ಇದು ಆರ್ಟ್ ಸಿನಿಮಾ ಅಂತೂ ಅಲ್ಲ…
Team Udayavani, May 10, 2019, 6:00 AM IST
ಸೂಜಿದಾರ ಚಿತ್ರದ ನಾಯಕಿ ಹರಿಪ್ರಿಯಾ
ಇದರಲ್ಲಿ ಟ್ವಿಸ್ಟ್ಸ್ ಆ್ಯಂಡ್ ಟರ್ನ್ಸ್ ಇದೆ. ಫಸ್ಟ್ ಹಾಫ್ ನೋಡುಗರನ್ನ ಒಂದು ಮೂಡ್ನಲ್ಲಿ ಕರೆದುಕೊಂಡು ಹೋದರೆ, ಸೆಕೆಂಡ್ ಹಾಫ್ ಮತ್ತೂಂದು ಮೂಡ್ಗೆ ಕರೆದುಕೊಂಡು ಹೋಗುತ್ತದೆ. ಒಂದೇ ಮಾತಿನಲ್ಲಿ ಹೇಳ್ಳೋದಾದ್ರೆ, ಯಾವುದೇ ಮುಜುಗರವಿಲ್ಲದೆ, ಇಡೀ ಫ್ಯಾಮಿಲಿ ಕೂತು ನೋಡಿ, ಆಸ್ವಾಧಿಸಬಹುದಾದ ಚಿತ್ರ ಇದು’ ಎನ್ನುವುದು ಮೌನೇಶ್ ಮಾತು. ಇನ್ನು ‘ಸೂಜಿದಾರ’ ಚಿತ್ರದ ಕಥಾಹಂದರದ ಬಗ್ಗೆ ಮಾತನಾಡುವ ನಿರ್ದೇಶಕ ಮೌನೇಶ್ ಬಡಿಗೇರ್, ‘ಚಿತ್ರದ ಕಥೆ ಇಂದಿನ ಸಮಾಜದಲ್ಲಿ ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವಂಥದ್ದು. ಒಬ್ಬ ವ್ಯಕ್ತಿ ತಾನು ಮಾಡದಿರುವ ತಪ್ಪಿಗೆ ಊರು ಬಿಟ್ಟು ಅಲೆಮಾರಿ ಥರ ಬದುಕಬೇಕಾಗುತ್ತದೆ. ಅವನ ಆ ಜರ್ನಿಯಲ್ಲಿ ಏನೇನು ತಿರುವುಗಳು ಎದುರಾಗುತ್ತವೆ ಅನ್ನೋದೆ ಈ ಚಿತ್ರದ ಕಥೆಯ ಒಂದು ಎಳೆ. ‘ಸೂಜಿದಾರ’ ಮನುಷ್ಯನ ಅಸ್ತಿತ್ವದ ಬಗ್ಗೆ ಹಲವು ಆಲೋಚನೆಗಳನ್ನು ಹಚ್ಚುತ್ತದೆ. ನಮ್ಮ ಅಸ್ತಿತ್ವವನ್ನು ನಿರ್ಧರಿಸುವ ಸಮಾಜದ ಬಗ್ಗೆ, ನಮ್ಮ ಬದುಕಿನ ಬಗ್ಗೆ ಅನೇಕ ಪ್ರಶ್ನೆಗಳನ್ನು ಮೂಡಿಸುತ್ತದೆ. ಎರಡೂ ಕಾಲು ಗಂಟೆ ಕುರ್ಚಿಯ ತುದಿಯಲ್ಲಿ ಕುಳಿತುಕೊಳ್ಳುವಂತೆ ಮಾಡಿ ನಮ್ಮ ಅಸ್ವಿತ್ವವನ್ನೇ ಪ್ರಶ್ನಿಸುವ ಚಿತ್ರ’ ಎನ್ನುತ್ತಾರೆ.
‘ಸೂಜಿದಾರ’ ಚಿತ್ರದ ಪಾತ್ರಗಳು ವಿಭಿನ್ನವಾಗಿದ್ದರಿಂದ, ಅದನ್ನು ತೋರಿಸುವ ಲೊಕೇಶನ್ಗಳೂ ಕೂಡ ವಿಭಿನ್ನವಾಗಿಯೇ ಇರಬೇಕಾಗಿತ್ತು. ಹಾಗಾಗಿ ಸಾಕಷ್ಟು ಸ್ಥಳಗಳನ್ನು ಜಾಲಾಡಿದ ನಂತರ ಚಿತ್ರತಂಡ ತಮಗೆ ಬೇಕಾದ ಒಂದಷ್ಟು ಲೊಕೇಷನ್ಗಳಲ್ಲಿ ಶೂಟಿಂಗ್ ಮಾಡಲು ಮುಂದಾಯಿತು. ಚಿತ್ರದ ಶೂಟಿಂಗ್ಗೆ ಎದುರಾದ ಸವಾಲುಗಳ ಬಗ್ಗೆ ಮಾತನಾಡುವ ಮೌನೇಶ್, ‘ನನಗೆ ಸಿನಿಮಾ ತೀರಾ ಹೊಸ ಮಾಧ್ಯಮವೇನಲ್ಲ. ರಂಗಭೂಮಿ ಮತ್ತು ಹೊರಗೆ ನಾನು ಅಭಿನಯ, ಸಿನಿಮಾ ಪಾಠ ಮಾಡುತ್ತಿದ್ದರಿಂದ ಸಿನಿಮಾದ ಜೊತೆ ಮೊದಲಿನಿಂದಲೂ ನನಗೆ ನಂಟಿತ್ತು. ನನ್ನ ಪ್ರಕಾರ ಲೈವ್ ಪರ್ಫಾರ್ಮೆನ್ಸ್ ಅಥವಾ ಕ್ಯಾಮರಾ ಪರ್ಫಾರ್ಮೆನ್ಸ್ಗೆ ಅಂಥ ವ್ಯತ್ಯಾಸವೇನಿಲ್ಲ. ಆದರೆ ಸಿನಿಮಾದ ಮೇಕಿಂಗ್ನಲ್ಲಿ ತುಂಬಾ ಚಾಲೆಂಜಿಂಗ್ ಆಗಿತ್ತು. ಚಿತ್ರದಲ್ಲಿ ಬರುವ ದೃಶ್ಯಕ್ಕೆ ಹಳೆಯ ವಠಾರದ ಮನೆ ಬೇಕಿತ್ತು. ಎಲ್ಲಿ ಹುಡುಕಿದರೂ, ನಮಗೆ ಬೇಕಾದಂಥ ಮನೆ ಸಿಗಲಿಲ್ಲ. ಕೊನೆಗೆ ಅದು ತುಮಕೂರಿನಲ್ಲಿ ಸಿಕ್ಕಿತು. ಕೊನೆಗೆ ಆ ವಠಾರವನ್ನು ತುಮಕೂರಿನಲ್ಲಿ, ವಠಾರದ ಮನೆಯ ಒಳಾಂಗಣ ದೃಶ್ಯಗಳನ್ನ ಬೆಂಗಳೂರಿನಲ್ಲಿ, ವಠಾರದ ಹೊರಭಾಗವನ್ನು ಚಿತ್ರದುರ್ಗದಲ್ಲಿ ಚಿತ್ರೀಕರಿಸಬೇಕಾಯಿತು. ಚಿತ್ರದ ಒಂದು ದೃಶ್ಯಕ್ಕಾಗಿ ಇಂಥ ಶ್ರಮಪಡಬೇಕಾಯಿತು. ಚಿತ್ರ ನೋಡುವಾಗ ಅದ್ಯಾವುದೂ ಗೊತ್ತಾಗುವುದಿಲ್ಲ. ಚಿತ್ರದ ಮೇಕಿಂಗ್ನಲ್ಲಿ ಇಂಥ ಸಾಕಷ್ಟು ಚಾಲೆಂಜಿಂಗ್ ಎನಿಸುವಂಥ ಉದಾಹರಣೆಗಳು ಸಿಗುತ್ತದೆ’ ಎನ್ನುತ್ತಾರೆ ಮೌನೇಶ್.
‘ಬೇರೆ ಭಾಷೆಗಳಲ್ಲಿ ಅಲ್ಲಿನ ಸ್ಟಾರ್ ಕಲಾವಿದರು ಬೇರೆ ಬೇರೆ ಥರದ ಚಿತ್ರಗಳಿಗೆ ಪಾತ್ರಗಳಿಗೆ ತಮ್ಮನ್ನು ತೆರೆದುಕೊಳ್ಳುತ್ತಿದ್ದಾರೆ. ಪರಭಾಷೆಗಳಲ್ಲಿ ಈಗಾಗಲೇ ಈ ಥರದ ಅನೇಕ ಪ್ರಯೋಗಗಳು ಆಗುತ್ತಿದೆ. ಅಲ್ಲಿನ ಸ್ಟಾರ್ ನಟರ ಫ್ಯಾನ್ಸ್ ಅಭಿರುಚಿಯನ್ನು ವಿಸ್ತರಿಸುವಂಥ ಕೆಲಸ ಆಗ್ತಿದೆ. ಹಾಗಾಗಿ ಅಲ್ಲಿನ ಫ್ಯಾನ್ಸ್ ಕೂಡ ನಿಧಾನವಾಗಿ ಹೊಸಥರದ ಚಿತ್ರಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ನಮ್ಮಲ್ಲಿ ಫ್ಯಾನ್ಸ್ನ ಅಭಿರುಚಿ ವಿಸ್ತರಿಸುವ ಕೆಲಸ ಆಗ್ತಿಲ್ಲ’ ಎನ್ನುತ್ತಾರೆ ಮೌನೇಶ್. ‘ಹೀಗಾಗಿ ಅಂಥದ್ದೇ ಒಂದು ಪ್ರಯೋಗದ ಭಾಗವಾಗಿ ಕನ್ನಡದಲ್ಲಿ ತನ್ನದೇಯಾದ ಫ್ಯಾನ್ಸ್ ಹೊಂದಿರುವ, ಪಾತ್ರಕ್ಕೆ ಜೀವತುಂಬಬಲ್ಲ ಹರಿಪ್ರಿಯಾ ಅವರನ್ನ ಚಿತ್ರಕ್ಕೆ ಅಪ್ರೋಚ್ ಮಾಡಿದೆವು. ಅವರು ಕೂಡ ಖುಷಿಯಿಂದ ಚಿತ್ರವನ್ನು ಒಪ್ಪಿಕೊಂಡರು. ಈ ಹಿಂದೆ ಎಂದೂ ಕಂಡಿರದ ರೀತಿಯಲ್ಲಿ ಇಲ್ಲಿ ಹರಿಪ್ರಿಯಾ ಅವರನ್ನು ನೋಡಬಹುದು ಎನ್ನುತ್ತಾರೆ’ ಮೌನೇಶ್ ಬಡಿಗೇರ್.
‘ಸೂಜಿದಾರ’ ಬಹುತೇಕ ರಂಗಭೂಮಿ ಮತ್ತು ಚಿತ್ರರಂಗದ ಪರಿಣಿತರ ಕೈಯಲ್ಲಿ ಮೂಡಿಬಂದ ಚಿತ್ರ. ಚಿತ್ರದ ಪ್ರಮುಖ ಪಾತ್ರದಲ್ಲಿ ನಾಯಕಿ ಹರಿಪ್ರಿಯಾ ಅವರಿಗೆ ಜೋಡಿಯಾಗಿ ರಂಗ ಪ್ರತಿಭೆ ಯಶವಂತ್ ಶೆಟ್ಟಿ ಅಭಿನಯಿಸಿದ್ದಾರೆ. ಉಳಿದಂತೆ ಸುಚೇಂದ್ರ ಪ್ರಸಾದ್, ಅಚ್ಯುತಕುಮಾರ್, ಬಿರಾದಾರ್, ಚೈತ್ರಾ ಕೋಟೂರ್, ಶ್ರೇಯಾ ಅಂಚನ್ ಹೀಗೆ ಅನೇಕ ಕಲಾವಿದರು ಇತರೆ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಅಶೋಕ್. ವಿ ರಾಮನ್ ಚಿತ್ರದ ಛಾಯಾಗ್ರಹಣ, ಮೋಹನ್. ಎಲ್ ಸಂಕಲನ, ಭಿನ್ನ ಶಡ್ಜ ಸಂಗೀತ, ಎಸ್. ಪ್ರದೀಪ್ ವರ್ಮ ಹಿನ್ನೆಲೆ ಸಂಗೀತವಿದೆ. ಸುಮಾರು 15 ವರ್ಷಗಳಿಂದ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಮೌನೇಶ್ ಬಡಿಗೇರ್ ‘ಸೂಜಿದಾರ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಜಿ.ಎಸ್.ಕಾರ್ತಿಕ ಸುಧನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ