ಶಿವಶಕ್ತಿ ಸಾರುವ ವೀರಗಾಸೆ
Team Udayavani, Mar 4, 2021, 4:15 PM IST
ಜಟೆ, ಹೆಡೆ ಎತ್ತಿದ ಹಾವಿನಂತಿರುವ ಕಿರೀಟ, ಹಣೆಯಲ್ಲಿ ವಿಜೃಂಭಿಸುವ ವಿಭೂತಿ, ರುದ್ರಾಕ್ಷಿ, ಕತ್ತಿಹಿಡಿದು ಗೆಜ್ಜೆಕಟ್ಟಿ ವೀರಗಾಸೆಯ ಕಲಾವಿದ ವೀರಾವೇಷದಿಂದ ಏರುಧ್ವನಿಯಲ್ಲಿ ದಕ್ಷ ಬ್ರಹ್ಮನ ಕಥೆ ಹೇಳುತ್ತಿದ್ದರೆ ನೆರೆದವರೆಲ್ಲ ಮೂಕವಿಸ್ಮಿತರಾಗುತ್ತಾರೆ.
ಕರ್ನಾಟಕದ ಜಾನಪದ ಶಿವನಕುರಿತ ಗೊರವರ ಕುಣಿತ, ಕಂಸಾಳೆ, ಡೊಳ್ಳು ಕುಣಿತ ನೃತ್ಯಗಳಲ್ಲಿ ವೀರಗಾಸೆಯೂ ಒಂದಾಗಿದೆ. ವೀರಗಾಸೆ ಹಾಗೂ ವೀರಭದ್ರನ ಕುಣಿತಕ್ಕೆ ಸಾಮ್ಯತೆ ಇದ್ದಷ್ಟೆ ವ್ಯತ್ಯಾಸವೂ ಇದೆ.
ದಕ್ಷ ಬ್ರಹ್ಮನ ನಾಶಪಡಿಸಲು ಶಿವನ ಅಂಶವಾಗಿ ಜನಿಸಿದ ವೀರಭದ್ರನ ಕುರಿತು ನೃತ್ಯ ಮಾಡುತ್ತಾರೆ. ಕೆಂಪು ಜುಬ್ಬ, ಎದೆಯ ಮೇಲೆ ವೀರಭದ್ರನ ಪ್ರತಿಮೆ, ಕಾಲಿಗೆ ಗೆಜ್ಜೆ, ಹಣೆಗೆ ವಿಭೂತಿ, ಕಾಸೆ, ಸೊಂಟಕ್ಕೆ ಬಿಗಿದ ಬಿಳಿ ವಸ್ತ್ರ, ರೌದ್ರ ರಸವನ್ನು ಪ್ರಧಾನವಾಗಿಸಿ ಕತ್ತಿ ಹಿಡಿದು ವೀರಭದ್ರನ ಕಥೆ ಹೇಳುತ್ತ ನೃತ್ಯ ಮಾಡುತ್ತಾರೆ. ಉತ್ತರ ಕರ್ನಾಟಕ ಕಡೆಗಳಲ್ಲಿ ಚೂಪಾದ ಆಯುಧದಿಂದ ದೇಹಕ್ಕೆ ಹೊಡೆದುಕೊಳ್ಳುತ್ತಾರೆ.
ಮೈಸೂರು, ಮಂಡ್ಯ, ಚಾಮರಾಜ ನಗರ, ಹಾಸನ ಜಿಲ್ಲೆಗಳಲ್ಲಿ ವೀರಗಾಸೆ ಪ್ರಸಿದ್ಧ. ಗಿರಿಜಾ ಕಲ್ಯಾಣ, ಪ್ರಭುಲಿಂಗ ಲೀಲೆ, ಬಸವ ಪುರಾಣ, ಪ್ರಮುಖವಾಗಿ ದಕ್ಷ ಯಜ್ಞ ಕಥೆಗಳನ್ನು ಹಾವಭಾವ ನೃತ್ಯ, ತಮ್ಮಟೆ ವಾದ್ಯದೊಂದಿಗೆ ವಿವರಿಸುತ್ತಾರೆ. ಪತ್ನಿ ದಾಕ್ಷಾಯಿಣಿ ತಂದೆ ದಕ್ಷ ಬ್ರಹ್ಮನ ಯಾಗದಲ್ಲಿ ಪತಿ ಶಿವನ ಅವಮಾನ ಕೇಳಲಾರದೆ ಯಜ್ಞ ಕುಂಡಕ್ಕೆ ಹಾರಿ ಪ್ರಾಣಾರ್ಪಣೆ ಮಾಡುತ್ತಾಳೆ. ಇದರಿಂದ ಕುಪಿತನಾಗಿ ನೊಂದ ಶಿವ ತಾಂಡವ ನೃತ್ಯ ಮಾಡುವುದನ್ನು ಮತ್ತು ಶಿವನ ಜಟೆಯಿಂದ ಜನಿಸಿದ ವೀರಭದ್ರನ ಕಥೆಯನ್ನು ವೀರಾವೇಷದಿಂದ ನೃತ್ಯ ಮಾಡುತ್ತಾ ಏರುಧ್ವನಿಯಲ್ಲಿ ಹೇಳಲಾಗುತ್ತದೆ.
ಸಾಮಾನ್ಯವಾಗಿ ವೀರಗಾಸೆ ನೃತ್ಯವನ್ನು ಜಾತ್ರೆ, ಉತ್ಸವ, ದಸರಾದಲ್ಲಿ ಆಯೋಜಿಸುತ್ತಾರೆ. ವಿಶೇಷವಾಗಿ ಚೈತ್ರ ಮಾಸದ ಯುಗಾದಿ, ಕಾರ್ತಿಕ ಮಾಸದ ದೀಪಾವಳಿ ಹಬ್ಬದ ಸಮಯದಲ್ಲಿ ಆರಾಧಕರು ಏರ್ಪಡಿಸುತ್ತಾರೆ. ವೀರಭದ್ರನ ಮನೆದೇವರಾಗಿ ನಡೆದುಕೊಳ್ಳುವವರು ಮದುವೆ ಹಾಗೂ ಇನ್ನಿತರ ಪ್ರಮುಖ ಸಮಾರಂಭದಲ್ಲಿ ವೀರಗಾಸೆ ಕುಣಿತವನ್ನು ಆಯೋಜಿಸುತ್ತಾರೆ.
ಶೈವಪಂಥದ ಉಚ್ಚ್ರಾಯ ಕಾಲದಲ್ಲಿ ಉಗಮವಾಗಿ ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲೂ ವೀರಗಾಸೆ ಉತ್ತಮ ಸ್ಥಿತಿಯಲ್ಲಿತ್ತು. ವಿಜಯನಗರದ ಕೆಲವು ಶಾಸನಗಳಲ್ಲಿ ವೀರಭದ್ರನ ಕೆತ್ತನೆ ಇದೆ. ವೀರಗಾಸೆ ಎಂದರೆ ವೀರ+ಕಾಸೆ ಕಾಲ ಕ್ರಮೇಣ ವೀರಕಾಸೆಯಾಗಿ ವೀರಗಾಸೆಯಾಗಿ ಬದಲಾಗಿದೆ.
ವೀರಗಾಸೆ ಶಿವನ ಕಥೆಗಳನ್ನು ಸಾರುತ್ತಾ ಕುಣಿತದ ಮೂಲಕ ನಮ್ಮ ಪರಂಪರೆಯನ್ನು ಮನೋಜ್ಞವಾಗಿ ಜನಸಾಮಾನ್ಯರ ಮನಸ್ಸಿಗೆ ತಲುಪಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ವೀರಗಾಸೆ ನೃತ್ಯದ ಕಡೆ ಒಲವು ತೋರುತ್ತಿದ್ದಾರೆ. ವಿಲಾಸಕ್ಕೆ ಮಾತ್ರವಲ್ಲದೆ ವಿಕಾಸಕ್ಕೂ ಕಲೆ ಸಾಧನವಾಗಿದೆ. ಜನಸಾಮಾನ್ಯರ ಒಳದನಿ ಕಲೆಯ ಪ್ರಕಾರವಾಗಿ ರೂಪಾಂತರವಾಗಿ ಕರ್ನಾಟಕದ ಕಲಾಶ್ರೀಮಂತಿಗೆ ವೀರಗಾಸೆ ಸಾಕ್ಷಿಯಾಗಿದೆ.
ವೀರಗಾಸೆಯ ವೇಷಭೂಷಣ ರೌದ್ರವಾಗಿಯೂ, ಕಲಾತ್ಮಕವಾಗಿಯೂ ಇರುತ್ತದೆ. ಗಾಢವರ್ಣದ ಉಡುಪು, ಬಿಳಿ ಜಟೆ, ಕೊರಳಲ್ಲಿ ನಾಗಾಭರಣ , ಸೊಂಟದ ಪಟ್ಟಿ ರುದ್ರಮುಖೀ, ರುದ್ರಾಕ್ಷಿ, ವಿಭೂತಿ, ಓಲೆ ತೊಟ್ಟು ಕತ್ತಿ ಬೀಸುತ್ತಾ ನೃತ್ಯ ಮಾಡುತ್ತಾರೆ. ವೀರಗಾಸೆ ಕುಣಿಯುವವರನ್ನು ಜಂಗಮ ಅಥವಾ ಲಿಂಗದೇವರು ಎನ್ನುತ್ತಾರೆ. ಒಂದು ನೃತ್ಯದಲ್ಲಿ ಸಾಮಾನ್ಯವಾಗಿ ಎರಡರಿಂದ ಆರು ಮಂದಿ ಇರುತ್ತಾರೆ.
ಮುಖ್ಯ ನೃತ್ಯಗಾರ ನೇಮದಿಂದ ನಿಷ್ಠೆಯಿಂದ ಇರಬೇಕು. ಲಿಂಗಾಯತ ಅನುಸಾರ ಕಾಸೆ ಹಾಕಿ ಲಿಂಗವನ್ನು ಧರಿಸಿರಬೇಕು. ನೃತ್ಯ ಮಾಡುವಾಗ ಶಿವನ ಪುರಾಣದ ಕಥೆ ವಿವರಿಸುತ್ತಾರೆ. ಸಂಗಡಿಗರು ಲಯ ಬದ್ಧವಾಗಿ ಹೆಜ್ಜೆ ಹಾಕುತ್ತಾರೆ. ಕತ್ತಿ ದೂರ ಎಸೆದು ತೆಂಗಿನಕಾಯಿ ಒಡೆಯುವುದು, ಅಕ್ಕಿ ತುಂಬಿದ ಬಿಂದಿಗೆಯನ್ನು ಕತ್ತಿಯಿಂದ ಎತ್ತುವುದು ಮುಂತಾದ ಸಾಹಸಗಳು ಪ್ರೇಕ್ಷಕರಿಗೆ ರೋಮಾಂಚನ ನೀಡುತ್ತದೆ.
ಸುರಭಿ ಶರ್ಮ, ಮೈಸೂರು ವಿ.ವಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ