ಬಾಳೆ ಎಲೆಯಲ್ಲಿ ಊಟ
Team Udayavani, Dec 7, 2018, 6:00 AM IST
ವರ್ಷವಿಡೀ ಹಣ್ಣು ಕೊಡುವ ಫಲ ಯಾವುದೆಂದು ಕೇಳಿದರೆ ಬಾಳೆ ಹಣ್ಣು ಎಂದು ಥಟ್ಟಂತ ಹೇಳಿಬಿಡುತ್ತೇವೆ. ಮಗುವಿನಿಂದ ಹಿಡಿದು ಮುದುಕರವರೆಗೆ ಬಾಳೆಹಣ್ಣನ್ನು ಇಷ್ಟಪಡದವರು ಇರಲಾರರು. ಇದನ್ನು ತಿನ್ನಲು ಹಲ್ಲು ಇರದಿದ್ದರೂ ನಡೆಯುತ್ತದೆ. ಅದು ಇದರ ಪ್ಲಸ್ ಪಾಯಿಂಟ್. “ಅಂಗಿ ತೆಗೆದು ಬಾವಿಗೆ ಹಾರಿದ’ ಎಂಬ ಒಂದು ಒಗಟು ನಮ್ಮ ಹಳ್ಳಿ ಕಡೆ ಚಾಲ್ತಿಯಲ್ಲಿದೆ. ಅದಕ್ಕೆ ಉತ್ತರ ಬಾಳೆಹಣ್ಣು ಎಂದು ಬೇರೆ ಹೇಳಬೇಕಾಗಿಲ್ಲ. ಮುಸುಂಬಿ, ಆ್ಯಪಲ್, ದ್ರಾಕ್ಷಿ, ದಾಳಿಂಬೆ, ಕಿತ್ತಳೆ ಎಂಬ ಪೇಟೆ ಹಣ್ಣುಗಳಿಗಿಂತಲೂ ಹಳ್ಳಿ ಸೊಗಡು ಇರುವ ಬಾಳೆಹಣ್ಣೇ ದೇವರಿಗೆ ಪ್ರಿಯ ಎಂಬುದು ನನ್ನ ಅನಿಸಿಕೆ. ಏಕೆಂದರೆ, “ದೇವರಿಗೆ ಹಣ್ಣುಕಾಯಿ ಮಾಡಿಸಿದೆ’ ಎಂದು ಹೇಳುವಾಗ ಹಣ್ಣು ಎಂಬುದು ಬಾಳೆಹಣ್ಣಿಗೆ ಅನ್ವಯಿಸುವಂಥಾದ್ದು. ದೇವಸ್ಥಾನಗಳಲ್ಲಿ ದೇವರಿಗೆ ಅರ್ಪಿಸುವುದು ಹೆಚ್ಚಾಗಿ ಬಾಳೆಹಣ್ಣನ್ನು ಮಾತ್ರ.
ಬಾಳೆಯಲ್ಲಿ ಎಷ್ಟೋ ತಳಿಗಳಿವೆ. ಒಂದೊಂದು ತಳಿಗೂ ಒಂದೊಂದು ರುಚಿ. ಮೈಸೂರು ಬಾಳೆ, ಸಾಂಬಾರು ಬಾಳೆ, ಕದಳಿ, ಪಚ್ಚೆ ಬಾಳೆ, ಚಂದ್ರ ಬಾಳೆ, ನೇಂದ್ರ, ಗಾಳಿ, ಬೂದಿ, ಜೇನು ಬಾಳೆ, ಕಲ್ಲು ಬಾಳೆ, ರಸಬಾಳೆ, ಜಹಾಂಗೀರ್, ಸಹಸ್ರ ಬಾಳೆ- ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಎಲ್ಲ ಬಾಳೆಗಳು ಎಲ್ಲ ಊರುಗಳಲ್ಲಿ ಬೆಳೆದರೂ ಆಯಾಯ ಪ್ರದೇಶಕ್ಕೆ ಹೊಂದುವ ತಳಿಗಳು ಬೇರೆ ಬೇರೆಯಾಗಿರುತ್ತದೆ. ಉದಾಹರಣೆಗೆ, ಕರಾವಳಿ ಜಿಲ್ಲೆಗಳಲ್ಲಿ ಕದಳಿ, ನಂಜನಗೂಡಿನಲ್ಲಿ ರಸಬಾಳೆ, ಕೇರಳದಲ್ಲಿ ನೇಂದ್ರ, ತಮಿಳುನಾಡಿನಲ್ಲಿ ಪಚ್ಚೆ ಬಾಳೆ ಹೀಗೆ. ಅಂದ ಹಾಗೆ ನಮ್ಮೂರಿನ ಕದಳಿ ಬಾಳೆಯನ್ನು ಘಟ್ಟದ ಮೇಲಿನವರು ಏಲಕ್ಕಿ ಬಾಳೆ ಎಂಬ ಹೆಸರಿನಿಂದ ಕರೆಯುತ್ತಾರೆ.
ಬಾಳೆ ಬಹೂಪಯೋಗಿ. ತೆಂಗನ್ನು ಕಲ್ಪವೃಕ್ಷ ಎಂದು ಕರೆಯುವಂತೆ ಬಾಳೆಯನ್ನೂ ಕಲ್ಪವೃಕ್ಷ ಎಂದು ಕರೆದರೆ ತಪ್ಪಾಗಲಾರದೇನೊ! ಬಾಳೆಯಲ್ಲಿ ಬಿಸಾಡುವ ಅಂಶಗಳೇ ಇಲ್ಲ. ಬಾಳೆ ಹೂವಿನಿಂದ ಹಿಡಿದು ಹಣ್ಣಿನವರೆಗೆ, ದಿಂಡಿನಿಂದ ಹಿಡಿದು ಎಲೆಯವರೆಗೆ ಎಲ್ಲವೂ ಉಪಯೋಗಕ್ಕೆ ಒದಗುವವುಗಳೇ. ಬಾಳೆಹಣ್ಣು ಹಸಿವನ್ನು ನೀಗಿಸುತ್ತದೆ. ಉಪವಾಸ ಕೈಗೊಳ್ಳುವವರು ಬಾಳೆಹಣ್ಣನ್ನು ಸೇವಿಸುವುದು ಸಾಮಾನ್ಯ ಸಂಗತಿ. ದಿನಾ ಊಟದ ನಂತರ ಒಂದೆರಡು ಬಾಳೆಹಣ್ಣು ತಿಂದರೆ ಪಚನ ಕ್ರಿಯೆ ಚೆನ್ನಾಗಿ ಆಗುತ್ತದೆ. ಬಾಳೆಯ ದಿಂಡು, ಕುಂಡಿಗೆ, ಕಾಯಿ, ಹಣ್ಣು, ಎಲೆ ಹೀಗೆ ಸರ್ವ ಭಾಗಗಳೂ ಆರೋಗ್ಯಕಾರಕ. ಖ್ಯಾತ ಹೃದ್ರೋಗ ತಜ್ಞ ಡಾ. ಬಿ. ಎಂ. ಹೆಗ್ಡೆ “ಬಾಳೆ ಎಲೆಯಲ್ಲಿ ಊಟ ಮಾಡುವುದು ಬಹಳ ಒಳ್ಳೆಯದು. ಅದು ಶುದ್ಧವಾಗಿರುತ್ತದೆ. ಅಲ್ಲದೆ ಅದರಲ್ಲಿ ನೀವು ಮಾತ್ರ ಊಟ ಮಾಡುವಿರಿ. ಮೊದಲು ಬೇರೆಯವರು ಅದರಲ್ಲಿ ಊಟ ಮಾಡಿರುವುದಿಲ್ಲ. ಅದರಿಂದ ಸೋಂಕು ತಗಲುವ ಸಂಭವ ಬಹಳ ಕಡಿಮೆ. ಅಲ್ಲದೆ ಬಾಳೆ ಎಲೆಯಲ್ಲಿ ಇರುವ ಆರೋಗ್ಯಕರ ಅಂಶಗಳು ಆಹಾರದ ಜೊತೆ ನಮ್ಮ ದೇಹವನ್ನು ಸೇರುತ್ತವೆ. ನಿಂತು ಊಟ ಮಾಡತೊಡಗಿದರೆ ಮಿತಿ ಮೀರಿ ತಿನ್ನುತ್ತೇವೆ. ಕುಳಿತು ಬಾಳೆಎಲೆಯಲ್ಲಿ ಉಣ್ಣುವುದು ತುಂಬ ಒಳ್ಳೆಯದು’ ಎಂದು ಹೇಳುತ್ತಾರೆ. ಮಂಗಳೂರಿನ ಹಂಪನಕಟ್ಟೆ ಬಳಿ “ವಿಶ್ವಭವನ’ ಎಂಬ ಹೊಟೇಲಿದೆ. ಸದಾ ಗಿಜಿಗುಟ್ಟುವ ಆ ಹೊಟೇಲಿನ ವಿಶೇಷತೆಯೆಂದರೆ ಅಲ್ಲಿ ಊಟವನ್ನು ಬಟ್ಟಲಿನಲ್ಲಿ ಕೊಡದೆ ಬಾಳೆಲೆ ಇಟ್ಟು ಬಡಿಸುತ್ತಾರೆ. ನಾನು ಅಲ್ಲಿ ಊಟ ಮಾಡುತ್ತಿರುವಾಗಲೆಲ್ಲ ಯೋಚಿಸುತ್ತೇನೆ- ಎಲ್ಲ ಹೊಟೇಲಿನವರೂ ಹೀಗೆ ಎಲೆಯಲ್ಲಿ ಆಹಾರ ಕೊಟ್ಟರೆ ಎಷ್ಟು ಒಳ್ಳೆಯದು? ಬಾಳೆಎಲೆ ಮಾರಾಟದಿಂದ ರೈತರಿಗೆ ಕಿಂಚಿತ್ ಹಣವೂ ಸಿಗುತ್ತದೆ. ಬಟ್ಟಲು ತೊಳೆಯಲು ಬೇಕಾಗುವ ಅಪಾರ ನೀರಿನ ಉಳಿತಾಯವೂ ಆಗುತ್ತದೆ. ಬೇಸಿಗೆಯಲ್ಲಿ ನೀರಿನ ಅಭಾವ ಎಷ್ಟು ಕಾಡುತ್ತದೆ ಎಂಬುದು ನಮಗೆಲ್ಲ ಗೊತ್ತೇ ಇದೆ. ನೀರು ಮುಗಿದು ಹೋಗುವ ಸಂಪನ್ಮೂಲವಾದುದರಿಂದ ಹನಿ ನೀರೂ ಬಂಗಾರವಾಗಿರುವ ಇಂದಿನ ದಿನಗಳಲ್ಲಿ ಸಾಧ್ಯವಾದೆಡೆಯೆಲ್ಲೆಲ್ಲ ನೀರು ಉಳಿಸುವ ಪ್ರಯತ್ನ ಮಾಡಬೇಕು.
ಬಾಳೆ ಹೂವಿನಿಂದ ಮಾಡಿದ ಪತ್ರೊಡೆ
ಕಳೆದ ಬೇಸಿಗೆಯಲ್ಲಿ ನಾನು, ಚಿಕ್ಕಮ್ಮ, ನನ್ನ ಇಬ್ಬರು ಗೆಳತಿಯರು ಕಾರು ಮಾಡಿಕೊಂಡು ಮುಂಜಾನೆ 4 ಗಂಟೆಗೆ ನನ್ನ ಮನೆಯಿಂದ ಕುವೆಂಪು ಅವರ ಊರು ಕುಪ್ಪಳಿಗೆ ಸ್ನೇಹಿತರ ಮಗಳ “ಮಂತ್ರಮಾಂಗಲ್ಯ’ ಮದುವೆ ಕಾರ್ಯಕ್ರಮಕ್ಕೆಂದು ಹೊರಟಿದ್ದೆವು. “ಹೊಟೇಲಿಗೆ ಹೋಗುವುದು ಬೇಡ. ಸಮಯ ಹಾಳಾಗುತ್ತದೆ. ಮನೆಯಿಂದ ತಿಂಡಿ ತರುವ. ಕಾರಲ್ಲೇ ತಿನ್ನುವ’ ಎಂದು ನಾವು ಮೊದಲೇ ಮಾತಾಡಿಕೊಂಡಿದ್ದೆವು. ನಾನು ಹಲಸಿನ ಹಣ್ಣಿನ ಇಡ್ಲಿ ಹಿಂದಿನ ರಾತ್ರಿ ಮಾಡಿ ತಂದಿದ್ದೆ. ನನ್ನ ಚಿಕ್ಕಮ್ಮ ಎಲೆಯಲ್ಲಿ ಮಡಚಿಟ್ಟ ತಿಂಡಿಯೊಂದನ್ನು ನಮಗೆಲ್ಲ ಕೊಟ್ಟರು. ಸಿಹಿ-ಖಾರ ಮಿಶ್ರಿತವಾಗಿದ್ದ ಅದನ್ನು ನನಗೆ ಮತ್ತು ನನ್ನ ಗೆಳತಿಯರಿಗೆ ಯಾವುದರಿಂದ ಮಾಡಿದ್ದೆಂದು ಕಂಡುಹಿಡಿಯಲಾಗಲಿಲ್ಲ. ಕೊನೆಗೆ ಚಿಕ್ಕಮ್ಮನೇ “ಇದು ಕುಂಡಿಗೆ (ಬಾಳೆ ಹೂವು)ಯಿಂದ ಮಾಡಿದ ಪತ್ರೊಡೆ’ ಎಂದು ಗುಟ್ಟು ಬಿಟ್ಟುಕೊಟ್ಟರು. ಅದರ ರುಚಿಗೆ ಮಾರುಹೋದ ನಮ್ಮಲ್ಲೊಬ್ಬಳು ಗೆಳತಿ ಈಗ ಕುಂಡಿಗೆ ಪತ್ರೊಡೆಯನ್ನು ತಿಂಗಳಿಗೊಮ್ಮೆಯಾದರೂ ಮಾಡುತ್ತಾಳಂತೆ. ಬಾಳೆಕಾಯಿ, ಬಾಳೆಹಣ್ಣು, ಬಾಳೆದಿಂಡು, ಕುಂಡಿಗೆ ಇವುಗಳಿಂದ ರುಚಿರುಚಿಯಾದ ಅಡುಗೆ ತಯಾರಿಸುವುದರಲ್ಲಿ ಮಲೆನಾಡು ಮತ್ತು ಕರಾವಳಿಯ ಗೃಹಿಣಿಯರದು ಎತ್ತಿದ ಕೈ.
ಬಾಳೆಹಣ್ಣು ಎಂದಾಗ ನನಗೆ ಬೆಂಗಳೂರಿನ ನನ್ನ ಸ್ನೇಹಿತರೊಬ್ಬರ ನೆನಪಾಗುತ್ತದೆ. ಅವರು ಒಮ್ಮೆ ಮಂಗಳೂರಿಗೆ ಹೊರಟವರು ದಾರಿ ಮಧ್ಯೆ ಸಿಗುವ ನಮ್ಮ ಮನೆಗೆ ನನ್ನನ್ನು ಮಾತಾಡಿಸಿ ಹೋಗುವ ಉದ್ದೇಶದಿಂದ ಬಂದಿದ್ದರು. ಸಾಮಾನ್ಯವಾಗಿ ಅತಿಥಿಗಳು ಹೊಸದಾಗಿ ಒಂದು ಮನೆಗೆ ಹೋಗುವಾಗ ಹಣ್ಣು, ಸಿಹಿತಿಂಡಿ ಹೀಗೆ ಏನನ್ನಾದರೂ ಕೊಂಡೊಯ್ಯುವುದು ಸರಿಯಷ್ಟೆ. ಅವರು ಬಂದವರೇ ಬಾಳೆಹಣ್ಣಿನ 4 ಗೊಂಚಲು ನನಗೆ ಕೊಟ್ಟರು. ಹಳ್ಳಿಯಲ್ಲಿ ಕೃಷಿ ಮಾಡಿಕೊಂಡು ಇರುವ ನಮಗೆ ಬಾಳೆಹಣ್ಣು ನಿತ್ಯ ಇರುವಂಥಾದ್ದು. ತಿನ್ನುವವರಿಲ್ಲದೆ ಬಾಳೆಹಣ್ಣು ನಮ್ಮ ಮನೆಯಲ್ಲಿ ಕೊಳೆಯುತ್ತಿರುವಾಗ ಆ ನನ್ನ ಸ್ನೇಹಿತ ಅದನ್ನೇ ತರಬೇಕಾ? “ನೀವು ಇದನ್ನು ತೆಗೆದುಕೊಂಡು ಹೋಗಿ. ಇಲ್ಲಿ ಇದನ್ನು ತಿನ್ನುವವರಿಲ್ಲ. ಅನ್ಯಥಾ ಭಾವಿಸಬೇಡಿ’ ಎಂದು ನಾನು ಅವರು ಹೊರಡುವಾಗ ಅದನ್ನು ಅವರ ಚೀಲಕ್ಕೆ ಹಾಕಿದೆ. ಅವರು ಮರುಮಾತಾಡದೆ ಪಡೆದುಕೊಂಡರು. ನಮಗದು ಅಲಕ್ಷಿತ ಹಣ್ಣಾದರೂ ಪೇಟೆಯವರಿಗೆ ವಿಶೇಷ ಹಣ್ಣು.
ಬಾಳೆದಿಂಡಿನಲ್ಲಿನ ಫೈಬರ್ ಅಂಶವು ತೂಕ ಇಳಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿ ಚಯಾಪಚಯ ಕ್ರಿಯೆಯನ್ನು ವೃದ್ಧಿಸಿ ದೇಹದ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ ಎಂದು ಆಯುರ್ವೇದದಲ್ಲಿ ಹೇಳಿದೆ. ಹಾಗಾಗಿ ನಾನು ಹೆಚ್ಚಾಗಿ ಬಾಳೆದಿಂಡಿನಿಂದ ತಯಾರಿಸಿದ ದೋಸೆ, ಪಲ್ಯ, ಮೊಸರುಗೊಜ್ಜು, ಸಾಂಬಾರ್ ಹೀಗೆ ಒಂದಲ್ಲ ಒಂದು ಅಡುಗೆಯನ್ನು ಮಾಡುತ್ತೇನೆ. ಬೇಸಿಗೆಯಲ್ಲಿ ಮೇವಿನ ಕೊರತೆ ಇರುವುದರಿಂದ ಬಾಳೆಡಿಂಡನ್ನು, ಬಾಳೆ ಎಲೆಯನ್ನು ಕೊಚ್ಚಿ ಹಸುಗಳಿಗೆ ಹಾಕಿದರೆ ಅವು ಪರಮ ಖುಷಿಯಿಂದ ತಿನ್ನುತ್ತವೆ. ಬಾಳೆ ಕಾಂಡದ ಪದರು ತೆಗೆದು ಬಿಸಿಲಿಗೆ ಒಣಗಿಸಿದರೆ ಬಳ್ಳಿ ಸಿದ್ಧವಾಗುತ್ತದೆ. ಈ ಬಳ್ಳಿಯನ್ನು ಹೂಮಾಲೆ ಕಟ್ಟಲು ಬಳಸುತ್ತಾರೆ. ಬಾಳೆಬಳ್ಳಿಯಿಂದ ಬ್ಯಾಗ್, ಮೇಜು, ಕುರ್ಚಿಗಳನ್ನೂ ತಯಾರಿಸುತ್ತಾರಂತೆ.
ನಿನ್ನೆ ನಮ್ಮ ಊರಿನ ಸಂಬಂಧಿಕರ ಮನೆಗೆ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. ಅಲ್ಲಿಗೆ ನನ್ನದೇ ವೃತ್ತಿ (ರೈತ)ಯ ಸ್ನೇಹಿತರೊಬ್ಬರು ಬಂದಿದ್ದರು. ಅವರು ನನ್ನಲ್ಲಿ ತಿಂಗಳ ಹಿಂದೆ ದಿನಪತ್ರಿಕೆಯೊಂದರಲ್ಲಿ ಬಂದ “ಮೌಲ್ಯವರ್ಧನೆ ಮಾಡಿ ಮಾರಿ’ ಎಂಬ ನನ್ನ ಪುಟ್ಟ ಬರಹವನ್ನು ಓದಿ ಪ್ರಭಾವಿತರಾಗಿ ಪಡೆದ ಸ್ವಾನುಭವವನ್ನು ವಿವರಿಸಿದರು.
ಅದರಲ್ಲಿ ನಾನು ಬಾಳೆಹಣ್ಣಿಗೆ ರೇಟು ಇಲ್ಲದಿದ್ದರೆ ಒಣಗಿಸಿ ಸುಕೇಳಿ ಮಾಡಿ ಮಾರಬಹುದು. ಮಕ್ಕಳು ಇದನ್ನು ಇಷ್ಟಪಟ್ಟು ತಿನ್ನುತ್ತಾರೆ ಎಂದು ಬರೆದಿದ್ದೆ. ಅವರು, “ಅದರಂತೆ ಮಾಡಿ ಪ್ರಯೋಜನ ಪಡೆದೆ’ ಎಂದರು. “ಅದು ಹೇಗೆ?’ ಎಂದು ಕೇಳಿದೆ. “ಈಗ ಬಾಳೆಕಾಯಿಗೆ ಹೇಗೂ ಮಾರ್ಕೆಟ್ ಇಲ್ಲ. ಅದಕ್ಕೆ ಬಾಳೆಹಣ್ಣು ಒಣಗಿಸಿ ಕಾಲು ಕೇಜಿಯ ಪ್ಯಾಕೆಟ್ ಮಾಡಿ ಮಡಿಕೇರಿಗೆ ಕೊಂಡು ಹೋದೆ. ಹೊಟೇಲ್ ಒಂದಕ್ಕೆ ಹೋಗಿ “ಬೇಕಾ?’ ಎಂದು ಕೇಳಿದೆ. ಸ್ಯಾಂಪಲ್ಲಿಗೆಂದು ಅಲ್ಲೇ ಇದ್ದ ಅವರ ಮಗುವಿಗೆ ಎರಡು ತುಂಡು ಕೊಟ್ಟೆ. ಮಾಲೀಕರು ಸುರುವಿಗೆ ಬೇಡವೆಂದರು. ಆದರೆ, ರುಚಿ ಹಿಡಿದ ಮಗು ಕೇಳಲಿಲ್ಲ. ಬೇಕೇಬೇಕೆಂದು ಹಠ ಮಾಡಿತು. ಮಗುವಿಗೋಸ್ಕರ ಅವರು ತೆಗೆದುಕೊಂಡರು. ತಿಂದ ಮೇಲೆ ಅವರಿಗೂ ಅದು ಇಷ್ಟವಾಯಿತು. ಇನ್ನೊಮ್ಮೆ ತರಲು ಹೇಳಿದರು. ಇನ್ನೂ ಒಂದೆರಡು ಅಂಗಡಿಯಲ್ಲಿ ಸ್ಯಾಂಪಲ್ ತೋರಿಸಿದೆ. ಅವರೂ ಮೆಚ್ಚಿಕೊಂಡರು. ವಿಪರೀತ ಚಾಕ್ಲೇಟ್ ತಿನ್ನುತ್ತಿದ್ದ ನನ್ನ ಮಗನೂ ಈಗ ಶಾಲೆ ಬಿಟ್ಟು ಮನೆಗೆ ಬಂದ ನಂತರ ಸುಕೇಳಿಯನ್ನೇ ತಿನ್ನಲು ಶುರುಮಾಡಿದ್ದಾನೆ. ಚಾಕ್ಲೇಟ್ ತಿನ್ನುವುದು ಮರೆತುಹೋಗಿದೆ’ ಎಂದರು. ನನಗೆ ಆಗ ಅನಿಸಿತು ನಮ್ಮ ರೈತರಿಗೆ ಸಂಕಲ್ಪ$ಶಕ್ತಿಯ ಕೊರತೆ ಇದೆ. ಚಳಿ ಬಿಟ್ಟು ಉತ್ಪನ್ನಗಳ ಮೌಲ್ಯವರ್ಧನೆಗೆ ಇಳಿದರೆ ಯಶಸ್ಸು ಸಿಗುವುದು ಖಂಡಿತ. ಈ ನಿಟ್ಟಿನಲ್ಲಿ ಸರ್ಕಾರದ ಪ್ರೋತ್ಸಾಹವೂ ಬೇಕು. ಮೌಲ್ಯವರ್ಧನೆಗೆ ಬೇಕಾದ ಯಂತ್ರಗಳನ್ನು ರಿಯಾಯಿತಿ ದರದಲ್ಲಿ ಒದಗಿಸಬೆಕು.
ನಾನು ಅಜ್ಜನಮನೆಗೆ ಹೋದರೆ ಅತ್ತೆ ಆದರದಿಂದ ಬರಮಾಡಿಕೊಳ್ಳುತ್ತಾರೆ. ನನಗೆ ಟೀ ಕೊಡುವಾಗ ತಟ್ಟೆಯಲ್ಲಿ ಮೂರ್ನಾಕು ತುಂಡು ಬಾಳೆಹಣ್ಣಿನ ಹಲ್ವವೂ ಜೊತೆಗಿರುತ್ತದೆ. ಮನೆ ತುಪ್ಪದಿಂದ ತಯಾರಿಸಿದ ಘಮಘಮ ಪರಿಮಳ ಬರುವ ಆ ಹಲ್ವವನ್ನು ಕಂಡ ಕೂಡಲೇ ನನ್ನ ಬಾಯಿಯಲ್ಲಿ ನೀರೂತ್ತದೆ. ಕೆಲವೇ ಕ್ಷಣದಲ್ಲಿ ತಟ್ಟೆ ಖಾಲಿಯಾಗಿ ಬಿಡುತ್ತದೆ.
ವರ್ಷದ ಎಲ್ಲಾ ದಿನಗಳಲ್ಲಿಯೂ ಬಾಳೆಹಣ್ಣು ಹಲ್ವ ಅತ್ತೆಯ ಅಡುಗೆಮನೆ ಡಬ್ಬಿಯಲ್ಲಿ ಇದ್ದೇ ಇರುತ್ತದೆ. ಇದು ಹೇಗೆ ಅಂತೀರಾ? ವಿಷಯ ಇರುವುದು ಇಲ್ಲಿ. ಅತ್ತೆ ತಮ್ಮ ತೋಟದಲ್ಲಿ ಬೆಳೆಯುವ ಬಾಳೆಗೊನೆಯನ್ನು ಹಾಗೆ ಮಾರುವುದಿಲ್ಲ. ಹಲ್ವ ತಯಾರಿಸಿ ಮಾರುತ್ತಾರೆ. ಬೇಸಿಗೆಯಲ್ಲಿ ಮಾವಿನಹಣ್ಣು ಮಾರುಕಟ್ಟೆಯನ್ನು ಆಳುವುದರಿಂದ ರೈತರು ಬಾಳೆಹಣ್ಣು ಮಾರಾಟ ಮಾಡುವಾಗ ಕ್ರಯ ಇರುವುದಿಲ್ಲ. ಆದರೆ ಹಲ್ವ ತಯಾರಿಸಿ ಮಾರಿದರೆ ಒಳ್ಳೆ ಬೆಲೆ ಸಿಗುತ್ತದೆ ಎಂಬುದು ಅತ್ತೆಯ ಅನುಭವ. ಒಂದು ಕೇಜಿ ಹಲ್ವ ಮಾಡಲು ಒಂದೂವರೆ ಕೇಜಿ ಬಾಳೆಹಣ್ಣು ಬೇಕು ಎಂದು ಅವರು ಹೇಳುತ್ತಾರೆ.
ಒಟ್ಟಿನಲ್ಲಿ ಕೃಷಿಕರ ಆರ್ಥಿಕ ಪ್ರಗತಿಗೆ ಬಾಳೆ ನೆರವಾಗುತ್ತದೆ. ಬಾಳೆ ಬೆಳೆದು ಬದುಕು ಬಂಗಾರವಾಗಿಸಿದ ಅದೆಷ್ಟೋ ರೈತರು ನಮ್ಮ ಕಣ್ಣ ಮುಂದೆ ಇದ್ದಾರೆ.
ಸಹನಾ ಕಾಂತಬೈಲು