ಈ ವಿರಹ ಕಡಲಾಗಿದೆ…


Team Udayavani, May 30, 2018, 1:05 PM IST

viraha.jpg

ಪ್ರೇಮ ಗಲಗಲ ಮಾತಾದರೆ ವಿರಹ ತುಟಿಬಿಚ್ಚದ ಮೌನ. ವಿರಹವನ್ನು ಅನುಭವಿಸಿದಾಗಲೇ ಪ್ರೇಮದ ಮಹತ್ವ ಅರಿವಾಗುವುದು. ವಿರಹದ ಬೆಂಕಿಯಲ್ಲಿ ಬೆಂದಾಗಲೇ ಪ್ರೇಮದ ತಂಪು ಅನುಭವವಾಗುವುದು. ಪ್ರೇಮಕ್ಕೆ ಇರುವಷ್ಟೇ ಬೆಲೆ ವಿರಹಕ್ಕೂ ಇದೆ… ವಿರಹ ಕಹಿಯಲ್ಲ, ಕಠೊರವಲ್ಲ, ವಿರಹ ಪ್ರೇಮವನ್ನು ಹದ ಮಾಡುತ್ತದೆ. ಪ್ರೇಮದ ಉತ್ತುಂಗ ಅರಿವಾಗಲು ವಿರಹದ ಮೆಟ್ಟಿಲನ್ನು ಏರಲೇಬೇಕು…  

ನೀನಿಲ್ಲದಿರುವಾಗ ನಲ್ಲಾ ಒಬ್ಬಂಟಿ ನಾನು ಮನೆಯಲ್ಲಿ, ಮೂಡುವುದು ಚಿತ್ರ ಮನದಲ್ಲಿ… ಮಧುರ ದನಿಯಲ್ಲಿ ಹಾಡು ಕೇಳಿ ಬರುತ್ತಿತ್ತು. ಅವಳಿಗನ್ನಿಸಿತು: ವಿರಹವೂ ಎಷ್ಟು ಚೆಂದ ಅಲ್ವಾ ಅಂತ. ಅವಳ ಇನಿಯನೂ ಅವಳಲ್ಲಿಗೆ ಬಾರದೆ ಸುಮಾರು ಸಮಯವಾಗಿತ್ತು. ಅವಳೂ ಕಾಯುತ್ತಿದ್ದಳು. ವಿರಹ ಅವಳನ್ನೂ ಸುಡುತ್ತಲಿತ್ತು. “ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ ವಾರದಾಗ ಮೂರು ಸರತಿ ಬಂದು ಹೋಗಾಂವಾ’ ಎಂದು ಮನದಲ್ಲೇ ಗುನುಗಿಕೊಂಡಳು. ಇನಿಯನ, ಅವನೊಡನೆ ಸಲ್ಲಾಪದ ನೆನಪಿನಿಂದ ಅವಳ ಕದಪುಗಳು ರಂಗೇರಿದವು. ಮುಖದಲ್ಲಿ ಕಂಡೂ ಕಾಣದ ಮುಗುಳ್ನಗೆ. ಯಾರಾದರೂ ಕಂಡುಬಿಟ್ಟಾರೆಂದು ಕ್ಷಣದಲ್ಲೇ ಗಂಭೀರ ಮುಖದವಳಾದಳು.

   ತಿಂಗಳಿಂದ ಅವನಿಗಾಗಿ ಕಾಯುವುದಾಗಿತ್ತು. ಇಷ್ಟೆಲ್ಲಾ ಕಾಯಿಸುವವನೇ ಅಲ್ಲ ಅವಳ ನಲ್ಲ. “ನಿನ್ನನ್ನು ನೋಡಬೇಕೆಂದರೆ ಕುದುರೆ ಮೇಲೆಯೇ ಬರ್ತೇನೆ ಹುಡುಗಿ’ ಎನ್ನುತ್ತಿದ್ದ. ಈಗ ಯಾಕೆ ಬಂದಿಲ್ಲ, ಏನಾಯಿತು ಅವನಿಗೆ? ಎಂದೆಲ್ಲಾ ಯೋಚಿಸಿ, ನಿಮಿಷಕ್ಕೊಮ್ಮೆ ಬಾಗಿಲ ಕಡೆ ನೋಡುವಳು. ಮೊದಲೇ ತಿಳಿಸದೆ ಬರುವವನಲ್ಲ; ಆದರೆ ಈ ಬಾರಿ ಅಚ್ಚರಿ ಮೂಡಿಸಲು ಅಚಾನಕ್ಕಾಗಿ ಬಂದರೆ! ತಾನು ಹೇಗಿದ್ದೇನೆ? ಓಡಿ ಹೋಗಿ ಕನ್ನಡಿಯ ಮುಂದೆ ನಿಂತಳು. ಕೆದರಿದ್ದ ಮುಂಗುರುಳು, ಹೊಳಪಾಗಿದ್ದ ಕೆನ್ನೆ, ನೀಳ ರೆಪ್ಪೆಗಳಡಿಯಲ್ಲಿ ಕಣ್ಣು ಮಿಂಚುತ್ತಿತ್ತು. ಒಲವಿನ ಧಾರೆಗಾಗಿ ಕಾತರಿಸುತ್ತಿದ್ದ ತುಟಿಗಳನ್ನು ಕೊಂಕಿಸಿದಳು. ಅವನ ಬಾಹುಬಂಧನಕ್ಕಾಗಿ ಕಾದಿದ್ದ ಅಂಕುಡೊಂಕಿನ ದೇಹವನ್ನು ನೋಡಿ ಕನ್ನಡಿ ನಕ್ಕಿತು. ಕನ್ನಡಿಯಲ್ಲಿ ತನ್ನ ಪ್ರತಿಬಿಂಬದ ಬದಲು ಅವನೇ ಕಂಡಂತಾಯಿತು. ಕನ್ನಡಿಗೆ ಕೆನ್ನೆಯೊತ್ತಿದ್ದಳು. ಜುಮುಕಿಗಳ ಭಾರಕ್ಕೆ ಕಿವಿ ಕೆಂಪಾಗಿತ್ತು. 

  ಹಾಗೆಯೇ ಸೀರೆಗಳ ಕಪಾಟಿನ ಮುಂದೆ ನಿಂತಳು. ಅವನಿಗೆ ಯಾವ ಸೀರೆ ಇಷ್ಟ? ಬಿಳಿಸೀರೆಯುಟ್ಟರೆ ಬೆಳದಿಂಗಳ ಅಪ್ಸರೆ ಎನ್ನುತ್ತಾನೆ. ಕೆಂಪಿನ ಸೀರೆಯುಟ್ಟರೆ ಕೆಂಗುಲಾಬಿ ಎನ್ನುತ್ತಾನೆ, ಗುಲಾಬಿ ರಂಗಿನ ಸೀರೆಯಾದರೆ ಗುಲಾಬಿಗೆ ಗುಲಾಬಿ ರಂಗಿನ ಗೊಡವೆಯೇಕೆ ಎನ್ನುತ್ತಾನೆ. ಕಪ್ಪು ಸೀರೆಯುಟ್ಟರೆ ಶಿಲಾಬಾಲಿಕೆ ಎನ್ನುತ್ತಾನೆ. ಒಡವೆಯೂ ಅಷ್ಟೇ, ಮುತ್ತಿನೊಡವೆ ಧರಿಸಿದರೆ ಮುಖದ ತುಂಬ ಮುತ್ತಿನ ಮಳೆಗರೆದು “ಮುತ್ತಿನೊಡವೆ ಯಾಕೆ ಹುಡುಗಿ ಇದು ಸಾಲದೇ’ ಎನ್ನುತ್ತಾನೆ. ಕೆಂಪಿನೊಡವೆ ತೊಟ್ಟರೆ ಅವಳ ಕೆನ್ನೆಯನ್ನು ಮೃದುವಾಗಿ ಕಚ್ಚಿ “ನೋಡು ಇದಕ್ಕಿಂತ ಕೆಂಪಿನೊಡವೆ ಬೇಕೇ?’ ಎಂದು ಕೇಳುತ್ತಾನೆ. ಕೈಲಿದ್ದ ಕನಕಾಂಬರ ಬಣ್ಣದ ಸೀರೆ ಈ ದಿನವಾದರೂ ನಿನ್ನ ಮೈಮೇಲೆ ಏರುವ ಸೌಭಾಗ್ಯ ಎನಗಿದೆಯೇ ಎಂದು ಕೇಳಿದಂತಾಯ್ತು. ಸೀರೆಯನ್ನು ಮೃದುವಾಗಿ ನೇವರಿಸಿದಳು. ಸೀರೆಯ ಮೇಲೆ ಹೆಣೆದಿದ್ದ ಚುಕ್ಕಿ ಚಿತ್ತಾರಗಳು ನಕ್ಕವು. ಮುದದಿಂದ ಕೆನ್ನೆಗೊತ್ತಿಕೊಂಡಳು. ಇನಿಯನ ನೆನಪಿನಲ್ಲಿ ಮನವು ಹೂವಾಯಿತು. “ಉಟ್ಟರೂ ಎಷ್ಟು ಹೊತ್ತು ಹುಡುಗೀ… ನಾನು ನಿನ್ನ ಮೈಯ ಬಿಸುಪನ್ನು ಅನುಭವಿಸುವ ಮೊದಲೇ ಕಳಚಿ ಕೆಳಗೆ ಬೀಳುತ್ತೇನೆ’ ಎಂದು ಅಣಕಿಸಿತು ಸೀರೆ. ಕೆಂಪು ಕೆಂಪಾದ ಅವಳು ಸೀರೆಯಲ್ಲಿ ಮುಖ ಮರೆಸಿಕೊಂಡಳು. 

  ಹಾಗೆಯೇ ನಿಧಾನವಾಗಿ ಬಂದು ಕಿಟಕಿಯ ಸರಳುಗಳಿಗೆ ತಲೆಯಾನಿಸಿ ನಿಂತಳು. ಧಗಧಗಿಸುತ್ತಿದ್ದ ಸೂರ್ಯ ಈಗ ತಣ್ಣಗಾಗಿದ್ದ. ಪ್ರಿಯತಮೆಯೊಡನೆ ಲಲ್ಲೆಗರೆದು ತಂಪಾದನೇನೋ ಎಂದುಕೊಂಡಳು. ಸಂಜೆಯ ಹೊಂಬಣ್ಣದ ಹಿನ್ನೆಲೆಯಲ್ಲಿ ಕುಂಕುಮದ ಬೊಟ್ಟಿನಂತೆ ರಂಗಾದ ಸೂರ್ಯ ಚಿಕ್ಕವನಾಗಿ ಕೆಳಗೆ ಜಾರುತ್ತಿದ್ದ. ಸೂರ್ಯನ ಸ್ಥಾನ ಆಕ್ರಮಿಸಲು ಚಂದ್ರ ಮೆಲ್ಲಮೆಲ್ಲನೆ ಮೇಲೇರುತ್ತಿದ್ದ. ರಜನಿ ಎಲ್ಲೆಡೆ ತನ್ನ ಸೆರಗಿನ ಚಾದರ ಹೊದಿಸುತ್ತಿದ್ದಳು. ಪ್ರಿಯತಮನನ್ನು ನೋಡುವ ಕಾತುರದಲ್ಲಿ ಅಸಂಖ್ಯ ತಾರೆಗಳು ಮಿನುಗುತ್ತಾ ಇಣುಕುತ್ತಿದ್ದವು.

   ಕಿಟಕಿಯಿಂದ ತೂರಿಬಂದ ಗಾಳಿ ಪಾರಿಜಾತದ ಘಮವನ್ನು ಹೊತ್ತು ತಂದಿತ್ತು. ಮಲ್ಲೆ ಜಾಜಿಗಳು ನಾವೇನು ಕಡಿಮೆ ಎನ್ನುತ್ತಾ ಪೈಪೋಟಿಯಿಂದ ತಮ್ಮ ನವಿರು ಕಂಪನ್ನು ಚೆಲ್ಲಾಡಿದ್ದವು. ಪಾರಿಜಾತ ಮರದ ಕೆಳಗಿದ್ದ ಕಲ್ಲು ಹಾಸಿನ ಮೇಲೆ ಬಂದು ಕುಳಿತಳು. ಅಲ್ಲಿ ಕುಳಿತು ಇಬ್ಬರೂ ಸಲ್ಲಾಪಿಸುತ್ತಿದ್ದ ದಿನಗಳು ನೆನಪಾಯಿತು. ಅವಳ ಕೈಬೆರಳಿನೊಂದಿಗೆ ತನ್ನ ಬೆರಳುಗಳನ್ನು ಹೊಸೆದು ಅವಳ ದನಿಗೆ ತನ್ನ ದನಿ ಕೂಡಿಸುತ್ತಿದ್ದ ಅವನನ್ನು ನೆನೆದು ಮುದಗೊಂಡಳು. ತುಟಿಗಳಲ್ಲಿ ನವಿರು ಲಾಸ್ಯ ತೊನೆದಾಡಿತ್ತು. ಕಂಠ ಅದಾವುದೋ ರಾಗ ಗುನುಗುನುಗಿಸಿತ್ತು.

“ನೀನೊಂದು ದಡದಲ್ಲಿ ನಾನೊಂದು ದಡದಲ್ಲಿ ನಡುವೆ ಮೈಚಾಚಿರುವ ವಿರಹಗಡಲು ಯಾವ ದೋಣಿಯು ತೇಲಿ ಎಂದು ಬರುವುದೋ ಕಾಣೆ ನೀನಿರುವ ಎದೆಯಲ್ಲಿ ನನ್ನ ಬಿಡಲು’ ಮನ ಪ್ರಿಯತಮನಿಗಾಗಿ ಕಾದು ತಪ್ತವಾಗಿತ್ತು. 
  ಮನೆಯೊಳಗೆ ಬಂದು ದೀಪ ಹಚ್ಚಿ ದೇವರ ಮುಂದಿಟ್ಟಾಗ ಮುರಳೀಧರ, ರಾಧಾಲೋಲ ಕೃಷ್ಣ ನಗುತ್ತಿದ್ದ. ಈ ದಿನವೂ ನಿನ್ನ ಹುಡುಗ ಬರಲಿಲ್ಲವೇನೇ ಹುಡುಗಿ ಎಂದು ಕೇಳುವಂತಿತ್ತು ಅವನ ನೋಟ. “ತುಂಟ, ನೀನು ನಿನ್ನ ರಾಧೆಯನ್ನು ಬಗಲಿಗೇ ಇಟ್ಟುಕೊಂಡು ನನ್ನ ಗೋಳಾಡಿಸುವೆಯಾ’ ಎಂದಿತ್ತು ಅವಳ ಮನಸ್ಸು. “ನೀನಿಲ್ಲದೆ ನನಗೇನಿದೆ? ಮನಸೆಲ್ಲ ನಿನ್ನಲ್ಲೇ ನೆಲೆಯಾಗಿದೆ, ಕನಸೆಲ್ಲ ಕಣ್ಣಲ್ಲೆ ಸೆರೆಯಾಗಿದೆ…’ ಮನ ಚಡಪಡಿಸಿತು. 

   ಸಂಜೆ ಬಿಡಿಸಿದ್ದ ಮಲ್ಲಿಗೆಯ ಮೊಗ್ಗುಗಳು ಅವಳ ಕೈಯಲ್ಲಿ ಸುಂದರ ಮಾಲೆಯಾಗಿತ್ತು. ರಾಧಾಲೋಲನಿಗೆ ಮಾಲೆ ಹಾಕಿ ಉಳಿದದ್ದು ತಾನು ಮುಡಿದಳು. ಆ ಮುರಳೀ ಮನೋಹರನ ಕಂಗಳಲ್ಲಿ ಹೊಳಪು. ಅವನ ಮಾಲೆಯಲ್ಲಿ ಪಾಲು ಗಿಟ್ಟಿಸಿಕೊಂಡ ರಾಧೆಯ ಕೆನ್ನೆಗಳು ಕೆಂಪೇರಿದ್ದವು. ರಾಧೆಯ ಲಜ್ಜಾಪೂರ್ಣ ನೋಟವನ್ನು ಹಿಡಿದಿಟ್ಟುಕೊಂಡ  ಮಾರಜನಕನ ಒಲವು ತುಂಬಿದ ದೃಷ್ಟಿಯನ್ನು ನೋಡುತ್ತ ಇವಳು ಪರವಶಳಾದಳು. ಈ ವಿಶ್ವಮಾನ್ಯ ಪ್ರೇಮದೇವತೆಗಳನ್ನು ನೋಡುತ್ತ ತನ್ನಿನಿಯ ಬಾರದಿರುವ ಸಂಕಟವನ್ನೂ ಆ ಕ್ಷಣ ಮರೆತಳು. ಗೋಡೆಯ ಗಡಿಯಾರ ಹತ್ತು ಬಾರಿಸಿದಾಗ ಈ ದಿನವೂ ಕಳೆದೇ ಹೋಯಿತಲ್ಲ ಎನಿಸಿತು. ಇಂದು ಕಳೆಯಿತು, ನಾಳೆ ಬಂದಾನು ಎಂಬ ನಿರೀಕ್ಷೆಯಲ್ಲಿ ಕನಸು ತುಂಬಿದ್ದ ಕಣ್ಣುಗಳು ಬಳಲಿ ರೆಪ್ಪೆಗಳು ಭಾರವಾದವು. 

   “ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ ನಿನ್ನ ಜೊತೆಯಿಲ್ಲದೆ, ಮಾತಿಲ್ಲದೆ ಮನ ವಿಭಾÅಂತ…’ ಅವನು ಬಂದಾಗ ಇಬ್ಬರೂ ಕೂಡಿ ಕಳೆದ ಕಾಲಕ್ಕಿಂತ ಬಂದಾನೆಂಬ ನಿರೀಕ್ಷೆ ಈ ವಿರಹ- ಕಾಯುವಿಕೆಯಲ್ಲೂ ಒಂದು ಸೊಗಸಿದೆ ಅಂತನ್ನಿಸಿತು.

– ವೀಣಾ ರಾವ್‌

ಟಾಪ್ ನ್ಯೂಸ್

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

6-fusion

Yugadi: ಯುಗಾದಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.