ಭಾರತ ಹುಣ್ಣಿಮೆ ಜಾತ್ರೆಗೆ ಗುಡ್ಡ ಭಣ ಭಣ
ದೇವಸ್ಥಾನ ಪ್ರವೇಶಿಸದಂತೆ ಜನತೆಗೆ ನಿರ್ಬಂಧ, ಕೋವಿಡ್ ಮುನ್ನೆಚ್ಚರಿಕೆ
Team Udayavani, Feb 27, 2021, 4:44 PM IST
ಬೆಳಗಾವಿ: ವರ್ಷಪೂರ್ತಿ ನಡೆಯುವ ಏಳುಕೊಳ್ಳದ ಸವದತ್ತಿ ಶ್ರೀ ಯಲ್ಲಮ್ಮ ದೇವಿಯ ಜಾತ್ರೆಯಲ್ಲಿ ಭಾರತ ಹುಣ್ಣಿಮೆ ಜಾತ್ರೆ ಅತ್ಯಂತ ವಿಶಿಷ್ಟ ಹಾಗೂ ಸಂಭ್ರಮದಿಂದ ಕೂಡಿರುತ್ತದೆ. ಆದರೆ ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳಿಂದಾಗಿ ಜಾತ್ರೆ ರದ್ದಾಗಿದ್ದು, ದೇವಸ್ಥಾನ ಆವರಣ ಖಾಲಿ ಖಾಲಿಯಾದರೂ ಸಂಭ್ರಮಕ್ಕೇನೂ ಕಡಿಮೆ ಇಲ್ಲ. ಲಕ್ಷಾಂತರ ಭಕ್ತರಿಂದ ಗಿಜಿಗಿಡುತ್ತಿದ್ದ ಸವದತ್ತಿಯ ರೇಣುಕಾ ಯಲ್ಲಮ್ಮನ ಗುಡ್ಡ ಖಾಲಿ ಖಾಲಿಯಾಗಿದೆ.
ಭಾರತ ಹುಣ್ಣಿಮೆ ಎಂದರೆ ಉತ್ತರ ಕರ್ನಾಟಕ ಸೇರಿದಂತೆಮಹಾರಾಷ್ಟ್ರ-ಗೋವಾ ರಾಜ್ಯಗಳ ಭಕ್ತರಿಗೆ ಎಲ್ಲಿಲ್ಲದ ಸಂಭ್ರಮ. ಅತ್ಯಂತ ಅದ್ಧೂರಿಯಾಗಿ ನಡೆಯುತ್ತಿದ್ದ ಜಾತ್ರೆ ಈ ಸಲ ಇಲ್ಲ ಎಂದುಊಹಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಮಹಾರಾಷ್ಟ್ರದಲ್ಲಿ ಕೆಲ ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಧಿಕಾರಿ ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ನಿರ್ಬಂಧ ಹೇರಿ ಆದೇಶ ಹೊರಡಿಸಿದ್ದಾರೆ. 11 ತಿಂಗಳ ಬಳಿಕ ದೇವಸ್ಥಾನಕ್ಕೆ ಭಕ್ತರ ಪ್ರವೇಶ ಕೆಲ ದಿನಗಳ ಹಿಂದೆಯಷ್ಟೇ ಆರಂಭಿಸಿತ್ತಾದರೂ ಮತ್ತೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ಹೀಗಾಗಿ ದೇವಿಯ ದರ್ಶನ ಪಡೆಯಲು ತುದಿಗಾಲಿನಲ್ಲಿ ನಿಂತಿದ್ದ ಭಕ್ತರಿಗೆ ನಿರಾಸೆಯನ್ನುಂಟು ಮಾಡಿದೆ.
ಪ್ರತಿ ವರ್ಷ ಭಾರತ ಹುಣ್ಣಿಮಗೆ ಅಂದಾಜು 10 ಲಕ್ಷಕ್ಕಿಂತ ಹೆಚ್ಚು ಭಕ್ತರು ಸೇರುತ್ತಿದ್ದರು. ಕಳೆದ ವರ್ಷ ಭರತ ಹುಣ್ಣಿಮೆ ಮುಗಿದ ಕೂಡಲೇ ಲಾಕ್ಡೌನ್ ಶುರುವಾಗಿತ್ತು. ಈಗ ಭಾರತ ಹುಣ್ಣಿಮೆ ಸಮೀಪಿಸಿದಾಗಲೇ ದರ್ಶನ ನಿರ್ಬಂಧಿಸಲಾಗಿದೆ. ಜೋಗುಳಬಾವಿ ಸತ್ಯವ್ವ ದೇವಸ್ಥಾನ ಬಳಿಯ ಯಲ್ಲಮ್ಮ ದೇವಸ್ಥಾನಕ್ಕೆ ಹೋಗುವ ಪ್ರವೇಶ ದ್ವಾರದಲ್ಲಿಯೇ ಪೊಲೀಸರು ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿದ್ದಾರೆ. ಎರಡು ದಿನಗಳಿಂದ ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕೆ ಬಂದು ವಾಪಸ್ ಹೋಗುತ್ತಿದ್ದಾರೆ. ಕೆಲವರು ಗುಡ್ಡದ ಸುತ್ತಲೂ ಟೆಂಟ್ ಹಾಕಿ ಉಳಿದುಕೊಂಡು ನೈವೇದ್ಯ ತೋರಿಸಿ ದೇವಿಯ ಹರಕೆ ತೀರಿಸುತ್ತಿದ್ದಾರೆ.
ಬಿಗಿ ಬಂದೋಬಸ್ತ್: ಸಾರ್ವಜನಿಕರು ಒಳ ಪ್ರವೇಶಿಸದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ದೇವಸ್ಥಾನಕ್ಕೆ ಪ್ರವೇಶಿಸುವ 14 ಕಡೆಗೆ ಚೆಕ್ಪೋಸ್ಟ್ ಮಾಡಿದ್ದಾರೆ. ನಾಲ್ವರು ಸಿಪಿಐ, 13 ಪಿಎಸ್ಐ, 150 ಜನ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಎಲ್ಲ ಕಡೆಗೂ ಬ್ಯಾರಿಕೇಡ್ ಗಳನ್ನು ಹಾಕಲಾಗಿದೆ. ದೇವಸ್ಥಾನಕ್ಕೆ ಹೋಗಲು ದೂರದ ಊರಿನಿಂದ ಬಂದವರಿಗೆ ಪೊಲೀಸರು ತಿಳಿ ಹೇಳಿ ವಾಪಸ್ ಕಳುಹಿಸುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ನಿಯೋಜಿಸಲಾಗಿದೆ.
ಯಲ್ಲಮ್ಮ ಸನ್ನಿಧಿಯಲ್ಲಿ ದೀಪಾಲಂಕಾರದ ಸಂಭ್ರಮ :
ಭಾರತ ಹುಣ್ಣಿಮೆ ಜಾತ್ರೆ ಇಲ್ಲವಾದರೂ ಸಂಭ್ರಮಕ್ಕೇನೂ ಕೋವಿಡ್ ಅಡ್ಡಿ ಬಂದಿಲ್ಲ. ದೇಗುಲದ ಆಕರ್ಷಣೆ ಹೆಚ್ಚಿಸಲು ಯಲ್ಲಮ್ಮ ದೇವಿಯ ಸನ್ನಿ ಧಿಯಲ್ಲಿ ದೀಪಾಲಂಕಾರ ಮಾಡಲಾಗಿದೆ. ವಿದ್ಯುತ್ ದೀಪಾಲಂಕಾರದಿಂದ ಇಡೀ ದೇವಸ್ಥಾನ ಕಂಗೊಳಿಸುತ್ತಿದೆ. ಮಾರ್ಚ್ 1ರ ವರೆಗೆ ಇರಲಿರುವ ಈ ಅಲಂಕಾರ ದೇವಸ್ಥಾನದ ವೈಭವ ಹೆಚ್ಚಿಸಿದೆ. ಈ ಅಲಂಕಾರವನ್ನು ಭಕ್ತರು ದೂರದಿಂದಲೇ ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಭಂಡಾರದ ಅವ್ವ ಯಲ್ಲಮ್ಮನ ದೇವಸ್ಥಾನದಲ್ಲಿ ಜಾತ್ರೆ ಬಂತೆಂದರೆ ಭಂಡಾರವೋ ಭಂಡಾರ ಇರುತ್ತಿತ್ತು. ಭಂಡಾರದ ಬದಲಿಗೆ ವಿದ್ಯುದ್ಧೀಪಾಲಂಕಾರವೇ ಭಂಡಾರವನ್ನು
ಆಕ್ರಮಿಸಿಕೊಂಡು ಆಕರ್ಷಣೆಯ ಕೇಂದ್ರವಾಗಿ ಪರಿಣಮಿಸಿದೆ. ಮಹಾರಾಷ್ಟ್ರದ ಕೊಲ್ಲಾಪುರ ಮಾಜಿ ಮೇಯರ್ ಸಾಗರ ಪ್ರಹ್ಲಾದ ಚವ್ಹಾಣ ಎಂಬವರು ದೇವಿಯ ಪರಮ ಭಕ್ತ. ದೇವಸ್ಥಾನದಲ್ಲಿ ಈ ಸಲ ಅದ್ಭುತವಾದ ದೀಪಾಲಂಕಾರ ಮಾಡಬೇಕೆಂಬ ಉದ್ದೇಶದಿಂದ ಈ ಒಂದು ಭಕ್ತಿ ಸೇವೆ ಸಲ್ಲಿಸುತ್ತಿದ್ದಾರೆ. ದೇವಸ್ಥಾನದ ಸುತ್ತಲೂ ಲೈಟಿಂಗ್ ಡೆಕೋರೇಷನ್ ಮಾಡಿ ಕಣ್ಮನ ಸೆಳೆಯುವಂತೆ ಮಾಡಿದ್ದಾರೆ. ಜತೆಗೆ ಶುಕ್ರವಾರದಿಂದ ರಾತ್ರಿ ಹೊತ್ತು ದೇವಿಯ ಮೂರ್ತಿ ಸೇರಿದಂತೆ ಇತರೆ ಆಕರ್ಷಣೀಯವಾದ ಲೇಸರ್ ಶೋ ವ್ಯವಸ್ಥೆ ಮಾಡಲಾಗಿತ್ತು.
ಕೋವಿಡ್ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ಭಕ್ತರು ಸಹಕರಿಸಬೇಕು. ಕೋವಿಡ್ ನಿಯಮಾವಳಿಯಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಭಾರತ ಹುಣ್ಣಿಮೆ ಜಾತ್ರೆ ನಿಮಿತ್ತ ಯಲ್ಲಮ್ಮ ದೇವಸ್ಥಾನ ಆವರಣದಲ್ಲಿ ಮಾಡಿರುವ ಅಲಂಕಾರ ಆಕರ್ಷಣೀಯವಾಗಿದೆ. -ರವಿ ಕೋಟಾರಗಸ್ತಿ, ಕಾರ್ಯನಿರ್ವಾಹಕ ಅಧಿಕಾರಿ, ರೇಣುಕಾ ಯಲ್ಲಮ್ಮ ದೇವಸ್ಥಾನ
ಜಿಲ್ಲಾಧಿಕಾರಿಗಳ ಆದೇಶದಂತೆ ಯಲ್ಲಮ್ಮ ದೇವಸ್ಥಾನ ಸುತ್ತಲೂ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಅಕ್ರಮ ಚಟುವಟಿಕೆಗಳು ನಡೆಯದಂತೆ ನಿಗಾ ಇಡಲಾಗಿದೆ. ಸುತ್ತಲೂ ಬ್ಯಾರಿಕೇಡ್ ಹಾಕಿ ಸಾರ್ವಜನಿಕರು ಪ್ರವೇಶಿಸದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. – ಲಕ್ಷ್ಮಣ ನಿಂಬರಗಿ, ಎಸ್ಪಿ
-ಭೈರೋಬಾ ಕಾಂಬಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹುನಗುಂದ: ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ
Belagavi; ಹೊಳಿಹೊಸೂರ ಗ್ರಾಮದಲ್ಲಿ ಪೊಲೀಸ್ ದಾಳಿ; ನಾಲ್ಕು ಲಕ್ಷ ರೂ ಬೆಲೆ ಮದ್ಯ ವಶಕ್ಕೆ
Belgaum Lok Sabha Constituency: ಅನುಭವದ ರಾಜಕಾರಣಕ್ಕೆ ಯುವ ಮುಖದ ಸವಾಲು
Chikkodi:ಅಮಿತ್ ಶಾ ಸಮ್ಮುಖದಲ್ಲಿ ವಿವೇಕರಾವ್ ಪಾಟೀಲ ಬಿಜೆಪಿ ಸೇರ್ಪಡೆ
ಇಂಡಿಯಾ ಒಕ್ಕೂಟಕ್ಕೆ ನಾಯಕರೂ ಇಲ್ಲ, ನೇತೃತ್ವವೂ ಇಲ್ಲ: ಸಿ.ಟಿ ರವಿ