ಸಿಡಿದೆದ್ದ ಸಾಮಾನ್ಯ! ಕೆಂಪಿರ್ವೆ ಬಿಟ್ಟುಕೊಂಡವರ ನಡುವೆ
Team Udayavani, Jul 21, 2017, 5:35 AM IST
ಸಮಾಜದಲ್ಲಿ ಶ್ರೀಸಾಮಾನ್ಯರ ತಾಳ್ಮೆ ಕಟ್ಟೆ ಒಡೆದರೆ ಅದರಿಂದ ದೊಡ್ಡ ಪರಿಣಾಮವನ್ನೇ ಎದುರಿಸಬೇಕಾಗುತ್ತದೆ. ಕಾಮನ್ ಮ್ಯಾನ್ನ ಪವರ್ ದೊಡ್ಡದು ಎಂಬುದು ಎಲ್ಲರಿಗೂ ಗೊತ್ತು. ತಗ್ಗುವಷ್ಟು ತಗ್ಗಿ, ಬಗ್ಗುವಷ್ಟು ಬಗ್ಗಿ ಕೊನೆಗೆ ಸಿಡಿದೆದ್ದರೆ ಸಾಮಾನ್ಯರ ಮುಂದೆ ನಿಲ್ಲೋದು ಕಷ್ಟ. ಈಗ ಇದೇ ಕಾನ್ಸೆಪ್ಟ್ ಅನ್ನು ಮೂಲವಾಗಿಟ್ಟುಕೊಂಡು ಸಿನಿಮಾವೊಂದು ಬರುತ್ತಿದೆ. ಅದು “ಕೆಂಪಿರ್ವೆ’. ಸಣ್ಣ ಇರುವೆ ಕೂಡಾ ಆನೆಯನ್ನು ಬೀಳಿಸಬಲ್ಲದು ಎಂಬುದು ನಿಮಗೆ ಗೊತ್ತೇ ಇದೆ.
ಅದೇ ಕಾನ್ಸೆಪ್ಟ್ನಡಿ ತಯಾರಾದ ಚಿತ್ರವಾದ್ದರಿಂದ “ಕೆಂಪಿರ್ವೆ’ ಎಂದು ಟೈಟಲ್ ಇಡಲಾಗಿದೆ. ಈ ಚಿತ್ರವನ್ನು ನಿರ್ದೇಶಿಸಿರೋದು ವೆಂಕಟ್ ಭಾರಧ್ವಜ್. ಹಿರಿಯ ನಿರ್ದೇಶಕ ಸಿ.ವಿ.ಶಿವಶಂಕರ್ ಅವರ ಪುತ್ರರಾಗಿರುವ ವೆಂಕಟ್ ಈಗಾಗಲೇ ಎರಡು ಸಿನಿಮಾ ಮಾಡಿದ್ದಾರೆ. “ಕೆಂಪಿರ್ವೆ’ ಚಿತ್ರಕ್ಕೆ ಕಥೆ ಒದಗಿಸಿರೋದು ಅವರ ಸಹೋದರ ಲಕ್ಷ್ಮಣ.
ಐಟಿ ಉದ್ಯೋಗಿಯಾಗಿರುವ ಲಕ್ಷ್ಮಣ ಚಿತ್ರಕ್ಕೆ ಕಥೆ, ಸಂಭಾಷಣೆಯ ಜೊತೆಗೆ ಪ್ರಮುಖ ಪಾತ್ರ ಕೂಡಾ ಮಾಡಿದ್ದಾರೆ.
ಮೊದಲೇ ಹೇಳಿದಂತೆ ಚಿತ್ರದಲ್ಲಿ ಶ್ರೀಸಾಮಾನ್ಯರ ತಾಳ್ಮೆ ಕೆಟ್ಟರೆ ಏನೆಲ್ಲಾ ಆಗಬಹುದು, ಅವರ ಶಕ್ತಿ ಏನು ಎಂಬ ಅಂಶವನ್ನಿಟ್ಟುಕೊಂಡು ಸಿನಿಮಾ ಮಾಡಿದ್ದಾರಂತೆ ವೆಂಕಟ್. “ನಮ್ಮ ತಂಟೆಗೆ ಬಂದರೆ ಖಂಡಿತಾ ಬಿಡಲ್ಲ’
ಎಂಬ ಅಂಶವನ್ನು ಕೂಡಾ ಇಲ್ಲಿ ಹೇಳಲಾಗಿದೆಯಂತೆ. ಚಿತ್ರದಲ್ಲಿ ಹಿರಿಯ ನಟ ದತ್ತಣ್ಣ ಪ್ರಮುಖ ಪಾತ್ರ ಮಾಡಿದ್ದಾರೆ. ಹಾಗೆ ನೋಡಿದರೆ ಅವರೇ ಈ ಚಿತ್ರದ ಹೀರೋ. ವೆಂಕಟ್ ಕಥೆ ಸಿದಟಛಿವಾದ ಮೇಲೆ ದತ್ತಣ್ಣ ಅವರನ್ನು ಭೇಟಿಯಾದರಂತೆ. ದತ್ತಣ್ಣ ಅವರು ಕೆಲವು ಅಂಶಗಳನ್ನು ಹೇಳುವ ಮೂಲಕ ಕಥೆಯನ್ನು ಮತ್ತಷ್ಟು ಗಟ್ಟಿಗೊಳಿಸಿದರಂತೆ. “ಶ್ರೀಸಾಮಾನ್ಯನ ಪ್ರತಿಬಿಂಬವಾಗಿ ಈ ಸಿನಿಮಾದಲ್ಲಿ ಮೂಡಿಬಂದಿದೆ. ತುಂಬಾ ನೈಜವಾಗಿ ಮಾಡಿದ್ದೇವೆ. ನೀವು ಪಾರ್ಕ್ನಲ್ಲಿ ಇಂತಹ ಸಂಭಾಷಣೆಗಳನ್ನು ಕೇಳಿರುತ್ತೀರಿ. ಆ ತರಹದ ಹತ್ತಿರವಾಗುವ ಹಾಗೂ ದಿನನಿತ್ಯ ಕೇಳುವಂತಹ ಸಂಭಾಷಣೆಯನ್ನೇ ಇಲ್ಲಿ ಬಳಸಲಾಗಿದೆ’ ಎನ್ನುವುದು ವೆಂಕಟ್ ಮಾತು. ಚಿತ್ರದಲ್ಲಿ ಸುಮಾರು 48 ಪಾತ್ರಗಳು ಬಂದು ಹೋಗುತ್ತವೆಯಂತೆ. ಪ್ರತಿ ಪಾತ್ರ ಕೂಡಾ ಸಿನಿಮಾದ ಪ್ರಮುಖ ಪಾತ್ರಗಳು ಎಂಬುದು ವಿಶೇಷ.
ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ ದತ್ತಣ್ಣ ಅವರಿಗೆ ಇದು ಹೊಸ ಬಗೆಯ ಹಾಗೂ ಭರವಸೆ ಮೂಡಿಸುವ ಸಿನಿಮಾ ಎನಿಸಿದೆ. “ಹುಡುಗರು ಕಥೆ ತುಂಬಾ ಚೆನ್ನಾಗಿ ಮಾಡಿಕೊಂಡು ಬಂದಿದ್ದರು.ಅದರಂತೆ ಅಚ್ಚುಕಟ್ಟಾಗಿ ಸಿನಿಮಾ ಮಾಡಿದ್ದಾರೆ. ಶ್ರೀಸಾಮಾನ್ಯ ಸಿಡಿದೆದ್ದರೆ ಏನಾಗುತ್ತದೆ ಎಂಬ ಅಂಶದೊಂದಿಗೆ ಚಿತ್ರ ಸಾಗುತ್ತದೆ.
ತನ್ನದೇ ಆದ ಹೊಸ ಕಾನ್ಸೆಪ್ಟ್ನಿಂದ ಈ ಸಿನಿಮಾ ಗಮನಸೆಳೆಯುತ್ತದೆ ಎಂಬ ವಿಶ್ವಾಸವಿದೆ. ತಂಡದ
ಪ್ರತಿಯೊಬ್ಬರು ಒಟ್ಟಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ, ಸಿನಿಮಾ ಚೆನ್ನಾಗಿ ಮೂಡಿಬಂದಿದೆ’ ಎನ್ನುವುದು ದತ್ತಣ್ಣ ಮಾತು. ಚಿತ್ರದಲ್ಲಿ ಉಮೇಶ್ ಬಣಕಾರ್ ಕೂಡಾ ನಟಿಸಿದ್ದು, ಅವರಿಲ್ಲಿ ಕಾಮಿಡಿ ಪಾತ್ರ ಮಾಡಿದ್ದಾರಂತೆ. ಆರಂಭದಲ್ಲಿ ದತ್ತಣ್ಣ ಜೊತೆ ನಟಿಸುವಾಗ ಎಲ್ಲಿ ಅವರಿಂದ ಬೈಯಿಸಿಕೊಳ್ಳುತ್ತೇನೋ ಎಂಬ ಭಯ ಅವರಿಗೆ ಕಾಡಿತ್ತಂತೆ. ಆದರೆ, ನಟಿಸುತ್ತಾ ಆ ಭಯ ಹೋಯಿತಂತೆ. ಚಿತ್ರದಲ್ಲಿ ಭಾಸ್ಕರ್ ಕೂಡಾ ನಟಿಸಿದ್ದು, ಸಣ್ಣ ಪಾತ್ರವಾದರೂ ಚಿತ್ರಕ್ಕೆ ತಿರುವು ಕೊಡುವಂತಿದೆ ಎನ್ನುವುದು ಅವರ ಮಾತು. ಚಿತ್ರ ಸದ್ಯದಲ್ಲೇ ತೆರೆಕಾಣಲಿದೆ.