ಮಹರ್ಷಿ ಅಗಸ್ತ್ಯರು
Team Udayavani, Jul 6, 2017, 3:45 AM IST
ಅಗಸ್ತ್ಯರು ಮಹಾಮಹಿಮರು. ಅವರನ್ನು ಕುರಿತು ಹಲವು ಕಥೆಗಳು ಚಾಲ್ತಿಯಲ್ಲಿವೆ. ಇಲ್ಲಿ ಅಗಸ್ತ್ಯರಿಗೆ ಸಂಬಂಧಿಸಿದ ಮೂರು ಕಥೆಗಳಿವೆ.
ಇಲ್ವಲ ಎನ್ನುವವನು ಒಬ್ಬ ರಾಕ್ಷಸ ಅವನ ತಮ್ಮ ವಾತಾಪಿ. ಈ ಇಬ್ಬರೂ ಸೋದರರಿಗೆ ಮಾಯವಿದ್ಯೆ ಗೊತ್ತಿತ್ತು. ಇಲ್ವಲನು ಬ್ರಾಹ್ಮಣರನ್ನು ಅತಿಥಿಗಳಾಗಿ ಕರೆಯುತ್ತಿದ್ದ. ತಮ್ಮ ವಾತಾಪಿಯನ್ನು ಮೇಕೆಯನ್ನಾಗಿ ಮಾಡಿ ಆ ಮೇಕೆಯನ್ನು ಕಡಿದು ಅದರ ಮಾಂಸವನ್ನು ಅತಿಥಿಗೆ ಬಡಿಸುತ್ತಿದ್ದ. ಊಟವಾದ ನಂತರ “ವಾತಾಪಿ, ಹೊರಕ್ಕೆ ಬಾ’ ಎಂದು ಕರೆಯುತ್ತಿದ್ದ. ವಾತಾಪಿಯು ಅತಿಥಿಯ ಹೊಟ್ಟೆಯನ್ನು ಸೀಳಿಕೊಂಡು ಹೊರಗೆ ಬರುತ್ತಿದ್ದ. ಆನಂತರದಲ್ಲಿ ಸೋದರರಬ್ಬರು ಸೇರಿಕೊಂಡು ಅತಿಥಿಯನ್ನು ತಿಂದು ಮುಗಿಸುತ್ತಿದ್ದರು. ಹೀಗೆ, ಇವರು ಅನೇಕರನ್ನು ಕೊಂದಿದ್ದರು.
ಇಲ್ವಲನು ಅದೊಮ್ಮೆ ಅಗಸ್ತ್ಯರನ್ನು ಊಟಕ್ಕೆ ಆಹ್ವಾನಿಸಿದ. ಹಲವು ಋಷಿಗಳು ಅಗಸ್ತ್ಯರಿಗೆ ಇಲ್ವಲನ ಕ್ರೂರ ಕೃತ್ಯಗಳನ್ನು ವರ್ಣಿಸಿ ಅವನ ಆಹ್ವಾನವನ್ನು ಒಪ್ಪಿಕೊಳ್ಳಬಾರದೆಂದು ಪ್ರಾರ್ಥಿಸಿದರು. ಯಾವ ಮಾತಿಗೂ ಲಕ್ಷ್ಯ ಕೊಡದ ಅಗಸ್ತ್ಯರು ಭೋಜನಕ್ಕೆ ಹೋದರು. ಎಂದಿನಂತೆ ಅವನು ತಮ್ಮನ ಮಾಂಸವನ್ನು ಬಡಿಸಿದ.ಋಉಷಿಗಳು ಊಟ ಮುಗಿಸುತ್ತಿದ್ದಂತೆಯೇ “”ವಾತಾಪಿ, ಹೊರಕ್ಕೆ ಬಾ” ಎಂದು ಕರೆದ. ಅಗಸ್ತ್ಯರು “”ವಾತಾಪಿ ಜೀರ್ಣೋಭವ” (ವಾತಾಪಿ ಜೀರ್ಣವಾಗಿ ಹೋಗು) ಎಂದರು. ವಾತಾಪಿ ಕರಗಿ ಹೋದ ಹೊರಕ್ಕೆ ಬರಲಿಲ್ಲ. ಇದನ್ನು ಕಂಡು ಇಲ್ವಲನು ದಿಗ್ಭ್ರಮೆಗೊಂಡ. ಅಗಸ್ತ್ಯರು, “”ಇಲ್ವಲ, ಇನ್ನು ನಿನ್ನ ತಮ್ಮ ಬರುವಂತಿಲ್ಲ. ನಿನ್ನ ಬಳಿ ಅಗಾಧ ಸಂಪತ್ತು ಇದೆ ಎಂದು ನನಗೆ ಗೊತ್ತು. ನಿನ್ನಲ್ಲಿ ಹೆಚ್ಚಾಗಿರುವ ಐಶ್ಚರ್ಯವನ್ನು ನನಗೆ ಕೊಡು” ಎಂದರು. ಇಲ್ವಲನು ತನ್ನ ಸಂಪತ್ತಿನ ಬಹು ಭಾಗವನ್ನು ಅವರಿಗೆ ಅರ್ಪಿಸಿದ.
*****
ಒಮ್ಮೆ ಪರ್ವತ ರಾಜ ವಿಂಧ್ಯನಿಗೆ ಸೂರ್ಯನು ಮೇರುವಿಗೆ ಹೆಚ್ಚಿನ ಗೌರವವನ್ನು ತೋರಿಸುತ್ತಾನೆ, ತನ್ನನ್ನು ಕಂಡರೆ ಅವನಿಗೆ ಸಾಕಷ್ಟು ಗೌರವವಿಲ್ಲ ಎನ್ನಿಸಿತು. ವಿಂಧ್ಯನು ಸೂರ್ಯನನ್ನು ಪ್ರಶ್ನಿಸಿದಾಗ ಅವನು, “”ನಾನು ಮೇರುವಿನ ಸುತ್ತ ಪ್ರದಕ್ಷಿಣೆ ಮಾಡುವುದು ನನ್ನ ಇಚ್ಛೆಯಿಂದಲ್ಲ, ಸೃಷ್ಟಿ ನಿಯಮದಂತೆ” ಎಂದ. ವಿಂಧ್ಯನು ತಾನು ಮೇರುವಿಗಿಂತ ಎತ್ತರ ಬೆಳೆಯುವೆನೆಂದು ಹಠ ಹಿಡಿದು ಎತ್ತರ ಬೆಳೆಯಲು ಆರಂಭಿಸಿದ; ಸೂರ್ಯಚಂದ್ರರನ್ನು ತಡೆದು ನಿಲ್ಲಿಸುವೆನೆಂದ. ದೇವತೆಗಳೇ ಬುದ್ಧಿವಾದ ಹೇಳಿದರೂ ಕೇಳಲಿಲ್ಲ. ಈ ಸಂದರ್ಭದಲ್ಲಿ ದೇವತೆಗಳು ಅಗಸ್ತ್ಯರನ್ನು ಪ್ರಾರ್ಥಿಸಿದರು.
ಅಗಸ್ತ್ಯರು ಪತ್ನಿ ಲೋಪಾಮುದ್ರೆಯೊಂದಿಗೆ ವಿಂಧ್ಯ ಪರ್ವತದ ಬಳಿಗೆ ಹೋದರು. ವಿಂಧ್ಯನು ಅವರನ್ನು ಗೌರವದಿಂದ ಕಂಡ. ಮಹರ್ಷಿಗಳು, “”ನಾನು ಉತ್ತರಕ್ಕೆ ಹೋಗುತ್ತಿದ್ದೇನೆ. ನೀನು ಹೀಗೆಯೇ ಬೆಳೆಯುತ್ತಿದ್ದರೆ ನಾನು ದಕ್ಷಿಣಕ್ಕೆ ಬರುವುದಕ್ಕೆ ಸಾಧ್ಯವಾಗುವುದಿಲ್ಲ. ನಾನು ಹಿಂದಕ್ಕೆ ಬರುವವರೆಗೆ ಬೆಳೆಯಬೇಡ” ಎಂದು ಹೇಳಿದರು. ಈ ಮಾತಿಗೆ ವಿಂಧ್ಯನು ಒಪ್ಪಿದ. ಅಗಸ್ತ್ಯರು ಹಿಂದಕ್ಕೆ ಬರಲೇ ಇಲ್ಲ. ಪರಿಣಾಮವಾಗಿ, ವಿಂಧ್ಯನ ಅಪಾಯಕಾರಿ ಬೆಳವಣಿಗೆಯು ನಿಂತೇಹೋಯಿತು.
*****
ಕಾಲಕೇಯರೆಂಬ ರಾಕ್ಷಸರು ದೇವತೆಗಳಿಗೆ ಬಹಳ ತೊಂದರೆ ಕೊಡುತ್ತಿದ್ದರು. ತಪಸ್ವಿಗಳಿಗೂ ಹಿಂಸೆ ಕೊಡುತ್ತಿದ್ದರು. ಅವರು ಸಮುದ್ರದೊಳಗೆ ವಾಸ ಮಾಡುವವರು. ಈ ರಕ್ಕಸರ ಕಾಟದಿಂದ ಪಾರಾಗಲು ದೇವತೆಗಳು ಅಗಸ್ತ್ಯರ ಮೊರೆ ಹೊಕ್ಕರು. ಅಗಸ್ತ್ಯರು ದೇವತೆಗಳನ್ನು ಕರೆದುಕೊಂಡು ಸಮುದ್ರತೀರಕ್ಕೆ ಹೋದರು. ದೇವತೆಗಳಿಗೆ, “”ನಾನು ಈಗ ಸಮುದ್ರದ ನೀರನ್ನು ಕುಡಿದು ಬಿಡುತ್ತೇನೆ. ನಿಮ್ಮ ಕೆಲಸವನ್ನು ನೀವು ಮಾಡಿ” ಎಂದರು. ದೇವತೆಗಳು ನೋಡುತ್ತಿದ್ದಂತೆಯೇ ಅಗಸ್ತ್ಯರು ಸಮುದ್ರದ ನೀರನ್ನೆಲ್ಲ ಕುಡಿದುಬಿಟ್ಟರು. ಕಾಲಕೇಯರು ಈಗ ಅಡಗಿಕೊಳ್ಳಲು ಸ್ಥಳವಿರಲಿಲ್ಲ. ಈ ಸಂದರ್ಭದಲ್ಲಿ ದೇವತೆಗಳು ಅವರನ್ನು ಕೊಂದರು. (ಮುಂದೆ ಭಗೀರಥನು ಮತ್ತೆ ಸಮುದ್ರಕ್ಕೆ ನೀರನ್ನು ತಂದುಕೊಟ್ಟ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL; ಗುಜರಾತ್ ವಿರುದ್ಧ ಭರ್ಜರಿ ಜಯ: ಆರ್ ಸಿಬಿ ಪ್ಲೇ ಆಫ್ ಕನಸು ಜೀವಂತ
Prahlad Joshi ವಿರುದ್ದ ರಣಕಹಳೆ : ದಿಂಗಾಲೇಶ್ವರ ಶ್ರೀ ವಿರುದ್ದ ಎಫ್ ಐಆರ್ ದಾಖಲು
H.D. Revanna ಬಂಧನ; ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ
BJP; ತೇಜಸ್ವಿ ಸೂರ್ಯ ನವರಾತ್ರಿಯ ಮುನ್ನಾದಿನ ಮೀನು ತಿನ್ನುತ್ತಾರೆ!: ಕಂಗನಾ ಭಾಷಣ ವೈರಲ್
Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ