ಎಂಟ್ರಿಗೆ ರೆಡಿಯಾದ ಟಿಪ್ಪುವರ್ಧನ್
Team Udayavani, Sep 11, 2020, 3:38 PM IST
ನಟ, ನಿರ್ದೇಶಕ ಎಂ. ಟಿಪ್ಪುವರ್ಧನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಜೊತೆಗೆ ನಟಿಸಿ, ನಿರ್ದೇಶಿಸಿರುವ “ಟಿಪ್ಪುವರ್ಧನ್’ ಚಿತ್ರ ತೆರೆಗೆ ಬರಲು ತಯಾರಾಗಿದೆ.
ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿ ತೆರೆಗೆ ಬರಲು ಸಿದ್ಧವಾಗಿರುವ “ಟಿಪ್ಪುವರ್ಧನ್’ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಿತ್ರತಂಡ ಚಾಲನೆ ನೀಡಿದ್ದು, ಇದೇ ಸೆ. 18ರಂದು ಸಾಹಸಸಿಂಹ ಡಾ. ವಿಷ್ಣುವರ್ಧನ್ ಜನ್ಮದಿನದ ಸಂಭ್ರಮದಲ್ಲಿ ಚಿತ್ರವನ್ನು ರಿಲೀಸ್ ಮಾಡಲು ಪ್ಲಾನ್ ಮಾಡಿಕೊಂಡಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ನಟ ಕಂ ಸಂಕಲನಕಾರ ನಾಗೇಂದ್ರ ಅರಸ್, ನಟ ಅಮಿತ್ ಮೊದಲಾದವರು ಹಾಜರಿದ್ದು ಚಿತ್ರಕ್ಕೆ ಶುಭ ಕೋರಿದರು.
ಇನ್ನು “ಟಿಪ್ಪುವರ್ಧನ್’ ಚಿತ್ರದಲ್ಲಿ ನಟ ಕಂ ನಿರ್ದೇಶಕ ಎಂ. ಟಿಪ್ಪುವರ್ಧನ್ ಪ್ರಾಮಾಣಿಕ ರಾಜಕಾರಣಿಯ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಎಂ. ಟಿಪ್ಪುವರ್ಧನ್, “ಈ ಚಿತ್ರದಲ್ಲಿ ಮೂರು ಹಂತದಲ್ಲಿ ಕಥೆ ಸಾಗುತ್ತದೆ. ರಾಜಕೀಯ ವ್ಯಕ್ತಿಗಳು ಜನತೆಗೆ ಯಾವಾಗಲೂ ಒಳ್ಳೆಯದನ್ನೇ ಮಾಡಬೇಕೆಂಬ ಸಂದೇಶ ಚಿತ್ರದಲ್ಲಿದೆ’ ಎಂದು ಮಾಹಿತಿ ನೀಡಿದರು.
ಇನ್ನು “ಟಿಪ್ಪುವರ್ಧನ್’ ಚಿತ್ರದಲ್ಲಿ ಅರಸಿಕೆರೆ ಕೇಶವಮೂರ್ತಿ, ಇನ್ಸಾಫ್ ಖಾನ್, ಸೂರಜ್ ಟಿಪ್ಪು, ವಟಗಲ್ ನಾಗರಾಜ್. ತೇಜಸ್ವಿನಿ, ಗೀತಪ್ರಿಯಾ, ರಮ್ಯಾ, ಮೈಕಲ್ ಮಧು. ಡಾ. ಚಿಕ್ಕಹೆಜ್ಜಾಜಿ ಮಹಾದೇವ್, ನಂದ ಕುಮಾರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ನಾಲ್ಕು ಹಾಡುಗಳಿಗೆ ಆರ್. ದಾಮೋದರ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಬಾಬು ಛಾಯಾಗ್ರಹಣ, ಕವಿತಾ ಭಂಡಾರಿ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ.
………………………………………………………………………………………………………………………………………………………
ತೆರೆಗೆ ಬರಲು ಮಹಿಷಾಸುರ ತಯಾರಿ : ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ “ಮಹಿಷಾಸುರ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಇತ್ತೀಚೆಗಷ್ಟೇ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ “ಮಹಿಷಾಸುರ’ನಿಗೆ “ಯು/ಎ’ ಪ್ರಮಾಣಪತ್ರ ಕೊಟ್ಟು ಬಿಡುಗಡೆಗೆ ಅಸ್ತು ಎಂದಿದೆ. ಅಂದಹಾಗೆ, ಈ ಚಿತ್ರದ ಹೆಸರು “ಮಹಿಷಾಸುರ’ ಅಂತಿದ್ದರೂ, ಪುರಾಣ ಕಥೆಗಳಲ್ಲಿ ಬರುವ ಮಹಿಷಾಸುರನಿಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲವಂತೆ. “ಚಿತ್ರದ ಕಥೆ ಮಹಿಷಾಸುರನ ಗುಣಾವಗುಣಗಳನ್ನು ಹೊಂದಿರುವುದರಿಂದ ಈ ಚಿತ್ರಕ್ಕೆ “ಮಹಿಷಾಸುರ’ ಅಂಥ ಟೈಟಲ್ ಇಟ್ಟಿದ್ದೇವೆ. ಇದೊಂದು ಟ್ರೈಯಾಂಗಲ್ ಲವ್ಸ್ಟೋರಿಸಿನಿಮಾ. ನಮ್ಮ ಸುತ್ತಮುತ್ತ ಕಾಣುವ, ನಿಜ ಜೀವನದಲ್ಲಿ ನಡೆದ ಕೆಲ ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ಮಾಡಿದ್ದೇವೆ. ಅದು ಏನು ಅನ್ನೋದನ್ನ ತೆರೆಮೇಲೆ ನೋಡಬೇಕು’ ಎನ್ನುತ್ತಾರೆ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ನಿರ್ದೇಶಕ ಉದಯ ಪ್ರಸನ್ನ.
ಮಳೇಕೋಟೆ ಮತ್ತು ಮೈತ್ರಿ ಪೊ›ಡಕ್ಷನ್ ಲಾಂಛನದಡಿ ತಯಾರಾಗಿರುವ “ಮಹಿಷಾಸುರ’ ಚಿತ್ರವನ್ನು ಲೀಲಾವತಿ ಸುರೇಶ್ ಕುಮಾರ್, ಪ್ರೇಮಾ ಚಂದ್ರಯ್ಯ, ನಾಗಸಂದ್ರ, ಮೈತ್ರಿ ಮಂಜುನಾಥ್ ಸೇರಿ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಸುನಿಲ್ ಕೌಶಿಕ್, ಸಾಯಿಕಿರಣ್ ಸಂಗೀತ, ಕೃಷ್ಣ
ಛಾಯಾಗ್ರಹಣ, ವೆಂಕಿ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. “ಮಹಿಷಾಸುರ’ ಚಿತ್ರದಲ್ಲಿ ನಟವಟ ನಟ ಅರ್ಜುನ್, ಬಿಂದುಶ್ರೀ, ಮಂಜು, ರಘು ಪಾಂಡೇಶ್ವರ, ರಾಕ್ಲೈನ್ ಸುಧಾಕರ್, ಮಾಸ್ಟರ್ ತುಷಾರ್, ಮಾಸ್ಟರ್ ಸುಜಿತ್, ರವಿಚಂದ್ರ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಚಿತ್ರದ ಪ್ರಮೋಶನ್ ಕೆಲಸಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಥಿಯೇಟರ್ಗಳು ಓಪನ್ ಆಗುತ್ತಿದ್ದಂತೆ, “ಮಹಿಷಾಸುರ’ನನ್ನು ತೆರೆಗೆ ತರುವ ಯೋಚನೆಯಲ್ಲಿದೆ.