ನೈಜೀರಿಯಾದ ಕತೆ: ಆಮೆ ಮತ್ತು ನಗಾರಿ


Team Udayavani, Feb 17, 2019, 12:30 AM IST

4.jpg

ಒಬ್ಬ ರಾಜನಿದ್ದ. ಅವನ ಹೆಸರು ಎಫ್ರಾಯಾಮ್‌. ಹಿರಿಯರ ಕಾಲದಿಂದಲೇ ಬಂದ ಒಂದು ನಗಾರಿ ರಾಜನ ಬಳಿ ಇತ್ತು. ಅದಕ್ಕೆ ಅದ್ಭುತವಾದ ಶಕ್ತಿ ಇತ್ತು. ನಗಾರಿಯನ್ನು ಕೋಲಿನಿಂದ ಬಾರಿಸತೊಡಗಿದರೆ ಬೇಡಿಕೊಂಡ ಎಲ್ಲ ಬಗೆಯ ತಿಂಡಿ, ತೀರ್ಥಗಳೂ ಎಲ್ಲಿಂದಲೋ ಬರುತ್ತಿದ್ದವು. ಎಷ್ಟು ತಿಂದರೂ ಮುಗಿಯುತ್ತಿರಲಿಲ್ಲ. ಬಾರಿಸುವುದನ್ನು ಒಮ್ಮೆ ನಿಲ್ಲಿಸಿದರೆ ಮತ್ತೆ ಆ ದಿನ ಎಷ್ಟು ಬಾರಿಸಿದರೂ ಏನೂ ಬರುತ್ತಿರಲಿಲ್ಲ. ರಾಜನು ಅದನ್ನು ದಿನವೂ ಬಳಸುತ್ತಿರಲಿಲ್ಲ. ಬರಗಾಲ ಬಂದು ಪ್ರಜೆಗಳಿಗೆ ಆಹಾರವೇ ಸಿಗದಾದಾಗ ನಗಾರಿಯನ್ನು ಬಾರಿಸಿ ಹೊಟ್ಟೆ ತುಂಬ ಆಹಾರ ತರಿಸಿ ಕೊಡುತ್ತಿದ್ದ. ಶತ್ರು ರಾಜರ ಸೈನಿಕರು ಬಂದು ಕೋಟೆಗೆ ಮುತ್ತಿಕೊಂಡರೆ ಅವರ ಮುಂದೆ ಹೋಗಿ ಅದನ್ನು ಬಾರಿಸಿ ವಿಧವಿಧದ ಮದ್ಯಗಳನ್ನು ತರಿಸುತ್ತಿದ್ದ. ಸೈನಿಕರು ಮದ್ಯ ಸೇವನೆ ಮಾಡಿ ತೂರಾಡುತ್ತಿರುವಾಗ ಅವರನ್ನು ಕೊಂದು ಹಾಕುತ್ತಿದ್ದ. ಇದರಿಂದಾಗಿ ಅವನನ್ನು ಎದುರಿಸಲು ಯಾವ ದೇಶದವರೂ ಮುಂದಾಗುತ್ತಿರಲಿಲ್ಲ.

ಒಂದು ಸಲ ರಾಜನ ಮಡದಿ ಒಂಟೆಯ ಮೇಲೆ ಕುಳಿತುಕೊಂಡು ತನ್ನ ತವರುಮನೆಗೆ ಹೋಗಿದ್ದಳು. ಮರಳಿ ಬರುವಾಗ ಬಿಸಿಲು ಸುಡುತ್ತಿತ್ತು. ಹಸಿವೆಯೂ ಆಗುತ್ತಿತ್ತು. ಬಾಯಾರಿಕೆಯಿಂದ ಕಂಗಾಲಾಗಿದ್ದ ಅವಳು ಏನಾದರೂ ಸಿಗುವುದೋ ಎಂದು ಅತ್ತಿತ್ತ ನೋಡಿದಳು. ಆಗ ಒಂದು ಪಾಮ್‌ ಮರದಿಂದ ಒಂದೊಂದಾಗಿ ಬೀಳುತ್ತಿರುವ ಹಣ್ಣುಗಳನ್ನು ಗಮನಿಸಿದಳು. ಅದನ್ನಾದರೂ ತಿನ್ನುವುದೆಂದು ನಿರ್ಧರಿಸಿ ಮರದ ಕೆಳಗೆ ಹೋಗಿ ಒಂದೆರಡು ಹಣ್ಣುಗಳನ್ನು ಆಯ್ದುಕೊಂಡು ತಿಂದುಬಿಟ್ಟಳು.

ಆಗ ಮರದ ಮೇಲೆ ಹತ್ತಿ ಹಣ್ಣುಗಳನ್ನು ಕೊಯ್ಯುತ್ತಿದ್ದ ಒಂದು ಆಮೆ, “”ನಾನು ನನ್ನ ಮಕ್ಕಳ ಊಟಕ್ಕೆಂದು ಕೆಳಗೆ ಹಾಕುತ್ತಿರುವ ಹಣ್ಣುಗಳನ್ನು ಹೆಕ್ಕಿ ತಿಂದಿರುವುದು ಅಪರಾಧವಲ್ಲವೆ? ತಪ್ಪು ಮಾಡಿದವರಿಗೆ ಈ ದೇಶದ ರಾಜನು ತನ್ನ ಬಂಧುಗಳಾದರೂ ಸರಿ, ಕ್ಷಮಿಸದೆ ಶಿಕ್ಷೆ ಕೊಡುತ್ತಾನೆಂಬುದು ನಿನಗೆ ತಿಳಿದಿಲ್ಲವೆ?” ಎಂದು ಕೇಳಿತು.

ಆಮೆಯನ್ನು ಕಂಡು ರಾಜನ ಮಡದಿ ನಡುಗಿಬಿಟ್ಟಳು. ಅದುವರೆಗೂ ಆಕೆಗೆ ಆಮೆ ಮರದಲ್ಲಿರುವುದು ಗೊತ್ತಿರಲಿಲ್ಲ. ಅವಳು ತಲೆತಗ್ಗಿಸಿ, “”ತಿಳಿಯದೆ ಅಪರಾಧ ಮಾಡಿದೆ. ಮನ್ನಿಸಬೇಕು” ಎಂದು ಬೇಡಿಕೊಂಡಳು. ಆದರೆ ಆಮೆ ಒಪ್ಪಲಿಲ್ಲ. ಅವಳ ಜೊತೆಗೆ ಅರಮನೆಗೆ ಬಂದಿತು. ಅವಳು ತನಗೆ ಎಸಗಿದ ಅಪರಾಧವನ್ನು ರಾಜನ ಮುಂದೆ ವಿವರಿಸಿತು. “”ದೇಶದ ಕಾನೂನಿನ ಮುಂದೆ ಎಲ್ಲರೂ ಸಮಾನರು. ಅಪರಾಧ ಎಸಗಿದ ಮಹಾರಾಣಿಗೆ ಯೋಗ್ಯ ಶಿಕ್ಷೆಯನ್ನೇ ವಿಧಿಸಬೇಕು” ಎಂದು ಕೋರಿತು.

“”ನಿನ್ನ ಮಾತು ಸತ್ಯವೇ. ಆದರೆ ರಾಣಿಯ ಮೇಲೆ ನನಗೆ ಅತಿಶಯವಾದ ಪ್ರೀತಿಯಿದೆ. ಅವಳು ಮಾಡಿದ ತಪ್ಪಿಗೆ ಪ್ರತಿಯಾಗಿ ಏನಾದರೂ ವಸ್ತುವನ್ನು ಸ್ವೀಕರಿಸಿ ನೀನು ದೊಡ್ಡ ಮನಸ್ಸಿನಿಂದ ಕ್ಷಮಿಸಬಹುದೆ?” ಎಂದು ರಾಜನು ಕೇಳಿದ. ಆಮೆ ಯೋಚಿಸಿತು. “”ಹಾಗೂ ಆಗಬಹುದು. ನಿನ್ನ ಬಳಿ ಬೇಕಾದ ಆಹಾರವನ್ನು ತರಿಸುವ ನಗಾರಿ ಇದೆಯಲ್ಲವೆ? ಅದನ್ನು ಒಂದು ದಿನದ ಮಟ್ಟಿಗೆ ನನಗೆ ಕೊಡಬೇಕು. ಮನೆಗೆ ತೆಗೆದುಕೊಂಡು ಹೋಗಿ ನನ್ನ ಹೆಂಡತಿ ಮಕ್ಕಳು ಆಶಿಸುವ ಆಹಾರ, ಪಾನೀಯಗಳನ್ನು ತರಿಸಿ, ಮನದಣಿಯೆ ತಿಂದು, ಕುಡಿದು ಮೋಜು ಮಾಡುತ್ತೇನೆ. ಮರುದಿನ ನನಗದು ಬೇಡ, ನೀನೇ ತೆಗೆದುಕೊಂಡು ಹೋಗಬಹುದು” ಎಂದು ಕೇಳಿತು.

ರಾಜನು ಯೋಚಿಸಿದ. ಒಂದು ದಿನ ನಗಾರಿಯನ್ನು ಆಮೆಗೆ ಕೊಟ್ಟರೆ ಹಾನಿಯೇನೂ ಇಲ್ಲ ಅನಿಸಿತು. ಅದಕ್ಕೆ ಸಮ್ಮತಿಸಿದ. “”ನಗಾರಿಯನ್ನು ಕೊಡುತ್ತೇನೆ. ಆದರೆ ಅದರಿಂದ ಒಂದು ಸಲ ಮಾತ್ರ ಆಹಾರ, ಪಾನೀಯಗಳನ್ನು ಬೇಕಾದಷ್ಟು ತರಿಸಬೇಕು. ಎರಡನೆಯ ಸಲ ಬಾರಿಸಿದರೆ ಅದರ ಕೋಲು ಮುರಿಯುತ್ತದೆ. ನಗಾರಿ ನಿರುಪಯುಕ್ತವಾಗುತ್ತದೆ. ಇದನ್ನು ಸೇವಕರ ಮೂಲಕ ನಿನ್ನ ಮನೆಗೆ ಕಳುಹಿಸುತ್ತೇನೆ, ಮನದಣಿಯೆ ನಿನ್ನ ಸಂಸಾರದವರೊಂದಿಗೆ ಮೃಷ್ಟಾನ್ನಗಳನ್ನು ಸೇವಿಸು. ನಾಳೆ ನನ್ನ ಸೇವಕರು ನಿನ್ನಲ್ಲಿಗೆ ಬಂದಾಗ ನಗಾರಿಯನ್ನು ಜೋಪಾನವಾಗಿ ಹಿಂತಿರುಗಿಸು” ಎಂದು ಹೇಳಿದ. ಈ ಮಾತಿಗೆ ಆಮೆ ಸಮ್ಮತಿಸಿತು.

ಆಮೆಯ ಮನೆಗೆ ರಾಜನ ಸೇವಕರು ನಗಾರಿ ತಂದುಕೊಟ್ಟರು. ಆಮೆ ಅದನ್ನು ಬಾರಿಸಿ ಹೆಂಡತಿ, ಮಕ್ಕಳಿಗೆ ಇಷ್ಟವಾಗುವ ಖಾದ್ಯಗಳನ್ನು, ಪಾನೀಯಗಳನ್ನು ತರಿಸಿತು. ಎಲ್ಲರೂ ಹೊಟ್ಟೆ ಬಿರಿಯುವಷ್ಟು ತಿಂದರು. ರಾತ್ರೆಯಾದಾಗ ಆಮೆಗೆ ಒಂದು ಯೋಚನೆ ಬಂದಿತು. ನಾಳೆ ನಗಾರಿಯನ್ನು ಕೊಂಡುಹೋಗಲು ರಾಜನ ಸೇವಕರು ಬರುತ್ತಾರೆ. ಇಷ್ಟು ಅನುಕೂಲವಿರುವ ನಗಾರಿಯನ್ನು ರಾಜನಿಗೆ ಖಂಡಿತ ಕೊಡಬಾರದು ಎಂದು ನಿರ್ಧರಿಸಿ ಒಂದು ಉಪಾಯ ಮಾಡಿತು.

ಆಮೆಯು ಕಾಡಿನಲ್ಲಿರುವ ಎಲ್ಲ ಹುಲಿ, ಚಿರತೆ, ಕರಡಿ ಮುಂತಾದ ಸಮಸ್ತ ಪ್ರಾಣಿಗಳಿಗೂ ಆಮಂತ್ರಣ ಕಳುಹಿಸಿ, “”ನಾಳೆ ಬೆಳಗ್ಗೆ ನನ್ನ ಮನೆಯಲ್ಲಿ ಒಂದು ಔತಣ ಕೂಟವಿದೆ. ನೀವು ತಪ್ಪದೆ ಬರಬೇಕು. ನಿಮಗೆಲ್ಲರಿಗೂ ಯಾವ ತಿಂಡಿ ಇಷ್ಟವೋ ಅದನ್ನು ಹೊಟ್ಟೆ ತುಂಬ ತಿನ್ನಬೇಕು” ಎಂದು ಕೇಳಿಕೊಂಡಿತು. ಬೆಳಗಾದಾಗ ಪ್ರಾಣಿಗಳೆಲ್ಲವೂ ಅದರ ಮನೆಗೆ ಆಗಮಿಸಿದವು. ನಗಾರಿಗೆ ಬಾರಿಸಿ ಆಮೆ ಬೇಕಾದುದನ್ನೆಲ್ಲ ತರಿಸಿತು. ಎಲ್ಲವೂ ತಿನ್ನುತ್ತಿರುವಾಗ ನಗಾರಿಯನ್ನು ಒಯ್ಯಲು ರಾಜನ ಸೇವಕರು ಬಂದರು. ಆದರೆ ಅಲ್ಲಿ ಸೇರಿದ ಹುಲಿ, ಸಿಂಹ ಮುಂತಾದ ಮೃಗಗಳನ್ನು ಕಂಡ ಕೂಡಲೇ ಭಯಭೀತರಾಗಿ ಒಂದೇ ಓಟಕ್ಕೆ ಅರಮನೆಯ ದಾರಿ ಹಿಡಿದರು. ರಾಜನ ಬಳಿ, “”ಅದು ಸಾಮಾನ್ಯವಾದ ಆಮೆ ಅಲ್ಲ. ಅದಕ್ಕೆ ದೊಡ್ಡ ದೊಡ್ಡ ಮೃಗಗಳೆಲ್ಲವೂ ಗೆಳೆಯರು. ಇನ್ನೊಮ್ಮೆ ಅಲ್ಲಿಗೆ ಹೋಗಲು ನಮ್ಮಿಂದ ಸಾಧ್ಯವಿಲ್ಲ” ಎಂದು ಹೇಳಿದರು. ರಾಜನು ಕೂಡ ವಿಧಿಯಿಲ್ಲದೆ ನಗಾರಿಯ ಆಸೆಯನ್ನು ತೊರೆದುಬಿಟ್ಟ.

ತನ್ನ ಉಪಾಯ ಫ‌ಲಿಸಿತೆಂದು ಆಮೆಗೂ ಸಂತೋಷವಾಯಿತು. ಪ್ರಾಣಿಗಳೊಂದಿಗೆ, “”ಪ್ರತೀ ದಿನ ನೀವೆಲ್ಲರೂ ಬಂದು ಹೀಗೆಯೇ ಸುಗ್ರಾಸ ಭೋಜನವನ್ನು ಉಂಡು ಹೋಗಬೇಕು. ಆದರೆ ನನಗೆ ಶತ್ರುಗಳು ಯಾರಾದರೂ ಕಾಟ ಕೊಟ್ಟರೆ ನನ್ನ ರಕ್ಷಣೆಗೆ ನಿಲ್ಲಬೇಕು” ಎಂದು ಕೋರಿಕೊಂಡಿತು. ಅವು, “”ನಿನ್ನಂಥ ಧರ್ಮಿಷ್ಠನನ್ನು ಕೈಬಿಡುವುದುಂಟೆ? ದಿನವೂ ನಿನ್ನಲ್ಲಿಗೆ ಬಂದು ಊಟ ಮಾಡುತ್ತೇವೆ. ನಿನ್ನ ಕೂದಲು ಕೊಂಕದಂತೆ ಕಾಪಾಡುತ್ತೇವೆ” ಎಂದು ಭರವಸೆ ನೀಡಿದವು.

ಆದರೂ ರಾಜನ ಮೇಲೆ ಆಮೆಗೆ ನಂಬಿಕೆಯಿರಲಿಲ್ಲ. ಏನಾದರೊಂದು ತಂತ್ರ ಹೂಡಿ ಮತ್ತೆ ನಗಾರಿಯನ್ನು ಪಡೆಯಲು ಅವನು ಬರಬಹುದು. ಆಗ ಅವನ ಕಣ್ಣಿಗೆ ಅದು ಬೀಳದಂತೆ ಎಲ್ಲಾದರೂ ರಹಸ್ಯವಾಗಿ ಇಡಬೇಕು. ಎಂದು ನಿರ್ಧರಿಸಿ ಕಾಡಿಗೆ ತೆಗೆದುಕೊಂಡು ಹೋಗಿ ಒಂದು ಮುಳ್ಳುಮರದ ಪೊಟರೆಯೊಳಗೆ ನಗಾರಿಯನ್ನು ರಹಸ್ಯವಾಗಿ ಇರಿಸಿ ಬಂದಿತು. ತನ್ನ ಹೆಂಡತಿ ಮಕ್ಕಳಿಗೂ ಅದು ಎಲ್ಲಿದೆಯೆಂದು ಹೇಳಲಿಲ್ಲ. ದಿನವೂ ಬೆಳಗ್ಗೆ ಗುಟ್ಟಾಗಿ ತಾನೊಬ್ಬನೇ ಅಲ್ಲಿಗೆ ಹೋಗಿ ನಗಾರಿಯನ್ನು ಬಾರಿಸುತ್ತಿತ್ತು. ಆಹಾರ ಪದಾರ್ಥಗಳನ್ನು ತರಿಸಿ ಪ್ರಾಣಿಗಳಿಗೆ ಬಡಿಸಿ, ತಾನೂ ತಿನ್ನುತ್ತಿತ್ತು.

ಒಂದು ದಿನ ಆಮೆ ನಗಾರಿಗೆ ಬಾರಿಸಿ ಬಹು ರುಚಿಕರವಾದ ದ್ರಾಕ್ಷಾರಸವನ್ನು ತರಿಸಿತು. ಆಮೆಯ ಮಗನಿಗೆ ಅದನ್ನು ಎಷ್ಟು ಕುಡಿದರೂ ತೃಪ್ತಿಯಾಗಲಿಲ್ಲ. ಇನ್ನೂ ಕುಡಿಯಬೇಕು ಎನಿಸಿತು. ಪಾನೀಯದ ಪಾತ್ರೆ ಖಾಲಿಯಾಗಿತ್ತು. ಮತ್ತೆ ದ್ರಾಕ್ಷಾರಸವನ್ನು ತರಿಸಿ ಕೊಡಲು ಹಟ ಹಿಡಿಯಿತು. ಆದರೆ ಎರಡನೆಯ ಸಲ ನಗಾರಿಗೆ ಬಾರಿಸಿ ಪಾನೀಯ ತರಿಸಲು ಆಮೆ ಒಪ್ಪಲಿಲ್ಲ. ಆಗ ಆಮೆಯ ಮಗ ಹೇಗಾದರೂ ಮಾಡಿ ಈ ನಗಾರಿಯಿರುವ ಸ್ಥಳವನ್ನು ತಿಳಿದುಕೊಳ್ಳಬೇಕು. ತನಗೆ ಬೇಕಾದಾಗ ಬಯಸಿದ ಆಹಾರವನ್ನು ತರಿಸಿ ತಿನ್ನಬೇಕು ಎಂದು ಯೋಚಿಸಿತು. ಮರುದಿನ ಆಮೆ ನಗಾರಿಯ ಬಳಿಗೆ ಹೋಗುವಾಗ ಒಂದು ಚೀಲದಲ್ಲಿ ಬೂದಿ ತುಂಬಿಸಿ ಆಮೆಗೆ ತಿಳಿಯದಂತೆ ಅದರ ಬಾಲಕ್ಕೆ ಕಟ್ಟಿತು. ಚೀಲಕ್ಕೊಂದು ರಂಧ್ರ ಮಾಡಿತು. ಆಮೆ ಹೋಗುವಾಗ ದಾರಿಯುದ್ದಕ್ಕೂ ಬೂದಿ ಸೋರಿತು. ಇದರಿಂದ ಆಮೆಯ ಮಗನಿಗೆ ನಗಾರಿಯಿರುವ ಮರದ ಬಳಿಗೆ ಸುಲಭವಾಗಿ ಹೋಗುವುದು ಸಾಧ್ಯವಾಯಿತು.

ಒಮ್ಮೆ ಆಹಾರ ತರಿಸಿದ ಮೇಲೆ ಮತ್ತೆ ನಗಾರಿಗೆ ಬಾರಿಸಬಾರದೆಂಬುದು ಆಮೆಯ ಮಗನಿಗೆ ಗೊತ್ತಿರಲಿಲ್ಲ. ಅದು ತಂದೆಗೆ ತಿಳಿಯದಂತೆ ಮರದ ಪೊಟರೆಯಿಂದ ನಗಾರಿಯನ್ನು ತೆಗೆದು ಬಾರಿಸಿತು. ಆಗ ಅದರ ಕೋಲು ಮುರಿಯಿತು. ನಗಾರಿ ತನ್ನ ಮಹಿಮೆ ಕಳೆದುಕೊಂಡಿತು. ಮರುದಿನ ಆಮೆ ನಗಾರಿಯ ಬಳಿಗೆ ಬಂದಾಗ ಅದಕ್ಕೆ ವಿಷಯ ತಿಳಿಯಿತು. ಈ ದಿನ ಭೋಜನಕ್ಕೆ ಪ್ರಾಣಿಗಳು ಬಂದರೆ ಆಹಾರ ಕೊಡಲು ಸಾಧ್ಯವಿಲ್ಲ. ಅದರಿಂದ ಕೋಪಗೊಂಡು ಅವು ತನ್ನನ್ನು ಕೊಲ್ಲಬಹುದು ಎಂದು ಹೆದರಿ ಮುಳ್ಳಿನ ಮರದ ಅಡಿಯಲ್ಲೇ ಹೆಂಡತಿ ಮಕ್ಕಳೊಂದಿಗೆ ಮನೆ ಮಾಡಿಕೊಂಡಿತು.

ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.