ನೀನೆಷ್ಟು ಹುಡುಕಿದರೂ ನಾನು ಸಿಗುವುದಿಲ್ಲ…
Team Udayavani, May 14, 2019, 6:00 AM IST
ಒಂದು ತಿಳಿಸಂಜೆ ಪಾರಿಜಾತದಂತೆ ಆಕಸ್ಮಿಕವಾಗಿ ಕಂಡವಳು ನೀನು. ಮೊದಲ ನೋಟದಲ್ಲೇ ನನ್ನ ಮನದಲ್ಲಿ ಪ್ರೀತಿಯ ಅಮೃತಧಾರೆಯನ್ನು ಹರಿಸಿಬಿಟ್ಟೆ. ಮೊದಲೊಂದು ಸಲ ನಿನ್ನನ್ನು ಎಲ್ಲೋ ನೋಡಿದ್ದೆನಾದರೂ, ನೀನು ನನ್ನ ಜೂನಿಯರ್ ಅಂತ ಗೊತ್ತಾಗಿದ್ದು ಮಾತ್ರ ಕಾಲೇಜು ಮುಗಿಯಲು ಇನ್ನೇನು ಮೂವತ್ತು ದಿನ ಇದೆ ಅನ್ನುವಾಗ.
ಕೊನೆಯ ಆ ಒಂದು ತಿಂಗಳು ಹೇಗಿತ್ತು ಗೊತ್ತಾ? ಆಗಷ್ಟೇ ನನ್ನ ಮನದಲ್ಲಿ ಪ್ರೀತಿಯನ್ನು ಚಿಗುರೊಡೆಸಿದ್ದೆ ನೀನು. ಕುಂತರೂ- ನಿಂತರೂ ನಿನ್ನದೇ ಧ್ಯಾನ. ಮನೆಯಲ್ಲಿ ಜಾತಿ-ಗೋತ್ರದ ಕಟ್ಟುಪಾಡು ಇದೆ ಅಂತ ಗೊತ್ತಿದ್ದರೂ, ನಿನ್ನ ಸ್ನೇಹ ಪಡೆದು, ನಿನ್ನವನಾಗಲೇ ಬೇಕು ಅಂತ ಹಠಕ್ಕೆ ಬಿದ್ದಿದ್ದೆ. ಆದರೆ, ನಿನ್ನನ್ನು ಮಾತನಾಡಿಸುವ ಧೈರ್ಯ ಮಾತ್ರ ಇರಲಿಲ್ಲ.
ಈ ಚಡಪಡಿಕೆಯಲ್ಲೇ ದಿನಗಳು ಕಳೆದವು. ಪರೀಕ್ಷೆಗಳೂ ಮುಗಿದವು. “ಹೇಡಿ ನೀನು’ ಅಂತ ನನಗೆ ನಾನೇ ಬೈದುಕೊಂಡು ಸುಮ್ಮನಾಗಿದ್ದೆ. ಅದೊಂದು ದಿನ, ಕಾಲೇಜಿಗೆ ಸಂಬಂಧಪಟ್ಟ ಯಾವುದೋ ಪಿಡಿಎಫ್ ನೋಡುವಾಗ ಅದರಲ್ಲಿ ನಿನ್ನ ಹೆಸರು ಕಾಣಿಸಿತು. ಅದರ ಮುಂದೆಯೇ ನಿನ್ನ ಅಡ್ರೆಸ್ ಮತ್ತು ಫೋನ್ ನಂಬರ್! ಮರುಭೂಮಿಯಲ್ಲಿ ಗಂಗಾಜಲ ಸಿಕ್ಕಷ್ಟು ಖುಷಿಯಾಯ್ತು. ತಕ್ಷಣವೇ ನಿನಗೊಂದು ಮೆಸೇಜ್ ಮಾಡಿದೆ. ಪರಸ್ಪರ ಪರಿಚಯವಿರದ ಕಾರಣ, ಗೆಳೆತನ ಮೂಡಲು ಸ್ವಲ್ಪ ದಿನವೇ ಬೇಕಾಯ್ತು.
ಒಂದು ದಿನ ನೀನು- “ಹೇ, ನೀನು ಕೊಂಕಣಿಯಲ್ವಾ? ನಾನೂ ಕೊಂಕಣಿ ಕಲೀಬೇಕು. ಹೇಳಿ ಕೊಡೋ’ ಅಂದಾಗ ಅದೆಷ್ಟು ಖುಷಿಪಟ್ಟಿದ್ದೆ ಗೊತ್ತಾ?
ಕೊಂಕಣಿಯಲ್ಲಿ ನಾನು ಹೇಳಿದ್ದನ್ನು ನೀನು ಅದಿನ್ನೇನೋ ಅರ್ಥ ಮಾಡಿಕೊಂಡು, ಏನೇನೋ ವಾಕ್ಯ ಮಾಡ್ತಿದ್ದೆ. ಆದರೂ, ಪ್ರತಿ ರಾತ್ರಿ ಮುದ್ದು ಮುದ್ದಾಗಿ “ಜಾವಣ ಜಾಲೆ?’ (ಊಟಾ ಆಯ್ತಾ?) ಅಂತ ಕೇಳ್ತಿದ್ದೆ ನೋಡು, ಅಷ್ಟೇ ಸಾಕಾಗಿತ್ತು ನನಗೆ.
ನಿಜ ಹೇಳ್ತೀನಿ, ನಿನ್ನನ್ನು ಹೃದಯದ ಗುಡಿಯಲ್ಲಿ ದೇವರಂತೆ ಆರಾಧಿಸಿದ್ದೆ. ನಿನ್ನನ್ನು ಪ್ರೀತಿಸುತ್ತಿರೋ ವಿಷಯವನ್ನು ಕೆಲವೇ ದಿನಗಳಲ್ಲಿ ಹೇಳುವವನಿದ್ದೆ. ಆದ್ರೆ, ಆ ರಾತ್ರಿ ನೀನು ಕಳುಹಿಸಿದ ಮೆಸೇಜ್ ನನ್ನ ಕನಸಿನ ಕೋಟೆಯನ್ನು ಹೊತ್ತಿ ಉರಿಸಿಬಿಟ್ಟಿತು. ಅವತ್ತು ನೀ ಕಳಿಸಿದ್ದೆ- “ನನ್ನ ಡಿಗ್ರಿ ಮುಗಿತಾ ಬಂತು. ಎಂಗೆ ಮದವೆ ಫಿಕ್ಸ್ ಆಗಿದ್ದು, ಮಾಣಿ ಸಿ.ಎ ಮಾಡ್ತಿದ್ದ’. ಅದನ್ನೋದಿದ ಮೇಲೆ ನಿನಗೆ ಮೆಸೇಜ್ ಮಾಡುವ ಧೈರ್ಯ ಬರಲಿಲ್ಲ ನನಗೆ. ಪ್ರೀತಿಯನ್ನು ಹೇಳದೆಯೂ ಉಳಿಯಾಗಲಿಲ್ಲ. ಆದರೆ, ವಿಷಯ ಗೊತ್ತಾದ ಮೇಲೆ ನೀನು ನನ್ನ ನಂಬರ್ ಅನ್ನು ಬ್ಲಾಕ್ ಮಾಡಿ ದೂರ ಹೋದೆ.
ಹೋಗು… ಏನೂ ಬೇಜಾರಿಲ್ಲ ನನಗೆ. ನನ್ನ ಪ್ರೀತಿ ಶಾಂತ ಸರೋವರ ಅಂದುಕೊಂಡಿದ್ದೆ. ಆದರೆ ಅದು ಹುಚ್ಚು ಹೊಳೆ. ಆ ಹೊಳೆಯ ಸುಳಿಯಲ್ಲಿ ಕೊಚ್ಚಿ ಹೋಗಿರುವೆ ನಾನು. ನೀನಾಗಿಯೇ ಹುಡುಕಿದರೂ ನಾನು ಸಿಗುವುದಿಲ್ಲ.
– ಎಂ. ನಾಗಪ್ಪ ಪ್ರಭು, ಅಂಕೋಲಾ