗಿಯನ್ನು ನಿಭಾಯಿಸುವುದಕ್ಕೆ ಮಿದುಳಿನ ಜತೆಗೆ ಸಂಯೋಜಿತವಾಗಿ ಕಾರ್ಯನಿರ್ವಹಿಸುತ್ತದೆ. ವೆಸ್ಟಿಬ್ಯುಲಾರ್ ನರ ಅಥವಾ ದೈಹಿಕ ಸಮತೋಲನಕ್ಕೆ ಸಂಬಂಧಿಸಿದ ಮಿದುಳಿನ ಭಾಗಗಳಿಗೆ ಸಂಬಂಧಿಸಿದ ಅನಾರೋಗ್ಯಗಳಿಂದ ವರ್ಟಿಗೊ ಉಂಟಾಗುತ್ತದೆ.
ಇದಕ್ಕೆ ಏನು ಕಾರಣ? ಈ ಸಮಸ್ಯೆ ಎಷ್ಟು ದೊಡ್ಡದು?
ತಲೆ ತಿರುಗುವುದಕ್ಕೆ ಸಂಭಾವ್ಯ ಕಾರಣಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ದೇಹದ ಸಮತೋಲನ ವ್ಯವಸ್ಥೆಯ ಪ್ರಾಥಮಿಕ ಅರಿವು ಹೊಂದಿರುವುದು ಅಗತ್ಯ. ಒಳಗಿವಿ ಮತ್ತು ಅದನ್ನು ಸಂಪರ್ಕಿಸುವ ನರಗಳಿಗೆ ಸಂಬಂಧಿಸಿದ ಅನಾರೋಗ್ಯಗಳು ಗಂಭೀರವೇನೂ ಅಲ್ಲ ಎಂಬ ತಪ್ಪು ಕಲ್ಪನೆ ಜನರಲ್ಲಿದೆ.
ಇದಕ್ಕೆ ಸಾಮಾನ್ಯವಾಗಿ ಆಡಿಯಾಲಜಿಸ್ಟ್ಗಳು ಕೌಶಲ, ವೆಸ್ಟಿಬ್ಯುಲಾರ್ ಪುನರ್ಸ್ಥಾಪನೆ ವ್ಯಾಯಾಮಗಳು ಮತ್ತು ಆಹಾರ ಪದ್ಧತಿಯಲ್ಲಿ ಬದಲಾವಣೆಗಳ ಮೂಲಕ ಚಿಕಿತ್ಸೆ ನೀಡುತ್ತಾರೆ. ಕೆಲವೊಮ್ಮೆ ಇದಕ್ಕೆ ಕಾರಣಗಳು ಹೆಚ್ಚು ಗಂಭೀರ, ಪ್ರಾಣಾಪಾಯಕಾರಿ ಅಥವಾ ಗಂಭೀರವಲ್ಲದೆ ಇರಬಹುದು. ಪರಿಣತ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ. ಅದೃಷ್ಟವಶಾತ್ ಬಹುತೇಕ ವಿಧದ ತಲೆ ತಿರುಗುವಿಕೆಗಳಿಗೆ ಪರಿಣಾಮಕಾರಿ ಚಿಕಿತ್ಸೆಗಳು ಲಭ್ಯವಿವೆ. ಮಿದುಳಿನ ಸೋಂಕು, ತೀವ್ರ ತರಹದ ತಲೆನೋವು, ಸತತ ವಾಂತಿ ಮತ್ತು ದೈಹಿಕ ಅಸಮತೋಲನ, ವಸ್ತುಗಳು ಎರಡೆರಡಾಗಿ ಕಾಣಿಸುವುದು, ದೃಷ್ಟಿ ಸಮಸ್ಯೆಗಳು, ಶ್ರವಣ ಶಕ್ತಿ ಹಠಾತ್ ನಷ್ಟವಾಗುವುದು ಅಥವಾ ಜೋಮು ಹಿಡಿಯುವಂತಹ ಲಕ್ವಾದ ಪ್ರಾಥಮಿಕ ಲಕ್ಷಣಗಳಿದ್ದರೆ ತತ್ಕ್ಷಣ ವೈದ್ಯಕೀಯ ನೆರವು ಪಡೆಯಬೇಕು.
ಹೇಗೆ ಚಿಕಿತ್ಸೆ ನೀಡಬಹುದು?
ಬಿನೈನ್ ಪಾರೊಕ್ಸಿಸ್ಮಲ್ ಪೊಸಿಶನಲ್ ವರ್ಟಿಗೊ (ಬಿಬಿಪಿವಿ), ಮೆನಿಯರ್ ಡಿಸೀಸ್, ವೆಸ್ಟಿಬ್ಯುಲಾರ್ ನ್ಯೂರೈಟಿಸ್ ಮತ್ತು ಲ್ಯಾಬಿರಿಂಥೈಟಿಸ್ ಸಹಿತ ವೆಸ್ಟಿಬ್ಯುಲಾರ್ ತೊಂದರೆಗಳು ವರ್ಟಿಗೊಕ್ಕೆ ಸಾಮಾನ್ಯ ಕಾರಣಗಳಾಗಿರುತ್ತವೆ. ವರ್ಟಿಗೊದ ಪರಿಣಾಮವು ಅದಕ್ಕೆ ಕಾರಣವಾದ ಅಂಶವನ್ನು ಆಧರಿಸಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ. ಒಳಗಿವಿಯ ಕೆಲವು ಹರಳುಗಳು ಸ್ಥಾನಪಲ್ಲಟಗೊಂಡಾಗ ಅಥವಾ ಒಳಗಿವಿಯಲ್ಲಿ ಯಾವುದೇ ದ್ರವಾಂಶ ಶೇಖರವಾದಾಗ ಅದರಿಂದ ಕಿವಿಗಳಲ್ಲಿ ರಿಂಗಿಣಿಸುವ ಸದ್ದು ಮತ್ತು ಶ್ರವಣ ಸಾಮರ್ಥ್ಯ ನಷ್ಟದ ಜತೆಗೆ ವರ್ಟಿಗೊ ಕಂತುಗಳು ಆರಂಭವಾಗುತ್ತವೆ. ಇದು ಕೆಲವು ವೈರಾಣು ಸೋಂಕಿನಿಂದ ಅಥವಾ ಉರಿಯೂತ ಅಥವಾ ದೇಹವು ತನ್ನದೇ ಜೀವಕೋಶಗಳ ವಿರುದ್ಧ ಕೆಲಸ ಮಾಡುವುದರಿಂದ ಆಗಿರಬಹುದು ಅಥವಾ ಯಾವುದೋ ವಂಶವಾಹಿ ಅಂಶವೂ ಇದನ್ನು ಉಂಟು ಮಾಡಬಹುದು. ಕೆಲವು ಅನಾರೋಗ್ಯಗಳಲ್ಲಿ ಕಿರಿಕಿರಿ ಉಂಟು ಮಾಡುವ ಕಿವಿಯೊಳಗೆ ರಿಂಗಣಿಸಿದಂತಹ ಸದ್ದಿನ ಜತೆಗೆ ಶ್ರವಣ ಶಕ್ತಿ ನಷ್ಟವೂ ಸಹ ಲಕ್ಷಣವಾಗಿರಬಹುದು. ಸಾಮಾನ್ಯವಾಗಿ ಇದನ್ನು ಲಘು ಸ್ವರೂಪದ ದೈಹಿಕ ಸಮಸ್ಯೆಯಾಗಿ ಪರಿಭಾವಿಸಲಾಗುತ್ತದೆಯಾದರೂ ಇದರ ಮನೋಶಾಸ್ತ್ರೀಯ ಪರಿಣಾಮಗಳು ವ್ಯಕ್ತಿಯ ಜೀವನ ಶೈಲಿ ಮತ್ತು ವರ್ತನೆಯ ಮೇಲೆ ಗಂಭೀರ ಸ್ವರೂಪದ ಬದಲಾವಣೆಗಳಿಗೆ ಕಾರಣವಾಗಬಹುದು. ಇದರಿಂದ ಪೂರ್ತಿ ಗುಣ ಹೊಂದಲು ಕೆಲವು ವಾರಗಳು ತಗಲಬಹುದು ಮತ್ತು ಇದಕ್ಕಾಗಿ ಸಮತೋಲನ ವ್ಯವಸ್ಥೆಯನ್ನು ಪುನರ್ ತರಬೇತುಗೊಳಿಸುವ ವೆಸ್ಟಿಬ್ಯುಲಾರ್ ಪುನರ್ಸ್ಥಾಪನೆ ಎಂಬ ದೈಹಿಕ ಚಿಕಿತ್ಸೆ ನೀಡಬೇಕಾಗುತ್ತದೆ. ಇತ್ತೀಚೆಗಿನ ವರ್ಷಗಳಲ್ಲಿ ಈ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಅವರಲ್ಲಿ ಮೈಗ್ರೇನ್ ಸಂಬಂಧಿ ತಲೆ ತಿರುಗುವ ಸಮಸ್ಯೆ ಇರುವುದು ಕಂಡುಬಂದಿದೆ. ರೋಗಿಗಳು ಸಾಮಾನ್ಯವಾಗಿ ಮೈಗ್ರೇನ್ ತಲೆನೋವಿನ ಇತಿಹಾಸ ಹೊಂದಿರುತ್ತಾರೆ; ಲಕ್ಷಣಗಳಲ್ಲಿ ಸಾಮಾನ್ಯವಾಗಿ ಚಲನೆ ಮತ್ತು ದೃಷ್ಟಿಗೆ ಸಂಬಂಧಿಸಿದ ಪ್ರಚೋದನೆಯಿಂದ ಉಂಟಾಗುವ ದೀರ್ಘಕಾಲೀನ ತಲೆತಿರುಗುವಿಕೆ ಒಳಗೊಂಡಿರುತ್ತವೆ. ರೋಗಿಳು ಸದ್ದುಗಳಿಂದ ಪ್ರಚೋದನೆಯನ್ನು ಅನುಭವಿಸುತ್ತಾರೆ. ಇತರ ರೋಗಿಗಳಿಗೆ ಉಪಯೋಗಿಸುವ ಔಷಧಗಳ ಜತೆಗೆ ಇಂತಹ ಪ್ರಚೋದನೆಗಳಿಂದ ದೂರ ಇರುವುದು ಆರಂಭಿಕ ಚಿಕಿತ್ಸೆಯಾಗಿದೆ. ಅನೇಕ ರೋಗಿಗಳಿಗೆ ಆಹಾರ ಪದ್ಧತಿ ಬದಲಾವಣೆಯಿಂದಲೂ ಪ್ರಯೋಜನವಾಗುತ್ತದೆ.
-ಮುಂದಿನ ವಾರಕ್ಕೆ
-ಡಾ| ಶುಭಗಂಗಾ ಡಿ.
ಅಸಿಸ್ಟೆಂಟ್ ಪ್ರೊಫೆಸರ್,
ಸ್ಪೀಚ್ ಆ್ಯಂಡ್ ಹಿಯರಿಂಗ್ ವಿಭಾಗ
ಎಂಸಿಎಚ್ಪಿ, ಮಾಹೆ, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ
Neha ಹತ್ಯೆ ಪ್ರಕರಣ; ಎನ್ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್ಪಿ ಆಗ್ರಹ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?