ಮಾನವ ಹಸ್ತಕ್ಷೇಪದಿಂದ ವ್ಯಾಘ್ರನಿಗೆ ಹೊಸ ಆಪತ್ತು
Team Udayavani, Feb 24, 2021, 6:35 AM IST
ಹೊಸದಿಲ್ಲಿ: ಭಾರತದಲ್ಲಿ ಮಾನವನ ಹಸ್ತಕ್ಷೇಪದಿಂದಾಗಿ ಹುಲಿಗಳ ಆವಾಸಸ್ಥಾನಗಳು ಕ್ರಮೇಣ ನಾಶವಾಗುತ್ತಿರುವುದರಿಂದ ಅವುಗಳಲ್ಲಿ ಆಂತರಿಕ ಸಂತಾನೋತ್ಪತ್ತಿಗೆ ಕಾರಣವಾಗಿದ್ದು, ಇದು ಕ್ರಮೇಣ ಹುಲಿಗಳ ಅಸ್ತಿತ್ವದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ವನ್ಯಜೀವಿ ತಜ್ಞರು ಎಚ್ಚರಿಸಿದ್ದಾರೆ.
ಬೆಂಗಳೂರಿನ “ನ್ಯಾಶನಲ್ ಸೆಂಟರ್ ಫಾರ್ ಬಯೋಲಜಿಕಲ್ ಸೈನ್ಸಸ್’ನಲ್ಲಿ “ಮಾಲೆಕ್ಯುಲರ್ ಎಕೋಲಜಿಸ್ಟ್’ ಆಗಿ ಸೇವೆ ಸಲ್ಲಿಸುತ್ತಿರುವ ರಾಮಕೃಷ್ಣನ್ ಅವರ ಪ್ರಕಾರ, ಹುಲಿ, ಬೆಕ್ಕು, ತೋಳ ಇವೆಲ್ಲ ಒಂದೇ ಜಾತಿಯ ಪ್ರಾಣಿಗಳು. ಇವೆಲ್ಲವಕ್ಕೆ ಹೋಲಿಸಿದರೆ, ಹುಲಿಗಳಲ್ಲಿ ಆನುವಂಶಿಕ ವ್ಯತ್ಯಾಸ ಜಾಸ್ತಿಯೇ ಇರುತ್ತದೆ. ಹಾಗಾಗಿ ಒಂದೇ ಪೀಳಿಗೆಯ ಹುಲಿಗಳಿದ್ದರೂ ಅವುಗಳ ಡಿಎನ್ಎಯಲ್ಲೇ ಕೆಲವು ವ್ಯತ್ಯಾಸ ಕಾಣಬಹುದು.
ಹುಲಿಗಳ ಆವಾಸ ಸ್ಥಾನಗಳು ಹಾಳಾಗಿರುವುದರಿಂದ, ಅವು ಚದುರಿ ಹೋಗಿವೆ. ಪರಿಣಾಮ, ಒಂದು ನಿರ್ದಿಷ್ಟ ಪ್ರದೇಶದಲ್ಲಿ ವಾಸಿಸುವ ಹುಲಿಗಳು ಒಂದೇ ರೀತಿಯ ಡಿಎನ್ಎ ಇರುವ ಹುಲಿಗಳ ಜತೆಗೆ ಸಂಯೋಗ ಹೊಂದುತ್ತಿವೆ. ಇದು ಕಾಲ ಕ್ರಮೇಣ ಆಂತರಿಕ ವಂಶವಾಹಿ ಸಂತಾನೋತ್ಪತ್ತಿಗೆ ಕಾರಣ ವಾಗುತ್ತದೆ. ಇದರಿಂದ ಮುಂದಿನ ಪೀಳಿಗೆಗಳ ದೈಹಿಕ ಶಕ್ತಿ ಕುಂಠಿತವಾಗಿ, ವೈಪರೀತ್ಯಗಳ ನಡುವೆ ಬದುಕುಳಿಯುವ ಛಾತಿ ಕಳೆದುಕೊಳ್ಳುತ್ತವೆ ಎಂದು ವಿವರಿಸಿದ್ದಾರೆ.