ಖುಷಿ ಪಡುವ ಕ್ಷಣಗಳು ಬೇಗ ಬರಲಿ..
Team Udayavani, Sep 15, 2020, 6:34 PM IST
ಹೇಗಿದ್ದೀ ಗೆಳೆಯ? ಬೆಳ್ಳನೆಯ ಆಗಸಕ್ಕೆ ಇದ್ದಕ್ಕಿದ್ದಂತೆ ಕಾರ್ಮೋಡಕವಿದು ಕಂಗಾಲಾಗುವಂತೆ ಆಗಿದೆ ನಮ್ಮ ಸ್ಥಿತಿ ಅಲ್ವಾ? ಪರೀಕ್ಷೆಗಳು ಅಂತೂ ಮುಗಿದವು. ಇನ್ನು ಓದಬೇಕೆಂಬ ರಗಳೆಯಿಲ್ಲ. ಇನ್ನೇನಿದ್ರೂ ರಿಸಲ್ಟ್ ಬರುವವರೆಗೂ ರಜದ ಮಜಾ. ಒಂದಷ್ಟು ದಿನ ಆರಾಮಾಗಿ ಇರೋಣ ಅಂತಊರಿಗೆ ಬಂದದ್ದಾಯ್ತು. ವಿಶೇಷವೇನು ಗೊತ್ತೇ? ಕೋವಿಡ್ ಹಳ್ಳಿಯ ಜನರನ್ನೂ ಹೆದರಿಸಿದೆ.
ಜನ, ಖುಷಿಯಿಒಂದ ಮಾತಾಡಲೂ ಹಿಂಜರಿಯುತ್ತಿದ್ದಾರೆ. ಸಿಟಿಯಿಂದ ಬಂದವರಿಗೆ ಏನಾದರೂ ಸಮಸ್ಯೆ ಇರಬಹುದು ಎಂಬುದು ಅವರ ಅನುಮಾನ. ಸದ್ಯದ ಪರಿಸ್ಥಿತಿಯಲ್ಲಿ ಆರೋಗ್ಯವೇ ಭಾಗ್ಯ. ಹೀಗಾಗಿ, ನಾವೂ ಮನೆಯಿಂದ ಹೊರಗೆ ಬರ್ತಿಲ್ಲ, ಸಿಟೀಲಿ ನೀನು ಹೇಗಿದ್ದೀಯೋ ಅನ್ನುವ ಯೋಚನೆ ಆಗಾಗಕಾಡುತ್ತೆ. ಇಡೀ ದಿನ ಮನೆಯೊಳಗೇಕೂತು ಏನು ಮಾಡಲಿ? ಹಾಗಾಗಿಯೇ ಏನಾದರೂ ಕೆಲಸ ಇದೆಯಾ ಎಂದು ಹುಡುಕಲು ನಿಂತೆ. ಸದ್ಯಕ್ಕೆ ಹಿತ್ತಲಿನಕೈತೋಟದಕೆಲಸವನ್ನುಆಸಕ್ತಿಯಿಂದ ಮಾಡುತ್ತಿದ್ದೇನೆ. ನಿನ್ನೆ ಮಲ್ಲಿಗೆ ಅರಳಿದಾಗ ಅದರ ಸುವಾಸನೆ ನಿನ್ನನ್ನು ನೆನಪಿಸಿತು. ನಿನಗಿಷ್ಟದ ತಿಂಗಳವರೆಯನ್ನು ಬಿಡಿಸುವಾಗ, ನೀನು ಜೊತೆಯಿದ್ದಂತೆ ಹಿತವಾದ ಭಾವ ಮೂಡಿತು. ನಿನ್ನನ್ನು ನೋಡಬೇಕು, ಮಾತನಾಡಿಸಬೇಕು ಅನ್ನಿಸಿದಾಗಲೆಲ್ಲ, ಮಾವಿನಮರದ ಎದುರಿಗೆ ನಿಲ್ಲುವೆನು.ಕೊಯ್ಲಿಗೆ ಸಿದ್ಧವಾಗುತ್ತಿರುವಕಾಯಿಯ ಜೊಂಪೆಗಳನ್ನು ನೋಡಿ ನಿಶಬ್ದವಾಗಿ ಮಾತನಾಡುವೆ. ಬಯಸಿದರೂ ಈಗ ನಿನ್ನನ್ನುಕಾಣಲಾಗದು. ಆದರೇನು?
ಕಣ್ಮುಚ್ಚಿದರೆ ಸಾಕು, ನಿನ್ನ ನಗುಮುಖ ಬಿಂಬದಂತೆಕಾಡುತ್ತದೆ. ಮೊನ್ನೆ ರಾತ್ರಿ ದೀಪ ಹಚ್ಚುವಾಗ ಮತ್ತೆ ನಿನ್ನದೇ ಚಿಂತೆ. ನಿನ್ನನ್ನುತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಇದಿಷ್ಟೂ ನನ್ನಕಥೆ. ಇನ್ನೀಗ, ಒಳ್ಳೆಯದಿನಗಳಿಗಾಗಿ ಕಾಯುವುದರ ಹೊರತಾಗಿ ಬೇರೆ ದಾರಿಯೇ ಇಲ್ಲ. ಈ ಕ್ಷಣದಲ್ಲಿ ಅನಿಸಿದ್ದು: ಹೀಗೆ ಕಾಯುವುದರಲ್ಲೂ ಖುಷಿಯಿದೆ, ಅಲ್ಲವಾ? ನಿನ್ನವಳು.
– ರಾಜಿ, ಬೆಂಗಳೂರು.