ಹೆಣ್ಣುಮಕ್ಕಳು ಇರೋದೇ ಹೀಗೆ ತಾನೇ?


Team Udayavani, May 3, 2019, 6:00 AM IST

DSC1000887621a

ಹೆಣ್ಣುಮಕ್ಕಳಷ್ಟು ಜಾಣರು ಗಂಡಸರಲ್ಲ. ಎಲ್ಲ ಕೆಲಸಗಳ ಬಗ್ಗೆಯೂ ಅವರೊಳಗೊಂದು ಪೂರ್ವ ತಯಾರಿ, ಲೆಕ್ಕಾಚಾರ ಇದ್ದೇ ಇರುತ್ತೆ. ಅಳೆದು ತೂಗಿ, ನೂರಾರು ಬಾರಿ ಯೋಚಿಸಿಯೇ ಅವಳು ನಿರ್ಧಾರ ತಗೊಳ್ಳೋದು. ಬರೀ ಶಾಪಿಂಗ್‌ ಅಥವಾ ಮದುವೆಯ ವಿಷಯದಲ್ಲಿ ಮಾತ್ರ ಅಲ್ಲ, ನಿತ್ಯ ಜೀವನದ ಪ್ರತಿ ಕೆಲಸವನ್ನೂ ಅಳೆದು ತೂಗಿಯೇ ಮಾಡುವ ಜಾಯಮಾನ ಅವಳದು…

ಒಂದು ಕೇಳಿದರೆ ಲಕ್ಷ ಲಕ್ಷ ವಸ್ತುಗಳನ್ನು ಎತ್ತಿ ತೋರಿಸುವ ಅಮೆಜಾನ್‌ ವೆಬ್‌ಸೈಟ್‌ನಲ್ಲಿ ನಾನೊಂದು ಸಣ್ಣ ಮೂಗುತಿ ಆರಿಸುತ್ತಿದ್ದೆ. ಮೂಗು ಚುಚ್ಚಿಸಿಕೊಳ್ಳುವ ಎರಡು ವರ್ಷದ ಹಿಂದಿನ ಕನಸು ಈಡೇರಿದ್ದು ಮೊನ್ನೆ ಮೊನ್ನೆಯಷ್ಟೇ. ಅದೂ ಅಮ್ಮ , ಅತ್ತೆ, ಅತ್ತಿಗೆ, ಅಕ್ಕ, ಫ್ರೆಂಡ್ಸ್‌ಗಳನ್ನೆಲ್ಲ ಕೇಳಿ, ಅವರು “ನಿಂಗೆ ಮೂಗುತಿ ಚೆನ್ನಾಗಿ ಕಾಣುತ್ತೆ’ ಅಂತ ಹೇಳಿದ ಮೇಲೆ. ಸ್ವಲ್ಪ ದಿನಗಳ ನಂತರ ಆ ಮೂಗುತಿಯನ್ನು ಬದಲಿಸಿ, ಬೇರೊಂದು ರೀತಿಯದ್ದನ್ನು ಧರಿಸುವ ಆಸೆಯಾಯ್ತು. ಒಂದಕ್ಕಿಂತ ಒಂದು ಚಂದ ಅನ್ನಿಸುವ ಸಾವಿರಾರು ಮೂಗುತಿಗಳಲ್ಲಿ ಯಾವುದನ್ನು ಖರೀದಿಸುವುದು ಅಂತ ಗೊಂದಲವಾಗಿ, ಎಲ್ಲ ಮೂಗುತಿಗಳೂ ಒಂದೊಂದಾಗಿ ನನ್ನ ಮೂಗಿನ ಮೇಲೆ ಬಂದು ಕೂತಂತೆ ಕಲ್ಪಿಸಿಕೊಂಡೆ. ಯಾವುದರಲ್ಲಿ ಹೇಗೆ ಕಾಣಿಸುತ್ತೇನೆ ಅಂತ ಮನಸ್ಸಿನೊಳಗೇ ಲೆಕ್ಕಾಚಾರ ಹಾಕತೊಡಗಿದೆ. ತಗೊಂಡಾದ ಮೇಲೆ ಯಾರಾದ್ರೂ, ಚೆನ್ನಾಗಿಲ್ಲ ಅಂದುಬಿಟ್ಟರೆ ಅಂತ, ಮನೆಯಲ್ಲಿ ಎಲ್ಲರನ್ನೂ ಕೇಳಿಕೊಂಡು ಬಂದೆ. ನನ್ನ ಈ ಪಡಿಪಾಟಲನ್ನು ನೋಡಿದ ಯಜಮಾನರು, “ಹೆಣ್ಮಕ್ಕಳಿಗೆ ಬೇರೆ ಕಸುಬಿಲ್ವಾ? ಇಷ್ಟು ಸಣ್ಣ ಸಣ್ಣ ವಿಷಯಕ್ಕೆಲ್ಲ ಅಷ್ಟೊಂದು ಸಮೀಕ್ಷೆ , ಲೆಕ್ಕಾಚಾರ ಹಾಕೋ ಅಗತ್ಯ ಇದ್ಯಾ?’ ಎಂದು ಕಿಚಾಯಿಸಿದರು. “ಹೌದು ಮತ್ತೆ. ಮೂಗುತಿ ಸೆಲೆಕ್ಟ್ ಮಾಡೋದು ಅಂದ್ರೆ ಕಮ್ಮಿàನಾ? ಎಲ್ಲರ ಅಭಿಪ್ರಾಯ ಕೇಳಿ, ಲೆಕ್ಕಾಚಾರ ಹಾಕಿದ ಮೇಲೇ ಒಂದು ನಿರ್ಧಾರಕ್ಕೆ ಬರಲು ಸಾಧ್ಯ’ ಅಂತ ಅವರ ಬಾಯಿ ಮುಚ್ಚಿಸಿದೆ.

ನಾನು ಮೊದಲಿನಿಂದಲೂ ಹಾಗೆಯೇ. “ಚೂಸಿ’ ಅಂತಾರಲ್ಲ, ಹಾಗೆ. ನನ್ನ ಆಯ್ಕೆಗಳು ಬೆಸ್ಟ್‌ ಆಫ್ ದ ಬೆಸ್ಟ್‌ ಆಗಿರಬೇಕು ಅಂತ ಬಯಸುವವಳು. ಬಟ್ಟೆ ಅಂಗಡಿಗೆ ಹೋದರೆ ನೂರು ಬಟ್ಟೆ ನೋಡಿ, ಒಂದನ್ನೂ ಖರೀದಿಸದೆ ಬಂದದ್ದಿದೆ. ನನ್ನ ಬಟ್ಟೆಯಂತೆ ಬೇರೆ ಯಾರ ಬಟ್ಟೆಯೂ ಇರಬಾರದು ಅನ್ನೋ ಹಠ. ಅಕ್ಕನಿಗೂ, ನನಗೂ ಒಂದೇ ರೀತಿಯಲ್ಲಿ ಬಟ್ಟೆ ತಂದರೆ, ನಾನದನ್ನು ಹಾಕುತ್ತಿರಲಿಲ್ಲ. ಸಣ್ಣ ಪಿನ್‌ ಖರೀದಿಸಲೂ ನನಗೆ ಅರ್ಧ ಗಂಟೆ ಬೇಕಾಗುತ್ತಿತ್ತು. ಹಬ್ಬ-ಹರಿದಿನಗಳಲ್ಲಿ ಮನೆಮಂದಿಗೆಲ್ಲ ಬಟ್ಟೆ ಆರಿಸುವುದೂ ನನ್ನ ಜವಾಬ್ದಾರಿಯೇ ಆಗಿತ್ತು. “ನನ್ನ ಮಗಳ ಸೆಲೆಕ್ಷನ್‌ ಅಂದ್ರೆ ಸೆಲೆಕ್ಷನ್‌’ ಅಂತ ಯಾವಾಗಲೂ ಹೆಮ್ಮೆಯಿಂದ ಹೊಗಳುತ್ತಿದ್ದ ಅಪ್ಪನೂ ನನ್ನ ಸೆಲೆಕ್ಷನ್‌ ಹುಚ್ಚಿಗೆ ಬೇಸತ್ತು ಹೋಗುವ ಹಾಗಾಗಿದ್ದು ನನ್ನ ಮದುವೆಯ ವಿಷಯದಲ್ಲಿ.
ಅಪ್ಪ-ಅಮ್ಮ ತೋರಿಸುವ ಯಾವ ಹುಡುಗನನ್ನೂ ನಾನು ಒಪ್ಪಿಕೊಳ್ಳುತ್ತಿರಲಿಲ್ಲ. ಕೆಲವರನ್ನು ಫೋಟೊ ನೋಡಿಯೇ ರಿಜೆಕ್ಟ್ ಮಾಡಿದರೆ, ಕೆಲವರನ್ನು ಭೇಟಿ ಮಾಡಿದ ನಂತರ “ಬೇಡ’ ಅನ್ನುತ್ತಿದ್ದೆ. ನನ್ನ ಹುಡುಗ ನೋಡೋಕೆ ಹೀರೋ ಥರ ಇರಬೇಕು, ಆರಡಿ ಎತ್ತರ ಇರಬೇಕು, ನಾನು ಹೈಹೀಲ್ಸ್‌ ಹಾಕಿ ಅವನ ಪಕ್ಕ ನಿಂತರೂ ಕುಳ್ಳಿ ಅನ್ನಿಸಬೇಕು, ಅವನನ್ನು ಅಪ್ಪಿಕೊಂಡಾಗ ಅವನ ಎದೆಬಡಿತ ಕಿವಿಗೆ ಕೇಳಿಸಬೇಕು ಅಂತೆಲ್ಲ ಫಿಲಿ¾ ಸ್ಟೈಲ್‌ನಲ್ಲಿ ಕನಸು ಕಾಣುತ್ತಿದ್ದೆ. ಹೀಗಿರುವಾಗ, ಒಂದು ಸಂಬಂಧ ಮನೆಯವರಿಗೆ ಬಹಳ ಹಿಡಿಸಿತ್ತು. ಹುಡುಗ ಒಳ್ಳೆಯ ಉದ್ಯೋಗದಲ್ಲಿದ್ದ. ನೋಡೋಕೂ ಚೆನ್ನಾಗಿದ್ದ. ಅವನನ್ನು ಬೇಡ ಅನ್ನೋಕೆ ಯಾವ ಕಾರಣವೂ ಇರಲಿಲ್ಲ. ಆದರೂ ನನಗೇಕೋ ಸಮಾಧಾನವಿಲ್ಲ. ನನ್ನ ಕನಸಿನ ರಾಜಕುಮಾರ ಅನ್ನಿಸಿಕೊಳ್ಳಲು ಇವನಲ್ಲಿ ಏನೋ ಕೊರೆ ಕಾಣುತ್ತಿತ್ತು. ಯಾಕಂದ್ರೆ, ಹುಡುಗ ನನಗಿಂತ ಮೂರೇ ಇಂಚು ಎತ್ತರವಿದ್ದ. ಎಲ್ಲರಿಗೆ ಇಷ್ಟವಾಗಿದ್ದಾನೆ ಅಂತ ಒಪ್ಪಿಕೊಳ್ಳಲು ನನಗೆ ಸಾಧ್ಯವಾಗಲೇ ಇಲ್ಲ. ಕೊನೆಗೆ, ಆರಡಿ ಕಟೌಟ್‌ನ ಕೈ ಹಿಡಿಯುವ ಆಸೆಯನ್ನು ಅಕ್ಕನ ಮುಂದೆ ಹೇಳಿದೆ. ಅವಳು ತಲೆ ತಲೆ ಚಚ್ಚಿಕೊಳ್ಳುತ್ತಲೇ, ಅಪ್ಪನಿಗೆ ಅದನ್ನು ವಿವರಿಸಿದಳು. ಮುಂದೆ, ಹುಡುಗನ ಜಾತಕದ ಜೊತೆಗೆ ಅವನ ಎತ್ತರವೆಷ್ಟು ಅಂತ ಅಪ್ಪ ತಪ್ಪದೇ ಕೇಳುತ್ತಿದ್ದರು! ಅನಂತರವೂ ಒಂದೆರಡು ಹುಡುಗರನ್ನು ಬೇಡ ಅಂದಮೇಲೆ ಸಿಕ್ಕಿದ್ದು ನಮ್ಮ ರಾಯರು!

ನಾವು, ಹೆಣ್ಮಕ್ಕಳು ಇರೋದೇ ಹೀಗೆ ತಾನೇ? ಬರೀ ಶಾಪಿಂಗ್‌ ಅಥವಾ ಮದುವೆಯ ವಿಷಯದಲ್ಲಿ ಮಾತ್ರ ಅಲ್ಲ, ನಿತ್ಯಜೀವನದ ಎಲ್ಲ ಕೆಲಸವನ್ನೂ ಅಳೆದು ತೂಗಿಯೇ ಮಾಡುವ ಜಾಯಮಾನ ನಮ್ಮದು. ನಾಳೆ ಏನು ಅಡುಗೆ ಮಾಡೋದು, ತಂಗಿ ಮದುವೆಗೆ ಯಾವ ಸೀರೆ ಉಡೋದು, ಯಾವ ಡ್ರೆಸ್‌ಗೆ ಯಾವ ರೀತಿಯ ಹೇರ್‌ಸ್ಟೈಲ್‌ ಹೊಂದುತ್ತೆ, ಯಾವ ಡ್ರೆಸ್‌ನಲ್ಲಿ ತೆಳ್ಳಗೆ ಕಾಣುತ್ತೇನೆ, ಈ ಸೀರೆಗೆ ಈ ಬಣ್ಣದ ಬಳೆ ಓಕೇನಾ, ಅತ್ತೆ-ಮಾವ ಬಂದಾಗ ಹೇಗೆ ನಡೆದುಕೊಂಡರೆ ಅವರಿಗೆ ಇಷ್ಟವಾಗುತ್ತೆ, ಗಂಡನ ಸಿಟ್ಟನ್ನು ತಣಿಸಲು ಏನು ಮಾಡಬೇಕು, ಸಂಜೆ ಧಾರಾವಾಹಿ ನೋಡ್ತಾ ನೋಡ್ತಾ ಯಾವ ಕೆಲಸ ಮುಗಿಸಬಹುದು- ಹೀಗೆ ಎಲ್ಲ ಕೆಲಸಗಳ ಬಗ್ಗೆಯೂ ನಮ್ಮೊಳಗೊಂದು ಪೂರ್ವ ತಯಾರಿ, ಲೆಕ್ಕಾಚಾರ ನಡೆದಿರುತ್ತದೆ. ಗಂಡಸರಂತೆ ಹಿಂದು ಮುಂದೆ ಯೋಚಿಸದೆ ನಿರ್ಧಾರಗಳನ್ನು ತೆಗೆದುಕೊಳ್ಳಲು ನಾಳೆ ಏನಾಗುತ್ತೋ ಆಗಲಿ ಅಂತ ನಿರಾಳವಾಗಿ ಇರಲು ಸಾಧ್ಯವಿಲ್ಲ. ಈ ಗುಣಗಳೇ ತಾನೇ ನಮ್ಮ ಕೆಲಸದ ಅಚ್ಚುಕಟ್ಟುತನವನ್ನು , ಜೀವನ ಪ್ರೀತಿಯನ್ನು ಹೆಚ್ಚಿಸುವುದು?
ನಾನು ಬದುಕಿನ ಲೆಕ್ಕಾಚಾರಗಳನ್ನು ಕಲಿತಿದ್ದು ನನ್ನಮ್ಮನಿಂದಲೇ. ಎಲ್ಲ ವಿಷಯದಲ್ಲೂ ಅಮ್ಮನದ್ದು ಪಫೆìಕ್ಟ್ ಲೆಕ್ಕಾಚಾರ. ಯಾವ ಅಂಗಡಿಯಲ್ಲಿ ಯಾವ ತರಕಾರಿ ಚೆನ್ನಾಗಿರುತ್ತದೆ ಅಂತ ಅಮ್ಮನಿಗೆ ಗೊತ್ತು. ಅಲ್ಲಿಂದಲೇ ತರಕಾರಿ ತರುವಂತೆ ಅಪ್ಪನಿಗೆ ಹೇಳುತ್ತಾಳೆ. ಅದರಲ್ಲೇನಾದರೂ ಮಿಸ್‌ ಆದ್ರೆ, ಅಮ್ಮನಿಗೆ ತಕ್ಷಣ ಗೊತ್ತಾಗಿಬಿಡುತ್ತದೆ. ದಿನಸಿ ಸಾಮಗ್ರಿಗಳನ್ನು ಕಣ್ಣಿನಲ್ಲಿ ನೋಡಿಯೇ, ಅವುಗಳ ಗುಣಮಟ್ಟ ಹೇಳಬಲ್ಲ ಅಮ್ಮ ಕೆಲವೊಂದು ಕಂಪೆನಿಗಳ ಬೇಳೆಕಾಳು, ಎಣ್ಣೆಯನ್ನು ಖರೀದಿಸುವುದೇ ಇಲ್ಲ. ಇನ್ನು ಅಮ್ಮನ ಅಡುಗೆಯೂ ಅಷ್ಟೇ ಕ್ರಮಬದ್ಧವಾಗಿರುತ್ತದೆ. ಈ ವಾರದಲ್ಲಿ ಯಾವ ದಿನ, ಯಾವ ಅಡುಗೆ ಮಾಡಬೇಕು ಅಂತ ಮೊದಲೇ ತಯಾರಿ ಮಾಡಿಟ್ಟುಕೊಂಡಿರುತ್ತಾಳೆ. ತೋಟದ ಕೆಲಸ ನಡೆಯುವಾಗ, ಜಾಸ್ತಿ ಜನ ಕೆಲಸದವರು ಬಂದರೆ ರೊಟ್ಟಿ , ಚಪಾತಿಯಂಥ ಸಮಯ ಹಿಡಿಯುವ ತಿಂಡಿ ಮಾಡುವುದಿಲ್ಲ. ಹೊಟ್ಟೆ ತುಂಬುವ, ನೀರಡಿಕೆಯಾಗದಂಥ ತಿಂಡಿಗಳಿಗೆ ಆ ದಿನ ಹೆಚ್ಚು ಪ್ರಾಶಸ್ತ್ಯ. ಉಳಿದ ದಿನಗಳಲ್ಲಿ ಮನೆಯಲ್ಲಿ ಯಾರಿಗೆ, ಯಾವ ಅಡುಗೆ ಇಷ್ಟ ಅಂತ ಅರಿತುಕೊಂಡು, ಆ ಪ್ರಕಾರ ಅಡುಗೆ ಮಾಡುತ್ತಾಳೆ. ಮಕ್ಕಳು ಮುಂದಿನ ವಾರ ಊರಿಗೆ ಬರುತ್ತಾರೆ ಅಂತಾದರೆ, ಈ ದಿನದಿಂದಲೇ ವಿಶೇಷ ಅಡುಗೆಗೆ ತಯಾರಿ ಶುರುವಾಗುತ್ತದೆ.

ಮಾಡಿದ ಅಡುಗೆಯೇನಾದ್ರೂ ಮನೆಯವರಿಗೆ ಇಷ್ಟವಾಗದಿದ್ದರೆ, ಯಾಕೆ ಹಾಗಾಯ್ತು ಅಂತ ತಲೆಗೆ ಹುಳ ಬಿಟ್ಟುಕೊಂಡು, ಅದಕ್ಕೆ ಕಾರಣ ಹುಡುಕುವುದು ಅಮ್ಮನ ಜಾಯಮಾನ. ಅಡುಗೆ ರುಚಿಗೆಡಲು, ಹದ ಮೀರಿ ಹಾಕಿದ ನೀರು ಕಾರಣವೋ, ಹೆಚ್ಚು ಕುದಿಸಿದ್ದು ಕಾರಣವೋ ಅನ್ನೋ ಪ್ರಶ್ನೆಗೆ ಉತ್ತರ ಸಿಗದಿದ್ದರೆ ಆಕೆಗೆ ರಾತ್ರಿ ನಿದ್ರೆ ಬರುವುದಿಲ್ಲ. ಮತ್ತೂಮ್ಮೆ ಅದೇ ಅಡುಗೆಯನ್ನು ಮಾಡಿ, “ಇವತ್ತು ಹೇಗಾಗಿದೆ?’ ಅಂತ ಎಲ್ಲರ ಅಭಿಪ್ರಾಯ ಸಂಗ್ರಹಿಸುತ್ತಾಳೆ. ಸಮೀಕ್ಷೆಯಲ್ಲಿ ಜಾಸ್ತಿ ವೋಟು ಆಕೆಯ ಪರವಾಗಿ ಬೀಳಲೇಬೇಕು! ಇನ್ನು ಹೊಸರುಚಿ ಟ್ರೈ ಮಾಡಿದಾಗ, ನಾವ್ಯಾರೂ ಅದನ್ನು ತಿಂದು ಸುಮ್ಮನೆ ಕೂರುವಂತಿಲ್ಲ. ಅಡುಗೆ ಬಗ್ಗೆ ಲೈಕ್‌, ಕಮೆಂಟ್‌ ಮಾಡಲೇಬೇಕು. ಎಲ್ಲರ ಕಮೆಂಟ್‌ಗಳನ್ನು ಪರಿಗಣಿಸಿದ ಮೇಲೆ ಹೊಸ ರುಚಿಯನ್ನು ಇನ್ನೂ ಹೊಸದಾಗಿ ಟ್ರೈ ಮಾಡುತ್ತಾಳೆ. ಇನ್ನು , ಇಷ್ಟು ಅಡುಗೆಗೆ ಇಷ್ಟು ಉಪ್ಪು , ಇಷ್ಟು ಜನರಿಗೆ ಇಷ್ಟು ಪಾವು ಅನ್ನ ಅನ್ನೋ ಅಮ್ಮಂದಿರ ಲೆಕ್ಕಾಚಾರ ಎಂದಾದರೂ ತಪ್ಪುವುದುಂಟೇ?
.
ಶಿವನಿಗೆ ಮೂರನೇ ಕಣ್ಣು ಇರುವಂತೆ, ಹೆಣ್ಮಕ್ಕಳಿಗೆ “ದೂರದೃಷ್ಟಿ’ ಅನ್ನೋ ಒಂದು ಎಕ್ಸ್‌ಟ್ರಾ ಕಣ್ಣಿದೆ. ಬೇಕು-ಬೇಡಗಳ ತಕ್ಕಡಿಯನ್ನು ಬ್ಯಾಲೆನ್ಸ್‌ ಮಾಡುತ್ತಾ, ಏನು ಮಾಡಿದರೆ ಏನಾಗುತ್ತದೆ ಅಂತ ಅಳೆದು, ತೂಗಿ ನೋಡುವುದು ಅವರ ಕೆಲಸ. ಗಂಡಸರು ಒಂದು ವಿಷಯವನ್ನು ಎರಡು ಕಣ್ಣುಗಳಿಂದ ನೋಡಿದರೆ, ನಾವು ಅದನ್ನು ಮೂರನೇ ಕಣ್ಣಿನಿಂದ ನೋಡುತ್ತೇವೆ. ಈಗ ಗೊತ್ತಾಯ್ತಲ್ಲ, ಹೆಂಗಸರ್ಯಾಕೆ ಹೀಗೆ ಅಂತ.

– ಕಾವ್ಯಾ ಎಂ. ಎಸ್‌.

ಟಾಪ್ ನ್ಯೂಸ್

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ

1-dubey

Increase of Muslims; ಝಾರ್ಖಂಡ್‌,ಪಶ್ಚಿಮ ಬಂಗಾಲ ಕೇಂದ್ರಾಡಳಿತ ಪ್ರದೇಶವಾಗಿಸಿ: ದುಬೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.