ರಿಲೀಸ್ಗೆ ನಾವ್ ರೆಡಿ,ಆದ್ರೆ…
ಸ್ಟಾರ್ ಸಿನ್ಮಾ ಬಿಡುಗಡೆಯಾದ್ರೆ ಓಪನಿಂಗ್ ಸಿಗುತ್ತೆ!
Team Udayavani, Sep 11, 2020, 3:12 PM IST
ಸಿನಿಪ್ರೇಮಿಗಳ ಮೊಗದಲ್ಲಿ ಮಂದಹಾಸ ಮೂಡಿದೆ.ಅದಕ್ಕೆ ಕಾರಣ ಸಿನಿಮಾ ಚಟುವಟಿಕೆಗಳು ಮತ್ತೆ ಆರಂಭವಾಗಿರೋದು. ಕಳೆದ ಆರು ತಿಂಗಳಿನಿಂದ ಸ್ತಬ್ಧವಾಗಿದ್ದ ಚಿತ್ರರಂಗ ಈಗ ಮತ್ತೆ ಹಳೆಯ ರೂಪಕ್ಕೆಮರಳುತ್ತಿದೆ. ಈಗಾಗಲೇ ಚಿತ್ರೀಕರಣ ಕೂಡಾ ಆರಂಭವಾಗಿದೆ. ಮುಖ್ಯವಾಗಿ ಈಗ ಆಗಬೇಕಾಗಿರೋದು ಚಿತ್ರಮಂದಿರ ಓಪನ್. ಚಿತ್ರಮಂದಿರತೆರೆಯದೇ ಏನೇ ಚಿತ್ರೀಕರಣ ಮಾಡಿದರೂ ಅದು ಚಿತ್ರರಂಗ ಪೂರ್ಣವೆನಿಸೋದಿಲ್ಲ. ಆದರೆ, ಈಗ ಚಿತ್ರಮಂದಿರ ತೆರೆಯುವ ಸಮಯ ಹತ್ತಿರ ಬಂದಿದೆ. ಮೂಲಗಳ ಪ್ರಕಾರ, ಅಕ್ಟೋಬರ್ 1 ರಿಂದ ಚಿತ್ರಮಂದಿರ ತೆರೆಯುವುದು ಬಹುತೇಕ ಖಚಿತ ಎನ್ನಲಾಗಿದೆ.
ಸಾಕಷ್ಟು ಸಿನಿಮಾಗಳು ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಅಣಿಯಾಗಿವೆ. ಇವೆಲ್ಲವೂ ಚಿತ್ರಮಂದಿರ ತೆರೆಯಲು ಕಾಯುತ್ತಿರೋದು ಸುಳ್ಳಲ್ಲ. ಆದರೆ, ಈಗ ಚಿತ್ರಮಂದಿರ ತೆರೆಯುವ ದಿನ ಹತ್ತಿರಬರುತ್ತಿರುವುದರಿಂದ ಸಿನಿಪ್ರೇಮಿಗಳ ಜೊತೆ ಚಿತ್ರೋದ್ಯಮಿಗಳು ಕೂಡಾ ಖುಷಿಯಾಗಿದ್ದಾರೆ. ಚಿತ್ರಮಂದಿರ ತೆರೆಯೋದೇನೋ ಖುಷಿಯ ವಿಚಾರ. ಆದರೆ, ಪ್ರೇಕ್ಷಕರು ಕೊರೊನಾ ಭಯ ಬಿಟ್ಟುಒಮ್ಮೆಲೇ ಚಿತ್ರಮಂದಿರಕ್ಕೆ ಬರುತ್ತಾರಾ ಎಂಬ ಪ್ರಶ್ನೆಯೂಇದೆ. ಅದಕ್ಕೆ ಉದಾಹರಣೆಯಾಗಿ ಈಗಾಗಲೇಆರಂಭವಾಗಿರುವ ಕೆಲವು ಕ್ಷೇತ್ರಗಳಲ್ಲಿ ನೀರಸ ಪ್ರತಿಕ್ರಿಯೆ ಇದೆ. ಮೆಟ್ರೋ ಓಡಾಟ ಆರಂಭವಾಗಿದ್ದರೂ, ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಬರುತ್ತಿಲ್ಲ… ಹೀಗೆಯೇ ಚಿತ್ರಮಂದಿರಕ್ಕೂ ಪ್ರೇಕ್ಷಕ ಬರಲು ಹಿಂದೇಟು ಹಾಕಿದರೆ ಹೇಗೆ ಎಂಬ ಅನುಮಾನ ಹಾಗೂ ಭಯ ಕೂಡಾ ಕಾಡುತ್ತಿದೆ.
ಆದರೂ, ಒಂದು ವಿಶ್ವಾಸವೆಂದರೆ, ನಿಧಾನವಾಗಿ ಸಹಜ ಸ್ಥಿತಿಗೆ ಬರಬಹುದು ಎಂಬುದು. ಈ ನಡುವೆಯೇ ಸಿನಿಮಾ ಮಂದಿಯ ಮತ್ತೂಂದು ಮನವಿ ಎಂದರೆ ಆರಂಭದಲ್ಲಿ ಯಾವುದಾದರೊಂದು ಸ್ಟಾರ್ ಸಿನಿಮಾ ರಿಲೀಸ್ ಆಗಬೇಕೆಂಬುದು. ಅದಕ್ಕೆ ಕಾರಣ ಓಪನಿಂಗ್. ಸಿನಿಮಾ ಓಪನಿಂಗ್ಪಡೆದುಕೊಳ್ಳಬೇಕಾದರೆ ಯಾವುದಾದರೊಬ್ಬ ಸ್ಟಾರ್ನ ಬಹುನಿರೀಕ್ಷಿತ ಚಿತ್ರ ತೆರೆಕಾಣಬೇಕು, ಆಗ ಜನ ಭಯ ಬಿಟ್ಟು ಚಿತ್ರಮಂದಿರಕ್ಕೆ ಬರುತ್ತಾರೆ ಮತ್ತು ಒಂದೊಳ್ಳೆಯ ಓಪನಿಂಗ್ ಮೂಲಕ ಚಿತ್ರ ಪ್ರದರ್ಶನ ಕೂಡಾ ಆರಂಭವಾಗುತ್ತದೆ ಎಂಬುದು ಅನೇಕರು ಲೆಕ್ಕಾಚಾರ. ಆದರೆ, ಕೋಟಿಗಟ್ಟಲೇ ಬಂಡವಾಳ ಹಾಕಿರುವ ಸ್ಟಾರ್ ಸಿನಿಮಾಗಳ ನಿರ್ಮಾಪಕರು ಮಾತ್ರ ಏಕಾಏಕಿ ಸಿನಿಮಾ ರಿಲೀಸ್ ಮಾಡಲು ಸಿದ್ಧರಿಲ್ಲ. ಚಿತ್ರಪ್ರದರ್ಶನ ಆರಂಭವಾದ ನಂತರ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ನೋಡಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ.
ಇನ್ನೊಂದಿಷ್ಟು ಮಂದಿ ಹೊಸಬರು ಸಿನಿಮಾ ಬಿಡುಗಡೆ ಮಾಡಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಅದೇನೇ ಆದರೂ ಚಿತ್ರಮಂದಿರಗಳು ತೆರೆಯುವ ಸಮಯ ಹತ್ತಿರ ಬರುತ್ತಿರೋದಂತೂ ಖುಷಿಯ ವಿಚಾರ.
ನಮ್ಮ “ರಾಬರ್ಟ್’ ಚಿತ್ರದ ಎಲ್ಲಾ ಕೆಲಸಗಳನ್ನು ಮುಗಿಸಿ ಬಿಡುಗಡೆಗೆ ಸಿದ್ಧವಿದೆ. ಆದರೆ, ಚಿತ್ರಮಂದಿರ ಓಪನ್ ಆದ ನಂತರ ಜನರ ಪ್ರತಿಕ್ರಿಯೆಹೇಗಿರುತ್ತದೆ ಎಂಬುದು ಕೂಡಾ ಮಖ್ಯವಾಗುತ್ತದೆ. ಎಲ್ಲವೂ ನಾರ್ಮಲ್ ಆಗಿದ್ದರೆ ಖಂಡಿತಾ ನಾವು ಚಿತ್ರ ಬಿಡುಗಡೆ ಮಾಡುತ್ತೇವೆ.- ತರುಣ್ ಸುಧೀರ್, ನಿರ್ದೇಶಕ (ರಾಬರ್ಟ್)
ಸಿನಿಮಾ ಬಿಡುಗಡೆ ಬಗ್ಗೆ ನಾನುಈಗಲೇ ಏನೂ ಹೇಳಲು ಆಗೋದಿಲ್ಲ. ಏಕೆಂದರೆ ನಾವು ಸಿನಿಮಾ ಮಾಡಿರೋದು ಜನರಿಗೆ. ಜನ ಚಿತ್ರಮಂದಿರಕ್ಕೆ ಧೈರ್ಯವಾಗಿ ಬಂದು ಸಿನಿಮಾ ನೋಡುವಂತಾಗಬೇಕು. ಆಗನಾನು ಕೂಡಾ ನನ್ನ ಸಿನಿಮಾವನ್ನು ಬಿಡುಗಡೆ ಮಾಡುತ್ತೇನೆ.–ಸೂರಪ್ಪ ಬಾಬು, ನಿರ್ಮಾಪಕ (ಕೋಟಿಗೊಬ್ಬ -3)
ಈ ವರ್ಷ ನಮ್ಮ ಸಂಸ್ಥೆಯ ಒಂದಾದರೂ ಸಿನಿಮಾ ಬಿಡುಗಡೆಯಾಗಲಿದೆ. ಈಗಾಗಲೆ “ಭೀಮಸೇನಾ ನಳಮಹಾರಾಜ’, “ಟೆನ್’ ಚಿತ್ರಗಳು ಸಿದ್ಧವಾಗಿವೆ. ಶರಣ್ ನಾಯಕರಾಗಿರುವ “ಅವತಾರ್ ಪುರುಷ’ದ ಬಾಕಿ ಉಳಿದಿರುವ ಚಿತ್ರೀಕರಣ ಆರಂಭವಾಗುತ್ತಿದೆ. ಈ ಚಿತ್ರವನ್ನು ಡಿಸೆಂಬರ್ ಕೊನೆಯವಾರದಲ್ಲಿ ಬಿಡುಗಡೆ ಮಾಡುವ ಆಲೋಚನೆ ಇದೆ. ಡಿಸೆಂಬರ್ ನಮಗೆ ಲಕ್ಕಿ. –ಪುಷ್ಕರ್, ನಿರ್ಮಾಪಕ ( ಅವತಾರ್ ಪುರುಷ)
ನಮ್ಮ ಬ್ಯಾನರ್ನ ಎರಡು ಚಿತ್ರಗಳಲ್ಲಿ ಒಂದು ಚಿತ್ರವಂತೂ ಈ ವರ್ಷ ಬಿಡುಗಡೆಯಾಗೋದು ಪಕ್ಕಾ. “ಯುವರತ್ನ’ ಈ ವರ್ಷವೇಬಿಡುಗಡೆಯಾಗಬಹುದು. “ಕೆಜಿಎಫ್ 2′ ಬಗ್ಗೆ ಈಗಲೇ ಹೇಳ್ಳೋದು ಕಷ್ಟ. ಏಕೆಂದರೆ ಅದು ಐದು ಭಾಷೆಗಳಲ್ಲಿ ತೆರೆಕಾಣುತ್ತಿರುವುದರಿಂದ ಆ ಬಗ್ಗೆ ಈಗಲೇ ಹೇಳ್ಳೋದು ಕಷ್ಟ. – ಕಾರ್ತಿಕ್, ನಿರ್ಮಾಪಕ, ಹೊಂಬಾಳೆ ಫಿಲಂಸ್
ನಮ್ಮ “ಸಲಗ’ ಚಿತ್ರ ರೆಡಿ ಇದೆ.ರಿಲೀಸ್ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಆ್ಯಕ್ಟೀವ್ ಪ್ರೊಡ್ನೂಸರ್ ಸಭೆ ಮಾಡಿ, ಆ ಬಳಿಕ ನಿರ್ಧರಿಸುತ್ತೇನೆ. –ಕೆ.ಪಿ.ಶ್ರೀಕಾಂತ್, ನಿರ್ಮಾಪಕ (ಸಲಗ)
ನಮ್ಮ “ವಿಷ್ಣುಪ್ರಿಯಾ’ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ. ಇನ್ನು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮಾತ್ರ ಬಾಕಿ. ಎಲ್ಲವೂ ಅಂದುಕೊಂಡಂತೆ ಆದರೆ ಈ ವರ್ಷ ರಿಲೀಸ್ ಮಾಡುತ್ತೇವೆ.–ಕೆ.ಮಂಜು, ನಿರ್ಮಾಪಕ (ವಿಷ್ಣುಪ್ರಿಯಾ)
– ರವಿಪ್ರಕಾಶ್ ರೈ