ಅಜ್ಜಿಯ ಕಣ್ಣಲ್ಲಿ ನೀರಿತ್ತಾ? ಗೊತ್ತಾಗಲಿಲ್ಲ…
Team Udayavani, Feb 14, 2017, 3:45 AM IST
ಬೆಂಗಳೂರು, ಮುಂಬೈ ಮಹಾನಗರಗಳಂದ್ರೆ ನನಗೆ ಅಷ್ಟಕ್ಕಷ್ಟೆ. ಕೆಲಸಕ್ಕೆ ಬಿಡಿ, ತಿರುಗಾಟಕ್ಕೆ ಬನ್ನಿ ಅಂದರೂ ನಾನು ಹೋಗುವವನಲ್ಲ. ಅನಿವಾರ್ಯ ಕಾರಣಗಳಿಂದ ಕೆಲವೊಮ್ಮೆ ಹೋಗಲೇಬೇಕು. ಹಿಂದೆ ಬರುವವರೆಗೂ ನಿಜಕ್ಕೂ ಉಸಿರು ಕಟ್ಟಿರುತ್ತದೆ. ಮನೆಗೆ ಮರಳುವವರೆಗೂ ಜೀವದಲ್ಲಿ ಸಂಕಟ. ಮತ್ತೆ ಉತ್ಸಾಹ ತುಂಬಿಸಿಕೊಳ್ಳಬೇಕೆಂದರೆ ನಾನು ಹತ್ತೋದು ಕಾಳಿಂಗನನ್ನು.
ಬೆಂಗಳೂರಿನಿಂದ ಬಂದ ಬೆಳಿಗ್ಗೆ, ಮತ್ತೆ ಹೊರಟು ಬಂದಿದ್ದು ಮಲ್ಪೆಗೆ. ಪಡುಕೆರೆಯ ಕಿನಾರೆಯಲ್ಲಿ ಕೈರಂಪಣಿ ಮೀನುಗಾರಿಕೆ ನಡೆಯುತ್ತಿತ್ತು. 60 ಕೈಗಳು ಇದ್ದಿರಬೇಕು. ಎಲ್ಲವೂ ಮುದಿಜೀವಗಳೇ. ಎರಡು ಕಡೆಯಿಂದಲೂ ಎಳೆದ ಬಲೆಯೊಳಗೆ ಮೀನುಗಾರರ ಅನ್ನದ ಬಟ್ಟಲು ಬರಿದಾಗಿತ್ತು. ಮಧ್ಯಾಹ್ನದ ಬಿಸಿಲು ನೆತ್ತಿಯನ್ನೂ, ಮರಳನ್ನೂ ಸುಡುತ್ತಿತ್ತು. ಈ ವಾತಾವರಣದಲ್ಲಿ ಅವರ ಹಾಡು ಹೀಗಿತ್ತು..
ಐಜೋರಾ..
ಐಜೋರಾ…
ಬಲೆ ಒಯಿ³… ಐಜೋರಾ…
ಮೀನ್ ಇಜ್ಜಿ… ಐಜೋರಾ…
ಐನ್ ರೂಪಾಯಾÉ ತಿಕ್ಕಂದ್… ಐಜೋರಾ…
ಬೆಗತ್ ಮೀಯಾ…. ಐಜೋರಾ….
ಧಮ್ ಖಾಲಿ… ಐಜೋರಾ…
ದಾದ ಮಲ್ಪಿನಿ… ಐಜೋರಾ…
ವನಸ್ಗ್ ದಾದಾ… ಐಜೋರಾ…
ಕುಡೊರಾ ಪಾಡ್ಗಾ… ಐಜೋರಾ…
ಬಲೇ ಪತ್ತಿ… ಐಜೋರಾ…
ಮೀನು ಸಿಕ್ಕಿಲ್ಲವೆಂಬ ಬೇಸರ. ಅದೇ ಹಾಡು. ಆದರೂ ಜೀವನ ಪ್ರೀತಿ ಸೋಲುವುದಿಲ್ಲ. ಮತ್ತೆ ಬಲೆ ಬೀಸುವ ನಿರ್ಧಾರ. ಕಾಳಿಂಗ ಸಾಗಿದ ದಾರಿ ಶ್ರೀಮಂತಿಕೆಯದ್ದಲ್ಲ. ಅದು ಬಡವರ ಹೆಜ್ಜೆಗಳನ್ನು ಹುಡುಕಿದ್ದೇ ಹೆಚ್ಚು.
ಸಾಹಿತಿಯೋರ್ವರನ್ನು ಕಾಣಬೇಕೆಂದು ಮಲ್ಪೆಗೆ ಹೋಗಿದ್ದೆ. ಅವರು ಬೆಂಗಳೂರಿನವರು. ಉಡುಪಿಗೆ ಬಂದಿದ್ದೇನೆ, ಮಲ್ಪೆಯಲ್ಲಿ ಸಿಗೋಣ ಎಂದಿದ್ದರು. ಆದರೆ ಅವರಲ್ಲಿರಲಿಲ್ಲ. ಬೇರೆ ಕೆಲಸದಲ್ಲಿ ಕೂತಿದ್ದೇನೆ. ಆಮೇಲೆ ಸಿಗೋಣ ಅಂದ್ರು. ಅಷ್ಟು ಹೊತ್ತು ಸಮಯ ದೂಡಬೇಕಲ್ಲ. ಪಾರ್ಕ್ ಮಾಡಿ ಕೂರೋದು ಕಾಳಿಂಗನಿಗೆ ಇಷ್ಟವಿಲ್ಲ. ಫೋನು ಬರಬಹುದು. ಅಲ್ಲಿವರೆಗೆ ಸುತ್ತೋಣವೆಂದು ಕೆಮ್ಮಣ್ಣು ಹೂಡೆ ಕಡೆ ಹೊರಟಿದ್ದೆ. ಬಿಸಿಲು ಸುಡುತ್ತಿತ್ತು. ತಂಪು ಪಾನೀಯಗಳ ಕೆರೆಯಿದ್ದರೂ ಖಾಲಿ ಮಾಡುವಷ್ಟು ಬಾಯಾರಿಕೆ.
ತೊಟ್ಟಾಂ ದಾರಿಯಾಗಿ ಹೂಡೆಗೆ ಹೊರಟಿದ್ದೆ. ದಾರೀಲಿ ಒಂದು ಅಂಗಡಿ. ಉದ್ದದ ಸ್ಟೀಲ್ ಲೋಟೆಯಲ್ಲಿ ಮೂರ್ನಾಲ್ಕು ಮಂದಿ ಅದೇನನ್ನೋ ಕುಡೀತಿದ್ರು. ಬಾಯಾರಿಕೆ ಅತಿಯಾಗಿತ್ತು. ಬುಲೆಟ್ಟು ನಿಲ್ಲಿಸಿದೆ. ಅದು ತಂಪು ಶರಬತ್ತು. ಬಾದಾಮಿ ಹಾಲಿನದ್ದೇ ರುಚಿ. ತೇಲುವ ಗಸಗಸೆ ಹಲ್ಲಿನೆಡೆ ಸಿಕ್ಕಿಕೊಂಡು, ಕಚ್ಚಿಸಿಕೊಳ್ಳುವ ಸಂಭ್ರಮ.
ಅಂಗಡಿಯ ಎಡಕ್ಕೊಂದು ಜಗುಲಿ ಇತ್ತು. ಇಬ್ಬರು ಕೂರಬಹುದಾದದ್ದು. ಅದ್ರಲ್ಲಿ ಅಜ್ಜಿಯೊಬ್ಬಳು ಕೂತು ಶರಬತ್ತಿನ ಕೊನೆಯ ಗುಟುಕನ್ನು ಹೀರಿ ಎದ್ದಳು. ಅವಳು ಅಲ್ಲಿಂದ ಏಳುವವರೆಗೆ ನಾನು ನಿಂತೇ ಇದ್ದೆ. ಆಕೆ ನಿಂತ ಮೇಲೆ ನಾನು ಆ ಜಾಗದಲ್ಲಿ ಕೂತೆ. ಒಳ್ಳೆ ನೆರಳು. ತಂಪುಗಾಳಿ. ಗಂಟಲೊಳಗೆ ತಂಪು ಬೀಜದ ಶರಬತ್ತು. ಸುಖವೆನಿಸಿತ್ತು. ಲೋಟ, ಹಣವನ್ನು ಅಂಗಡಿಯವನಿಗೆ ಕೊಟ್ಟ ಅಜ್ಜಿ ಹಿಂತಿರುಗಿ ನನ್ನನ್ನು ನೋಡಿದಳು. ಮತ್ತಷ್ಟು ಹತ್ತಿರ ಬಂದಳು. ಬಾಗಿದಳು. ಜಗಲಿಯತ್ತ ಬೆರಳು ತೋರಿಸಿ ಏನೇನೋ ಅಂದಳು. ಅರ್ಥವಾಗಲಿಲ್ಲ. ಮತ್ತೆರಡು ಬಾರಿ, ಏನಜ್ಜಿ ಅಂತ ಕೇಳಿದೆ.
“ಅಲ್ಲಾ ನಾನಿರೋವಾಗ ನೀನ್ಯಾಕೆ ಕೂರಲಿಲ್ಲ?’
“ನೀವು ಕೂತಿದ್ರಲ್ವ’ ಎಂದು ನಾನಂದೆ.
“ಇಬ್ಬರು ಕೂರೋ ಜಾಗ ಇತ್ತು, ಬಂದು ಕೂರಬಹುದಿತ್ತಲ್ಲ’
“ನಿಮ್ಗೆ ಕಷ್ಟ ಆಗೋದು ಬೇಡಾಂತ ಕೂರಲಿಲ್ಲ’ ಎಂದೆ.
“ಎಂಥ ಕಷ್ಟವಾ… ಕೂತಿದ್ರೆ ತಾಯಿ ಮಗ ಜೊತೆ ಕೂತಂತೆ ಆಗುತ್ತಿತ್ತು.’
ಮತ್ತೆ ನನಗೆ ಮಾತಾಡಲು ಅವಕಾಶವಾಗಲಿಲ್ಲ. ಅಷ್ಟು ಹೇಳಿ ಅಜ್ಜಿ ಹೊರಟೇ ಹೋದರು. ಅಜ್ಜಿಯ ಕಣ್ಣಲ್ಲಿ ನೀರು ಜಿನುಗಿತ್ತಾ? ಗೊತ್ತಾಗಲಿಲ್ಲ. ಜನರೆಲ್ಲಾ ಅವ್ರನ್ನು ದೂರ ಮಾಡುತ್ತಿದ್ದಾರೆ ಅಂತನ್ನಿಸಿತ್ತಾ? ಮಕ್ಕಳೇನಾದ್ರೂ..?
ಅದೇನೋ, ಹೂಡೆ ಮರೆತು ಹೋಯ್ತು. ಸಾಹಿತಿಯೂ ಮರೆತು ಹೋದ್ರು. ಅಮ್ಮನ ನೆನಪಾಯ್ತು. ನೇರವಾಗಿ ಮನೆಗೆ ಬಂದುಬಿಟ್ಟೆ, ಬೋರ್ಗಲ್ ಗುಡ್ಡೆಗೆ. ನಾನು ಬುಲೆಟ್ಟಲ್ಲಿ ದೂರ ದೂರಕ್ಕೆ ಹೋಗಿದ್ದು ಕಡಿಮೆಯಾದರೂ ಕರಾವಳಿಯ ಹಳ್ಳಿಗಳೆಡೆಯಲ್ಲಿ ಕಾಳಿಂಗ ಸುತ್ತಾಡಿದ್ದಾನೆ. ಇಂತಹ ಕಾಡುವ ಕತೆಗಳೊಂದಿಗೆ ಯಾವತ್ತಿಗೂ ಕಾಡುತ್ತಿರುತ್ತಾನೆ.
***
ಬೆನ್ನು ನೋವೆಂದು ಯಾವತ್ತೂ ಬೆವರುತ್ತಿದ್ದ ನನಗೆ ಬುಲೆಟ್ಟಿನ ಕನಸು ಕಾಣಿಸಿದ್ದು ನನ್ನ ಗೆಳೆಯ ಸೂರಜ್ ನಿಟ್ಟೆ. ಬೆಂಗಳೂರಿನಲ್ಲಿ ಕಲಾ ವಿದ್ಯಾರ್ಥಿ. ಆತ ಊರಿಗೆ ಬಂದಾಗಲೆಲ್ಲಾ ಸುತ್ತಾಡಿಸುವ ಋಣವೊಂದು ಕಾಳಿಂಗನಿಗಿದೆ. ಹಾಗೆ ಹೊರಟಿದ್ದು ಕುಂದಾಪುರಕ್ಕೆ. ಸುಮ್ಮನೇ ಸುತ್ತಾಡಿ, ಕಾಣೆ ಮೀನಿನ ಊಟ ಮಾಡಿ ಉಡುಪಿಗೆ ಮರಳುತ್ತಿದ್ದಾಗ ಕೊಡಚಾದ್ರಿಯ ಹೆಸರಿನ ಬೋರ್ಡೊಂದು ಕಂಡಿತು. ಇಬ್ಬರೂ ಕೊಡಚಾದ್ರಿಯ ಬಗ್ಗೆ ಕೇಳಿದ್ದೆವೇ ಹೊರತು ಈವರೆಗೆ ನೋಡಿರಲಿಲ್ಲ. ಕೊಲ್ಲೂರು ಇಲ್ಲೇ ಮೂವತ್ತು ಕಿ.ಮೀ. ಅದರ ಮೇಲೆ ಕೊಡಚಾದ್ರಿ ತಾನೇ. ಅರ್ಧ ಗಂಟೆಯಲ್ಲಿ ತುದಿ ತಲುಪಿ ಸೂರ್ಯಾಸ್ತ ನೋಡೋದು ಅಂತಾಯ್ತು. ಉಡುಪಿಯ ದಾರಿಯನ್ನು ಮರೆತ ಬೈಕು ಕೊಲ್ಲೂರಿನತ್ತ ತಿರುಗಿತು.
ಏನೇ ಹೇಳಿ, ಕೊಲ್ಲೂರು ತುಂಬಾನೇ ಡಿಫರೆಂಟು. ಜನÅ ಜಂಗುಳಿ ಅದೆಷ್ಟೇ ಇದ್ದರೂ ಅದು ಕಾಡಿನ ತರವೇ.
ದೇವಸ್ಥಾನದ ಎದುರಿರುವ ರಸ್ತೆಯಲ್ಲೇ ಬೇಕಾದಷ್ಟು ಮೌನವಿದೆ. ಕೊಲ್ಲೂರಿನ ಬೀದೀಲಿ, ದೇವಸ್ಥಾನದ ಸುತ್ತ ಬಿಳಿ ಸೀರೆ ಉಟ್ಟುಕೊಂಡು, ಹಣೆಗೊಂದು ಅಡ್ಡ ನಾಮ ಹಚ್ಚಿಕೊಂಡು, ತಂದೆ, ಅಣ್ಣ, ತಮ್ಮಂದಿರ ಮರೆಯಲ್ಲಿ ನಡೆದು ಬರೋ ಮಲಯಾಳಿ ಚೆಲುವೆಯರ ನಾಚಿಕೆಯ ಹೆಜ್ಜೆಯಲ್ಲೇ ಹುಡುಗರ ಕರಗಿಸುವ ಗುಣವಿದೆ. ಮೊದಲ ಅಕ್ಷರ, ಮೊದಲ ಅನ್ನ, ಮೊದಲ ಕಂಠ, ಮೊದಲ ಗೆಜ್ಜೆ… ಹೀಗೆ ಲಕ್ಷಾಂತರ ಹರಕೆಗಳು ಅಲ್ಲಿ ಹರಿಯುವ ಸೌಪರ್ಣಿಕೆಯೊಳಗೆ ಸೇರಿಕೊಳ್ಳುತ್ತವೆ.
ಹೊರಗೆ ಬೀದಿಯಂಗಡಿಗಳ ಟೇಬಲ್ಲಿನಲ್ಲಿ ಸಾಲಾಗಿ ಇಟ್ಟಿರೋ ಸೋಡದ ಬಾಟಲಿಗಳು. ಅದ್ರ ಮೇಲೆ ಇಟ್ಟಿರೋ ಹಳದಿ ನಿಂಬೆ. ಗಾಜಿನ ಉದ್ದ ಲೋಟದೊಳಗೆ ಸ್ವೀಟ್ ಆ್ಯಂಡ್ ಸಾಲ್ಟ್ ನಿಂಬೂ ಶರಬತ್ತು ಕುಡಿದ ಮೇಲೆ ಬರೋ ತೇಗು ಆಹ್ಲಾದಕರ. ಕೇರಳೀಯರ ಇಷ್ಟದ ಆಹಾರ ಪುಟ್ಟು. ಪ್ರತಿಯೊಂದು ಅಂಗಡಿಯಲ್ಲಿ ಸ್ಟೌ ಮೇಲೆ ಇರಿಸಿದ ಮೂರ್ನಾಲ್ಕು ನಳಿಕೆಗಳುಳ್ಳ ಪುಟ್ಟು ತಯಾರಿಸೋ ಕುಕ್ಕರುÅ ನನಗಂತೂ ನೋಡೋಕೆ ಹೊಸದು.
(ಮುಂದುವರಿಯುವುದು)
– ಮಂಜುನಾಥ್ ಕಾಮತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.